ಡಿವಿಜಿ ಯವರ ಸಾಕ್ಷ್ಯಚಿತ್ರ
ಜಿ.ಬಿ. ಹರೀಶರು ಈ ಬಾರಿ ಬರೆದಿರುವುದು ಡಿವಿಜಿ ಯವರ ಸಾಕ್ಷ್ಯಚಿತ್ರದ ಬಗ್ಗೆ. ಓದಿ ಹೇಳಿ.
ಡಿ.ವಿ. ಗುಂಡಪ್ಪನವರ ಬಗ್ಗೆ ವಾರ್ತಾ ಇಲಾಖೆ ರೂಪಿಸಿರುವ ಸಾಕ್ಷ್ಯಚಿತ್ರದ ಬಗ್ಗೆ ಪ್ರಸ್ತಾಪಿಸುತ್ತಿದ್ದೇನೆ. ಸುಮಾರು 30 ನಿಮಿಷಗಳ ಅವಧಿ. ಆರಂಭದಿಂದಲೂ ಕೊನೆವರೆಗೂ ನಮ್ಮನ್ನು ಹಿಡಿದಿಟ್ಟಿರುವುದು ಸಮಗ್ರ ವ್ಯಕ್ತಿತ್ವ. ಈ ನಿಟ್ಟಿನಲ್ಲೇ ನೋಡಬೇಕು ಡಿವಿಜಿಯವರನ್ನು.
ಅವರು ಹುಟ್ಟಿದ್ದು ಮುಳಬಾಗಿಲಿನಲ್ಲೇ. ಸಾಕ್ಷ್ಯಚಿತ್ರವೂ ಆರಂಭವಾಗುವುದು ಅಲ್ಲಿಯ ಒಂದು ಸನ್ನಿವೇಶದಿಂದಲೇ. ಸಾಮಾನ್ಯವಾಗಿ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದಂತೆಯೇ ಊರು ಆರಂಭವಾಗುವಾಗಲೇ ದೇವಸ್ಥಾನ. ಅದರಂತೆಯೇ ಈ ಊರಿನಲ್ಲೂ ಆಂಜನೇಯನ ಗುಡಿ. ಅಲ್ಲಿಂದಲೇ ಸಾಕ್ಷ್ಯಚಿತ್ರ ಆರಂಭ. ಅಂದರೆ, ಆ ಆಂಜನೇಯ ಊರನ್ನು ಕಾಯುವಂತೆ. ಡಿ. ವಿ. ಜಿ ಯವರ ಪ್ರಖರವಾದ ಜೀವನ ದರ್ಶನವೆಂದರೆ ಬಾಳಿಗೊಂದು ನಂಬಿಕೆ ಎಂಬುದು. ಊರನ್ನು ಕಾಯುವವನ ಮೇಲೂ ಅಂಥದ್ದೇ ನಂಬಿಕೆ. ಹಾಗಾಗಿ ಬಹುಶಃ ಮೊದಲ ಸನ್ನಿವೇಶವಾಗಿ ಚಿತ್ರಿಸುತ್ತಲೇ ಪರಸ್ಪರ ಸಂಬಂಧ ಕಲ್ಪಿಸುತ್ತಾರೆ ನಿರ್ದೇಶಕ ಕೃಷ್ಣ. Read the rest of this entry »
ಜನವರಿ 16, 17 ಮೂರನೇ ಚಿತ್ರೋತ್ಸವ
ಸಾಂಗತ್ಯದ ಮೂರನೇ ಚಿತ್ರೋತ್ಸವ ಜನವರಿ 16 ಮತ್ತು 17 ರಂದು ಕುಪ್ಪಳ್ಳಿಯಲ್ಲಿ ನಡೆಯಲಿದೆ.
ಈಗಾಗಲೇ ಎರಡು ಚಿತ್ರೋತ್ಸವಗಳು ಒಳ್ಳೆಯ ಅನುಭವವನ್ನು ಕಟ್ಟಿಕೊಟ್ಟಿದ್ದು, ಜನವರಿ 2 ನೇ ತಾರೀಕಿಗೆ ಸಾಂಗತ್ಯಕ್ಕೆ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದೆ. ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಚಲನಚಿತ್ರಗಳ ಪ್ರದರ್ಶನ, ಅವುಗಳ ಕುರಿತ ಚರ್ಚೆ, ಸಿನಿಮಾ ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ಎಲ್ಲವೂ ಉತ್ಸವದಲ್ಲಿ ಒದಗಿಸಲಾಗುವುದು.
ಜನವರಿ 16 ರಂದು ಬೆಳಗ್ಗೆ 10 ಕ್ಕೆ ಉತ್ಸವ ಉದ್ಘಾಟನೆಗೊಳ್ಳಲಿದ್ದು, ನಂತರ ಸಾಕ್ಷ್ಯಚಿತ್ರಗಳನ್ನು ಒಳಗೊಂಡಂತೆ ಸುಮಾರು ಎಂಟು ಚಲನಚಿತ್ರಗಳು ಪ್ರದರ್ಶಿತವಾಗಲಿವೆ. ಜನವರಿ 17 ರ ಸಂಜೆ 5 ಕ್ಕೆ ಉತ್ಸವ ಸಮಾರೋಪಗೊಳ್ಳಲಿದೆ. ಉತ್ಸವಕ್ಕೆ ನಮ್ಮೊಂದಿಗೆ ಅನುಭವವನ್ನು ಹಂಚಿಕೊಳ್ಳುವ ಸಲುವಾಗಿ ಚಿತ್ರ ನಿರ್ದೇಶಕರನ್ನು ಸಂಪರ್ಕಿಸಲಾಗಿದೆ. ಸದ್ಯವೇ ಅವರಿಂದ ಪ್ರತಿಕ್ರಿಯೆ ಲಭ್ಯವಾಗಲಿದೆ.
ಉತ್ಸವಕ್ಕೆ ಸಂಬಂಧಿಸಿದಂತೆ ಏನಾದರೂ ಸಲಹೆಗಳಿದ್ದರೆ ಶೀಘ್ರವೇ ನಮಗೆ ಕಳುಹಿಸಬಹುದು. ನಮ್ಮ ಮೇಲ್ ವಿಳಾಸ saangatya@gmail.com .ಹಾಗೆಯೇ ಅತ್ಯುತ್ತಮ ಚಿತ್ರಗಳಿದ್ದರೆ ಅವುಗಳ ಹೆಸರನ್ನೂ ನಮಗೆ ಕಳುಹಿಸಬಹುದು. ದಯವಿಟ್ಟು ನಿಮ್ಮೆಲ್ಲರ ಸಹಕಾರ ಹೀಗೆಯೇ ಮುಂದುವರಿಯಲಿ ಎಂಬುದು ನಮ್ಮ ನಿರೀಕ್ಷೆ. ಸದ್ಯವೇ ಪ್ರದೇಶವಾರು ನಿಮ್ಮ ಹೆಸರು ನೋಂದಣಿಗೆ ಸಂಪರ್ಕ ಸಂಖ್ಯೆಗಳನ್ನು ಪ್ರಕಟಿಸಲಾಗುವುದು.
“ಅವತಾರ್” ಚಿತ್ರದ “ಅ”ಮರ ಕಥೆ !
ಬೇಳೂರು ಸುದರ್ಶನರು “ಅವತಾರ್” ಚಿತ್ರದ ಬಗ್ಗೆ ಬರೆದಿದ್ದಾರೆ. ಸಿಕ್ಕಾಪಟ್ಟೆ ಖರ್ಚು ಮಾಡಿ ರೂಪಿಸಿದ ಚಿತ್ರವಿದು. ಇದನ್ನು ಇಂಟರ್ ನೆಟ್ ನಲ್ಲಿ “ಇಳಿಸಿ” ನೋಡುವುದಕ್ಕಿಂತ ಸಿನಿಮಾ ಥಿಯೇಟರ್ ಗೆ ಹೋಗಿ ನೋಡಬೇಕು ಎನ್ನುತ್ತಾರೆ ಲೇಖಕರು. ಮಾಹಿತಿಪೂರ್ಣ ಲೇಖನವನ್ನು ಓದಿ ಅಭಿಪ್ರಾಯಿಸಿ.
ಜೇಮ್ಸ್ ಕ್ಯಾಮೆರಾನ್ ಸಿನೆಮಾ ಅಂದಮೇಲೆ ನೀವು ಥಿಯೇಟರಿಗೆ ಹೋಗಲೇಬೇಕು. ಅಲ್ಲಿ ಒಂದೂ ದೃಶ್ಯವನ್ನೂ ಬಿಡದೆ ನೋಡಲೇಬೇಕು. ಸಿನೆಮಾದೆಲ್ಲ ಸಂಭಾಷಣೆಗಳನ್ನೂ ಕಿವಿಯಿಟ್ಟು ಕೇಳಿ ಅರ್ಥ ಮಾಡಿಕೊಳ್ಳಬೇಕು. ಯಾವುದೋ ದೃಶ್ಯ, ಸನ್ನಿವೇಶ ಅರ್ಥವಾಗಲಿಲ್ಲ ಎಂದರೆ ಮತ್ತೆ ಥಿಯೇಟರಿಗೆ ಹೋಗಿ….ಮೂರು ತಾಸು ಮೀರಿದ ಕಾಲಾವಧಿಯ ಟೈಟಾನಿಕ್ ಸಿನೆಮಾ ಬಂದಾಗ ಈ ಮಾತನ್ನು ತುಂಬಾ ಜನ ಹೇಳಿದ್ದರು. ಈಗ ಅವತಾರ್ ಬಂದಿದೆ.
![]()
ಇಲ್ಲೂ, ನೀವು ಎರಡೂವರೆ ತಾಸಿನ ಈ ಸಿನೆಮಾವನ್ನು ಥಿಯೇಟರಿನಲ್ಲಿಯೇ ನೋಡಬೇಕು. ಅದಕ್ಕಾಗಿ ವಿಶೇಷ ಕನ್ನಡಕವನ್ನು ಹಾಕಿಕೊಳ್ಳಬೇಕು. ಇಂಟರ್ವಲ್ ಇಲ್ಲದೆ ನಿಮ್ಮ ಎಲ್ಲ ಒತ್ತಡಗಳನ್ನು ಬಿಗಿ ಹಿಡಿದುಕೊಂಡು ಕ್ಷಣಕ್ಷಣಕ್ಕೂ ದಿಗಿಲು ಹುಟ್ಟಿಸುವ ಪಂಡೋರಾ ದ್ವೀಪದ ರುದ್ರ ರಮಣೀಯ ಭೂಶ್ರೇಣಿಯನ್ನು ಹತ್ತಿಳಿಯುವುದು, ಮರಬಳ್ಳಿಯ ಮೇಲೆ ನಡೆಯುವುದು, ಆಕಾಶದಲ್ಲಿ ಹಕ್ಕಿಯ ಮೇಲೆ ಕೂತು ಹಾರುವುದು, – ಎಲ್ಲವನ್ನೂ ಮಾಡಬೇಕು!
ನೀವು ಈ ಸಿನೆಮಾವನ್ನು ಇಂಟರ್ನೆಟ್ನಿಂದ ಕದ್ದು ನೋಡಿದರೆ ಯಾವ ಸುಖವೂ ಇಲ್ಲ. ಯಾಕೆಂದರೆ ಇದು 3ಡಿ ಸಿನೆಮಾ. ವಿಶೇಷ ಕನ್ನಡಕ ಇಲ್ಲದೆ ನೋಡಿದರೆ ಈ ಸಿನೆಮಾ ಕೊಂಚ ಸಪ್ಪೆ. ದೃಶ್ಯವೈಭವವಂತೂ ಕಂಪ್ಯೂಟರಿನ ಮಾನಿಟರ್ನಲ್ಲಿ ಎಳ್ಳಷ್ಟೂ ಹಿಡಿಸುವುದಿಲ್ಲ. Read the rest of this entry »
ವಂಶವೃಕ್ಷದಲ್ಲಿ ವಿಷ್ಣುವರ್ಧನ್ ಮೊದಲು ಅಭಿನಯಿಸಿದ್ದು
ಪರಮೇಶ್ ಗುರುಸ್ವಾಮಿಯವರು ವಿಷ್ಣುವರ್ಧನ್ ಅವರ ಬಗೆಗಿನ ಒಂದು ಅನುಭವವನ್ನು ಸಾಂಗತ್ಯದೊಂದಿಗೆ ಹಂಚಿಕೊಂಡಿದ್ದಾರೆ. ಓದಿ, ನಿಮ್ಮ ಅನುಭವಗಳಿದ್ದರೂ ಹಂಚಿಕೊಳ್ಳಿ.
ಈ ಅನುಭವವನ್ನು ನನಗೆ ವಿವರಿಸಿದ್ದು ಪಿ.ವಿ. ನಂಜರಾಜ ಅರಸ್.
‘ಸಂಸ್ಕಾರ’ ವನ್ನು ಪಟ್ಟಾಭಿರಾಮರೆಡ್ಡಿ ನಿರ್ದೇಶಿಸುತ್ತಿದ್ದ ಸಂದರ್ಭ. ಗಿರೀಶ ಕಾರ್ನಾಡರು ಚಿತ್ರಕಥೆ ಬರೆದಿದ್ದರು. ಆದರೂ ಒಟ್ಟೂ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಉತ್ಸಾಹವನ್ನು ಕಂಡು ಜಿ.ವಿ. ಅಯ್ಯರ್ ಅವರು ಒಂದು ಅವಕಾಶ ಕೊಟ್ಟರು. ಅಯ್ಯರ್ ಬಗ್ಗೆ ಇಲ್ಲಿ ಒಂದು ಮಾತು ಉಲ್ಲೇಖಿಸಬೇಕು. ಚಿತ್ರರಂಗದ ಎಲ್ಲ ಹಂತಗಳಲ್ಲೂ ದುಡಿದವರು. ಚಿತ್ರಕಥೆಯಿಂದ ಹಿಡಿದು ಅಭಿನಯ, ನಿರ್ದೇಶನ, ನಿರ್ಮಾಣದವರೆಗೂ ಸಾಗಿದವರು. ಬೇರೆಯವರಿಗೆ, ಅದರಲ್ಲೂ ಹೊಸಬರಿಗೆ ಅವಕಾಶ ಕೊಟ್ಟವರು. ಕನ್ನಡ ಚಿತ್ರರಂಗದ ಅತ್ಯಂತ ಪ್ರಯೋಗಶಾಲಿ ನಿರ್ದೇಶಕರು. ಅತ್ಯುತ್ತಮ ಚಿತ್ರಗಳನ್ನು ಕೊಟ್ಟಷ್ಟೇ ಅತ್ಯಂತ ತೋಪಾದ ಚಿತ್ರವನ್ನು ಅವರೇ ಕೊಟ್ಟವರು.ಇದು ಅವರ ನಿರಂತರ ಪ್ರಯೋಗಶಾಲಿತನಕ್ಕೆ ಉದಾಹರಣೆಯಾಗುತ್ತದೆ. ಅಂದರೆ ಒಂದು ಚಿತ್ರ ಯಶಸ್ವಿಯಾದ ಮೇಲೆ, ಅದೇ ಸೂತ್ರಗಳನ್ನು ಆಧರಿಸಿ ಸಾಲು ಸಾಲಾಗಿ ಚಿತ್ರಗಳನ್ನು ನಿರ್ಮಿಸುವುದು ಸುಲಭವಾದ ಮಾರ್ಗವಾಗಿತ್ತು. ಆದರೆ ಅಯ್ಯರ್, ಸವಾಲುಗಳನ್ನು ಸ್ವೀಕರಿಸಿ ಹೊಸ ನಡೆ ಹಾಕುತ್ತಿದ್ದರು.
ಅದೇ ‘ವಂಶವೃಕ್ಷ’ ಚಿತ್ರದ ನಿರ್ದೇಶನ. ಬಿ.ವಿ. ಕಾರಂತ ಹಾಗೂ ಗಿರೀಶ್ ಕಾರ್ನಾಡರು ಜಂಟಿಯಾಗಿ ನಿರ್ದೇಶಿಸಿದ ಚಿತ್ರವಿದು. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಕೆಲವು ರೂಢಿಗತ ಕಲ್ಪನೆಗಳನ್ನು ಕಳೆದು ಹೊಸತನ ತುಂಬಲಾಯಿತು. ಚಿತ್ರ ತಯಾರಿಕೆಯ ವಿಧಾನ, ಖ್ಯಾತನಾಮರನ್ನು ಆಶ್ರಯಿಸಿರಲಿಲ್ಲ. ಹೀಗೆ ಹಲವು ಹೊಸತನವಿತ್ತು.

ಇದರಲ್ಲಿ ಒಂದು ಚಿಕ್ಕಪಾತ್ರ ಚಿಕ್ಕಗೌಡರದ್ದು. ಅದರಲ್ಲಿ ನಟಿಸಿದ್ದು ಕುಮಾರ್ ಎಂಬಾತ. ಅಂದರೆ ಅವನೇ ನಾಗರಹಾವಿನ ರಾಮಾಚಾರಿ, ಈಗಿನ ವಿಷ್ಣುವರ್ಧನ್.
ಇಡೀ ಪಾತ್ರದಲ್ಲಿ ಮಾತಿರಲಿಲ್ಲ. ತನ್ನ ತಂದೆಯ ರೂಢಿಗತ ನಿಲುವಿಗೆ ವಿರೋಧ ವ್ಯಕ್ತಪಡಿಸುವ, ಆತನ ಬಗ್ಗೆ ತಾತ್ಸಾರ ಹೊಂದಿರುವ, ಪ್ರತಿರೋಧ ವ್ಯಕ್ತಿತ್ವದ ಪಾತ್ರವದು. ಅದಕ್ಕೆ ಬಹಳ ಸಮರ್ಥನೀಯವಾಗಿ ಅಭಿನಯದ ಮೂಲಕವೇ ಜೀವ ತುಂಬಬೇಕಿತ್ತು. ಹುಡುಗ ನೋಡಲು ಚೆನ್ನಾಗಿದ್ದ, ಒಳ್ಳೆ ಕಟ್ಟುಮಸ್ತಾದ ದೇಹ. ಈ ಎಲ್ಲ ಕಾರಣಗಳಿಂದ ಪಾತ್ರಕ್ಕೆ ಆಯ್ಕೆಯಾಗಿದ್ದ ಕುಮಾರ್. Read the rest of this entry »
ವಿಷ್ಣುವರ್ಧನ್ ಇನ್ನಿಲ್ಲ
ಕನ್ನಡ ಚಿತ್ರರಂಗದ ಮತ್ತೊಬ್ಬ ಮೇರುನಟ ಡಾ. ವಿಷ್ಣುವರ್ಧನ್ (59) ನಿಧನರಾಗಿದ್ದಾರೆ.
ಬುಧವಾರ ಬೆಳಗಿನ ಜಾವ ಸುಮಾರು 3. 30 ರ ಷ್ಟೊತ್ತಿಗೆ ಮೈಸೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದರು. ಮೈಸೂರಿನ ಕಿಂಗ್ಸ್ ಕೋರ್ಟ್ ಹೋಟೆಲ್ ನಲ್ಲಿ ಕೆಲ ದಿನಗಳಿಂದ ಉಳಿದುಕೊಂಡಿದ್ದರು. ಮೈಸೂರಿನ ಮೇಲಿನ ಅವರ ಪ್ರೇಮ ಕೊನೆಗೂ ಬಿಡಲಿಲ್ಲ. ಬೆಳಗಿನ ಜಾವ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಮಾರು 2.55 ರಷ್ಟೊತ್ತಿಗೆ ವಿಕ್ರಂ ಆಸ್ಪತ್ರೆಯ ವೈದ್ಯರಿಗೆ ದೂರವಾಣಿ ಕರೆ ಮಾಡಲಾಯಿತು. ತಕ್ಷಣವೇ ಆಗಮಿಸಿದ ಡಾ. ಮುಕುಂದ್ ಮತ್ತು ಅವರ ತಂಡ, ತಕ್ಷಣವೇ ಆಸ್ಪತ್ರೆಗೆ ವಿಷ್ಣುವರ್ಧನ್ ಅವರನ್ನು ಸಾಗಿಸಿದರು. ಆದರೆ ಮಾರ್ಗ ಮಧ್ಯೆಯೇ ಇಹಲೋಕ ತ್ಯಜಿಸಿದ್ದರು. ಆಸ್ಪತ್ರೆಯಲ್ಲಿ ಸರಿಯಾಗಿ ಪರಿಶೀಲಿಸಿದ ನಂತರ ಸುಮಾರು 3. 30 ಸುಮಾರಿಗೆ ಅಧಿಕೃತ ಘೋಷಣೆ ಮಾಡಲಾಯಿತು.
ಮೈಸೂರಿನ ಚಾಮುಂಡಿಪುರಂನಲ್ಲಿ ಹುಟ್ಟಿದ ಅವರು, ತಮ್ಮ ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಮುಗಿಸಿದವರು. ಹಿರಿಯ ಚಿತ್ರ ನಿರ್ದೇಶಕ ಪುಟ್ಟಣ್ಣನವರೇ ಇವರನ್ನು ಗುರುತು ಹಚ್ಚಿದವರು. “ನಾಗರ ಹಾವು” ಚಿತ್ರದ ರಾಮಾಚಾರಿ ಪಾತ್ರದ ಮೂಲಕವೇ ಜನಮಾನಸಕ್ಕೆ ತಲುಪಿದ ವಿಷ್ಣುವರ್ಧನ್ ತಮ್ಮದೇ ಆದ ಹಲವು ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಹೊಸತನ್ನು ತುಂಬಿದವರು. ಬಂಧನ ಚಿತ್ರ ತಂದುಕೊಟ್ಟ ಖ್ಯಾತಿ ಹಾಗೂ ಇಮೇಜ್ ಅನನ್ಯ. ಹಾಗೆಯೇ ಸಾಹಸಸಿಂಹ ಚಿತ್ರದ ಮೂಲಕ ಅವರಿಗೊಂದು ಬಿರುದೂ ಪಾತ್ರವಾಯಿತು. 5 ಕ್ಕೂ ಹೆಚ್ಚು ಫಿಲಂಪೇರ್ ಪ್ರಶಸ್ತಿ ಗಳಿಸಿದ್ದ ಅವರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಿತ್ತು. ಮುತ್ತಿನಹಾರದಂಥ ಒಳ್ಳೆಯ ಚಿತ್ರಗಳನ್ನು ಕೊಟ್ಟವರು ಅವರು.

ರಾಜ್ಯ ಸರಕಾರ ರಾಜ್ಯಾದ್ಯಂತ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ಪ್ರಕಟಿಸಿದೆ. ಈ ಮಧ್ಯೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗುತ್ತಿದೆ. ನಂತರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
“ಕಲ್ಚರಲ್ ರಿಯಲಿಸಂ” ಕೃತಿ ಕುರಿತ ಟಿ.ಪಿ. ಅಶೋಕರ ಬರಹ
ಸಿನಿಮಾ ಬಗೆಗಿನ ಪುಸ್ತಕಗಳ ಬಗ್ಗೆ ಆರಂಭಿಸಿರುವ ಹೊಸ ಲೇಖನ ಸಂಚಯವಿದು. ಇದರಲ್ಲಿ ಮೊದಲಿಗೆ ಎನ್. ಮನುಚಕ್ರವರ್ತಿಯವರ “ಕಲ್ಚರಲ್ ರಿಯಲಿಸಂ” ಕೃತಿ ಕುರಿತು ವಿಜಯ ಕರ್ನಾಟಕದಲ್ಲಿ ಟಿ.ಪಿ. ಅಶೋಕರು ಬರೆದ ಬರಹವನ್ನು ಹಾಕಲಾಗಿದೆ. ನಿಮ್ಮಲ್ಲೂ ಇರುವ ಕೃತಿಗಳ ಬಗ್ಗೆ ಪುಟ್ಟದಾದ ವಿಮರ್ಶಾತ್ಮಕ ಬರಹ ಅಥವಾ ಪರಿಚಯಾತ್ಮಕ ಬರಹವನ್ನು ನಮ್ಮ ಇಮೇಲ್ ವಿಳಾಸಕ್ಕೆ ಕಳಿಸಬಹುದು.
ಎನ್.ಮನು ಚಕ್ರವರ್ತಿಯವರು ಸಂಪಾದಿಸಿರುವ ‘ಕಲ್ಚರಿಂಗ್ ರಿಯಲಿಸಂ’ ಹಲವು ಕಾರಣಗಳಿಗಾಗಿ ಒಂದು ಮಹತ್ವದ ಪ್ರಕಟಣೆ. ಗಿರೀಶ್ ಕಾಸರವಳ್ಳಿಯವರ ಚಲನಚಿತ್ರಗಳನ್ನು ಸೂಕ್ಷ್ಮವಾಗಿ, ಗಂಭೀರವಾಗಿ ಚರ್ಚಿಸುವ ಹತ್ತು ಲೇಖನಗಳ ಸಂಗ್ರಹ ಇದು. ಮನು ಚಕ್ರವರ್ತಿ ಮತ್ತು ರಶ್ಮಿದೊರೈಸ್ವಾಮಿಯವರು ಗಿರೀಶರೊಂದಿಗೆ ನಡೆಸಿರುವ ಎರಡು ಪ್ರತ್ಯೇಕ ಸಂದರ್ಶನಗಳೂ ಇಲ್ಲಿ ಸಂಕಲಿತವಾಗಿ ಈ ಸಂಪುಟದ ಮಹತ್ವವನ್ನು ಹೆಚ್ಚಿಸಿವೆ. ಸಮಕಾಲೀನ ಭಾರತೀಯ ಚಲನಚಿತ್ರ ನಿರ್ದೇಶಕರುಗಳಲ್ಲಿಯೇ ತುಂಬಾ ಪ್ರತಿಭಾವಂತರೆಂದೂ, ಪ್ರಯೋಗಶೀಲರೆಂದೂ ಪ್ರಸಿದ್ಧರಾಗಿರುವ ಗಿರೀಶ್ ಕಾಸರವಳ್ಳಿಯವರ ಚಿತ್ರಗಳನ್ನು ಕುರಿತ ಮೊದಲ ಪುಸ್ತಕ ಇದು.
ಮನು ಚಕ್ರವರ್ತಿಯವರು ದೊಡ್ಡ ಬಜೆಟ್ಟಿನ ಕಮರ್ಷಿಯಲ್ ಹಿಂದಿ ಚಿತ್ರಗಳನ್ನು ಭಾರತೀಯ ಚಲನ ಚಿತ್ರದ ಮುಖ್ಯ ಪ್ರವಾಹವೆಂದೂ, ಇತರ ಭಾರತೀಯ ಭಾಷಾ ಚಿತ್ರಗಳನ್ನು ಕೇವಲ ‘ಪ್ರಾದೇಶಿಕ’ ಚಿತ್ರಗಳೆಂದೂ ಗುರುತಿಸುವ ‘ಪ್ರತಿಷ್ಠಿತ’ ಸಂಕಥನ ಗಳನ್ನು ನಿರಾಕರಿಸುತ್ತಾರೆ. ಇಂಥ ಚಿಂತನೆಗಳು ಮಾರುಕಟ್ಟೆಯ ಒತ್ತಡದಿಂದ ಪ್ರಭಾವಿತವಾಗಿರುತ್ತವೆ. Read the rest of this entry »
ಸಾಹಸಮಯ ಜೀವನದ ಸಾಹಸಮಯಿ ಚಿತ್ರೀಕರಣ
ಮೊದಲ ಡಾಕ್ಯುಮೆಂಟರಿ ಬಗ್ಗೆ ಬರೆದಿರುವ ಅಭಯಸಿಂಹ, ಆ ಮೂಲಕ ಸಾಹಸಮಯಿ ಚಿತ್ರೀಕರಣದ ಯಶೋಗಾಥೆಯನ್ನೂ ಹೇಳಿದ್ದಾರೆ. ನಾನೂಕ್ ಆಫ್ ದಿ ನಾರ್ತ್ ಬಹುಶಃ ಮೊದಲ ಖಚಿತರೂಪದ ಡಾಕ್ಯುಮೆಂಟರಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅದರ ಬಗ್ಗೆಯೇ ಈ ಬರಹ.
ಚಲನಚಿತ್ರ ಕ್ಯಾಮರಾ ತಯಾರಕರಲ್ಲಿ ಪ್ರಮುಖರಾದ ಲ್ಯುಮಿಯರ್ ಸಹೋದರರು, ಇದೊಂದು ಭವಿಷ್ಯವಿಲ್ಲದ ಉಪಕರಣ ಎಂದರು. ಮೊದಲು ಲ್ಯುಮಿಯರ್ ಸಹೋದರರು ತಮ್ಮ ಕ್ಯಾಮರಾವನ್ನು ದಾಖಲೀಕರಣ ಉಪಕರಣವಾಗಿ ಬಳಸಲಾರಂಭಿಸಿದರು. ಕ್ಯಾಮರಾ ಮಾರಾಟಕ್ಕೆ ಸಹಾಯವಾಗಲಿ ಎಂದು ಬೇರೆ ಬೇರೆ ದೇಶಗಳಲ್ಲಿ ಸಂಚರಿಸಿ ಅಲ್ಲಿನ ಕೆಲವು ದೃಶ್ಯಗಳನ್ನು ಸೆರೆಹಿಡಿದು ಅಲ್ಲಿನ ಜನಕ್ಕೆ ತೋರಿಸಿದರು. ಮೊತ್ತ ಮೊದಲಿನ ಸಾಕ್ಷ್ಯಚಿತ್ರಗಳು ಹೀಗೆ ನಿರ್ಮಾಣವಾದುವು!
ಇಂದು ಚಲನಚಿತ್ರ ಉದ್ಯಮ ದೈತ್ಯಾಕಾರದಲ್ಲಿ ಬೆಳೆದು ನಿಂತಿದೆ. ಸಾಕ್ಷ್ಯ ಚಿತ್ರಗಳು ಇಂದಿಗೂ ಒಂದು ದೃಶ್ಯ ಮಾಧ್ಯಮದ ಪ್ರಮುಖ ಅಂಗವಾಗಿವೆ. ಸಾಕ್ಷ್ಯಚಿತ್ರ ಎನ್ನುವುದರ ಸರಿಯಾದ ವಿವರಣೆ ಏನು ಎನ್ನುವುದು ಇಂದಿಗೂ ಚರ್ಚೆಯಲ್ಲಿದೆಯಾದರೂ ವಾಸ್ತವದ ಚಿತ್ರಣ ವಾಸ್ತವಕ್ಕೆ ಅತಿ ಹತ್ತಿರವಾಗಿ ಎಂದು ಸುಮಾರಾಗಿ ಸಾಕ್ಷ್ಯಚಿತ್ರಗಳನ್ನು ಗುರುತಿಸಲಾಗುತ್ತದೆ. ಕಥಾಚಿತ್ರ ಎನ್ನುವುದು ಕಲ್ಪನೆಯ ಕೂಸು ಎನ್ನುವುದಾದರೆ, ಸಾಕ್ಷ್ಯ ಚಿತ್ರಗಳು ವಾಸ್ತವದ ದೃಶ್ಯಗಳನ್ನು ಒಂದು ನಿರ್ದಿಷ್ಟ ಕ್ರಮದಿಂದ ಜೋಡಿಸಿ ಕಥೆಯನ್ನು ಹೇಳುವ ಕ್ರಮ ಎನ್ನಬಹುದು. ಆದರೆ ಈ ಕ್ರಮದಿಂದ ಜೋಡಿಸುವ ಪ್ರಕ್ರಿಯೆಯಿಂದಾಗಿ ಸಾಕ್ಷ್ಯಚಿತ್ರಗಳಲ್ಲೂ ಚಿತ್ರಕಾರನ ಬೇಕು-ಬೇಡಗಳು ಸೇರಿ ಅವೂ biased ಕಥನವೇ ಆಗುತ್ತವೆ. ಹಾಗಾಗಿ ಇವುಗಳೂ ಸತ್ಯದಿಂದ ದೂರವಾದವು ಎನ್ನುವ ವಾದವೂ ಇದೆ. ಈ ಸಂದರ್ಭದಲ್ಲಿ 1922 ರಲ್ಲಿ ತಯಾರಾದ ನಾನೂಕ್ ಆಫ್ ದಿ ನಾರ್ತ್ (Nanook of the North) ಎನ್ನುವ ಚಿತ್ರದ ಕಥೆ ಬಹಳ ಸ್ವಾರಸ್ಯಕರವೂ ಸಾಹಸಮಯವೂ ಆಗಿದೆ. Read the rest of this entry »
ಚಿತ್ರರಂಗದ ಸದ್ಯದ ವಿವಾದ-ಮತ್ತಷ್ಟು ಪ್ರತಿಕ್ರಿಯೆ
ಕನ್ನಡ ಚಿತ್ರರಂಗದ ಸದ್ಯದ ವಿವಾದದ ಕುರಿತು ವಸಂತ ಅವರು ಬರೆದ ಲೇಖನಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಬಂದದ್ದೆಲ್ಲವನ್ನೂ ಚರ್ಚೆ ಇನ್ನಷ್ಟು ಚರ್ಚೆಯಾಗಲೆಂಬ ದೃಷ್ಟಿಯಿಂದ ಇಲ್ಲಿ ಹಾಕಲಾಗಿದೆ. ದಯವಿಟ್ಟು ಚರ್ಚೆಯನ್ನು ಬೆಳೆಸಿ.
ಹಾಂಗಲ್ಲಾರೀ… ನೀವ್ಯಾಕೆ ಆ ಸಿನ್ಮಾ ತೋರ್ಸೋನ್ ಬಗ್ಗೆ ಮಾತಾಡ್ತೀರ್ರೀ? ಅವಂ ಮಾಡೋದು ಅವನ ಹೊಟ್ಟೇ ಪಾಡಲ್ಲೇನ್ರೀ? ಅವಂಗೆ ಹಿಂದೀ ಸಿನ್ಮಾ ತೋರ್ಸೇ ಹೊಟ್ಟೆ ತುಂಬೋದು ಅಂತಾದ್ಮ್ಯಾಲೆ ಅವಂ ಯಾಕ್ರೀ ಕನ್ನಡಾ ಸಿನ್ಮಾ ತೋರ್ಸ್ಯಾನು? ಇವತ್ತಾ ಕನ್ನಡ ಸಿನ್ಮಾ ನೋಡೂ ಜನ್ರೇ ಕಡ್ಮೆ ಆಗಿದಾರಾ ಅಂದ್ ಮ್ಯಾಗೆ ಅದಕ್ಕೇನೋ ಬೇರೆ ಕಾರಣ ಇರ್ಬೇಕಲ್ಲೇನ್ರೀ? ನಮ್ಮ ಸಿನ್ಮಾಗಳನ್ನ ಉಳ್ಸೋಕ್ಕಂತ ಅದ್ಯಾವನೋ ಗದಗ್ದೋನ್ ಹೊಟ್ಟೆಗೊಡ್ಯೋದು ಏನು ನ್ಯಾಯಾ ಕಣ್ರೀ? ಅದಕ್ಕೆ ಕಾನೂನು ಮಾಡಿದ್ರಾ… ಅದು ಅನ್ಯಾಯದ್ ಕಾನೂನಲ್ಲೇನ್ರೀ……………………………………………………………. ಬೇತಾಳ
*
ಎಲ್ರೂ ಮಾಡೋದೂ ಹೊಟ್ಟೆಪಾಡಿಗಾಗಿ ಸ್ವಾಮಿ. ಹಾಗಂತ ಉದಾಹರಣೆಗೆ, ಕಳ್ಲಭಟ್ಟಿ ಮಾಡೋರ್ನ, ಕಳ್ಳಸಾಗಾಣಿಕೆ ಮಾಡೋರ್ನ ಒಪ್ಪೋದಿಕ್ಕೆ ಸಾಧ್ಯಾನಾ? ಒಬ್ಬರು ಮಾಡೋ ಕೆಲಸ ಆ ನಾಡಿನ ಜನರ ಏಳಿಗೆಗೆ ಪೂರಕವಾಗಿರಬೇಕು ಅಲ್ಲವಾ? ಕಾನೂನು ಇರೋದೂ ಸಹಾ ಆಯಾ ನಾಡಿನ ಜನರ ಏಳಿಗೆಗಾಗಿಯೇ ಅಲ್ಲವಾ? ಕಾನೂನು ಮಾಡೋದು ಆಯಾ ನಾಡಿನ ಜನರ ರಕ್ಷಣೆಗಾಗಿ ಅಲ್ಲವಾ?-ವಿಕ್ರಮ್
*
ನೋಡಿ ಸರ್ ಇದು ವೆರಿ ಸಿಂಪಲ್, KFCC ಯಾವುದೇ ಕಾರಣಕ್ಕೆ ಪ್ರದರ್ಶಕರ ಮೇಲೆ ಯಾವುದೇ ರೀತಿಯ ಒತ್ತಡ ಹೇರಬಾರದು. ಯಾಕೆಂದರೆ ಅವನದು ಖಾಸಗಿ ಆಸ್ತಿ. ಒಮ್ಮ ಆತ ಸಿನೆಮಪ್ರದರ್ಶನ ಬಿಟ್ಟು ತಿಯೇಟರ್ ಒಡೆದು ಕಾಂಪ್ಲೆಕ್ಸ ಕಟ್ಟಿಸಿದರೆ ಏನ್ ಮಾಡ್ತಿರ. KFCC ಗೆ ಅಷ್ಟೊಂದು ಕಾಳಜಿ ಇದ್ರೆ ಕನ್ನಡದಲ್ಲಿ ದರಿದ್ರ ಸಿನೆಮ ನೀಡುತ್ತಿರೊ ಮಂದಿಗೆ ನಿರ್ಬಂದ ಹಾಕಲು ಹೇಳಿ. ಇಲ್ಲಾ ಅಂದ್ರೆ KFCC ಕರ್ನಾಟಕದಲ್ಲೆಲ್ಲ ತನ್ನ ಹಣದಿಂದ ಚಿತ್ರಮಂದಿರ ಕಟ್ಟಿ ಚಿತ್ರ ಪ್ರದರ್ಶಿಸಲು ಹೇಳಿ. ಅದು ಬಿಟ್ಟು ಈ ಡುಬಾಕ್ ಐಡಿಯ ಕೈಬಿಡಿ. ಒಳ್ಳೆ ಸಿನೆಮ ಕೊಟ್ಟರೆ ಜನ ನೋಡೇ ನೋಡ್ತಾರೆ………………………………….ರಾಜೇಶ್
*

1. ಭಾರತ ಒಕ್ಕೂಟ ವ್ಯವಸ್ಥೆಯ ದೇಶ. ಇಲ್ಲಿ ಬದುಕುವವರು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿ ನಡೆಯಬೇಕು. ಚಲನಚಿತ್ರ ವಾಣಿಜ್ಯ ಮಂಡಳಿ ಅನ್ನುವುದು ಇದೇ ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ರೂಪುಗೊಂಡಿರುವ ಸಂಸ್ಥೆ. ಇಲ್ಲಿ ಎಲ್ಲಾ ಭಾಷೆಯ ಸಿನಿಮಾದವರೂ ಸದಸ್ಯರಾಗಿದ್ದಾರೆ. ಇಂತಹ ವ್ಯವಸ್ಥೆಯೂ ರೂಪಿಸು ಕಟ್ಟುಪಾಡುಗಳನ್ನು ಕಾಪಾಡಿಕೊಂಡು ಸಾಗುವುದು ಸಿನಿಮಾ ಸಮಾಜದ / ಉದ್ಯಮದ ಏಳಿಗೆಗೆ ಅಗತ್ಯ. ಹಾಗಾಗಿ ಗದಗದ ಚಿತ್ರಮಂದಿರದವರು ನೀಡಿರುವ ಹೇಳಿಕೆಯನ್ನು ತಪ್ಪು ಎನ್ನಬೇಕಾಗುತ್ತದೆ.
3. ಒಂದು ಉದ್ಯಮದ ಒಟ್ಟಂದದಲ್ಲಿ ಯಾವುದೇ ಕಟ್ಟುಪಾಡು ಯಾರಿಗಾದರೂ ಸರಿ ಇಲ್ಲ ಎನಿಸಿದರೆ, ಆ ಒಕ್ಕೂಟ ವ್ಯವಸ್ಥೆಯ ಒಳಗಡೆಯೇ ಇದ್ದು ಪ್ರಶ್ನಿಸಬೇಕು ಹಾಗೂ ಅಗತ್ಯ ತಿದ್ದುಪಡಿಗಳನ್ನು ಸೂಚಿಸಬೇಕು. ಹಾಗೆ ಮಾಡದೆ ದೂರ ಉಳಿದರೆ ಅಂತಹವರು ಎಲ್ಲಿಗೂ ಸಲ್ಲದವರಾಗುತ್ತಾರೆ. ವ್ಯವಸ್ಥೆಯೇ ಅಂತಹವರನ್ನು ದೂರ ಇಟ್ಟರೆ ಒಂಟಿಯಾಗಿ ಬದುಕುವುದು ಯಾರಿಗಾದರೂ ಕಷ್ಟವಾಗುತ್ತದೆ. Read the rest of this entry »
ಈ ಶನಿವಾರ ಚಲನಚಿತ್ರ ರಸಗ್ರಹಣ ಶಿಬಿರ
ಮಂಡ್ಯ ರಮೇಶರ “ನಟನ” ಸಂಸ್ಥೆ ಡಿ. 12 ಮತ್ತು 13 (ಈ ಶನಿವಾರ, ಭಾನುವಾರ)ದಂದು ಚಲನಚಿತ್ರ ರಸಗ್ರಹಣ ಶಿಬಿರ ಏರ್ಪಡಿಸಿದೆ.
ಮೈಸೂರಿನ ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಶಿಬಿರ ನಡೆಯಲಿದ್ದು, ಶಿಬಿರ ಶುಲ್ಕ 150 ರೂ. ಗಳು ಮಾತ್ರ. ಖ್ಯಾತ ನಿರ್ದೇಶಕ ಬಿ. ಸುರೇಶ್, ತಜ್ಞರಾದ ರಘುನಾಥ್, ವಿನಯ್ ಮುಂತಾದವರು ಶಿಬಿರ ನಡೆಸಿಕೊಡುವರು.
ವಿಶ್ವದ ಒಳ್ಳೆ ಚಿತ್ರಗಳ ಪ್ರದರ್ಶನ, ಸಂವಾದ, ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು. ಇದೊಂದು ವಿಶಿಷ್ಟ ಪ್ರಯತ್ನವಾಗಿದ್ದು, ನೇರವಾಗಿ ಸ್ಥಳಕ್ಕೇ ಬಂದೂ ಹೆಸರನ್ನು ನೋಂದಾಯಿಸಬಹುದು. ಮಾಹಿತಿ ಮತ್ತು ಹೆಸರು ನೋಂದಣಿಗೆ 9972391577, 9480468327, 0821- 2562208.
ಜತೆಗೆ ಡಿ.13 ರಂದು “ರತ್ನಪಕ್ಷಿ” ನಾಟಕ ಪ್ರದರ್ಶನವಿದೆ. ಇದರ ನಿರ್ದೇಶನ : ಮಂಡ್ಯ ರಮೇಶ್, ರಚನೆ : ಕೆ. ರಾಮಯ್ಯ.
ಶಂಕರನಾಗ್ ರೊಂದಿಗೆ ಕೆಲಸ ಮಾಡುವುದೇ ಒಂದು ಖುಷಿ
ಶಂಕರನಾಗ್ರ ಬೇರೆ ವಿಶೇಷತೆ ಬಗ್ಗೆ ನಾನು ಇಲ್ಲಿ ಉಲ್ಲೇಖಿಸುವುದಿಲ್ಲ. ಆದರೆ ಅವರೊಂದಿಗೆ ಕೆಲಸ ಮಾಡುವುದಿದೆಯಲ್ಲ, ಅದೇ ಒಂದು ಅದ್ಭುತವಾದ ಅನುಭವ.
ಯಾರನ್ನೂ ತನ್ನತ್ತ ಸೆಳೆದುಬಿಡುವ ಅವರ ಕತೃರ್ತ್ವ ಶಕ್ತಿಯನ್ನು ಮರೆಮಾಚಲಾರದು. ಬಹುಶಃ ಶಂಕರನಾಗ್ ಇಂದು ಇದ್ದಿದ್ದರೆ ಕನ್ನಡ ಚಿತ್ರರಂಗದಲ್ಲಿ ಇನ್ನೂ ಎಂಥೆಂಥ ಸಾಧ್ಯತೆಗಳು ಮೂರ್ತರೂಪ ಪಡೆಯುತ್ತಿದ್ದವೇನೋ ಗೊತ್ತಿಲ್ಲ. ಪ್ರತಿಯೊಬ್ಬರನ್ನೂ ಪ್ರೀತಿಸುವ ಮನೋಭಾವದ ಶಂಕರ್, ಸದಾ ಕಾರ್ಯ ತತ್ಪರರು.

ಸಾಕಷ್ಟು ವೀಡಿಯೊ ಸಂಕಲನಗಳಲ್ಲಿ ಅವರೊಂದಿಗೆ ತೊಡಗಿಸಿಕೊಂಡಿದ್ದೆ. 1986 ರ ಕಾಲ. ನಾನು ಕೆಲಸ ಮಾಡುತ್ತಿದ್ದ ಸ್ಟುಡಿಯೋವೊಂದೇ ಇಡೀ ಕರ್ನಾಟಕಕ್ಕೆ. ಎಲ್ಲ ಖಾಸಗಿಯವರು, ದೂರದರ್ಶನಕ್ಕೆ ಕಾರ್ಯಕ್ರಮ ರೂಪಿಸುವವರು, ಬಹುತೇಕ ಮಂದಿ ಇಲ್ಲಿಗೇ ಬರಬೇಕಿತ್ತು. ಅದರಂತೆಯೇ ಶಂಕರನಾಗ್ ಸಹ ಬರುತ್ತಿದ್ದರು.
ಅವರು ತಮ್ಮ ಅಣ್ಣ ಅನಂತನಾಗರಿಗೆ ಕೊಡುತ್ತಿದ್ದ ಗೌರವ ಕಂಡೇ ನಾನು ದಿಗಿಲಾಗಿದ್ದೆ. ಹಾಗೆಯೇ ಅನಂತನಾಗರಿಗೂ ತಮ್ಮನ ಬಗ್ಗೆ ಅತೀವ ಕಾಳಜಿ. ಒಮ್ಮೆ ನನ್ನೆದುರೇ ನಡೆದ ಘಟನೆಯದು. ಅಂದು ರಾತ್ರಿ ಎಷ್ಟೊತ್ತಾದರೂ ಸಂಕಲನದಲ್ಲಿ ಬ್ಯುಸಿಯಾಗಿದ್ದರು. ಅಷ್ಟೊತ್ತಿಗೆ ಫೋನ್ ಬಂದಿತು. ನಾನೇ ಹೋಗಿ ತೆಗೆದುಕೊಂಡೆ. ಅನಂತನಾಗ್ ಅವರ ಕಂಚಿನಕಂಠ, “ಶಂಕರ್ ಇದಾನಾ’ ಎಂದು ಕೇಳಿತು. “ನಾನು ಇದ್ದಾರೆ’ ಎಂದು ಹೇಳಿ ಶಂಕರನಾಗರಿಗೆ, “ಸಾರ್, ನಿಮ್ಮ ಅಣ್ಣನವರ ಫೋನ್’ ಎಂದೆ. Read the rest of this entry »
ಎಲ್ಲರ ಒಪ್ಪಿಗೆಯೊಂದಿಗೆ ಮುನ್ನಡೆಯಬೇಕು
ವಸಂತರು ಬರೆದ ಲೇಖನಕ್ಕೆ ಖ್ಯಾತ ನಿರ್ದೇಶಕ ಬಿ. ಸುರೇಶ, ಚುಟುಕಾಗಿ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಇನ್ನಷ್ಟು ಮಂದಿ ಪ್ರತಿಕ್ರಿಯಿಸಬಹುದು. ಒಟ್ಟೂ ಆರೋಗ್ಯಕರ ಚರ್ಚೆ ನಡೆಸುವುದು ನಮ್ಮ ಉದ್ದೇಶ. saangatya@gmail.com ಗೆ ಪ್ರತಿಕ್ರಿಯಿಸಿ.
1. ಭಾರತ ಒಕ್ಕೂಟ ವ್ಯವಸ್ಥೆಯ ದೇಶ. ಇಲ್ಲಿ ಬದುಕುವವರು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿ ನಡೆಯಬೇಕು. ಚಲನಚಿತ್ರ ವಾಣಿಜ್ಯ ಮಂಡಳಿ ಅನ್ನುವುದು ಇದೇ ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ರೂಪುಗೊಂಡಿರುವ ಸಂಸ್ಥೆ. ಇಲ್ಲಿ ಎಲ್ಲಾ ಭಾಷೆಯ ಸಿನಿಮಾದವರೂ ಸದಸ್ಯರಾಗಿದ್ದಾರೆ. ಇಂತಹ ವ್ಯವಸ್ಥೆಯೂ ರೂಪಿಸುವ ಕಟ್ಟುಪಾಡುಗಳನ್ನು ಕಾಪಾಡಿಕೊಂಡು ಸಾಗುವುದು ಸಿನಿಮಾ ಸಮಾಜದ / ಉದ್ಯಮದ ಏಳಿಗೆಗೆ ಅಗತ್ಯ. ಹಾಗಾಗಿ ಗದಗದ ಚಿತ್ರಮಂದಿರದವರು ನೀಡಿರುವ ಹೇಳಿಕೆಯನ್ನು ತಪ್ಪು
ಎನ್ನಬೇಕಾಗುತ್ತದೆ.
2. ಒಂದು ಉದ್ಯಮದ ಒಟ್ಟಂದದಲ್ಲಿ ಯಾವುದೇ ಕಟ್ಟುಪಾಡು ಯಾರಿಗಾದರೂ ಸರಿ ಇಲ್ಲ ಎನಿಸಿದರೆ, ಆ ಒಕ್ಕೂಟ ವ್ಯವಸ್ಥೆಯ ಒಳಗಡೆಯೇ ಇದ್ದು ಪ್ರಶ್ನಿಸಬೇಕು ಹಾಗೂ ಅಗತ್ಯ ತಿದ್ದುಪಡಿಗಳನ್ನು ಸೂಚಿಸಬೇಕು. ಹಾಗೆ ಮಾಡದೆ ದೂರ ಉಳಿದರೆ ಅಂತಹವರು ಎಲ್ಲಿಗೂ ಸಲ್ಲದವರಾಗುತ್ತಾರೆ. ವ್ಯವಸ್ಥೆಯೇ ಅಂತಹವರನ್ನು ದೂರ ಇಟ್ಟರೆ ಒಂಟಿಯಾಗಿ ಬದುಕುವುದು ಯಾರಿಗಾದರೂ ಕಷ್ಟವಾಗುತ್ತದೆ.
3. ಎಲ್ಲರ ಸಹಕಾರದಿಂದ ಮಾತ್ರ ಆರೋಗ್ಯಕಾರಿಯಾದ ಸಮಾಜ ಕಟ್ಟುವುದು ಸಾಧ್ಯ.
4. ಒಮ್ಮೊಮ್ಮೆ ಒಕ್ಕೂಟ ವ್ಯವಸ್ಥೆಯಲ್ಲಿ ಬಲವುಳ್ಳವರ ಮಾತುಗಳಿಗೆ ಪುಷ್ಟಿ ದೊರಕುವ ಸಾಧ್ಯತೆ ಇದೆ. ಹಾಗಾಗಿ ಶಕ್ತಿಪ್ರದರ್ಶನ ಮಾಡಲಾಗದವರ ಅಭಿಪ್ರಾಯಗಳಿಗೆ ಬೆಲೆಯೇ ಸಿಗದೆ ಹೋಗಬಹುದು. ಅಂತಹ ಪರಿಸ್ಥಿಯನ್ನು ನಿಭಾಯಿಸುವುದಕ್ಕೆ ಮಾರ್ಗೋಪಾಯಗಳನ್ನ ಕಂಡುಕೊಳ್ಳಬೇಕು.
ಗದಗದ ಚಿತ್ರಮಂದಿರದ ಮಾಲೀಕರನ್ನೂ ಒಲಿಸಿ, ಒಳಗೊಳ್ಳಬೇಕು. ಯಾರನ್ನೂ ದೂರ ಇಟ್ಟರೂ ಅದು ಮಾರಕವೇ.
ಕನ್ನಡ ಚಿತ್ರರಂಗ ಇನ್ನೂ ಯಾಕೆ ಅಳ್ತಾ ಕೂರ್ಬೇಕು ?
ವಸಂತ ಎನ್ನುವವರು ತಮ್ಮ ಬ್ಲಾಗ್ ನಲ್ಲಿ ಬರೆದ ಪುಟ್ಟ ಬರಹವಿದು. ಇಂದಿನ ಕನ್ನಡ ಚಿತ್ರರಂಗದ ಚರ್ಚಿತ ವಿಷಯವೇ ಇಲ್ಲಿಯ ಚರ್ಚೆಯ ಸಂಗತಿ. ಚರ್ಚೆ ಬೆಳೆಸುವವರು ತಮ್ಮ ಲೇಖನಗಳನ್ನು ಕಳಿಸಿ, ಚರ್ಚೆ ನಡೆಸಲೆಂದೇ ಇದನ್ನು ಇಲ್ಲಿ ಹಾಕುತ್ತಿದ್ದೇವೆ. ನೀವು ನಮ್ಮ ಇಮೇಲ್ ಗೆ ಕಳಿಸಿಕೊಡಿ.
ಇವತ್ತು ಡೆಕ್ಕನ್ ಹೆರಾಲ್ಡ್ ಓದ್ತಾ ಇದ್ದೆ. ಒಂದು ಚಿಕ್ಕ ಸುದ್ಧಿ ಕಣ್ಣಿಗೆ ಬಿತ್ತು. ಗದಗನಲ್ಲಿ ಒಬ್ಬ ಚಲನಚಿತ್ರ ಪ್ರದರ್ಶಕರು ಹೇಳಿಕೆ ಒಂದನ್ನು ನೀಡಿ, ಎಲ್ಲ ಪ್ರದರ್ಶಕರು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ (KFCC) ಯ ಸದಸ್ಯರಾಗಬೇಕು ಅನ್ನುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾದುದು, ಇದನ್ನ ಈ ಕೂಡಲೇ ಹಿಂಪಡೆಯಬೇಕು ಅಂದರು. ಅದನ್ನ ನೋಡಿದಾಗ ಕರ್ನಾಟಕದ ಒಂದು ಭಾಗದ ಪ್ರದರ್ಶಕರೊಬ್ಬರು, ಕರ್ನಾಟಕದ ಚಿತ್ರಮಂಡಳಿಯ ಸದಸ್ಯತ್ವವೇ ಬೇಡ ಅಂತ ಯಾಕಂತಾರೆ ಅಂತಾ ವಿಚಾರ ಮಾಡ್ತಾ ಇದ್ದೆ. ಯೋಚನೆ ಮಾಡಿದಾಗ, ಚಿತ್ರ ರಂಗದ ಒಂದಿಬ್ಬರು ಗೆಳೆಯರನ್ನು ಮಾತನಾಡಿಸಿದಾಗ ಕಂಡದ್ದು: Read the rest of this entry »





