ಶಿಕಾರಿಪುರದ ಕವಿಸ್ವರ ಅವರ ಅಭಿಪ್ರಾಯಕ್ಕೆ “ನಾನೂ ನನ್ನ ಕನಸು” ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಚಿತ್ರ ನಿರ್ದೇಶಕ ಬಿ. ಸುರೇಶ ನೀಡಿರುವ ಪ್ರತಿಕ್ರಿಯೆಯಿದು.
ಶಿಕಾರಿಪುರದ ಕವಿಸ್ವರ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ.
ನಾನು ಮೂಲತಃ ಪುನರವತರಣಿಕೆಯನ್ನು ಇಷ್ಟಪಡುವುದಿಲ್ಲ. ಅದು ಸೃಜನಶೀಲತೆಯ ಸೋಲು ಎಂದು ನಂಬುವವರಲ್ಲಿ ನಾನೂ ಒಬ್ಬ. ಆದರೂ ‘ನಾನು ನನ್ನ ಕನಸು’ ಚಿತ್ರವನ್ನು ‘ಅಭಿಯುಂ ನಾನುಂ’ ಚಿತ್ರದ ಪುನರವತರಣಿಕೆಯಾಗಿ ಮಾಡಿದ್ದೇನೆ.
ನೀವು ಸಿನಿಮಾ ನೋಡಿದರೆ ನಾನು ಈ ತೀರ್ಮಾನಕ್ಕೆ ಬರಲು ಕಾರಣ ತಿಳಿಯುತ್ತದೆ. ಇದು ಅಪ್ಪ-ಮಗಳ ಬದುಕನ್ನು ಬಿಚ್ಚಿಡುವ ಸಿನಿಮಾ. ಇಲ್ಲಿ ಕತೆ ಇಲ್ಲ. ಅನುಭವಗಳ ಸರಣಿ ಇದೆ. ಜನರನ್ನು ಮೆಚ್ಚಿಸಲೆಂದು ಸೂತ್ರೀಕರಿಸಿದ ವಿವರಗಳಿಲ್ಲ. ನೋಡುಗನಿಗೆ ಅವನ ತಂದೆ-ತಾಯಿ-ಸಂಸಾರ-ಬದುಕನ್ನು ನೆನಪಿಸುವ ಗುಚ್ಛಗಳಿದೆ.
ನನಗೆ ಒಬ್ಬ ಮಗಳಿದ್ದಾಳೆ. ಅವಳೀಗ ಎಂಟನೇ ತರಗತಿಗೆ ತಲುಪಿದ್ದಾಳೆ. ಈ ವರೆಗೆ ಅವಳೊಂದಿಗೆ ನಾನಿದ್ದ ಸ್ಥಿತಿಗೂ ಪ್ರೌಢಾವಸ್ಥೆಗೆ ಬಂದ ಮಗಳ ಜೊತೆಗೆ ಅಪ್ಪನಿಗೆ ಸಿಗುವ ಪ್ರೀತಿ ಹಂಚಿಕೊಳ್ಳುವ ಅವಕಾಶಕ್ಕೂ ವ್ಯತ್ಯಾಸ ಇದೆ. ಬದಲಾದ ನನ್ನ ಜೀವನದ ಪರಿಸ್ಥಿತಿಯೇ ನಾನು ಈ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಲು ಕಾರಣ.
ಅಪರೂಪದ ಸಂದರ್ಭಗಳಲ್ಲಿ ನಾವು ನಮ್ಮ ನಿಲುವುಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಹಾಗೇ ನನ್ನ ಎದುರಿಗೆ ನನಗೆ ಅಪರೂಪ ಎನಿಸುವ ಸ್ಥಿತಿಯಲ್ಲಿ ನನ್ನ ಮಗಳಿದ್ದಳು. ಈ ಉತ್ತರ ನಿಮಗೆ ತೃಪ್ತಿ ತಂದೀತು ಎಂದುಕೊಳ್ಳುತ್ತೇನೆ ಕವಿಸ್ವರ ಅವರೇ.
ನಮನಗಳು ಮತ್ತು ಪ್ರತಿಕ್ರಿಯೆ ನೀಡಲು ಅನುವು ಮಾಡಿಕೊಟ್ಟ ಪ್ರಶ್ನೆಗೆ ಧನ್ಯವಾದಗಳು- ಬಿ. ಸುರೇಶ
ನಲುಮೆಯ ಬೀಸು ರವರೆ….
ತೃಪ್ತಿ ತಂದ ತಮ್ಮ ಉತ್ತರವನ್ನು ‘ಉತ್ತರ’ ಎನ್ನುವುದಕ್ಕಿಂತ ‘ಸಮಜಾಯಿಷಿ’ ಎಂದರೆ ಸೂಕ್ತವೇನೋ…
ರಿಮೇಕ್ ಚಿತ್ರವನ್ನೇ ನೋಡಬಾರದು ಎಂಬ ಪ್ರತಿಜ್ಞೆ ಮಾಡಿದ್ದೆ. ಕನಸು ಬಗ್ಗೆ ಟಿವಿ9 ನಲ್ಲಿ ಬಂದ ನಾಗತಿಹಳ್ಳಿ ಜೊತೆ ರೈ-ರವರ ಸಂದರ್ಶನವನ್ನು ಅವಡುಗಚ್ಚಿ ಕುಳಿತು ನೋಡುವಾಗ ಅಲ್ಲಿ ರಿಮೇಕ್ ಎಂಬ ಪದದ ಸುಳಿವೇ ಬರಲಿಲ್ಲ.. ಅಭಿಯುಂ ನಾನುಂ-ನ ಪ್ರೇರಣೆ ಎಂದಷ್ಟೇ ಅರುಹಿದ ಪ್ರಕಾಶರ ಮಾತಿನಿಂದ ಬೀಸು-ರೈ ಜೋಡಿಯ ಈ ಸೃಜನಶೀಲ ಪ್ರಯೋಗಕ್ಕೆ ಮೂರು ದಿನಗಳ ಮುಂದೆಯೇ ಟಿಕೆಟ್ ಕಾಯ್ದಿರಿಸಿದ್ದೆ. ನಮ್ಮ ಕವಿಸ್ವರ ಸಮೂಹದ ನೂರಾರು ಶಿಷ್ಯರಿಗೆ ಈ ಚಿತ್ರ ವೀಕ್ಷಿಸಲು ತಿಳಿಸಿ ಸಂದೇಶ ಕಳಿಸಿದೆ. ನಾನು ಮಡದಿಯೊಡನೆ ಮೈಮರೆತು ಚಿತ್ರ ಸವಿದು ಬಂದ ಮೇಲೆ ನನ್ನ ಹೆಂಡತಿಯೂ ಸೇರಿ ನನ್ನ ಅನೇಕ ಶಿಷ್ಯಂದಿರು ಅದು ‘ಆಕಾಶಮಂತ’ದ ರಿಮೇಕ್ ಎಂದರು. ಆಗ ನನಗೆ ಸಿಟ್ಟು ಬಂದದ್ದು ಹೆಂಡತಿ ಮತ್ತು ಶಿಷ್ಯರ ಮೇಲಲ್ಲ ಸದಾ ಸತ್ವವಾದದನ್ನೇ ಪ್ರಯೋಗಿಸುವ ಬೀಸು ಮತ್ತು ರೈ ಮೇಲೆ..
ಹಾಗೆಂದು ರಿಮೇಕ್ ಎಂಬ ಕಾರಣವೊಂದರಿಂದಲೇ ಕನಸನ್ನು ಜರಿಯಲಾರೆ. ಮನೆಗೆ ಬಂದು ‘ಆಕಾಶಮಂತ’ ನೋಡಿದ ಮೇಲೆ ಕನಸು ಮೂಲಕ್ಕಿಂತಲೂ ಉತ್ತಮವಾಗಿ ಮೂಡಿ ಬಂದಿದೆ ಎಂದು ಗಮನಿಸಿರುವೆ. ವೀಕ್ಷಿಸುತ್ತ ಕುಳಿತಾಗ ಇನ್ನೂ ಹುಟ್ಟದಿರುವ ಮಗಳ ಬಗ್ಗೆ ಕನಸು ಕಂಡಿದ್ದೇನೆ ಕೆಲವೊಮ್ಮೆ ಕಣ್ಣೀರಾಗಿದ್ದೇನೆ.
ಬೀಸು-ರವರ ಸೌಜನ್ಯದ ಸಮಜಾಯಿಷಿಗೆ ಧನ್ಯವಾದ.. ಇನ್ನೆಂದೂ ನಿಮ್ಮಿಂದ ಪುನರವತರಣಿಕೆಯನ್ನು ನಿರೀಕ್ಷಿಸುವುದಿಲ್ಲ. ರೈ-ಬೀಸು-ಅಚ್ಯುತ-ರಾಜೇಶ್-ಹಂಸಲೇಖ ಇಂತಹ ಸೃಜನಶೀಲ ಸಂಗಮ ರಿಮೇಕ್-ಗೆ ಆಹುತಿಯಾಗದೆ ಕನ್ನಡಕ್ಕೊಂದು ಹೆಮ್ಮೆಯ ಕೊಡಲಿ ಎಂಬುದಷ್ಟೆ ನನ್ನಂತವರ ಅರಿಕೆ..
ಈ ಚಿತ್ರದ ಬಗ್ಗೆ ಸಾಕಷ್ಟು ಒಳ್ಳೆಯ ವಿಮರ್ಶೆ ಪತ್ರಿಕೆಗಳಲ್ಲಿ ಬಂದಿದೆ. ಈ ಚಿತ್ರ ಅದನ್ನು ತನ್ನ ಅರ್ಹತೆ ಮೇಲೆಯೇ ಪಡೆದುಕೊಂಡಿದೆ ಅಂತ ಹೇಳಿದರೆ ತಪ್ಪಾಗಲಾರದು.
ಈ ಹಿಂದೆ ನಾನು ತಮಿಳಿನ “ಅಭಿಯುಂ ನಾನುಂ” ಸಹ ನೋಡಿ ಮೆಚ್ಚಿಕೊಂಡಿದ್ದೆ. ನನ್ನ ಪ್ರಕಾರ ಕನ್ನಡದ ಅವತರಣಿಕೆ ತಮಿಳಿಗಿಂತ ತುಂಬ ಚೆನ್ನಾಗಿ ಬಂದಿದೆ. ತಮಿಳಿನಲ್ಲಿ ಚಿತ್ರ ಸ್ವಲ್ಪ ಉದ್ದವಾಯಿತೇನೋ ಅನ್ನಿಸಿತ್ತು. ಅಲ್ಲದೆ ನಮ್ಮ ಕನ್ನಡದ ಸೊಗಡನ್ನು ಚೆನ್ನಾಗಿ ಬಿಂಬಿಸುತ್ತಾ – ಸಂಭಾಷಣೆ ಬರೆದ ಪ್ರಕಾಶ್ಗೆ hats off – ಕನ್ನಡ ನುಡಿ ಹಾಗು ಸಂಸ್ಕೃತಿಗೆ ಪೂರಕವಾದ ಹಾಗೆ ಚಿತ್ರ ಬಂದಿದೆ.
ಬಹಳಷ್ಟು ವಿಮರ್ಶೆ ಗಳಲ್ಲಿ ತಂದೆ ಮಗಳ ಭಾಂಧವ್ಯದ ಬಗ್ಗೆ ಬರೆದಿದ್ದಾರೆ. ಅದು ನಿಜ ಹಾಗು ಅದೇ ಚಿತ್ರದ ಬುನಾದಿ ಕೂಡ. ಆದರೆ ಈ ಭಾಂಧವ್ಯದ ಚೌಕಟ್ಟಿನಲ್ಲೇ ಚಿತ್ರ ಹಲವಾರು ವಿಷಯಗಳನ್ನು ಪದರ ಪದರವಾಗಿ ನಮ್ಮ ಮುಂದಿಡುತ್ತೆ. ಅದೇ ಈ ಚಿತ್ರದ ತಾಕತ್ತು ಅಂತ ನನ್ನ ಅನಿಸಿಕೆ. ಅದರಲ್ಲಿ ಕೆಲವು ಹೀಗಿದೆ.
a) ಮಾನವ ಸಂಭಂಧಗಳು – ಅದು ತಂದೆ-ಮಗಳು, ತಾಯಿ-ಮಗಳು, ಮಗು-ಮನೆ ಸೇವಕ, ಸ್ನೇಹ, ಒಡಯ -ಸೇವಕ, ಪ್ರೇಮ ಆಗಿರಬಹುದು
b) ಮಾನವೀಯತೆ/ಅಮಾನವೀಯತೆ – ಕನಸು ಬಿಕ್ಷುಕನ್ನ ಮನೆಗೆ ಕರೆತರುವುದು, ಬಿಕ್ಶುಕಿಯನ್ನು ಅಬಲಾಶ್ರಮಕ್ಕೆ ಕರೆದೊಯ್ಯುವಾಗ ಅಲ್ಲಿರುವ ಜನರ ಒಂದು ಪ್ರತಿಕ್ರಿಯೆ
c) ಗುಂಪು ಗಲಭೆ ಹಾಗು ಅದರ ಪರಿಣಾಮಗಳು
d) ವ್ಯಕ್ತಿಯ ಒಂದು ವಿಕಾಸದ ಪ್ರಕ್ರಿಯೆ – ರಾಜ್ ಉತ್ತಪ್ಪನಲ್ಲಿ ಹಾಗು ಕನಸುವಿನಲ್ಲಿ ನಾವು ಕಾಣುವ ಬದಲಾವಣೆಗಳು
e) ಮನುಷ್ಯನ ಶಕ್ತಿ ಹಾಗು ಅವರ ದೌರ್ಬಲ್ಯ
f) ಪ್ರಸ್ತುತ ಸಮಸ್ಯೆಗಳು – ಅದು ಶಿಕ್ಷಣ ಆಗಿರಬಹುದು, ಮಕ್ಕಳ ದತ್ತು ಆಗಿರಬಹುದು
ಈ ಚಿತ್ರವನ್ನು ಬರೀ ತಂದೆ – ಮಗಳ ಭಾಂಧವ್ಯದ ಚಿತ್ರವೆಂದರೆ ತಪ್ಪಾದೀತು. ಅಮೋಘವಾದ ಛಾಯಾಗ್ರಹಣ, ಸಂಗೀತ – ಹಂಸಲೇಖ at his best after a long time,
ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದಂತಹ ಪ್ರಕಾಶ್ ರೈ, ಅಚ್ಯುತ್ ಕುಮಾರ್ ಹಾಗು ಸಿತಾರ ಇದೆಲ್ಲವನ್ನು ತುಂಬಿಕೊಂಡ ಚಿತ್ರ ನಮ್ಮನ್ನು ಕನ್ನಡದ Golden Age ನಲ್ಲಿದ್ದ ಪುಟ್ಟಣ್ಣ – ಸಿದ್ದಲಿಂಗಯ್ಯ – ದೊರೆಭಾಗ್ವಾನ್ – ಅವುರಗಳನ್ನು ನೆನಪಿಸುತ್ತೆ.