ಚೇತನಾ ತೀರ್ಥಹಳ್ಳಿಯವರು ಬರೆದ ಟಿಬೆಟನ್ ಚಿತ್ರದ ಕುರಿತ ಬರಹವಿದು.

What is more important? To satisfy one thousand desires, or to conquer just one?”

“………. There are things we must unlearn inorder to learn………. There are things we must own to renounce them”

ತಾಶಿ ಎಂಬ ಶಿಷ್ಯ ವಾದ ಹೂಡುತ್ತಾನೆ. ಹೀಗೆ ತ್ಯಜಿಸಬೇಕಾದ ವಸ್ತುಗಳನ್ನ ಗಳಸಿಕೊಳ್ಳಲೆಂದೇ ‘ಬುದ್ಧ ವಿಹಾರ’ ಬಿಟ್ಟು ಹೊರಡ್ತಾನೆ.

ಕಾಲಕ್ಕೆ ಸದಾ ಓಡುವ ಕಾಲು.

ಎಷ್ಟು ಬೇಗ ಪ್ರಣಯದಾಟ, ಒದೆತ, ಮದುವೆ, ಮಗು, ವ್ಯಾಪಾರ, ವಿದ್ರೋಹ, ಹೊಡೆದಾಟಗಳು ಮುಗಿದುಹೋದವು?

ಇತ್ತ ಬುದ್ಧವಿಹಾರದಲ್ಲೂ ನಡೆದಿದ್ದಾಆನೆ ಕಾಲ. ಮುಖ್ಯಸ್ಥ ಆಪೋ ನಿರ್ವಾಣ ಪಡೆಯುತ್ತಾನೆ. ಸಮಾಧಿಗೇರುವ ಮುನ್ನ ಮತ್ತೊಬ್ಬ ಶಿಷ್ಯನ ಕೈಲಿ ತಾಶಿಗಾಗಿ ಪತ್ರ ಕೊಡುತ್ತಾನೆ. ಈ ಪತ್ರ, ಕಾಮದ ಹಸಿವನ್ನೆ ಉಣ್ಣುತ್ತ, ಸಂಸಾರದ ನಿಭಾವಣೆಯಲ್ಲಿ ಹೈರಾಣಾಗುತ್ತ ಗೊಂದಲಗೊಳ್ಳುತ್ತಿದ್ದ ತಾಶಿಯನ್ನ ಕೇಳುತ್ತೆ- ” What is more important? To satisfy one thousand desires, or to conquer just one?”

~

ಸನ್ಯಾಸ ವಸ್ತ್ರ ಬಿಚ್ಚಿ, ಬೋಳುತಲೆಯಲ್ಲಿ ಕೂದಲು ಬೆಳೆಸಿ, ಸಂಸಾರಿಗರ ಬಟ್ಟೆ ತೊಟ್ಟು ಹೆಂಡತಿಯನ್ನ ಕಟ್ಟಿಕೊಂಡಿರುತ್ತಾನೆ ಲಾಮಾ ಆಗಿದ್ದ ತಾಶಿ.

ಇದೀಗ ಸಂಸಾರಿಗರ ಬಟ್ಟೆ ಕಳಚುತ್ತಿದಾನೆ, ಅದೇ ಕೊಳದಲ್ಲಿ ಮೀಯುತ್ತಿದಾನೆ. ತಲೆ ಬೋಳಿಸಿಕೊಂಡು ಸನ್ಯಾಸಿಯಾದೆಂದುಕೊಳ್ಳುತಿದಾನೆ. ಅವನು ಮುಖ ನೋಡಿಕೊಳ್ತಿರುವ ಕನ್ನಡಿ ಒಡೆದಿದೆ. ಅದರ ಸಂಕೇತವೇನಿರಬಹುದು? ಹೇಳಿ ವಾಚ್ಯವಾಗಿಸಬಾರದಲ್ಲವ?

~

ನಡು ರಾತ್ರಿಯಲ್ಲಿ ಮಗನ ತಲೆ ನೇವರಿಸಿ, ಮನೆಬಿಟ್ಟು ಸಿದ್ಧಾರ್ಥನಂತೆ ಹೊರಟಿರುತ್ತಾನೆ ತಾಶಿ. ಆದರೆ ಪೇಮಾ ಯಶೋಧರೆಯಂತಲ್ಲ. ಕುದುರೆಯೇರಿ ಅವನೆದುರು ಬಂದೇ ಬರುತ್ತಾಳೆ. ಶತಮಾನಗಳ ಕಾಲದಿಂದ ಎಲ್ಲ ಸ್ತ್ರೀಸಂವೇದನೆಯ ಮನಸುಗಳು ಕೇಳಿದ ‘ಯಶೋಧರೆಯ ಪ್ರಶ್ನೆ’ಗಳನ್ನ ಕೇಳ್ತಾಳೆ.

ಬುದ್ಧನ ಹಾಗಲ್ಲ ತಾಶಿ. (ಬುದ್ಧನಾಗಿ ಅರಗಿಸಿಕೊಳ್ಳುವ ತಾಖತ್ತಿದ್ದರೆ ಮನೆ ಬಿಟ್ಟು ಹೋಗುವ ಎಲ್ಲ ಗಂಡಸರನ್ನೂ ಮಾಫ್ ಮಾಡಿಬಿಡಬಹುದಿತ್ತೇನೋ!?). ಅಂವ ಕಣ್ಣೀರಿಡ್ತಾನೆ. ನಾನೆಲ್ಲಿಗೆ ಸೇರಿದೇನೋ ಅಲ್ಲಿಗೇ ಬರ್ತೇನೆ, ನಿನ್ನ ಜತೆ ಬರ್ತೇನೆ ಅನ್ನುತಾನೆ. ಆದರೆ ಪೇಮಾ? ‘ಸುಖಪ್ರಯಾಣ’ದ ಗಂಟನ್ನ ಅವನ ಮಡಿಲಿಗೆ ಹಾಕಿ ಹೊರಟುಹೋಗ್ತಾಳೆ.(ನನಗೆ ಸಖತ್ ಖುಷಿಯಾಗಿದ್ದು ಇವಾಗ್ಲೇ! ಅವನ ಬಗ್ಗೆ ಪಾಪ ಅನಿಸ್ತಾದ್ರೂ, ಅದು ಅನುಕಂಪ ಮಾತ್ರ. ಪೇಮಾಳ ಉತ್ತರ ಎಂಥ ದೊಡ್ಡ ಸಂದೇಶ!). ಸರಿ, ಇಂವ ಬಿಕ್ಕಿ ಬಿಕ್ಕಿ ಬಿಕ್ಕಿ…

~

ಸುಮಾರು ವರ್ಷಗಳ ಕೆಳಗೆ… ತಾಶಿ ಮೂರು ವರ್ಷ-ಮೂರು ತಿಂಗಳು-ಮೂರು ವಾರ-ಮೂರು ದಿನ ತಪಸ್ಸು ಮಾಡಿದ ನಂತರ ಬುದ್ಧ ವಿಹಾರಕ್ಕೆ ಒಯ್ಯಲ್ಪಡುತ್ತಿರ್ತಾನಲ್ಲ, ಆಗ ವಿಹಾರದ ಬಳಿಯ ಒಂದು ಬಂಡೆಗಲ್ಲಿನ ಮೇಲೆ ಓದಿರ್ತಾನೆ- “How can one prevent a drop of water from drying up?”

ಈಗ ಉತ್ತರ ಹುಡುಕುವ ಕಾಲ ಸನ್ನಿಹಿತ. ಪ್ರಶ್ನೆಯ ಬೆನ್ನಲ್ಲೆ ಉತ್ತರವಿದೆ. ಅಂದರೆ, ಬಂಡೆಗಲ್ಲಿನ ಹಿಂಭಾಗದಲ್ಲಿ… “By throwing it in to the sea”!

ತಾಶಿಗೆ ಅರ್ಥವಾಯ್ತಾ?

ನಮಗೆ?

ಇಲ್ಲಿ ಎರಡು ಅರ್ಥಗಳಿರಬಹುದು. “ಸಂಸಾರ ಸಾಗರದಲ್ಲಿ ಒಂದಾಗಿಹೋಗುವುದು” ಅಂತಲೂ, “ಪರಮಾರ್ಥದಲ್ಲಿ ಒಂದಾಗುವುದು (ಮೋಕ್ಷ))” ಅಂತಲೂ…

ಕೊನೆಯ ಬಗ್ಗೆ ನಮಗೆ ಸಿಗುವ ಹಿಂಟ್- ಮಾಗಿದ ಎಲೆಗಳ ಮರ (ಇದು ಚಿತ್ರದುದ್ದಕ್ಕೂ ವಿವಿಧ ಋತುಗಳನ್ನು ಸಂಕೇತಿಸುತ್ತ, ಪೂರಕ ಅರ್ಥಗಳನ್ನು ಕೊಡುತ್ತ ನಮಗೆ ಬಹಳ ಕಡೆ ಎದುರಾಗುತ್ತದೆ), ಮತ್ತು ಅವನು ಪ್ರವೇಶಿಸುವ ಮಾಗಿದ ಹಳದಿ ಎಲೆಗಳ ಕಾಡು. ಇದನ್ನು ನಾವು ತಾಶಿಯ ಮಾಗುವಿಕೆಯಾಗೂ ಅರ್ಥೈಸಿಕೊಳ್ಳಬಹುದು ಬೇಕಿದ್ದರೆ.

ಹಾ… ಸಿನೆಮಾದ ಶುರುವಲ್ಲಿ ಹದ್ದೊಂದು ಕುರಿಯ ತಲೆಮೇಲೆ ಕಲ್ಲು ಹೊತ್ತಾಕಿ ಜೀವ ತೆಗೆಯುವ ದೃಶ್ಯವಿದೆ. ತಾಶಿ ಬಂಡೆಗಲ್ಲಿನ ಬರಹವನ್ನೋದಿ ತಲೆ ಎತ್ತಿದಾಗ ಅದೇ ಹದ್ದು ಚಕ್ರಚಕ್ರ ತಿರುಗುತ್ತ ಹಾರಾಡುತ್ತ, ನಮ್ಮಿಂದ ಕಲ್ಲು ಬೀಳುವುದನ್ನೆ ಕಾಯುವ ಹಾಗೆ ಮಾಡುತ್ತದೆ.

but, sorry… ಅಲ್ಲಿಗೆ ಸಿನೆಮಾ ಮುಗಿಯುತ್ತದೆ!

ಒಂದು ನೀತಿ ಕಥೆಯ ಹಾಗೆ ನೋಡಿ ನಮ್ಮ ಕೆಲಸ ಮುಂದುವರೆಸ್ಕೊಂಡು ಹೋಗಬೇಕಾದಂಥದಲ್ಲವಾ ಇದು? ಅಂದರೆ, ಸೀರಿಯಸ್ಸಾಗಿ ತೊಗೊಳ್ದೆ ನಮ್ಮ ಸಂಸಾರ, ಗೊಂದಲ, ಗೋಜಲು, ಸುಖ- ಸಂತೋಷ….?

~

ಕಣ್ಣಗಲಿಸಿ ಹೀರುವಂಥ ಛಾಯಾಗ್ರಹಣ, ಚೆಂದಚೆಂದದ ಲ್ಯಾಂಡ್‌ಸ್ಕೇಪುಗಳು, ಮುದ್ದು ಮುದ್ದಾದ ತಾಶಿ-ಪೇಮಾ, ಕೂಲ್ ಆಗಿ ನೋಡಿಸಿಕೊಂಡು ಹೋಗುವ ಎರಡು ಗಂಟೆಯ ಸಿನೆಮಾ- ಅದು SAMSARA.

ಈ ಸಿನೆಮಾ ಒಟ್ಟು 30 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದಿದೆ. ಪೂರ್ವ ಪಶ್ಚಿಮವೆನ್ನದೆ ಎಲ್ಲ ಚಿತ್ರಪ್ರೇಮಿಗಳು ಇದನ್ನ ಮೆಚ್ಚಿಕೊಂಡಿದಾರೆ. ಬೇರೆ ಬೇರೆ ದೇಶಗಳ ಮಂದಿ ಒಂದು ತಂಡವಾಗಿ ಈ ಸಿನೆಮಾ ಮಾಡಿದಾರನ್ನೋದು ಇದರ ಖಾಸಿಯತ್ತುಗಳಲ್ಲೊಂದು.

2001ರ ಈ ಸಿನೆಮಾದ ಭಾಷೆ- ಟಿಬೆಟನ್ / ಲಡಾಖಿ

ನಿರ್ದೇಶಕ- ಪಾನ್ ನಲಿನ್

ಮುಖ್ಯ ಪಾತ್ರದಲ್ಲಿ- ಶಾನ್ ಕು (ತಾಶಿ), ಕ್ರಿಸ್ಟೀ ಚಂಗ್ (ಪೇಮಾ), ನೀಲೇಶಾ ಬಾವೋರಾ (ಸುಜಾತಾ)

~

ಈ SAMSARA ನನ್ನ ಯಾವ ಪರಿ ಹೊಕ್ಕುಕುಂತಿದೆ ಅನ್ನೋದು ಈ ಅಸ್ತವ್ಯಸ್ತ ಬರಹ ನೋಡಿದರೆ ಗೊತ್ತಾಗಬಹುದು. ಯಾವುದಕ್ಕೂ ಇದು, ನೀವು ಕೂಡ ಒಮ್ಮೆ ನೋಡಲೇಬೇಕಾದ ಸಿನೆಮಾ ಅನ್ನೋದು ನನ್ನ ಶಿಫಾರಸು.