ಮಾಲಪಿಲ್ಲ – ಒಂದು ಕ್ರಾಂತಿಯ ಸಿನಿಮಾ
ಕೇವಲ ಪೌರಾಣಿಕ ಚಿತ್ರಗಳೇ ಆಳುತ್ತಿದ್ದ ಸಮಯದಲ್ಲಿ ಗೂಡಪಲ್ಲಿ ರಾಮಬ್ರಹ್ಮ ಏಕಾಏಕಿ ಮಾಲಪಿಲ್ಲ (ಹರಿಜನ ಹುಡುಗಿ) ಸಿನಿಮಾ ನಿರ್ಮಿಸಿ ನಿರ್ದೇಶಿಸಿ ದೊಡ್ಡ ಕ್ರಾಂತಿ ಮಾಡಿದ್ದರು. ಬೂಜಲ ಹಿಡಿದ ಹಳೆಯ ಸಂಪ್ರದಾಯಗಳ ವಿರುದ್ಧ ಸಿಡಿದೆದ್ದ ಸಿನಿಮಾ ಮಾಲಪಿಲ್ಲ.
ಸಾರಥಿ ಫಿಲ್ಮ್ ಒಡೆಯಾದ ರಾಮಬ್ರಹ್ಮಂ ಚಿಂತಕರು ಮತ್ತು ಸಾಮಾಜಿಕ ಚೈತನ್ಯದ ಬಗ್ಗೆ ತೀವ್ರ ಕಳಕಳಿ ಉಳ್ಳವರಾಗಿದ್ದರು. ಅವರು ಸಿನಿಮಾ ಇಂಥದ್ದಕ್ಕೆ ಬಲವಾದ ಅಸ್ತ್ರವೆಂದೇ ನಂಬಿದ್ದರು. 1936 ರ ಸಮಯದಲ್ಲಿ ಗಾಂಧೀಜಿಯವರು ಅಸ್ಪೃಶ್ಯತೆ ವಿರುದ್ಧ, ಹರಿಜನರಿಗೆ ದೇವಾಲಯ ಪ್ರವೇಶಗಳಂಥ ಚಳವಳಿಗಳು ಆರಂಭಗೊಂಡಿದ್ದವು. ಸಮಕಾಲೀನ ರಾಜಕೀಯ ಸಾಮಾಜಿಕ ಮಾಲಪಿಲ್ಲ ನಿರ್ಮಿಸಲು ರಾಮಬ್ರಹ್ಮಂ ಸಿದ್ಧರಾದರು.
ಸನಾತನ ಬ್ರಾಹ್ಮಣನೊಬ್ಬ ಹರಿಜನ ಹುಡುಗಿಯೊಬ್ಬಳ್ಳನ್ನು ಪ್ರೀತಿಸಿ ಮದುವೆಯಾಗೋದು ಸಿನಿಮಾದ ಥೀಮು. 70 ವರ್ಷಗಳ ಹಿಂದೆ ಈ ರೀತಿಯ ಸಬ್ಜೆಕ್ಟ್ನಿಂದ ಸಿನಿಮಾ ಮಾಡೋದು ನಿಜಕ್ಕೂ ಸಾಹಸವೇ ಸರಿ. ವಿಜಯವಾಡದಂಥ ಸಾಹಿತಿಗಳ, ಪ್ರಕಾಶಕರ ತವರಾದ ಅದ್ಭುತ ನಗರದಲ್ಲಿ ಸನಾತನ ಬ್ರಾಹ್ಮಣರೆಲ್ಲರೂ ಬಹಿರಂಗ ಸಭೆ ನಡೆಸಿ ಈ ಚಿತ್ರವ ನ್ನು ಯಾರೂ ವೀಕ್ಷಿಸಬಾರದೆಂದು ವಿನಂತಿಸಿದ್ದರು. (more…)
ಸರ್ವಮಂಗಳಾ ಚೆನ್ನಾಗಿದೆ : ತಾಂತ್ರಿಕ ದೋಷವೂ ಇದೆ !
ಸರ್ವಮಂಗಳಾ ಚಿತ್ರ ಬಹಳ ವಿಶಿಷ್ಟವಾದುದು. ಚದುರಂಗರ ಕಾದಂಬರಿ ಆಧರಿಸಿದ ಚಿತ್ರ. ಆಗ ಕಾದಂಬರಿ, ಕಥೆಗಳನ್ನು ಆಧರಿಸಿ ಚಿತ್ರ ತೆಗೆಯುವ ಪರಂಪರೆ ಶುರುವಾಗಿತ್ತು. ಕನ್ನಡದ ಹೊಸ ಅಲೆಯ ಚಿತ್ರ ಅಥವಾ ಪ್ರಾಯೋಗಿಕ ನೆಲೆಯ ಚಿತ್ರ (ಟ್ರೆಂಡ್ ಸೆಟ್ಟರ್) ಬೆಳ್ಳಿಮೋಡ ಅದೇ ವರ್ಷದಲ್ಲೇ ಬಿಡುಗಡೆಯಾಗಿತ್ತು.
ಅದೇ ವರ್ಷದಲ್ಲಿ ಬಿಡುಗಡೆಯಾದ ಸರ್ವಮಂಗಳಾಕ್ಕೂ ಪ್ರಶಸ್ತಿ ಬಂದಿತು. ಅಂದರೆ ಚದುರಂಗರು ಅತ್ಯುತ್ತಮ ಚಿತ್ರಕಥೆಯ ಪ್ರಶಸ್ತಿಗೆ ಭಾಜನರಾಗಿದ್ದರು. ಚದುರಂಗರು ಒಳ್ಳೆಯ ಕಾದಂಬರಿಕಾರರು, ಕನ್ನಡ ಸಾಹಿತ್ಯದ ಪ್ರಧಾನ ಲೇಖಕರು. ಆದರೆ ಸಿನಿಮಾದ ತಂತ್ರಗಳು ಅವರಿಗೆ ತಿಳಿದಿರಲಿಲ್ಲ, ಸಿನಿಮಾ ಮಾಡಬೇಕೆಂಬ ಹುಮ್ಮಸ್ಸಿತ್ತು. ಹಾಗಾಗಿ ಸಿನಿಮಾದ ತಂತ್ರಗಳನ್ನು ಅರಿಯುವ ಗೋಜಿಗೆ ಹೋಗದೇ ಪ್ರಯತ್ನ ಆರಂಭಿಸಿ ಮುಗಿಸಿಬಿಟ್ಟರು. ಹಾಗಾಗಿ ತಾಂತ್ರಿಕವಾಗಿ ಗಮನಿಸಿದರೆ ಆ ಸಿನಿಮಾದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಸಿನಿಮಾ ನೆಲೆಯಲ್ಲಿ ನೋಡುವುದು ಕಷ್ಟ, ಅದರರ್ಥ (ಸಿನೆಮಿಟಾಕಲಿ)ಸೂಕ್ತವಾಗಿಲ್ಲ. ಒಟ್ಟೂ ಅದಕ್ಕೂ ಪ್ರಶಸ್ತಿ ಬಂದಿತು. ಈ ವಾಕ್ಯದ ಅರ್ಥ ಬಹುಶಃ ಆಗಿನ ಸಂದರ್ಭದಲ್ಲಿ ಎಲ್ಲರೂ ಗಮನಿಸುತ್ತಿದ್ದುದು ಕಥಾವಸ್ತುವನ್ನೇ ಹೊರತು ಸಿನಿಮಾ ತಾಂತ್ರಿಕ ಅಂಶಗಳನ್ನಲ್ಲ ಎಂಬುದು ಸ್ಪಷ್ಟವಾಗುತ್ತದೆ. (more…)
ಅನ್ವೇಷಣೆ : ಒಂದು ಅತ್ಯಂತ ಅಪರೂಪದ ಪ್ರಯೋಗ
ಬಿ. ಸುರೇಶರು ತಮ್ಮ ಬೆಳಕಿನೊಳಗಣ ಬೆರಗು ಮಾಲಿಕೆ (ವಿದ್ಯಾರ್ಥಿಗಳಿಗೆ ಬರೆದದ್ದು)ಯಲ್ಲಿ ಬರೆದ “ಅನ್ವೇಷಣೆ” ಚಿತ್ರ ಕುರಿತಾದ ಬರಹವನ್ನು ಇಲ್ಲಿ ಹಾಕಲಾಗಿದೆ. ಓದಿ ಅಭಿಪ್ರಾಯಿಸಿ.
ನಮ್ಮ ಕನ್ನಡ ಚಿತ್ರರಂಗ ಎಂಬ ಮಹಾಸಾಗರದಲ್ಲಿ ಪ್ರತಿನಿತ್ಯವು ಒಂದು ಹೊಸ ಪ್ರಯೋಗ ಆಗುತ್ತಲೇ ಇದೆ. ಈ ಪ್ರಯೋಗಗಳು ಮೊದಲು ಹೊಸಅಲೆ ಅಥವಾ ಪ್ರಶಸ್ತಿ ಸಿನಿಮಾ ಎಂಬ ಹಣೆಪಟ್ಟಿಯ ಚಿತ್ರಗಳಲ್ಲಿಯೇ ಆಗುವುದು. ನಂತರ ಅದೇ ಪ್ರಯೋಗಗಳು ಪ್ರಧಾನವಾಹಿನಿಯ/ಜನಪ್ರಿಯ ಚಿತ್ರಗಳಲ್ಲಿ ಆಗುವುದನ್ನು ನಾವು ಕಾಣುತ್ತಲೇ ಬಂದಿದ್ದೇವೆ. ಒಂದೊಮ್ಮೆ ಕೃತಕ, ಅವಾಸ್ತವ, ಅಸಹಜ ವಿವರಗಳೊಡನೆ ಚಿತ್ರಿತವಾಗುತ್ತಿದ್ದ ಜನಪ್ರಿಯ ಸಿನಿಮಾಗಳಲ್ಲಿ ೮೦ರ ದಶಕದಿಂದಾಚೆಗೆ ವಾಸ್ತವ ಮತ್ತು ಸಹಜ ನಿರೂಪಣೆಯು ಬರಲು ಕಾರಣವಾದದ್ದೇ “ಹೊಸಅಲೆ’ಯ ಚಿತ್ರಗಳು ಪರಿಚಯಿಸಿದ ನಿರೂಪಣಾ ವಿಧಾನದಿಂದ. ಈ ನಿಟ್ಟಿನಲ್ಲಿ ಪ್ರಧಾನವಾಹಿನಿಯ ಜನರು “ಹೊಸಅಲೆ’ಯನ್ನು “ಜನರಿಂದ ದೂರಾಗುವ ಚಿತ್ರ ತಯಾರಿಸುತ್ತಾರೆ’ ಎಂದು ಹೀಗಳೆಯುವ ಬದಲು, “ಒಂದು ಉದ್ಯಮದ ಉಳಿವಿಗೆ ಮತ್ತೊಂದು ಪ್ರಯೋಗಶಾಲೆ’ ಎಂಬರ್ಥದಲ್ಲಿ ಸ್ವೀಕರಿಸಿ ಪೋಷಿಸಬೇಕು. ಅದು ಸಧ್ಯದ ಸ್ಥಿತಿಯಲ್ಲಿ ಆಗುತ್ತಿಲ್ಲ. ಆದರೂ ಪ್ರಯೋಗಪ್ರಿಯರು ತಮ್ಮ ಚಟುವಟಿಕೆಯನ್ನು ಬಿಟ್ಟುಕೊಟ್ಟಿಲ್ಲ. ಈ ನಿಟ್ಟಿನಲ್ಲಿ ಎಂಬತ್ತರ ದಶಕದ ಆರಂಭದ ದಿನಗಳಲ್ಲಿ ತಯಾರಾದ ನಾಗಾಭರಣ ನಿರ್ದೇಶನದ ‘ಅನ್ವೇಷಣೆ’ ಒಂದು ಅಪರೂಪದ ಪ್ರಯೋಗ. ಈ ಲೇಖನದಲ್ಲಿ ಆ ಚಿತ್ರದಲ್ಲಿ ಆದ ಪ್ರಯೋಗ ಕುರಿತಂತೆ ಒಂದಷ್ಟು ಅಭಿಪ್ರಾಯ ಹಂಚಿಕೊಳ್ಳೋಣ. (more…)
ಬೆಂಗಳೂರಿನಲ್ಲಿ ವಿಮುಕ್ತಿ ಪ್ರದರ್ಶನ

ಎಂ.ವಿ. ಕೃಷ್ಣಸ್ವಾಮಿ ಸಾಕ್ಷ್ಯಚಿತ್ರ ಬ್ರಹ್ಮ
ಕನ್ನಡದ ನೆಲಕ್ಕೆ ಈ ವರ್ಷ ಖುಷಿ ತಂದದ್ದು ಬಹಳಷ್ಟಿದೆ. ಖ್ಯಾತ ಸಿನೆಛಾಯಾಗ್ರಾಹಕ ವಿ. ಕೆ. ಮೂರ್ತಿಯವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರುವಾಗಲೇ, ಅವರ ಸಹಪಾಠಿ, ಒಂದೇ ಕಾಲೇಜಿನಲ್ಲಿ ಓದಿದ ಮತ್ತೊಬ್ಬ ಅದ್ವಿತೀಯ ಸಾಧಕ ಎಂ.ವಿ. ಕೃಷ್ಣಸ್ವಾಮಿ ಅವರಿಗೆ ಜೀವಮಾನ ಸಾಧನೆಗೆ ನೀಡುವ “ವಿ. ಶಾಂತಾರಾಂ ” ಪ್ರಶಸ್ತಿ ಬಂದಿದೆ. ಎಂ.ವಿ. ಕೃಷ್ಣಸ್ವಾಮಿಯವರು ಸಾಕ್ಷ್ಯಚಿತ್ರದ ಬ್ರಹ್ಮ. ಜತೆಗೆ ಫಿಲಂ ಸೊಸೈಟಿ ಚಳವಳಿಗೆ ಕಾರಣರು. ಇಂಥವರ ಬಗ್ಗೆ ಮಲ್ಲಿಗೆ ಪತ್ರಿಕೆ ಸಂಪಾದಕ ಎನ್. ಎಸ್. ಶ್ರೀಧರಮೂರ್ತಿಯವರು ಬರೆದ ಲೇಖನವಿದು, ಓದಿ ಹೇಳಿ.
ಕನ್ನಡದಲ್ಲಿ ಚಿತ್ರ ಸಮಾಜದ ಪರಿಕಲ್ಪನೆಯನ್ನು ಪರಿಚಯಿಸಿ ಹೊಸ ಅಲೆಯ ಹುಟ್ಟಿಗೆ ಮತ್ತು ಚಿತ್ರ ಮಾಧ್ಯಮದ ಕುರಿತ ಚರ್ಚೆಗೆ ಕಾರಣರಾದವರು ಎಂ. ವಿ. ಕೆ. ಕೃಷ್ಣಸ್ವಾಮಿ. ಚಿತ್ರರಂಗವೆಂದರೆ ಬುದ್ಧಿ ಜೀವಿಗಳು ಮೂಗು ಮುರಿಯುತ್ತಿದ್ದ ಕಾಲದಲ್ಲೇ ಭಾರತಿ (1949) ಚಿತ್ರದಲ್ಲಿ ಅಭಿನಯಿಸುವ ಮೂಲಕ ಅವರು ಬೆಳ್ಳಿತೆರೆಯ ನಂಟಿಗೆ ಬಂದವರು. ಇವರ ಆಸಕ್ತಿ ಬರಿ ಅಭಿನಯಕ್ಕೆ ಮಾತ್ರ ಸೀಮಿತಗೊಳ್ಳಲಿಲ್ಲ. ನಿರ್ಮಾಣ ಕಲೆಗೂ ವಿಸ್ತರಿಸಿತು.

ಸುಚಿತ್ರಾ ಫಿಲಂ ಸೊಸೈಟಿಯವರ ಪರವಾಗಿ ಗಿರೀಶ್ ಕಾಸರವಳ್ಳಿಯವರು ಎಂ.ವಿ. ಕೃಷ್ಣಸ್ವಾಮಿಯವರನ್ನು ಸನ್ಮಾನಿಸಿದ ಸಂದರ್ಭದ ಚಿತ್ರ
ಪ್ಯಾರಿಸ್ನಲ್ಲಿ ಚಿತ್ರ ಮಾಧ್ಯಮದ ತಾಂತ್ರಿಕತೆ ಕುರಿತು ವಿಶೇಷ ತರಬೇತಿ ಪಡೆದು ಬಂದ ಕೃಷ್ಣಸ್ವಾಮಿಯವರು ಚಲನಚಿತ್ರ ಕಲೆ ಮತ್ತು ತಾಂತ್ರಿಕತೆ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲವರಾದರು. ಮುಂದೆ ದೇಶದ ಹಲವು ಚಿತ್ರೋತ್ಸವಗಳಲ್ಲಿ ಭಾಗಿಯಾಗಿ ಚಿತ್ರರಂಗದ ಚರಿತ್ರಯನ್ನು ವಿಚಾರಗೋಷ್ಟಿಗಳಲ್ಲಿ ಸಮರ್ಥವಾಗಿ ಮಂಡಿಸಿದರು. ರಾಬರ್ಟ್ ರೋಸೆಲಿನಿಯವರಂತಹ ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ನಿರ್ದೇಶಕರೊಂದಿಗೆ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಇವರದು.
ಬೆಂಗಳೂರಿನಲ್ಲಿ ಚಲನಚಿತ್ರ ಕಲೆಯ ಕುರಿತು ಚರ್ಚೆ ನಡೆಯಬೇಕೆಂಬ ಉದ್ದೇಶದಿಂದ ‘ಫಿಲಂ ಸೊಸೈಟಿ ಆಫ್ ಬೆಂಗಳೂರು ಸ್ಥಾಪಿಸಿದರು. ಈ ಸಂಘಟನೆ ತನ್ನ ಮೊದಲ ವರ್ಷದಲ್ಲೇ ಅನೇಕ ಮಹತ್ತರ ಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದಲ್ಲದೆ ಇಮೇಜ್ ಆಫ್ ಇಂಡಿಯನ್ ಸಿನಿಮಾ ಎಂಬ ಶೀರ್ಷಿಕೆಯ ಸ್ಥಿರಚಿತ್ರ ಪ್ರದರ್ಶನವನ್ನು ಏರ್ಪಡಿಸಿತ್ತು. ಭಾರತೀಯ ಚಿತ್ರರಂಗದ ಇತಿಹಾಸದ ಮೈಲುಗಲ್ಲುಗಳು ಈ ಉತ್ಸವದಲ್ಲಿ ಪ್ರದರ್ಶನವಾಗಿದ್ದವು. ಹೆಸರಾಂತ ವಿಮರ್ಶಕ ಬಿ.ಡಿ. ಗಾರ್ಗ್ ಇದರ ನಿರ್ವಹಣೆ ನಡೆಸಿದ್ದರು. (more…)
ಸಾವನ್ನೇ ಕರೆದೊಯ್ಯಲು ಬಂದಿದ್ದಾನೆ…ಆದರೆ ಬಿಡುತ್ತಿಲ್ಲ !
ದಯಾಮರಣದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಜತೆಗೆ ಸಾವಿನ ಬಗ್ಗೆಯೂ ಚರ್ಚೆ ನಡೆಯುತ್ತಲೇ ಇದೆ. ಅದರ ಹುಟ್ಟು ಸಾವಿನ ಬಗ್ಗೆಯೂ ಶೋಧನೆ ನಡೆಯುತ್ತಲೇ ಇದೆ. ಈ ಮಧ್ಯೆ ನೀಲಿಹೂವಿನ ರಂಜಿತ್ ಅಡಿಗರು ಬರೆದ ಒಂದು ಚಿತ್ರದ ಲೇಖನವಿದು ಓದಿ ಹೇಳಿ.
ಸಾವು ಅಂದರೇನು?
ಸಾವು ಅಂದರೆ ಶೂನ್ಯ.. ಹುಟ್ಟುವ ಮೊದಲಿರುತ್ತಲ್ಲ.. ಅಂಥ ಶೂನ್ಯ!
******
ಮೊದಲೇ ತುಂಬ ಸಲ ಬರೆದುಕೊಂಡಿರುವ ಹಾಗೆ ಪ್ರೀತಿ ಮತ್ತು ಸಾವು ನನ್ನನ್ನು ಸದಾ ಕಾಡುವ 2 ವಿಚಾರಗಳು. ಇತ್ತೀಚೆಗೆ ಅಕಸ್ಮಾತ್ತಾಗಿ ಒಂದು ಡೀವಿಡಿ ಕಣ್ಣಿಗೆ ಬಿತ್ತು. ಸಾರಾಂಶ ನೋಡುತ್ತಿದ್ದರೆ ಅದು ದಯಾಮರಣದ ಕುರಿತಾಗಿತ್ತು. ಕೂಡಲೇ ತೀವ್ರ ಆಕರ್ಷಿತನಾಗಿ ನೋಡಲೇಬೇಕೆಂಬ ಮನಸ್ಸಿನ ಒತ್ತಾಯಕ್ಕೆ ಗಂಟು ಬಿದ್ದೆ.
ಅದೇ ಈ ಸಿನೆಮಾ “ಮಾರ್ ಅದೆಂತ್ರೊ” (more…)
ಸಾಂಗತ್ಯ ಮ್ಯಾಗಜೈನ್ ಗೆ ಚಂದಾದಾರರಾಗಿ
ಸಾಂಗತ್ಯದ ಸಿನಿಮಾ ಮ್ಯಾಗಜೈನ್ ಗೆ ಚಂದಾ ಅಭಿಯಾನ ಶುರುವಾಗಿದೆ.
ಬಹಳ ಹುಮ್ಮಸ್ಸಿನಿಂದ ಮ್ಯಾಗಜೈನ್ ತಯಾರಿ ನಡೆದಿದೆ. ಲೇಖನ ಸಂಗ್ರಹ, ವಿನ್ಯಾಸ ಇತ್ಯಾದಿಗಳೆಲ್ಲಾ ಭರದಿಂದ ಸಾಗಿದೆ. ಈ ಮಧ್ಯೆ ರಾಜ್ಯಾದ್ಯಂತ ಚಂದಾದಾರರನ್ನು ಕಲೆಹಾಕಲು ಸಾಂಗತ್ಯದ ಬಳಗದವರು ಹೊರಟಿದ್ದಾರೆ.
ತ್ರೈಮಾಸಿಕವಾಗಿದ್ದು, ಮೂರು ತಿಂಗಳಿಗೊಮ್ಮೆ ಹೊಸರೀತಿಯಲ್ಲಿ ನಿಮ್ಮೆದುರು ಹಾಜರಾಗಬೇಕೆಂಬುದು ಬಳಗದ ಆಸೆ. ಒಂದಿಷ್ಟು ಸಿನಿಮಾಸಕ್ತರೇ ಕೂಡಿಕೊಂಡು ರಚಿಸಿರುವ ಸಾಂಗತ್ಯ ಟ್ರಸ್ಟ್ ಇದರ ಹೊಣೆಯನ್ನು ಹೊತ್ತಿದೆ.

ವಾರ್ಷಿಕ ಚಂದಾ 250 ರೂ. ಬಿಡಿ ಪ್ರತಿಯ ದರ ಇನ್ನೂ ನಿರ್ಧರಿಸಿಲ್ಲ. ಸಂಗ್ರಹಯೋಗ್ಯ ಸಾಹಿತ್ಯವನ್ನು ಸಿನಿಮಾ ಶಿಕ್ಷಣ ಕುರಿತಾಗಿ ನೀಡುವುದು ನಮ್ಮ ಉದ್ದೇಶ.
ಕನ್ನಡದಲ್ಲಿ ಸಿನಿಮಾ ಶಿಕ್ಷಣಕ್ಕೆಂದು ಮ್ಯಾಗಜೈನ್ ಬಂದದ್ದು ತೀರಾ ಕಡಿಮೆ. ಅದರಲ್ಲೂ ಗಂಭೀರ ನೆಲೆಯಲ್ಲಿ (ಸಾಹಿತ್ಯ ಲೋಕದ ಸಾಕ್ಷಿ, ರುಜುವಾತು, ಸಂಕುಲ,ಸಂಕಲನ, ಸಂಚಯ ಇತ್ಯಾದಿ) ಬಂದ ಪತ್ರಿಕೆಗಳು ಬೆರಳೆಣಿಕೆಯಷ್ಟು. ಸಾಂಗತ್ಯ ಶುರುವಾಗುತ್ತಿರುವುದು ಸಾಹಿತ್ಯ ಲೋಕದ ಅಂಥದೊಂದು ಪರಂಪರೆಯನ್ನು ಸಿನಿಮಾ ಲೋಕದಲ್ಲಿ ಆರಂಭಿಸಬೇಕೆಂದು ಹೊರಟಿದೆ.
ಸಿನಿಮಾ ಇಂದು ನಮ್ಮೆಲ್ಲರ ಮಾಧ್ಯಮವಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ಅದರ ರೂಪುರೇಷೆಗಳನ್ನು ಅರ್ಥ ಮಾಡಿಕೊಳ್ಳಲೇಬೇಕಾದ ಹೊತ್ತಿದು. ಹಾಗಾಗಿ ಸಾಂಗತ್ಯ ಈ ಕೆಲಸಕ್ಕೆ ಮುಂದಾಗಿದೆ.
ಚಂದಾ ಆಗಲಿಚ್ಛಿಸುವವರು, ಚಂದಾ ಮಾಡಿ ಕೊಡಲಿಚ್ಛಿಸುವವರು 94807 97113, 94820 73663, 94804 76176 ಗೆ ಸಂಪರ್ಕಿಸಬಹುದು. ನೀವೂ ಚಂದಾದಾರರಾಗಿ, ನಿಮ್ಮ ಗೆಳಯರಿಗೂ ಹೇಳಿ.
ಬ್ಲಾಗ್ ಗೆಳೆಯರಲ್ಲಿ ಮನವಿ
ಗೆಳೆಯರೇ, ಈ ನಮ್ಮ ಮನವಿಯನ್ನು ನಿಮ್ಮ ನಿಮ್ಮ ಬ್ಲಾಗಿನಲ್ಲಿ ಹಾಕಿ ಒಂದಿಷ್ಟು ಪ್ರಚಾರ ನೀಡುವ ಮೂಲಕ ಆಸಕ್ತರನ್ನು ಮುಟ್ಟಲು ನೆರವಾಗಬೇಕೆಂಬುದು ಬಳಗದ ಮನವಿ.
‘ವಿಮುಕ್ತಿ’: ಚರ್ಚೆ, ಚಿಂತನೆಗೆ ಅವಕಾಶ
ಡಾ. ಅ. ಶ್ರೀಧರ ಅವರು ಪಿ. ಶೇಷಾದ್ರಿಯವರ ರಾಷ್ಟ್ರೀಯ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪುರಸ್ಕೃತ “ವಿಮುಕ್ತಿ” ಚಿತ್ರ ಕುರಿತು ಬರೆದ ಒಂದು ಲೇಖನ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಇದನ್ನು ಸಾಕಷ್ಟು ಮಂದಿ ಸಿನಿಮಾಸಕ್ತರ ಓದಿಗೆ ಸಿಗಲೆಂದು ಇಲ್ಲಿ ಪ್ರಕಟಿಸಲಾಗಿದೆ.
ಪ್ರಶಸ್ತಿಗಳು ಸಾರ್ವತ್ರಿಕ ಮರೆವಿಗೊಂದು ತಾತ್ಕಾಲಿಕ ಮದ್ದು. ಉತ್ತಮ ವಿಷಯಗಳಾಗುವುದೇ ಜನಮನ್ನಣೆ ದೊರಕಿದಾಗ. ಕೃತಿಗಳು ಜನಮನದ ಆಕೃತಿಯಾಗುವುದಕ್ಕೆ ಪ್ರಶಸ್ತಿ, ಪುರಸ್ಕಾರಗಳೂ ಬೇಕು. ಇಂತಹ ವಿಷಯಗಳನ್ನು ವಿವರಿಸುವುದಕ್ಕಾಗಿ ಮನೋವಿಜ್ಞಾನಿಗಳಾದ ಲೋಟಕ್ ಮತ್ತು ಪ್ರೈಸ್ ತತ್ವವೊಂದನ್ನು ನಿರೂಪಿಸಿದ್ದಾರೆ. ಕೆಲವೇ ವಿಜ್ಞಾನಿಗಳ ಕೊಡುಗೆಯು ವಿಜ್ಞಾನದ ಸಾಮ್ರಾಜ್ಯವನ್ನು ಆಳುವುದಂತೆ. ಕೆಲವು ಪ್ರಬುದ್ಧರಿಂದಲೇ ವಿಜ್ಞಾನದ ಏಳಿಗೆ ಸಾಧ್ಯವಾಗಿರುವುದು ಎನ್ನುತ್ತಾರೆ. ನಿಜವಿದ್ದರೂ ಇರಬಹುದು. ಮಾನಸಿಕ ಪರಿಶ್ರಮಕ್ಕೂ ಸೃಜನಶೀಲತೆಗೂ ಹತ್ತಿರದ ನೆಂಟು.
ವ್ಯಕ್ತಿ ಚಿತ್ತದ ನಿರ್ಮಾಣದಲ್ಲಿ ಪರಿಸರ ಮತ್ತು ಪರಿಸ್ಥಿತಿಯ ಕೈವಾಡವೇ ಹೆಚ್ಚು. 20ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಮತ್ತು ವಿವಾದಾತ್ಮಕ ವರ್ತನಾ ಮನೋವಿeನಿ ಬಿ.ಎಫ್.ಸ್ಕಿನರ್ ಪ್ರತಿಪಾದನೆಯೂ ಇಂತಹದ್ದೇ; ವರ್ತನೆಗಳನ್ನು ಸೃಷ್ಟಿಸಿ ಬಲಪಡಿಸುವುದು ಒಂದು ಯುಕ್ತಿ. ಎಲ್ಲ ವರ್ತನೆಗಳನ್ನು ವ್ಯವಸ್ಥಿತ ನಿಯಂತ್ರಣಕ್ಕೆ ಒಳಪಡಿಸಬಹುದು, ಪಡಿಸಬೇಕು; ಸೃಜನಶೀಲತೆಯನ್ನು ಸಹ. ಇವೆರಡು ಸೂತ್ರಗಳನ್ನು ಅಲ್ಪಸ್ವಲ್ಪ ವ್ಯತ್ಯಾಸಮಾಡಿ ಕನ್ನಡ ಚಲನಚಿತ್ರರಂಗಕ್ಕೆ ಅನ್ವಯಿಸಿದಾಗ ಕೆಟ್ಟ ಚಿತ್ರಗಳು ಒಳ್ಳೆಯದನ್ನು ಅಟ್ಟಿಬಿಡುತ್ತವೆ ಎನ್ನುವ ಕಲ್ಪನೆ ಮೂಡುತ್ತದೆ. ಹೀಗಿದ್ದರೂ ಅಲ್ಲೊಂದು ಇಲ್ಲೊಂದು ಅರ್ಥಪೂರ್ಣ ಚಿತ್ರಗಳನ್ನು ತೆಗೆಯುವ ಸಾಹಸ ನಿಲ್ಲುವುದಿಲ್ಲ. ಇಂತಹ ಚಿತ್ರಗಳಿಗೆ ಪ್ರಶಸ್ತಿಯೇ ಪ್ರೇರಣೆ, ಅಂಕಣಗಳೇ ಚಲನಚಿತ್ರಮಂದಿರಗಳು. ಈ ಮಾತಿಗೇನು ಸಾಕ್ಷಿ ಪುರಾವೆಗಳ ಕೊರತೆ ಇರದು. ಕನ್ನಡದ ಕೆಟ್ಟ ಚಿತ್ರಗಳನ್ನು ನೋಡಿಯೇ ಕೇಂದ್ರ ಚಲನಚಿತ್ರ ಸಲಹಾ ಮಂಡಲಿ ಸದಸ್ಯರುಗಳೆಷ್ಟೋ ದೃಷ್ಟಿ ಕಳೆದುಕೊಂಡಿದ್ದಾರಂತೆ ! (more…)
ಭಾನುವಾರದಂದು ಸುಚಿತ್ರಾದಲ್ಲಿ ಚಿತ್ರ ಪ್ರದರ್ಶನ, ಸಂವಾದ ಮತ್ತು ಅಭಿನಂದನೆ
ಗಿರೀಶ್ ಕಾಸರವಳ್ಳಿ ನೇತೃತ್ವದ ಚಿತ್ರ ಸಮೂಹ ಸಂಘಟನೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತರನ್ನು ಜ.31 ರಂದು ಅಂದರೆ ಇದೇ ಭಾನುವಾರ ಅಭಿನಂದಿಸಲಿದೆ. ಬಹಳ ಸಂತೋಷದ ಸಂಗತಿಯೆಂದರೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪುರಸ್ಕೃತರಾದ ಹಿರಿಯ ಸಿನೆ ಛಾಯಾಗ್ರಾಹಕ ವಿ. ಕೆ. ಮೂರ್ತಿಯವರನ್ನು ಅಭಿನಂದಿಸಲಾಗುತ್ತಿದೆ.
ಚಿತ್ರ ಸಮೂಹಕ್ಕೆ ಸಿಕ್ಕಾಪಟ್ಟೆ ಖುಷಿ. ಕಾರಣ, ಮೂರು ಚಿತ್ರಗಳು ಪ್ರಶಸ್ತಿ ಪಡೆದಿದ್ದಕ್ಕೆ, ಜತೆಗೆ ಅದರಲ್ಲಿ ಒಬ್ಬರು ತಮ್ಮದೇ ಕುಟುಂಬದ (ಚಿತ್ರ ಸಮೂಹ) ಸಕ್ರಿಯ ಸದಸ್ಯರಾಗಿರುವುದಕ್ಕೆ. ಪಿ. ಶೇಷಾದ್ರಿ ಚಿತ್ರಸಮೂಹದ ಸಕ್ರಿಯ ಸದಸ್ಯರು.
ಜ. 31 ರಂದು ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳ ಪ್ರದರ್ಶನ, ಸಂವಾದ, ಚರ್ಚೆ ಹಾಗೂ ಅಭಿನಂದನೆ.
ಅಂದು ಬೆಳಗ್ಗೆ 10 ಕ್ಕೆ ಅಭಯಸಿಂಹ ನಿರ್ದೇಶನದ “ಗುಬ್ಬಚ್ಚಿಗಳು” ಚಿತ್ರ ಪ್ರದರ್ಶನ ನಡೆಯಲಿದೆ. ಅನಂತರ 11. 45 ಕ್ಕೆ ಶಿವಧ್ವಜರ ನಿರ್ದೇಶನದ ತುಳು ಚಿತ್ರ ” ಗಗ್ಗರ” ದ ಪ್ರದರ್ಶನ. ಮಧ್ಯಾಹ್ನ 2. 30 ಕ್ಕೆ ಪಿ. ಶೇಷಾದ್ರಿ ನಿರ್ದೇಶನದ “ವಿಮುಕ್ತಿ” ಚಿತ್ರ ಪ್ರದರ್ಶನಗೊಳ್ಳಲಿದೆ.
ಎಲ್ಲ ಚಿತ್ರ ಪ್ರದರ್ಶನಗೊಂಡ ನಂತರ ಸಂಜೆ 4.45 ಕ್ಕೆ ಚಿತ್ರ ತಂಡದವರೊಂದಿಗೆ ಸಂವಾದವಿದೆ. 6 ರಕ್ಕೆ ಎಲ್ಲರನ್ನೂ ಅಭಿನಂದಿಸುವ ಹೊತ್ತು. ಎಲ್ಲರೂ ಪಾಲ್ಗೊಳ್ಳಿ. ಪಾಸ್ ಮತ್ತಿತರ ವಿವರಗಳಿಗೆ ಸುಚಿತ್ರಾ ಫಿಲಂ ಸೊಸೈಟಿ- ದೂರವಾಣಿ ಸಂಖ್ಯೆ 080-26711785.
ನೋವು ತುಂಬಿದ ಕಂಗಳಿಂದಲೇ ಕಾಡುತ್ತಿದ್ದಾಳೆ ಪೊನೆಟ್…
ಸಾಂಗತ್ಯ ಚಿತ್ರಶಿಬಿರದಲ್ಲಿ ನೋಡಿ, ಚರ್ಚಿಸಿದ ಮತ್ತೊಂದು ಚಿತ್ರ ಫ್ರೆಂಚ್ ನ ಪೊನೆಟ್. ಸಾವು ಎಂಬ ಪರಿಕಲ್ಪನೆಯನ್ನೇ ಅರ್ಥ ಮಾಡಿಕೊಳ್ಳಲು ಹೆಣಗುವ ಮಗುವಿನ ಸ್ಥಿತಿಯನ್ನು ಕಟ್ಟಿಕೊಟ್ಟು ನಮ್ಮೊಳಗೆಲ್ಲಾ ಒಂದು ಧರ್ಮಸಂಕಟದ ಸ್ಥಿತಿಯನ್ನು ಸೃಷ್ಟಿಸುತ್ತಾನೆ ನಿರ್ದೇಶಕ. ಈ ಚಿತ್ರದ ಕುರಿತು ದೀಪಾ ಹಿರೇಗುತ್ತಿ ಬರೆದಿದ್ದಾರೆ. ಓದಿ ಅಭಿಪ್ರಾಯ ಹೇಳಿ.
ನಾಲ್ಕರ ಹರೆಯದ ಪೊನೆಟ್ ಎಂಬ ಬಾಲೆಯ ತಾಯಿ ಅಪಘಾತದಲ್ಲಿ ಮೃತಪಟ್ಟಿರುತ್ತಾಳೆ. ತನ್ನ ತಾಯಿ ಸತ್ತುಹೋಗಿದ್ದಾಳೆ ಅಂದರೆ ಆಕೆ ಇನ್ನೆಂದೂ ಮರಳಿ ಬರಲಾರಳು ಎಂಬ ಸತ್ಯವನ್ನು ಪೊನೆಟ್ ನಂಬುವುದೇ ಇಲ್ಲ. ಇತರ ಎಲ್ಲ ಮಕ್ಕಳಂತೆ ಹಿರಿಯರು,ವಾರಿಗೆಯ ಮಕ್ಕಳು, ಶಿಕ್ಷಕರು, ಪುಸ್ತಕಗಳು, ಚರ್ಚ್ಗಳು, ಗಾಳಿಮಾತುಗಳು ಈ ಎಲ್ಲ ಮೂಲಗಳಿಂದ ತಿಳಿಸಲ್ಪಡುವ ಹಲವಾರು ಸತ್ಯಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಾಳೆ. ಕೊನೆಗೆ ತನ್ನದೇ ಆದ ದಾರಿಯಲ್ಲಿ ಗತಿಸಿದ ತಾಯಿಗೋಸ್ಕರ ಕಾಯಲು ನಿರ್ಧರಿಸುತ್ತಾಳೆ.

ಸತ್ತವರು ವಾಪಾಸು ಬರುವುದಿಲ್ಲ ಎಂದು ಸ್ನೇಹಿತ ಹೇಳಿದಾಗ ಜೀಸಸ್ ತನ್ನ ಸ್ನೇಹಿತರಿಗೋಸ್ಕರ ಮರಳಿ ಬಂದ. ನಾನು ಗೆಳತಿಗಿಂತಲೂ ಹೆಚ್ಚು, ನನ್ನಮ್ಮನಿಗೆ ನಾನು ಮಗಳು ಎನ್ನುವ ಅವಳ ಮುಗ್ಧತರ್ಕ ಇಷ್ಟವಾಗುತ್ತದೆ.ಈ ಕಾಯುವಿಕೆಯ ಪ್ರಕ್ರಿಯೆಯಲ್ಲಿ ಸುತ್ತಲಿನ ಜಗತ್ತಿನೊಂದಿಗಿನ ಆಕೆಯ ಸಂಪರ್ಕ ಮಿತಗೊಳ್ಳುತ್ತಾ ಹೋಗುತ್ತದೆ.
ಕಾದು ಕಾದು ಸುಸ್ತಾದರೂ ತಾಯಿ ಬರದಿದ್ದಾಗ ಯುಹೂದಿ ಹುಡುಗಿಯೊಬ್ಬಳ ಮಾಂತ್ರಿಕ ಮಂತ್ರಗಳು,ರಿಚ್ಯುವಲ್ಗಳ ಮೊರೆ ಹೋಗುತ್ತಾಳೆ.ಅದೂ ಫಲ ಕೊಡದಿದ್ದಾಗ ಕೊನೆಗೆ ಪೊನೆಟ್ ದೇವರ ಮಗುವಾಗಿ ತಾಯಿಯನ್ನು ಕೋರುತ್ತಾಳೆ. “ದೇವರೇ,ನನ್ನ ಅಮ್ಮ ಸತ್ತುಹೋಗಿದ್ದಾಳೆಂದು ನಿನಗೆ ಗೊತ್ತು. ಏಕೆಂದರೆ ಅವಳು ನಿನ್ನ ಹತ್ತಿರ ಇದ್ದಾಳಂತೆ. ನಾನು ನನ್ನಮ್ಮನ ಹತ್ತಿರ ಮಾತಾಡಬೇಕು” ಎಂದು ಬೇಡುತ್ತಾಳೆ. ತನ್ನ ತಾಯಿ ವಾಪಾಸಾಗುತ್ತಾಳೆಂಬ ಅವಳ ನಂಬಿಕೆ ಕಿಂಚತ್ತೂ ಅಲ್ಲಾಡುವುದಿಲ್ಲ. ಅಜ್ಜ ವಾಪಾಸು ಬರಲೇ ಇಲ್ಲ ಎಂದು ಮಾಟಿಯಾಜ್ ಹೇಳಿದ್ದಕ್ಕೆ ಪೊನೆಟ್, ಅಜ್ಜನಿಗೋಸ್ಕರ ಯಾರೂ ಕಾಯುತ್ತಿರಲೇ ಇಲ್ಲ ಎನ್ನುತ್ತಾಳೆ.ಅಮ್ಮಾ,ನನಗೆ ನೀನು ಬೇಕು ಬಾರಮ್ಮಾ ಎಂದು ಪದೇಪದೇ ಬಿಕ್ಕಳಿಸುತ್ತಾ ಅಳುವ ಪೊನೆಟ್ ಮನ ಕಲಕುತ್ತಾಳೆ. (more…)
“ಗಗ್ಗರ” : ನೋಡಿ ವಿಮರ್ಶಿಸಬೇಕಾದ ಚಿತ್ರ
“ಗಗ್ಗರ” ಚಿತ್ರದ ಕುರಿತು ಮೌನಕಣಿವೆಯ ಉಷಾ ಕಟ್ಟೇಮನೆಯವರು ಅಭಿನಂದಿಸಿ ಬರೆದ ಲೇಖನವಿದು. ಚಿತ್ರದ ಬಗೆಗಿನ ವಿಮರ್ಶೆಯೂ ಹೌದು. ಹಾಗಾಗಿ ಇಲ್ಲಿ ಪ್ರಕಟಿಸಲಾಗಿದೆ. ಓದಿ ಅಭಿಪ್ರಾಯ ವ್ಯಕ್ತಪಡಿಸಿ.
ತುಳು ಚಿತ್ರ ’ ಗಗ್ಗರ’ಕ್ಕೆ 2008 ರ ಶ್ರೇಷ್ಟ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ದೊರಕಿದೆ. ತುಳು ಭಾಷೆ, ಸಂಸ್ಕೃತಿ, ಪರಂಪರೆ ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಮಿಂಚಿತು.
ಪ್ರಶಸ್ತಿ ವಿಜೇತ ಚಿತ್ರಗಳು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತವೆ; ಮನಸ್ಸನ್ನು ಕಕ್ಕಾಬಿಕ್ಕಿಯಾಗಿಸುತ್ತದೆ. ಸಿದ್ಧಾಂತಗಳ ಹೊರೆಯನ್ನು ಹೊರಿಸುತ್ತವೆ.ಬಹು ಪ್ರಯಾಸದಿಂದ ಸಿನೆಮಾದ ಆಶಯವನ್ನು ಹುಡುಕಬೇಕಾಗುತ್ತದೆ. ಅದೇ ಅಳುಕಿನಿಂದ ’ಗಗ್ಗರ’ದ ಮುಂದೆ ಕೂತೆ.
110 ನಿಮಿಷಗಳ ಈ ಚಿತ್ರ ನನ್ನ ಪೂರ್ವಾಗ್ರಹಗಳನ್ನೆಲ್ಲಾ ತೊಡೆದು ಹಾಕಿತು. ಒಂದು ಒಳ್ಳೆಯ ಕಲಾತ್ಮಕ ಸಿನೇಮಾ ನೋಡಿದ ಅನುಭವ ನನ್ನದಾಯಿತು. ನಿರ್ದೇಶಕರಾಗಿ ಶಿವಧ್ವಜ್ ಭರವಸೆ ಮೂಡಿಸಿದ್ದಾರೆ. ಗುರುದತ್ ಈ ಚಿತ್ರದ ನಿರ್ಮಾಪಕರು. (more…)







1 comment