ಬಿ.ಆರ್. ಪಂತಲು ಕನ್ನಡ ಚಿತ್ರರಂಗದ ಚಿರಂತನ ಸ್ಕೂಲ್ ಮಾಸ್ಟರ್. ಆ ಮಾತಿನ ಬಗ್ಗೆ ಯಾವುದೇ ಸಂಶಯ ಅಗತ್ಯವಿಲ್ಲ. ಈ ಕುರಿತು ಬರೆದಿದ್ದಾರೆ `ಸಿರಿ’ ನುಲೇನೂರು ಅವರು. ಇವರು ಪ್ರಸಿದ್ಧ ಸಿನಿಮಾ ಬರಹಗಾರರು.
ಕನ್ನಡ ಚಿತ್ರರಂಗ ಮರೆಯಬಾರದ ಹಿರಿಯರಲ್ಲಿ ಪ್ರಮುಖರಾದವರು ಬಿ.ಆರ್. ಪಂತಲು. ನಿರ್ಮಾಪಕರಾಗಿ, ನಿರ್ದೇಶಕರಾಗಿ, ಕಲಾವಿದರಾಗಿ ಅವರು ಸಲ್ಲಿಸಿದ ಸೇವೆ ಅಪಾರವಾದದ್ದು. ಇವತ್ತು ಕನ್ನಡ ಚಿತ್ರರಂಗ ತನ್ನ ವೈಭವದ ಯುಗವನ್ನು ಕಾಣುತ್ತಿದ್ದರೆ ಅದಕ್ಕೆ ಕಾರಣಕರ್ತರಾದ ಮಹನೀಯರಲ್ಲಿ ಪಂತಲು ಅವರ ಹೆಸರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಅಂತಹ ಮಹನೀಯರ ಜನ್ಮ ಶತಮಾನೋತ್ಸವದ ವರ್ಷವಿದು. ಅವರ ಸಾಧನೆಗಳತ್ತ ,ಬದುಕಿನ ಹೆಜ್ಜೆಗಳತ್ತ ಕಿರುನೋಟ ಹಾಯಿಸುವ ಪ್ರಯತ್ನ ಇಲ್ಲಿದೆ.

ಬಡಗೂರು ರಾಮಕೃಷ್ಣ ಪಂತಲು ಜನಿಸಿದ್ದು 1911ರ ಜುಲೈ 28 ರಂದು ಬಂಗಾರಪೇಟೆಯ ಬಳಿ ಇರುವ ಕುಪ್ಪಂನಿಂದ ಹನ್ನೊಂದು ಕಿ.ಮೀ. ದೂರದಲ್ಲಿರುವ ಕುಗ್ರಾಮ ಬಡಗೂರುವಿನಲ್ಲಿ. ಗಡಿ ಪ್ರದೇಶದಲ್ಲಿರುವ ಈ ಊರಿನಲ್ಲಿ ಕನ್ನಡದಂತೆ ತೆಲುಗು, ತಮಿಳು ಕೂಡ ಮುಖ್ಯ ಭಾಷೆಗಳಾಗಿದ್ದವು. ಬಾಲ್ಯದಿಂದಲೇ ಪಂತಲು ಅವರಿಗೆ ಮೂರು ಭಾಷೆಗಳ ಒಡನಾಟ ಬರಲು ಇದು ಕಾರಣವಾಯಿತು. ಪಂತಲು ಅವರ ತಂದೆ ವೆಂಕಟಾಚಲಯ್ಯನವರಿಗೆ ಐವರು ಮಕ್ಕಳು, ಮೂರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು. ಅವರುಗಳ ಪೈಕಿ ಪಂತಲು ಅವರೇ ಕಿರಿಯರು. ಪಂತಲು ಅವರ ತಂದೆ ಸಂಗೀತ, ಸಾಹಿತ್ಯ ಮತ್ತು ನೃತ್ಯಗಳಲ್ಲಿ ಉತ್ತಮ ಅಭಿರುಚಿ ಪಡೆದಿದ್ದರು. ಆಗಾಗ ಊರಿನಲ್ಲಿ ನಾಟಕಗಳನ್ನು ಆಡಿಸುತ್ತಿದ್ದರು. ತಂದೆಯ ಜೊತೆ ಮಗನೂ ಆಗಾಗ ರಂಗ ತರಬೇತಿ ನೋಡಲು ಹೋಗುತ್ತಿದ್ದ. ಚಂದ್ರಹಾಸನ ಪಾತ್ರ ನೀಡುವ ಮೂಲಕ ತಂದೆಯೇ ಆತನ ರಂಗ ಪ್ರವೇಶಕ್ಕೆ ಕಾರಣಕರ್ತರಾದರು. ಬಾಲಕ ರಾಮಕೃಷ್ಣನ ಪ್ರಾಥಮಿಕ ಶಿಕ್ಷಣ ಬಡಗೂರಿನಲ್ಲೇ ನಡೆಯಿತು. ಮುಂದಿನ ಶಿಕ್ಷಣಕ್ಕೆ ಅಲ್ಲಿ ಅವಕಾಶವಿರಲಿಲ್ಲವಾದ್ದರಿಂದ ತಾತನ ಮನೆಯಾದ ಕೋಲಾರದಲ್ಲಿದ್ದು, ಎಸ್.ಎಸ್.ಎಲ್.ಸಿ.ವರೆಗಿನ ಶಿಕ್ಷಣ ಪಡೆದರು. ಶಾಲಾ ಜೀವನದಲ್ಲೂ ಅವರು ನಾಟಕಗಳಲ್ಲಿನ ಅಭಿನಯದಿಂದ ಪ್ರಸಿದ್ಧಿ ಪಡೆದಿದ್ದರು. (more…)
ಸಿಬಂತಿ ಪದ್ಮನಾಭ ಬರೆದ ಈ ಲೇಖನ ಸತ್ಯ ಮೇವ ಜಯತೇ ಕಾರ್ಯಕ್ರಮವನ್ನೂ ಸೇರಿದಂತೆ ರಿಯಾಲಿಟಿ ಶೋಗಳ ಕುರಿತಾದ ಒಂದು ನೋಟ. ಇದಕ್ಕೆ ನಿಮ್ಮ ನೋಟವನ್ನೂ ಸೇರಿಸಬಹುದು.
ಸಮಾಜದ ಕಠೋರ ವಾಸ್ತವಗಳನ್ನೇ ಕೈಗೆತ್ತಿಕೊಂಡು ಆರಂಭಿಸಲಾಗಿರುವ ‘ಸತ್ಯಮೇವ ಜಯತೇ’ ರಿಯಾಲಿಟಿ ಶೋಗಳ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ತಮಗೆ ಹಿಡಿದಿರುವ ‘ಝಣಝಣ ಕಾಂಚಾಣ’ದ ಹುಚ್ಚನ್ನು ಜನಸಾಮಾನ್ಯರಿಗೂ ದಾಟಿಸಿ ಮಜಾ ತೆಗೆದುಕೊಳ್ಳುತ್ತಿರುವ ನಮ್ಮ ಚಾನೆಲ್ಗಳಿಗೆ ‘ಸತ್ಯಮೇವ ಜಯತೇ’ ನಿಜಕ್ಕೂ ಒಂದು ಒಳ್ಳೆಯ ಪಾಠವನ್ನೇ ಹೇಳಿಕೊಟ್ಟಿದೆ. ಬರೀ ಎರಡು ಕಂತುಗಳ ಪ್ರಸಾರದ ಬಳಿಕ ಸತ್ಯಮೇವ ಜಯತೇಯ ವೆಬ್ಸೈಟ್ ಪಡೆದ ಪ್ರತಿಕ್ರಿಯೆಗಳ ಸಂಖ್ಯೆ ಹತ್ತುಸಾವಿರಕ್ಕೂ ಹೆಚ್ಚು.

ಪ್ಯಾಟೆ ಮಂದಿಯನ್ನು ಕಾಡಿಗೆ ಕಳಿಸಿ ತಮಾಷೆ ನೋಡುವ, ಕಾಡಿನ ಮಂದಿಯನ್ನು ಪ್ಯಾಟೆಗೆ ಕರೆಸಿ ಗೇಲಿಮಾಡುವ, ನಿಂತಲ್ಲೇ ಸ್ವಯಂವರ ಏರ್ಪಡಿಸುವ, ಗಂಡಹೆಂಡಿರ ಜಗಳಗಳನ್ನು ಊರಿಗೆಲ್ಲ ಬಿತ್ತರಿಸುವ, ಸೀರೆಯ ಬೆಲೆ ನಿರ್ಧರಿಸಿಯೋ, ಅತಿಹೆಚ್ಚು ಈರುಳ್ಳಿ ಹೆಚ್ಚಿಯೋ ದುಡ್ಡು ಕೊಳ್ಳೆಹೊಡೆಯುವ ನಾಟಕಗಳೇ ರಿಯಾಲಿಟಿ ಶೋಗಳೆಂದು ನಂಬಿರುವ ಅಥವಾ ನಂಬಿಸಿರುವ ಚಾನೆಲ್ಗಳು ಅಮೀರ್ ಖಾನ್ ಎತ್ತಿಕೊಂಡಿರುವ ವಿಷಯಗಳನ್ನಾದರೂ ನೋಡಿ ತಮ್ಮೆದುರಿನ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳಬೇಕು.
‘ಸತ್ಯಮೇವ ಜಯತೇ’ಯನ್ನು ಕನ್ನಡಕ್ಕೆ ಡಬ್ ಮಾಡಬೇಕೇ ಬೇಡವೇ ಎಂಬ ಬಗ್ಗೆ ಎಲ್ಲ ಮಾಧ್ಯಮಗಳಲ್ಲೂ ವಿಸ್ತೃತ ಚರ್ಚೆ-ವಾದ-ವಿವಾದಗಳು ನಡೆಯುತ್ತಲೇ ಇವೆ. ಅದು ಗಂಭೀರ ಚಿಂತನೆಗೊಳಪಡಬೇಕಾದ ಮಹತ್ವದ ವಿಚಾರವೇ ಎಂಬುದರಲ್ಲಿ ಎರಡು ಮಾತಿಲ್ಲ; ಆದರೆ ಅದೇ ಹೊತ್ತಿನಲ್ಲಿ ‘ಸತ್ಯಮೇವ ಜಯತೇ’ಯಂತಹ ಮಾದರಿಗಳನ್ನು ಪ್ರಾದೇಶಿಕವಾಗಿಯೂ ಅಳವಡಿಸಿಕೊಳ್ಳುವ ಬಗ್ಗೆ ನಮ್ಮ ಮಾಧ್ಯಮಗಳೇನಾದರೂ ಯೋಚಿಸಿದ್ದಾವೆಯೇ? Continue Reading
ಸಚಿನ್ ಶಿರಾಳಿ ಅವರು ಬರೆದಿರುವ ಎರಡು ಚಿತ್ರಗಳನ್ನೂ ಕುರಿತು ಬರೆದ ಅನಿಸಿಕೆ ಇದು. ಓದಿ ಅಭಿಪ್ರಾಯಿಸಿ.
ಕಳೆದ ವಾರ ಎರಡು ಚಿತ್ರಗಳನ್ನ ನೋಡಿದೆ. ನೋಡಿದ ನ೦ತರ ಹೇಳದಿದ್ದರೆ ನನ್ನ ಹೊಟ್ಟೆನೋವು ಕಡಿಮೆಯಾಗಬೇಕಲ್ಲ. ಒ೦ದು ಈ ಬಾರಿಯ ಅತ್ಯುತ್ತಮ ಚಿತ್ರ ರಾಷ್ಟ್ರಪ್ರಶಸ್ತಿ ವಿಜೇತ ಮರಾಠಿಯ ’ದೇವೂಳ್’, ಮತ್ತೊ೦ದು ಮಲಯಾಳ೦ನ ’ಭಕ್ತಜನ೦ಗಳುಡೆ ಶ್ರದ್ಧಕು’. ಉಮೇಶ್ ಕುಲಕರ್ಣಿ ನಿರ್ದೇಶನದ, ಗಿರೀಶ್ ಕುಲಕರ್ಣಿ, ನಾನಾ ಪಾಟೇಕರ್ ಅಭಿನಯದ ದೇವೂಳ್ ಈ ಬಾರಿ 3 ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊ೦ಡಿದೆ. ಕಾವ್ಯಾಮಾಧವನ್ ಮುಖ್ಯ ಭೂಮಿಕೆಯಲ್ಲಿರುವ ‘ಭಕ್ತಜನ೦ಗಳುಡೆ’ ಮಲಯಾಳ೦ನ ಖ್ಯಾತ ನಿರ್ದೇಶಕ ಪ್ರಿಯನ೦ದನ್ ನಿರ್ದೇಶನದ್ದು. ಎರಡರಲ್ಲೂ ಒ೦ದು ಸಾಮಾನ್ಯ ಅ೦ಶವಿದೆ. ಅದೇನೆ೦ದರೆ ಎರಡೂ ಚಿತ್ರಗಳೂ ಧರ್ಮದ ವ್ಯಾಪಾರೀಕರಣದ ಬಗೆಗಿನವು. ಮೊದಲನೇಯದು ಕಲ್ಲುಗಳು ದೇವರಾಗುವ ಬಗೆಯದ್ದಾದರೆ ಎರಡನೇಯದು ದೇವಮಾನವರು ಸೃಷ್ಟಿಯಾಗುವ ಬಗೆಯದ್ದು.

ದೇವೂಳ್, ಮಹಾರಾಷ್ಟ್ರದ ಗ್ರಾಮವೊ೦ದರಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆದಿದ್ದು. ಮುಖ್ಯವಾಗಿ ಊರಲ್ಲೊ೦ದು ಆಸ್ಪತ್ರೆ ಕಟ್ಟಬೇಕೆ೦ದು ಪ್ರಯತ್ನಿಸುತ್ತಿರುವ ವೈಜ್ಞಾನಿಕ ಮನೋಧರ್ಮದ ಹಿರಿಯ ವ್ಯಕ್ತಿ ಅಣ್ಣಾ(ದಿಲೀಪ್ ಪ್ರಭಾವಲ್ಕರ್), ಅದನ್ನು ಬೆ೦ಬಲಿಸುವ ಪುಡಿ ರಾಜಕಾರಣಿ ಭಾವೂ(ನಾನಾ ಪಾಟೇಕರ್), ಕೂಲಿ ಕೆಲಸಗಾರ ಮುಗ್ಧ ಯುವಕ ಕೇಶವ(ಗಿರೀಶ್ ಕುಲಕರ್ಣಿ) ಜೊತೆಗೊ೦ದಿಷ್ಟು ಪಾತ್ರಗಳು. ತನ್ನ ಕಳೆದು ಹೋದ ದನ ಹುಡುಕುತ್ತ ಗುಡ್ಡದ ಮೇಲೆ ಮರದ ಕೆಳಗೆ ಮಲಗಿದ ಮುಗ್ಧ ಕೇಶವನಿಗೆ ಕನಸಿನಲ್ಲಿ ದೇವರು ಕಾಣಿಸಿಕೊಳ್ಳುತ್ತಾನೆ, ರೋಮಾ೦ಚನಗೊ೦ಡ ಆತ ಅದನ್ನು ಟಾ೦ಟಾ೦ ಮಾಡಿಕೊ೦ಡು ಊರಿಗೆಲ್ಲ ಸುದ್ದಿ ಹಬ್ಬಿಸುತ್ತಾನೆ. ಸೆನ್ಸೇಶನಲ್ ನ್ಯೂಸಿಗಾಗಿ ಕಾಯುತ್ತಿದ್ದ ಪತ್ರಕರ್ತನೊಬ್ಬ ಈ ಸ್ಥಳದ ಮಹಿಮೆಯನ್ನು ಹಬ್ಬಿಸಿ ಜನರನ್ನು ಸೇರಿಸುವ೦ತೆ ಕೆಲ ನಿರುದ್ಯೋಗಿ ಯುವಕರ ಕಿವಿ ಕಚ್ಚುತ್ತಾನೆ. ಅಲ್ಲಿಗೆ ನ೦ಬಿಕೆ ಕಮರ್ಷಿಯಲೈಸ್ ಆಗತೊಡಗುತ್ತದೆ. ಮರದ ಮಹಿಮೆ ಜನರಿ೦ದ ಜನರಿಗೆ ಹಬ್ಬತೊಡಗುತ್ತದೆ.
ಮರದ ಮೇಲೆ ದಾರಿಹೋಕನೊಬ್ಬ ಗೀಚಿದ ಗೆರೆಯಲ್ಲೂ ದತ್ತನ ಚಿತ್ರ ಹುಡುಕುತ್ತಾರೆ ಹಳ್ಳಿಜನ. ರಾಜಕಾರಣದ ಪ್ರವೇಶವಾಗುತ್ತದೆ. ಆಸ್ಪತ್ರೆ ಕಟ್ಟಲು ಪ್ರಯತ್ನಿಸುತ್ತಿದ್ದ ರಾಜಕಾರಣಿ ಭಾವೂ ಹೈಕಮಾ೦ಡ್ ಮಾತಿಗೆ ಕಟ್ಟುಬಿದ್ದು ಆಸ್ಪತ್ರೆಯನ್ನು ಬಿಟ್ಟು ದೇವಾಲಯ ನಿರ್ಮಾಣಕ್ಕೆ ಮು೦ದಾಗುತ್ತಾನೆ. ಟ್ರಸ್ಟುಗಳು ಹುಟ್ಟಿಕೊಳ್ಳುತ್ತವೆ, ಹಣ ಓಡಾಡುತ್ತದೆ, ಜನ ದೂರದೂರದಿ೦ದ ಬರಲು ಶುರುಮಾಡುತ್ತಾರೆ, ವ್ಯಾಪಾರೀಕರಣ ಜೋರಾಗುತ್ತದೆ, ಜನರಿಗೆ ತಿಳಿಹೇಳಿ ಸೋತ ಅಣ್ಣಾ ಊರುಬಿಡುತ್ತಾನೆ. ಪಟ್ಟಭದ್ರರ ಮುಷ್ಟಿಯೊಳಗೆ ದೇವರು ಬ೦ಧಿಯಾತ್ತಾನೆ. ಕೇಶವನ ದನವೂ ದೈವೀ ಸ್ವರೂಪ ಪಡೆದು ದೇವಾಲಯದ ಕೋಣೆಯೊಳಗೆ ಪ್ರದರ್ಶನದ ವಸ್ತುವಾಗುತ್ತದೆ. ಅದನ್ನು ಬಿಡಿಸಲು ಬ೦ದರೆ ಅವನನ್ನೇ ಒದ್ದು ಹೊರಹಾಕುತ್ತಾರೆ ಟ್ರಸ್ಟಿಗಳು. ಕೊನೆಗೆ ಕೇಶವ ಏನು ಮಾಡಿದ? ಅದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಿ. ಜನರ ಮೂಢನ೦ಬಿಕೆಯನ್ನು ನಿವಾರಿಸುವ ಬಗ್ಗೆ ಚಿತ್ರದಲ್ಲಿ ಏನೂ ಇಲ್ಲದಿದ್ದರೂ ಮೂಢನ೦ಬಿಕೆಯೆ೦ಬ ಹೊ೦ಡದಲ್ಲಿ ಜನ ಹ೦ತಹ೦ತವಾಗಿ ಬೀಳುವುದನ್ನು ಚಿತ್ರ ತೆರೆದಿಡುವ ಪರಿಯ೦ತೂ ಸೂಪರ್ಬ್. ಚಿತ್ರರಸಿಕರು ಮಿಸ್ ಮಾಡಲೇ ಬಾರದ ಚಿತ್ರಗಳು ಯಾವುದಾದರೂ ಇದ್ದರೆ ಅದರಲ್ಲಿ ದೇವೂಳ್ ನಿಸ್ಸ೦ಶಯವಾಗಿ ಒ೦ದು. Continue Reading
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಬಗೆಗಿನ ಚರ್ಚೆ ಮತ್ತೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಉಷಾ ಕಟ್ಟೇಮನೆಯವರ ಬರಹವಿದು. ಎಲ್ಲರಿಗೂ ಓದಲು ಅನುಕೂಲವಾಗಲೆಂದು ಪ್ರಕಟಿಸಲಾಗಿದೆ.
ಕನ್ನಡದ ಡಬ್ಬಿಂಗ್ ವಿರೋಧಿ ಭೂತ ಮತ್ತೊಮ್ಮೆ ಕಾಣಿಸಿಕೊಂಡಿದೆ.
![]()
ಇದಕ್ಕೆ ಕಾರಣವಾಗಿದ್ದು. ಮೇ ೬ರಂದು ಪ್ರಸಾರವಾಗಲಿರುವ ಅಮಿರ್ ಖಾನ್ ನ ಮಹತ್ವಾಕಾಂಕ್ಷೆಯ ರಿಯಾಲಿಟಿ ಶೋ ’ಸತ್ಯ ಮೇವ ಜಯತೇ’. ಅಮಿರ್ ಹೇಳುವ ಪ್ರಕಾರ ಅದು ಕನ್ನಡವೂ ಸೇರಿದಂತೆ ದಕ್ಷಿಣಭಾರತದ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಿಗೆ ಡಬ್ ಆಗಿ ಪ್ರಸಾರವಾಗಲಿದೆ. ಹಿಂದೆ ರಾಮಾಯಣ, ಮಹಾಭಾರತಗಳು ಪ್ರಸಾರವಾಗುತ್ತಿದ್ದ ಭಾನುವಾರದ ಹನ್ನೊಂದು ಘಂಟೆಯ ಜನಪ್ರಿಯ ಸ್ಲಾಟ್ ನಲ್ಲಿ ಇದು ಪ್ರಸಾರ ಕಾಣಲಿದೆ.
ಮೊತ್ತ ಮೊದಲಬಾರಿಗೆ ಖಾಸಗಿ ಮತ್ತು ದೂರದರ್ಶನ ಚಾನಲ್ ಗಳಲ್ಲಿ ಏಕ ಕಾಲದಲ್ಲಿ ಪ್ರಸಾರವಾಗಲಿರುವ ಈ ಶೋ ಇತಿಹಾಸ ನಿರ್ಮಿಸಲಿದೆ ಮತ್ತು ಭಾರತವನ್ನು ಭಾವನಾತ್ಮಕವಾಗಿ ಬೆಸೆಯಲಿದೆ ಎಂಬುದು ಅಮೀರ್ ಖಾನ್ ಹೇಳಿಕೆ. ಆತ ಈ ಶೋದ ಪ್ರಚಾರಕ್ಕಾಗಿ ಖರ್ಚು ಮಾಡದ ಹಣ ೬.೨೫ ಕೋಟಿ ರೂಪಾಯಿಗಳು. ಸಲ್ಮಾನ್ ಖಾನ್, ಶಾರೂಕ್ ಖಾನ್ ನಂತ ತಾರೆಯರ ಸಿನೇಮಾಗಳ ಪ್ರಚಾರಕ್ಕೆ ಖರ್ಚು ಮಾಡುವುದು ೨.೫ ಕೋಟಿ ರೂಪಾಯಿಗಳು ಅಂದರೆ ಅಮಿರ್ ತನ್ನ ಶೋದ ಮೇಲೆ ಇಟ್ಟಿರುವ ಭರವಸೆ ನಮಗೆ ಅರ್ಥವಾಗುತ್ತದೆ.
ಅಮಿರ್ ನ ಶೋವನ್ನು ಕನ್ನಡ ಟೆಲಿವಿಷನ್ ಸಂಘಟನೆಗಳು ವಿರೋಧಿಸಿವೆ ಮತ್ತು ಕನ್ನಡಕ್ಕೆ ಡಬ್ ಆಗದಂತೆ ನೋಡಿಕೊಂಡಿವೆ. ನಾವೀಗ ಅದನ್ನು ಹಿಂದಿಯಲ್ಲೋ ಅಥವಾ ನೆರೆ ರಾಜ್ಯದ ಭಾಷೆಗಳಾದ ತೆಲುಗು, ತಮಿಳು ಅಥವಾ ಮಲೆಯಾಳ ಭಾಷೆಗಳಲ್ಲಿ ನೋಡಬೇಕಾಗಿದೆ. Continue Reading
ಪ್ರವೀಣ ಹೆಗಡೆ ಬರೆದ ಅನಿಸಿಕೆ ಇಲ್ಲಿ ಪ್ರಕಟಿಸಲಾಗುತ್ತಿದೆ.
ಕಾದು ನೋಡುವ ಸಿನಿಮಾಗಳು ಅನೇಕ ನಿರೀಕ್ಷೆಗಳನ್ನು ಹುಟ್ಟಿಸಿರುವ ಕಾರಣಕ್ಕೇ ಕಾಯುವಂತಿರುತ್ತವೆ! ನಿರೀಕ್ಷೆಗಳಿಲ್ಲದೆ ಸಿನಿಮಾ ನೋಡಬೇಕು, ಒಂದು ಸಿನಿಮಾವನ್ನು ಬೇರೆ ಸಿನಿಮಾಗಳ ಜೊತೆ ಹೊಂದಿಸಿ ನೋಡಬಾರದು, ಈ ಸನ್ನಿವೇಶ ಹಾಗಿರಬೇಕಿತ್ತು, ಆ ತುಣುಕು ಹೀಗಿರಬೇಕಿತ್ತು… ಎಂದೆಲ್ಲ ಹೇಳಿ ನಿಜವಾಗಿ ದಕ್ಕಿದ ಸಿನಿಮಾವನ್ನು ಕೊಲ್ಲಬಾರದು ಎಂಬಿತ್ಯಾದಿಯಾಗಿ ಅದೆಷ್ಟೇ ಅಂದುಕೊಂಡರೂ ಚಿತ್ರ ನೋಡಿ ಅದರ ಗುಂಗು ಕಳೆಯುವಷ್ಟು ಹೊತ್ತು ಅವೆಲ್ಲವೂ ಎಲ್ಲಿ ನೆನಪಿರುತ್ತದೆ? ಮೊನ್ನೆಯೂ ಹಾಗೇ ಆಯಿತು. ತಿಂಗಳುಗಟ್ಟಲೆ ಕಾದು ನೋಡಿದ ಚಿತ್ರ ‘ದ ಡರ್ಟಿ ಪಿಕ್ಚರ್’.
ಅದು ಡರ್ಟಿ ಪಿಕ್ಚರ್ ಅನ್ನೋ ಕಾರಣಕ್ಕೇ ನಿರೀಕ್ಷೆಗಳಿದ್ದಿರಬಹುದು ಎಂದು ಯಾರಾದರೂ ಒಂಟಿ ಕಣ್ಣು ಮುಚ್ಚಿ, ತುಂಟ ನಗೆ ನಕ್ಕರೂ ನನ್ನ ತಕರಾರೇನಿಲ್ಲ. ಏನ್ಮಾಡೋದು ಸ್ವಾಮೀ ವಯಸ್ಸು…? ಎಂಬ ಉತ್ತರ ಕೊಡಬಲ್ಲೆ! ಅದೇನೇ ಇರಲಿ, ಒಂದಂತೂ ಸತ್ಯ. ದ ಡರ್ಟಿ ಪಿಕ್ಚರ್ ನೋಡಬೇಕೆಂದುಕೊಂಡಾಗ ಅದರ ಮೊದಲ ಪ್ರತಿಯೂ ಸಿದ್ಧವಾಗಿರಲಿಕ್ಕಿಲ್ಲ… ಸಿಲ್ಕ್ ಸ್ಮಿತಾ ಕಥೆ, ವಿದ್ಯಾ ಬಾಲನ್ ನಟನೆ ಅವೆರಡೇ ಸಂಗತಿಗಳು ಸಾಕಿತ್ತು.

ಆದರೆ….
ಕಳೆದ ಭಾನುವಾರ (ಮೊದಲ ದಿನ, ಮೊದಲ ಶೋ ನೋಡಬೇಕೆಂಬ ಹುರುಪು ನನ್ನಲ್ಲಿರಲಿಲ್ಲವಾದ ನಿಮಿತ್ತ) ಡರ್ಟಿ ಪಿಕ್ಚರ್ಗೆ ಹೋಗುವುದೋ, ಬೇಡವೂ ಎಂಬ ಗೊಂದಲದಲ್ಲಿಯೇ ಹೊರಟಿದ್ದು ಊರ್ವಶಿಗೆ. ಮಧ್ಯೆ ಸಂಸ ಪಕ್ಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪುಸ್ತಕ ಮಳಿಗೆಯಲ್ಲಿ ಒಂದಷ್ಟು ಜೇಬು ಹಗುರ ಮಾಡಿಕೊಂಡು ಊರ್ವಶಿಯತ್ತ ನಡೆದಾಗ ಸಿನಿಮಾದ ಮೇಕಿಂಗ್ ದೃಶ್ಯ ಮುಗಿದೇ ಹೋಗಿದ್ದು, ಸಪ್ಪೆಯೆನಿಸಿತು. ಆದರೂ ಸಿನಿಮಾ ಶುರುವಾಗುವಷ್ಟರಲ್ಲಿ ಒಳ ಸೇರಿ ಕೃತಾರ್ಥರಾದೆವು! ಅಲ್ಲಿಂದ ಶುರುವಾದ ಡರ್ಟಿ ಪಿಕ್ಚರ್, ಮುಗಿಯುವಷ್ಟರಲ್ಲಿ ಅದೇನೋ ಕಿರಿಕಿರಿ… ಹತಾಶೆ…ಚಿತ್ರ ಹೀಗೇಕೆಂಬ ನೂರೆಂಟು ತಲೆಬಿಸಿ…. Continue Reading
ಚಿತ್ರ ವಿಮರ್ಶಕರಾದ ವಿ.ಎನ್.ಲಕ್ಷ್ಮೀನಾರಾಯಣ ಅವರು ಅತ್ಯಂತ ಚರ್ಚಿತ ಚಿತ್ರ “ದ ರೆಡ್ ಬಲೂನ್” ಬಗ್ಗೆ ಬರೆದ ಲೇಖನವನ್ನು ಮೈಸೂರು ಫಿಲಂ ಸೊಸೈಟಿ ಪ್ರಕಟಿಸಿದೆ. ಎಲ್ಲರಿಗೂ ಲಭ್ಯವಾಗಲೆಂದು ಇಲ್ಲಿ ಪ್ರಕಟಿಸಲಾಗುತ್ತಿದೆ.
ಫ್ರೆಂಚ್ ಕಲಾಕಾರನಾದ ಅಲ್ಬರ್ಟ್ ಲಿಮೋರಿಸ್ 1956ರಲ್ಲಿ ಮಾಡಿದ ‘ದ ರೆಡ್ ಬಲೂನ್’ ಅನ್ನು ಮತ್ತೊಮ್ಮೆ ನೋಡುವ ಅವಕಾಶವನ್ನು ಮಂಡ್ಯದ ಗೆಳೆಯರು ಇತ್ತೀಚೆಗೆ ಒದಗಿಸಿದ್ದರು. ಮೊದಲ ಸಲ ವೀಕ್ಷಿಸಿದಾಗ ಅದರ ವಸ್ತು ನಾವೀನ್ಯತೆ, ಅನನ್ಯತೆ ಮತ್ತು ಸರಳತೆಗಳು ಆಕರ್ಷಿಸಿದ್ದವು. ಆದರೆ ಆಗ ಕಂಡುಕೊಳ್ಳಲು ಸಾಧ್ಯವಾಗದ ಎಷ್ಟೋ ಅರ್ಥಸಾಧ್ಯತೆಗಳು ಎರಡನೆಯ ಸಲ ಗೋಚರಿಸಿದ್ದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ. ಅದನ್ನು ಚಿತ್ರಸಹೃದಯರೊಂದಿಗೆ ಹಂಚಿಕೊಳ್ಳುವುದು ಈ ಬರೆಹದ ಉದ್ದೇಶ.

ಈ ಚಿತ್ರನೋಡಿದವರಿಗೆ ಎದ್ದುಕಾಣುವ ಅಂಶ, ನಾಲ್ಕೈದು ದಶಕಗಳ ಹಿಂದೆ ಅಸ್ತಿತ್ವದಲ್ಲಿದ್ದ ಕಿರುಗಲ್ಲಿ, ಗಟಾರ ಚರಂಡಿ ಗಳ, ಸುಣ್ಣ-ಬಣ್ಣ ಕಾಣದ ಹಳೆಯ ಕಟ್ಟಡಗಳೇ ತುಂಬಿದ, ಬಡವರ ಬಡಾವಣೆಯಾಗಿದ್ದ, ಪ್ಯಾರಿಸ್ಸಿನ ನೆರೆಭಾಗವನ್ನು ಚಿತ್ರದ ರಂಗಪ್ರದೇಶವನ್ನಾಗಿ ಲಿಮೋರಿಸ್ ಆರಿಸಿಕೊಂಡಿದ್ದಾರೆ ಎನ್ನುವುದು.
ಆಕಾಶದತ್ತ ಮುಖ ಮಾಡಿ ಹೆಜ್ಜೆ ಹಾಕುವ ಮಾತಿಲ್ಲದ ಚೂಟಿ ಹುಡುಗ ಪ್ಯಾಸ್ಕಲ್ನಿಗೆ ಮೇಲೆಲ್ಲೋ ಕಂಬಕ್ಕೆ ಸಿಕ್ಕಿಹಾಕಿಕೊಂಡ ಚೆರಿ ಹಣ್ಣಿನ ಬಣ್ಣದ, ಹೊಳೆಯುವ ಕೆಂಪು ಬಲೂನ್ ಕಣ್ಣಿಗೆ ಬೀಳುತ್ತದೆ. ಹುಡುಗ ಕಂಬ ಹತ್ತಿ ಬಲೂನನ್ನು ಬಿಡುಗಡೆ ಗೊಳಿಸಿ ಕೆಳಕ್ಕೆ ತರುತ್ತಾನೆ. ತನ್ನ ವಶದಲ್ಲಿ ಬಲೂನ್ ಇರಲೆಂದು ಬಯಸಿ ಬಲೂನನ್ನು ಹಿಡಿಯಲು ಪ್ರಯತ್ನಿಸುವ ಹುಡುಗನಿಗೆ ಬಲೂನಿನ ಸ್ವಾತಂತ್ರ್ಯ ಪ್ರೇಮ ಬಹು ಬೇಗ ಅರ್ಥವಾಗುತ್ತದೆ. ಅದನ್ನು ಕೈಬಿಟ್ಟು ಕಟ್ಟಿಹಾಕದೆಯೇ ನಡೆಸಿಕೊಂಡಾಗ ಅವರಿಬ್ಬರ ಸ್ನೇಹ ಗಟ್ಟಿಯಾಗುತ್ತದೆ.
ಅಂದಿನಿಂದ ಅವನು ಹೋದಕಡೆಯಲ್ಲೆಲ್ಲಾ ಹಿಂಬಾಲಿಸುವ, ಅಗತ್ಯಬಿದ್ದಾಗ ಕೈಗೆಟುಕುವ, ಉಳಿದಂತೆ ಸ್ವತಂತ್ರವಾಗಿ ತೇಲುವ, ಆದರೆ ತನ್ನಿಂದಾಗಿ ಹುಡುಗನಿಗೆ ತೊಂದರೆಯಾಗುತ್ತಿದೆಯೆನಿಸಿದಾಗಲೆಲ್ಲಾ ಅನತಿ ದೂರದಲ್ಲಿ ಹಿಂಬಾಲಿಸುವ, ಬೇಕೆಂದು ಕೈ ಚಾಚಿದವರ ಕೈಗೆ ಸಿಗದೆ ನುಣಿಚಿಕೊಳ್ಳುವ, ಹೊಟ್ಟೆಯಲ್ಲಿ ಹೀಲಿಯಂ ತುಂಬಿಕೊಂಡು ಹಗುರಾಗಿ ತೇಲುವ, ನೂಲುಹಗ್ಗಕಟ್ಟಿದ ಬಲೂನ್, ಒಂಟಿ ಹುಡುಗನ ಸಂಗಾತಿಯಾಗುತ್ತದೆ. Continue Reading
ಕನ್ನಡದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಹಲವು ಜಾಲತಾಣಗಳಿದ್ದರೂ ಕೇವಲ ಸಿನಿಮಾ ಕುರಿತಾಗಿಯೇ ಪ್ರತ್ಯೇಕ ಬ್ಲಾಗ್ ಇರಲಿಲ್ಲ. ಕೆಲವರು ತಾವು ನೋಡಿದ, ಮೆಚ್ಚಿಕೊಂಡ ಸಿನಿಮಾಗಳ ಬಗ್ಗೆ ಅಲ್ಲಲ್ಲಿ ಬರೆಯುತ್ತಿದ್ದರು ಅಷ್ಟೇ. ಈ ಕೊರತೆ ನೀಗಿಸಿದ್ದು “ಸಾಂಗತ್ಯ” ಬ್ಲಾಗ್. ಒಳ್ಳೆಯ ಚಿತ್ರವೊಂದನ್ನು ನೋಡಿದರೆ ಸಾಲದು ; ಎಲ್ಲರೂ ನೋಡಬೇಕು ಎಂಬುದು ಈ ಬ್ಲಾಗ್ ನ ಆಶಯ. ಇದರಲ್ಲಿ ಜಗತ್ತಿನ ಹಲವು ಅತ್ಯುತ್ತಮ ಚಿತ್ರಗಳ ಪರಿಚಯ, ಮಾಹಿತಿ, ಅನಿಸಿಕೆ, ವಿಮರ್ಶೆಗಳಿವೆ. ಇತ್ತೀಚೆಗಷ್ಟೇ ಬಿಡುಗಡೆಯಾದ “ಅಣ್ಣಾಬಾಂಡ್” ಬಗ್ಗೆ, ರಾಜ್ಯ ಚಲನಚಿತ್ರಗಳ ಪ್ರಶಸ್ತಿಯ ವಿವಾದದ ಕುರಿತ ಬರಹಗಳೂ ಇಲ್ಲಿವೆ. ಇಲ್ಲಿಗೆ ಇಣುಕಿ ನೋಡಿ
ಹೀಗೆ ಮೆಚ್ಚುಗೆ ನುಡಿಗಳನ್ನು “ವಿಜಯ ವಾಣಿ” ಪತ್ರಿಕೆ ತನ್ನ ಮೇ 4 ರ (2012) ಸಂಚಿಕೆಯ ನೆಟ್ ಲಿಂಕ್ ನಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದೆ. ಪತ್ರಿಕೆಯ ಬಳಗಕ್ಕೂ, ಪ್ರಕಟಿಸಿ ಪ್ರೋತ್ಸಾಹಿಸಿದ ಸಹೃದಯಿಗಳಿಗೂ ಸಾಂಗತ್ಯ ಬಳಗ ಧನ್ಯವಾದ ಸಲ್ಲಿಸುತ್ತದೆ.
ವಿಶ್ವನಾಥ್ ಅವರು ಚರ್ಚೆಯ ಮತ್ತೊಂದು ನೆಲೆಯನ್ನು ತೆರೆದಿದ್ದಾರೆ. ಇವರು ಪ್ರಸ್ತಾಪಿಸಿರುವ ಸಂಗತಿಯೂ ನಿಜವೇ. ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರಗಳೇಕೆ ಅಸ್ಪೃಶ್ಯವಾಗಬೇಕು ? ಓದಿ ಅಭಿಪ್ರಾಯಿಸಿ.
ರಾಜ್ಯ ಪ್ರಶಸ್ತಿಯ ಕುರಿತಾದ ಚರ್ಚೆ ಚೆನ್ನಾಗಿ ಮೂಡಿ ಬರುತ್ತಿದೆ. ಬೇರೆ ಬೇರೆ ಕೋನಗಳಲ್ಲಿ ಚರ್ಚಿಸುತ್ತಿರುವುದು ಒಳ್ಳೆಯ ಸಂಗತಿಯೇ. ನಾನೂ ಇಲ್ಲಿ ಪ್ರಸ್ತಾಪಿಸಬೇಕಾದ ಸಂಗತಿ ಕುರಿತು ಇನ್ನೂ ಯಾರೂ ಬರೆದಿಲ್ಲವಾದ್ದರಿಂದ (ಸಿಬಂತಿ ಪದ್ಮನಾಭರು ತಮ್ಮ ಲೇಖನದಲ್ಲಿ ಸಣ್ಣದಾಗಿ ಹೇಳಿದ್ದಾರೆ) ನನ್ನ ಕೆಲವು ವಿಚಾರಗಳನ್ನು ಇಲ್ಲಿಡುತ್ತಿದ್ದೇನೆ.

ನಟ, ನಟಿಯಂಥ ವೈಯಕ್ತಿಕ ಪ್ರಶಸ್ತಿಗಳ ಬಗ್ಗೆ ಚರ್ಚಿಸುವುದು ಅಷ್ಟೊಂದು ಪ್ರಮುಖವಲ್ಲವೆನಿಸುವುದು ನನ್ನ ಲೆಕ್ಕಾಚಾರ. ಆದರೆ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡುವಾಗ ಹಾಗಾಗದು. ಈ ಬಾರಿಯ ಪ್ರಶಸ್ತಿಯ ವಿಚಿತ್ರವೆಂದರೆ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಚರ್ಚೆಗೊಳಗಾದ ಒಂದೂ ಚಿತ್ರ ಇಲ್ಲಿ ಆಯ್ಕೆಯಾಗದೇ ಇರುವುದು. ಪುಟ್ಟಕ್ಕನ ಹೈವೇ ಚಿತ್ರದ ಚಿತ್ರಕಥೆಗೆ ಪ್ರಶಸ್ತಿ ಕೊಟ್ಟಿದ್ದಾರಾದರೂ ಬೆಟ್ಟದ ಜೀವ ಸೇರಿದಂತೆ ಹಲವು ಚಿತ್ರಗಳು ಒಳಗೊಳ್ಳದಿರುವುದೇ ವಿಚಿತ್ರವೆನಿಸುತ್ತದೆ. ರಾಷ್ಟ್ರ ಮಟ್ಟದ ಆಯ್ಕೆಯ ಸಂದರ್ಭದಲ್ಲಿ ಅಷ್ಟೇನೋ ಚರ್ಚೆಗೊಳಗಾಗದ ಚಿತ್ರಗಳು ಇಲ್ಲಿ ಆಯ್ಕೆ ಮಟ್ಟವನ್ನು ತಲುಪಿದವು ಎಂಬುದು ಹಲವು ಪ್ರಶ್ನೆಗಳನ್ನು ಉಂಟು ಮಾಡುತ್ತದೆ. Continue Reading
ರಾಜ್ಯ ಪ್ರಶಸ್ತಿ ಆಯ್ಕೆ ಕುರಿತೇ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿರುವ ರಾಘವೇಂದ್ರ, ಮೊದಲ ಮೂರು ಚಿತ್ರಗಳ ಭಿನ್ನತೆ ಬಗ್ಗೆ ಆಯ್ಕೆ ಸಮಿತಿಯವರೇ ತಿಳಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿ ಬಾರಿಯೂ ರಾಜ್ಯ ಪ್ರಶಸ್ತಿ ಪ್ರಕಟವಾದಾಗಲೂ ಆಗುವ ಆಶ್ಚರ್ಯವೆಂದರೆ ಇದು. ಮೊದಲ ಮತ್ತು ಉಳೀದ ಸ್ಥಾನಗಳಿಗೆ ಆಯ್ಕೆಯಾಗುವ ಚಿತ್ರಗಳ ನಡುವೆ ಸಾಮ್ಯತೆ ಇರುವುದಿಲ್ಲ. ಇದು ಹಲವು ಬಾರಿ ಆಗಿದೆ ಎನಿಸುತ್ತದೆ. ಈ ಬಾರಿಯ ಪ್ರಶಸ್ತಿಯ ಪಟ್ಟಿ ನೋಡಿ, ಸೂಪರ್, ಶಬ್ದಮಣಿ, ಭಗವತಿ ಕಾಡು. ಇವುಗಳ ಮಧ್ಯೆ ಯಾವುದಾದರೂ ಬಗೆಯ ಸಾಮ್ಯತೆ ಇದೆಯೇ ?

ಸೂಪರ್ ಅತ್ಯುತ್ತಮ ಚಿತ್ರವೆಂದು ಪರಿಗಣಿಸಿದ್ದರೆ, ಅದರೊಂದಿಗೆ ಸೆಣಸಿದ ಚಿತ್ರಗಳು ಅದೇ ಮಾದರಿಯಲ್ಲಿರಬೇಕಲ್ಲವೇ ? ಸೂಪರ್ ಸಂಪೂರ್ಣ ವಾಣಿಜ್ಯ ನೆಲೆಯ ಚಿತ್ರ. ಉಳಿದ ಎರಡೂ ಕಲಾತ್ಮಕ ಮಾದರಿಗೆ ಒಳಪಟ್ಟವು. ಹಾಗಾದರೆ ಆಯ್ಕೆ ಸಮಿತಿ ಹೇಗೆ ವಿವಿಧ ಸ್ಥಾನಗಳಿಗೆ ವರ್ಗೀಕರಿಸಿತು ? ಎಂಬುದೇ ಅರ್ಥವಾಗುವುದಿಲ್ಲ. ಸೂಪರ್ ನಲ್ಲಿ ಜನಪ್ರಿಯ ಹೀರೋ ಇದ್ದ ಮಾತ್ರಕ್ಕೆ ಪ್ರಥಮ ಸ್ಥಾನ ಗಳಿಸಿದ್ದರೆ, ಉಳಿದವೂ ಜನಪ್ರಿಯ ಹೀರೋಗಳಿರುವ ಚಿತ್ರಗಳೇ ಸೆಣಸಬೇಕಿತ್ತು. ಅದ್ಯಾವುದೂ ಕಾಣುವುದಿಲ್ಲ.
ಸೂಪರ್ ನಲ್ಲಿನ ಹೀರೋ ಅಭಿನಯಕ್ಕೆ ಸಿನಿಮಾ ಆಯ್ಕೆಯಾಗಿಲ್ಲ. ಕಾರಣ, ಅತ್ಯುತ್ತಮ ನಟನ ಪ್ರಶಸ್ತಿ “ಪುನೀತ್’ ಗೆ ಹೋಗಿದೆ. “ಪೃಥ್ವಿ’ ಚಿತ್ರದ ಅಭಿನಯಕ್ಕೆ ಆ ಪ್ರಶಸ್ತಿ ದೊರೆತಿರುವುದು. ಇದೇ ಲೆಕ್ಕವನ್ನು ಇಟ್ಟು ಕೊಂಡು ನೋಡಿದರೆ, ಬಹುಶಃ ಸೂಪರ್ ಗೆ “ಪೃಥ್ವಿ’ ಸೆಣಸು ಕೊಟ್ಟಿರಬೇಕು. ಆಗಲಾದರೂ ಒಂದು ಸಣ್ಣ ಸಾಮ್ಯತೆ ತೋರುತ್ತದೆ. ವಿಚಿತ್ರವೆಂದರೆ, ಅತ್ಯುತ್ತಮ ನಟಿ ಮತ್ತೊಂದು ಚಿತ್ರ “ಸೂಸೈಡ್’ನ ನಟಿ ಕಲ್ಯಾಣಿಯ ಪಾಲಾಗಿದೆ. ಹಾಗಾಗಿಯೇ ಹೇಳಿದ್ದು, ಈ ಮೂರರಲ್ಲೂ ಒಂದು ಸಾಮ್ಯತೆಯೇ ಕಾಣಬರುವುದಿಲ್ಲ.
ಒಂದುವೇಳೆ “ಸೂಪರ್’ಗೆ ಜನಪ್ರಿಯ ಹೀರೋ ಇದ್ದ ಮಾತ್ರಕ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದರೆ, ಉಳಿದ ಎರಡು ಚಿತ್ರಗಳು (ಭಗವತಿ ಕಾಡು, ಶಬ್ದಮಣಿ) ಅದೇ ಕಾರಣಕ್ಕೆ ಮೊದಲ ಸ್ಥಾನಕ್ಕೆ ತಿರಸ್ಕೃತಗೊಂಡಿದ್ದೂ ತಪ್ಪು. ಇವೆಲ್ಲವನ್ನೂ ದೂರವಿಟ್ಟು, ನಾನು ಕೇವಲ ಸಾಮ್ಯತೆ ಹುಡುಕುತ್ತಿರುವುದು ಪ್ರಥಮ ಮೂರು ಚಿತ್ರಗಳಲ್ಲಿ ಮಾತ್ರ. ಕಥೆಯ ಸಂಗತಿಯಲ್ಲಿ ಹೇಳವುದಾದರೆ, ಮೂರೂ ಚಿತ್ರಗಳು ಭಿನ್ನ ನೆಲೆಯವು. ಒಂದು ತೀರಾ ವಿಡಂಬನೆಯ ನೆಲೆಯದ್ದಾದರೆ, ಭಗವತಿ ಕಾಡು ಪರಿಸರಾತ್ಮಕ ಚಿತ್ರ. ಶಬ್ದಮಣಿ ಸೈನಿಕರ ಕುರಿತಾದದ್ದು.
ನಂತರದ ಎರಡೂ ಚಿತ್ರಗಳ ಕಥೆಯ ಎಳೆ ಸಮಾಜದ ಮೇಲೆ ಪರಿಣಾಮ ಬೀರುವಂಥವು. “ಸೂಪರ್’ ಅಕ್ಷರಶಃ ಮನರಂಜನಾತ್ಮಕ ಚಿತ್ರ. ಅದರ ವಿಡಂಬನೆ ನೆಲೆ ಎಲ್ಲೂ ನಮ್ಮನ್ನು ಆಲೋಚನಾಶೀಲವಾಗಿ ತೊಡಗಿಸುವುದು ಕಷ್ಟ. ಅದರ ವಿಡಂಬನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಬದಲು, ಸಾಮಾನ್ಯ ಜೋಕಿನಂತೆ ನೋಡಿಬಿಡುವ ಅಪಾಯವೇ ಹೆಚ್ಚು. ಹೀಗಿರುವಾಗಲೂ, ಮೂರರ ಮಧ್ಯೆ ಒಂದು ಗಂಭೀರ ವ್ಯತ್ಯಾಸವನ್ನು ಹುಡುಕಿ ಸ್ಥಾನ ವರ್ಗೀಕರಿಸಿದ ಆಯ್ಕೆ ಸಮಿತಿಯವರಿಗೆ ಭೇಷ್ ಎನ್ನಲೇಬೇಕು. ಇದೇ ಗೋಜಲು ?ಗೋಜಲು ಎನಿಸುವುದು. ಆಯ್ಕೆ ಸಮಿತಿಯು ಇಂಥ ಸಂದರ್ಭದಲ್ಲಾದರೂ ತಮ್ಮ ಗಮನಾರ್ಹ ಅಂಶಗಳನ್ನು ಪ್ರಕಟಿಸಬೇಕು. ಆಗ ಮಾತ್ರ ಗೊಂದಲ ಬಗೆಹರಿಯಬಹುದೇನೋ?
ಚೇತನಾ ಎನ್. ಅವರ ಅಭಿಪ್ರಾಯವನ್ನೇ ಅನುಮೋದಿಸಿ ಬರೆದಿದ್ದಾರೆ ಮಧುಸೂದನ್. ಇದು ಚಿತ್ರದ ಬಗೆಗಿನ ಅವರ ಅನಿಸಿಕೆಯೂ ಹೌದು ಹಾಗೂ ಹಿಂದಿನ ಲೇಖನದ ವಿಸ್ತರಣೆಯೂ ಹೌದು. ಓದಿ, ಅಭಿಪ್ರಾಯಿಸಿ. ರಾಜ್ಯ ಪ್ರಶಸ್ತಿ ಆಯ್ಕೆ ಕುರಿತ ಸಂವಾದ ನಾಳೆಯಿಂದ ಮುಂದುವರಿಯಲಿದೆ.
ಸಿನಿಮಾಕ್ಕೆ ಹೋಗಿ ಕುಳಿತಾಗ ನನಗೂ ಹಾಗೆಯೇ ಅನ್ನಿಸಿದ್ದು. ಹತ್ತು ಹಲವು ಸಿನಿಮಾಗಳ ಸಂಘರ್ಷ ಇದರಲ್ಲಿ ನಡೆಯುತ್ತಿದೆಯೇ ಎಂದೆನಿಸಿತು. ಈ ಬ್ಲಾಗ್ ನಲ್ಲಿ ಚೇತನಾ ಎನ್. ಅವರ ಅನಿಸಿಕೆ ಸರಿಯಿದೆ. ಅಣ್ಣಾಬಾಂಡ್ ನ ಮೊದಲ ಸೀನ್ ನನಗೂ “ಸಿಟಿ ಆಫ್ ಗಾಡ್’ ಮೊದಲ ದೃಶ್ಯದ ತದ್ರೂಪು ಎನಿಸಿತು. ನಂತರ ಹಾಲಿವುಡ್ನ ಟ್ರೂ ಲೈಸ್ ನ ಲ್ಲಿ ಹತಾಶೆಯಾಗಿ ಬೇಕಾಬಿಟ್ಟಿ ಸಿಕ್ಕಸಿಕ್ಕಕಡೆ ಗುಂಡು ಹಾರಿಸುವ ಆರ್ನಾಲ್ಡ್ನ ಹೆಂಡತಿಯಂತೆಯೇ ರಂಗಾಯಣ ರಘುವಿನ ಪಾತ್ರ ಅನಿಸಿದ್ದು. ದುನಿಯಾದಲ್ಲಿ ಕಂಡಿದ್ದ ಸೂರಿಯವರ ಚಿತ್ರಕಥೆಯ ಬಿಗಿ, ನಿರೂಪಣೆಯ ಕೌಶಲ್ಯ ಎಲ್ಲವೂ ನಿಧಾನವಾಗಿ ಕಾಣೆಯಾಗುತ್ತಿದೆ ಎನ್ನಿಸಿದ್ದೂ ನಿಜ. ಯಾಕೆ ಹಾಗಾಗುತ್ತಿದೆಯೋ ಗೊತ್ತಿಲ್ಲ.

ಈ ಚಿತ್ರದಲ್ಲಿ ಸೂರಿಯವರನ್ನು ಬಚಾವ್ ಮಾಡುವುದು ರಂಗಾಯಣ ರಘು, ಯೋಗರಾಜಭಟ್ ಹಾಗೂ ಛಾಯಾಗ್ರಹಣದ ಹೊಣೆ ಹೊತ್ತ ಸತ್ಯ ಹೆಗಡೆ. ಹಾಡುಗಳನ್ನು ಕೇಳಿ, ಅವುಗಳ ದೃಶ್ಯ ವೈಭವವನ್ನು ನೋಡಲು ಹೋದವರಿಗೆ ಮತ್ತೆ ನಿರಾಶೆಯಾಗುತ್ತದೆ. “ತುಂಬಾ ನೋಡಬೇಡಿ’ ಹಾಡಿಗೆ ಇನ್ನಷ್ಟು ಒಳ್ಳೆಯ ದೃಶ್ಯಗಳ ಸಂಯೋಜನೆ ಬೇಕಿತ್ತು ಎಂದು ನನ್ನಂಥ ಸಾಮಾನ್ಯನಿಗೂ ಅನ್ನಿಸುತ್ತದೆ. ಆದರೆ, ಪರದೆಯ ಮೇಲೆ ಯಾವುದೊ ಮೆರವಣಿಗೆಯಲ್ಲಿ ಕುಣಿಯುವ ದೃಶ್ಯಕ್ಕಿಂತ ಹೊರತಾಗಿ ಏನೂ ಅನಿಸದು. ಹಾಗಾಗಿ ಯೋಗರಾಜ ಭಟ್ ರ ಒಪ್ಪಿಕೊಳ್ಳಬಲ್ಲ ಸಾಹಿತ್ಯವೂ ಪ್ರೇಕ್ಷಕರನ್ನು ಮುಟ್ಟುವಲ್ಲಿ ವಿಫಲವಾಗುತ್ತದೆ. ಜಾಕಿ ಚಿತ್ರದ “ಎಕ್ಕ ರಾಜಾ ರಾಣಿ’ ಹಾಡಿಗೂ ಇಂಥದ್ದೇ ಕಷ್ಟ ಒದಗಿಬಂದಿತ್ತು. ನೃತ್ಯ ಸಂಯೋಜನೆ ಹಾಗೂ ಬೀಟ್ಸ್ ಗಳಿಗೂ (ಲಯ) ಹೊಂದಾಣಿಕೆಯೇ ತೋರದು. ಬೋರ್ ಎನಿಸಿದಾಗಲೆಲ್ಲಾ ಸಿನಿಮಾಟೋಗ್ರಫಿ ಮತ್ತು ಬಿಗಿಯಾದ ಸಂಕಲನ ಸಮಾಧಾನ ಪಡಿಸುತ್ತವೆ.
ಸ್ಯಾಂಡಲ್ವುಡ್ ಪ್ರತಿಭೆಗಳ ಕಣಜ ಎಂಬ ಅಭಿಪ್ರಾಯ ಇರುವಾಗಲೇ, ಅಲ್ಲಿನ ಪ್ರತಿಭೆಯ ಒಂದು ನಿರಾಶದಾಯಕ ಪ್ರಯತ್ನವಿದೆಂದು ಹೇಳಬಹುದು, ಇದು ವಿಪರ್ಯಾಸವೆಂದರೂ ಸತ್ಯ. ಅಣ್ಣಾಬಾಂಡ್ ಎಂದು ಚಿತ್ರಕ್ಕಿಟ್ಟ ಮಾತ್ರಕ್ಕೇ, “ಬಾಂಡ್ ರವಿ’ ಪಾತ್ರದ ಪುನೀತ್ನನ್ನು ಹೊರತುಪಡಿಸಿದರೆ ಉಳಿದ್ಯಾವ ಪಾತ್ರಕ್ಕೂ ಪೋಷಣೆಯೇ ಸಿಕ್ಕಿಲ್ಲ. ಅಣ್ಣಾ ಎಂದು ಹೆಸರಿಡುವ ಮೂಲಕ ನಿರ್ದೇಶಕ ಮತ್ತು ಚಿತ್ರತಂಡ, ಡಾ. ರಾಜ್ಕುಮಾರ್ರ ಪ್ರಸಿದ್ಧಿಯನ್ನು-ಸೆಂಟಿಮೆಂಟ್ ನ್ನು ಬಳಸಿಕೊಳ್ಳುವ ಮೂಲಕ ತಮ್ಮ ನಿರಾಶದಾಯಕ ಪ್ರಯತ್ನದ ದೋಷವನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆಂದರೆ ಸುಳ್ಳಲ್ಲ.
ಇದು, ಶಾಲಾ ಪರೀಕ್ಷೆಯಲ್ಲಿ ಫೇಲಾದ ವಿಜ್ಞಾನಿಯ ಮಗನೊಬ್ಬ ತನ್ನಪ್ಪನ ಪ್ರಭಾವ ಬಳಸಿಕೊಂಡು ಉತ್ತೀರ್ಣನಾಗಲು ನಡೆಸುವ ಪ್ರಯತ್ನದಂತೆಯೇ ಅನಿಸುತ್ತದೆ. ಹಲವು ಅತ್ಯುತ್ತಮ ಉಲ್ಲೇಖಾರ್ಹ ಚಲನಚಿತ್ರಗಳನ್ನು ನೀಡಿದ್ದಲ್ಲದೇ, ಪ್ರಸ್ತುತತೆಯಲ್ಲೂ ಶ್ರೀಮಂತಿಕೆ ಹಾಗೂ ಸೃಜನಶೀಲ ಪ್ರಯತ್ನಗಳಿಗೆ ಹೆಸರಾಗಿದ್ದ ಪೂರ್ಣಿಮಾ ಎಂಟರ್ ಪ್ರೈಸಸ್ ಯಾಕೆ ಇಂತಹ ಸಾಧಾರಣ ಪ್ರಯತ್ನಕ್ಕೆ ಕೈ ಹಾಕಿತೋ ತಿಳಿಯದು.
ಅಣ್ಣಾಬಾಂಡ್ ಚಿತ್ರ ಡಾ.ರಾಜ್ಕುಮಾರ್ರನ್ನು ಮರಳಿ ತರುವಲ್ಲಿ ನಡೆಸಿದ ಒಂದು ಹತಾಶ ಪ್ರಯತ್ನವೆಂದೇ ತೋರುತ್ತದೆ. ಸ್ಯಾಂಡಲ್ ವುಡ್ ಗುಣಮಟ್ಟದ ಕೊರತೆಯನ್ನು ಎದುರಿಸುತ್ತಿದೆ ಎಂಬುದನ್ನು ಈ ಚಿತ್ರ ಪ್ರಸ್ತಾಪಿಸುತ್ತದೆಯೇ? ಅಣ್ಣಾಬಾಂಡ್ ಚಿತ್ರ ನೋಡಿದವರಿಗೆ ಹೀಗೆ ಅನ್ನಿಸಬಹುದು.
ವಿಶ್ವ ಸಿನಿಮಾಗಳಿಂದ ದೃಶ್ಯಗಳನ್ನು ತಂದರೆ, ಸ್ಫೂರ್ತಿ ಪಡೆದು ಚಿತ್ರಿಸಿದರೆ ಯಾರೂ ಆಕ್ಷೇಪಿಸುವುದಿಲ್ಲ. ಆದರೆ, ಇಂಥ ಹೊತ್ತಿನಲ್ಲಿ ತಮ್ಮ ಸೃಜನಶೀಲತೆಯಿಂದ ಕಥೆಗೆ-ನಿಮ್ಮ ಚಿತ್ರಕ್ಕೆ ಹೊಂದುವಂತೆ ಪುನರ್ ರೂಪಿಸಿದರೆ ನ್ಯಾಯ ಒದಗಿಸಿದಂತೆ. ಹಾಲಿವುಡ್ಗಳಲ್ಲಿ ಬಾಂಡ್ ಸಿನಿಮಾಗಳಿಗೆ ಒಂದು ಸಿದ್ಧ ಸೂತ್ರವಿದೆ. ಯಾರೇ ಬಾಂಡ್ನ ರೂಪದಲ್ಲಿ ಬಂದರೂ ಆ ಸೂತ್ರಕ್ಕೆ ತಮ್ಮನ್ನು ತಾವು ಒಗ್ಗಿಸಿಕೊಳ್ಳಲೇಬೇಕು. ಡಾ. ರಾಜ್ಕುಮಾರ್ ಅವರು ಅಭಿನಯಿಸಿದ ಬಾಂಡ್ ಚಿತ್ರಗಳಲ್ಲೂ ಆ ಸೂತ್ರದ ಚಹರೆ ತೋರಬಲ್ಲದು, ಆದರೆ ಅಣ್ಣಾಬಾಂಡ್ ನಲ್ಲಿಲ್ಲ. ನಮ್ಮ ಸುತ್ತಮುತ್ತಲಿನ ಭಾಷೆಗಳ ಚಿತ್ರರಂಗದಲ್ಲಿ ಒಳ್ಳೆ ಬಜೆಟ್ ಮತ್ತು ಒಳ್ಳೆ ಸಿನಿಮಾಗಳನ್ನು ಮಾಡುತ್ತಿರುವಾಗ ನಮ್ಮಲ್ಲಿ ಏಕೆ ಹೀಗೆ ಎಂಬ ಪ್ರಶ್ನೆ ಅಣ್ಣಾ ಬಾಂಡ್ ನೋಡುವಾಗಲೂ ಕಾಡದೇ ಬಿಡಲಿಲ್ಲ.
ಅಂಜನಾರ ಚರ್ಚೆಯ ಅಂಶವನ್ನೇ ವಿಸ್ತರಿಸುವ ಹಾಗಿದೆ ಸಿಬಂತಿ ಪದ್ಮನಾಭರು ಹೊಸದಿಂಗಂತ ಪತ್ರಿಕೆಗೆ ಬರೆದ ಲೇಖನ. ಸಿಬಂತಿ ಪದ್ಮನಾಭ ತುಮಕೂರು ವಿವಿ ಯ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದ ಸಹಾಯಕ ಪ್ರಾಧ್ಯಾಪಕ. ಇವರೂ ಕೆಲವು ಮಹತ್ವದ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ.ನಿಮ್ಮ ಅಭಿಪ್ರಾಯ-ಲೇಖನಗಳನ್ನು saangatya@gmail.com ಗೆ ಕಳುಹಿಸಿ.
ಚಲನಚಿತ್ರ ಪ್ರಶಸ್ತಿ ವಿವಾದ ಎಂಬ ಮಾತು ಕ್ಲೀಷೆ ಎನಿಸುವಷ್ಟರ ಮಟ್ಟಿಗೆ ಪುನರಾವರ್ತನೆಯಾಗುತ್ತಿರುವುದು ವ್ಯವಸ್ಥೆಯ ವ್ಯಂಗ್ಯವೋ ಶಾಶ್ವತ ಸತ್ಯವೋ ಗೊತ್ತಿಲ್ಲ, ಆದರೆ ಪ್ರತಿ ಬಾರಿ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾದಾಗಲೂ ಅಪಸ್ವರ, ವಾದ-ವಿವಾದಗಳು ಹೊಗೆಯಾಡುವುದು ಸರ್ವೇಸಾಮಾನ್ಯ ಎನಿಸಿಬಿಟ್ಟಿದೆ. ಹಾಗೆ ನೋಡಿದರೆ ಯಾವುದೇ ಪ್ರಶಸ್ತಿ-ಪುರಸ್ಕಾರಗಳು, ನಿರ್ದಿಷ್ಟವಾಗಿ ಸರ್ಕಾರದಿಂದ ಕೊಡಮಾಡಲ್ಪಡುವ
ಪ್ರಶಸ್ತಿಗಳು, ವಿವಾದರಹಿತವಾಗಿರುವುದು ತೀರಾ ಅಪರೂಪ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಬಗೆಯ ಎಚ್ಚರ, ಚರ್ಚೆ, ಟೀಕೆ, ವಿಮರ್ಶೆಗಳು ಒಂದು ರೀತಿಯಲ್ಲಿ ಅನಿವಾರ್ಯ ಕೂಡಾ; ಆದರೆ ಇವು ಆರೋಗ್ಯಕರ ಟೀಕೆಯ ವ್ಯಾಪ್ತಿಯಿಂದ ಹೊರಹೋಗತೊಡಗಿದಾಗ, ವೈಯುಕ್ತಿಕ ತೇಜೋವಧೆಯ ಮಟ್ಟಕ್ಕೆ ಇಳಿದಾಗ, ಪುನರಾವರ್ತನೆಯಾಗದಂತೆ ನೋಡಿಕೊಳ್ಳುವ ಅವಕಾಶವಿದ್ದಾಗಲೂ ಮರುಕೊಳಿಸತೊಡಗಿದಾಗ ಮಾತ್ರ ನಾವು ಸಾಗುತ್ತಿರುವ ಹಾದಿಯ ಬಗ್ಗೆ ಆತಂಕವಾಗುತ್ತದೆ.

ಹಾಗೆ ನೋಡಿದರೆ ಹಿಂದೆಂದಿಗಿಂತಲೂ ಈ ಬಾರಿಯ ರಾಜ್ಯ ಚಲನಚಿತ್ರ ಪ್ರಶಸ್ತಿಗಳೇ ಹೆಚ್ಚು ಚರ್ಚೆಗೆ ಗ್ರಾಸವಾಗಿರುವಂತೆ ಕಾಣುತ್ತದೆ. ಸಿನಿಮಾಗಳನ್ನು ಸಬ್ಸಿಡಿಗೆ ಆಯ್ಕೆ ಮಾಡುವ ಸಂದರ್ಭ
ನಡೆದಿದೆಯೆನ್ನಲಾದ ಲಕ್ಷಾಂತರ ರೂಪಾಯಿಗಳ ಅವ್ಯವಹಾರದ ಆರೋಪಗಳು ಇನ್ನೂ ನಿಗಿನಿಗಿಯಾಗಿರುವಾಗಲೇ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾದದ್ದು, ಮತ್ತು ಆ ಪ್ರಶಸ್ತಿಗಳ ಬಗ್ಗೆ ಬೇರೆಬೇರೆ ತೆರನಾದ ಅಸಂತೃಪ್ತಿಗಳು ಹೆಡೆಯೆತ್ತಿದ್ದು ಈ ಮಟ್ಟದ ವಾದವಿವಾದಗಳು ಹುಟ್ಟಿಕೊಳ್ಳುವುದಕ್ಕೆ ಕಾರಣವಿರಬಹುದು. Continue Reading




















