ಅರ್ಚನಾ ಹೆಬ್ಬಾರ್ ತಮ್ಮ ಬ್ಲಾಗ್ ನಲ್ಲಿ ಬರೆದ ಈ ಲೇಖನ ಇಂದಿನ ಕನ್ನಡ ಚಿತ್ರರಂಗದ ಕುರಿತಾದದ್ದೇ. ಸಾಕಷ್ಟು ಚರ್ಚೆಗೆ ಯೋಗ್ಯವಾಗುವಂಥ ಸಂಗತಿಗಳನ್ನೇ ಇಲ್ಲಿ ಉಲ್ಲೇಖಿಸಿದ್ದಾರೆ. ಚಲನಚಿತ್ರಗಳ ಗೀತ ಸಾಹಿತ್ಯದಿಂದ ಹಿಡಿದು ಕಥಾವಸ್ತು ವರೆಗಿನ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಇಲ್ಲಿ ಪ್ರಕಟಿಸಲಾಗಿದೆ. ಇದಕ್ಕೆ ಅಭಿಪ್ರಾಯಿಸುವ ಮೂಲಕ ಸಂವಾದವನ್ನು ಮುಂದುವರಿಸಬಹುದು.
ಕನ್ನಡ ಚಲನಚಿತ್ರ ಸಂಗೀತ ಕೇಳುವ ಸೌಭಾಗ್ಯ ಒದಗಿ ಬರುವುದು ನಾನು ಆಫೀಸ್ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಮಾತ್ರ. ದಿನ ನಿತ್ಯವೂ ಅನುಭವಿಸುವ ಈ ಮಾನಸಿಕ ತುಮುಲವನ್ನು ಹೊರಗೆಡಹಲು ಒಂದು ಸಣ್ಣ ಪ್ರಯತ್ನ ಈ ಲೇಖನ .
ಕೆಲವು ದಿನಗಳ ಹಿಂದಿನ ಮಾತು.ಆಫೀಸಿನಿಂದ ಮನೆಗೆ ಬರುತ್ತಿರುವಾಗ ‘ಮಾನಸ ಸರೋವರ’ ಎಂಬ ಹಳೆಯ ಹಾಡು ಪ್ರಸಾರವಾಯಿತು.ಮೂರು ನಿಮಿಷ ಅದೆಂತಹ ಮಾನಸಿಕ ಸೌಖ್ಯವನ್ನು ಆ ಹಾಡು ಒದಗಿಸಿತು ಎಂಬುವುದು ಬಣ್ಣಿಸಲಸದಳ.ಆ ಮೂರು ನಿಮಿಷಗಳು ಮುಗಿಯುತ್ತಿದ್ದಂತೆ ಆರ್. ಜೆ. ತನ್ನ ಅರಚಾಟ ಶುರು ಮಾಡಿದ. ನಾನಿನ್ನೂ ಮಾನಸ ಸರೋವರದ ಗುಂಗಿನಲ್ಲಿದ್ದೆ.ಇನ್ನು ಮುಂದಿನ ಹಾಡಿನ ಸರದಿ. ಚಿಂದಿ ಉಡಾಯಿಸಿ,ಮಸ್ತ್ ಮಜಾ ಮಾಡಿ ಎಂದೆಲ್ಲಾ ಹರಕು ಕನ್ನಡವನ್ನು ಆಂಗ್ಲ ಭಾಷೆಯ ಮಾದರಿಯಲ್ಲಿ ಒಟಗುಟ್ಟಿ ಹಿಂಸಿಸಿದ.
ಐತಲಕಡಿ(ಇದರ ಅರ್ಥ ನನಗೆ ತಿಳಿದಿಲ್ಲ )…ಅಂತ ಶುರುವಾಯಿತು. ಜಲಜಾಕ್ಷಿ, ಮೀನಾಕ್ಷಿ ಅಂತೆಲ್ಲಾ ಆದ ಮೇಲೆ ನನಗೆ ಅರ್ಥವಾದ ಹಾಡು ಇದು.
ಐತಲಕಡಿ ಬಾರೆ
ಲಕ್ಕ ಆಗುಮ
ಪಾಠ ಓದ್ಕುಮ
ಊಟ ಹಾಕುಮ
ಕಟ್ಟಿಕೊ
ಯಮ ಯಮ ಮುದ ಚುಮ
ಕರ್ನಾಟಕದಲ್ಲೇ ಹುಟ್ಟಿ ಬೆಳೆದು, ಕನ್ನಡ ಮಾಧ್ಯಮದಲ್ಲೆ ಶಿಕ್ಷಣ ಪಡೆದ ನನಗೆ ಈ ಹಾಡು ಅರ್ಥವಾಗಿಲ್ಲ. ಬಹುಶ: ನನ್ನ ಕನ್ನಡ ಭಾಷೆಯ ಅಲ್ಪ ಜ್ಞಾನವೇ ಇದಕ್ಕೆ ಕಾರಣವಿರಬೇಕು.
ಅಂತೂ ಸುಮಾರು ಐದು ನಿಮಿಷಗಳತನಕ ಈ ಹಾಡನ್ನು ಸಹಿಸಿಕೊಂಡೆ.
ಯಾಕೆ ಹೊಗಳ್ತೀಯ
ಹೈಟು ಜಾಸ್ತಿ ಮಾಡ್ತೀಯ
ಅಂತ ಏನೇನೋ ಅದ್ಭುತ ಸಂಗೀತದೊಂದಿಗೆ ಈ ಹಾಡು ಮುಗಿಯಿತು.
ನಾನು ಚಿಂತಿಸತೊಡಗಿದೆ.ವರ್ಷದಲ್ಲಿ ಬರುವ ಸುಮಾರು 500-600 ಕನ್ನಡ ಚಲನಚಿತ್ರಗೀತೆಗಳಲ್ಲಿ ಸುಂದರ, ಮಧುರ, ಮತ್ತೆ ಕೇಳಬಲ್ಲ ಹಾಡುಗಳ ಸಂಖ್ಯೆ ಎಷ್ಟು ಬೇಗನೆ ಕ್ಷೀಣವಾಗುತ್ತಿವೆ ? ಯಾಕೆ?
ಇದೀಗ ಮುಂದಿನ ಹಾಡಿನ ಸರದಿ.
ಕಮ್ ಓನ್ ಐ ಸೇ …ಕಮ್ ಓನ್ ಐ ಸೇ ..
ಅಂತ ಶುರುವಾಯಿತು. ಕೆಹರವಾ ತಾಳ ಡೋಲಿನ ಮೇಲೆ ಬೊಬ್ಬಿಡುತ್ತಿತ್ತು.ಹಾಡಿನ ಮುಂದಿನ ಸಾಲುಗಳನ್ನು ಏನೆಂದು ಬರೆಯಲಿ? ನನಗೆ ಅರ್ಥವಾದದ್ದಿಷ್ಟು.
ಸೇಜ ಸೇಜ ಬಾರೆ
ಮವ್ವೆ ಮವ್ವೆ ಬಾರೆ
ಅಲೆ ಕೆಂಚಿ ತಾರೆ ಅರದೋ..
ಬಾರೆ ಎನ್ನುವ ಪದಗಳನ್ನು ಹೊರತುಪಡಿಸಿ ನನಗೆ ಬೇರೆ ಯಾವ ಪದಗಳು ಅರ್ಥವಾಗಿಲ್ಲ. ಬಲ್ಲವರು ವಿವರಿಸಬೇಕು. ಎಫ್.ಎಂ. ಆರಿಸಲು ಕಾರಿನ ಚಾಲಕನಿಗೆ ವಿನಂತಿಸಿಕೊಂಡೆ. ಆದರೆ ಕೆಲವರು ಇಂತಹ ಸಂಗೀತವನ್ನು ಆಸ್ವಾದಿಸಿ ಆನಂದಿಸುತ್ತಿದ್ದುದರಿಂದ ನನ್ನ ವಿನಂತಿ ಈಡೇರಲಿಲ್ಲ.
ಆರ್. ಜೆ. ಮತ್ತೆ ತನ್ನ ಆಂಗ್ಲ ಮಿಶ್ರಿತ ಸುಸಂಸ್ಕೃತ ಕನ್ನಡದಲ್ಲಿ ಚಮ್ಕಾಯಿಸಿ, ಚಿಂದಿ ಉಡಾಯಿಸಿ ಎಂದು ಅರಚಿದ. ಪಾರೋ ಪಾರೋ ಅಂತ ಇನ್ನೊಂದು ಹಾಡು ಶುರುವಾಯಿತು.ಅದರ ಸಾಲುಗಳು ಹೀಗಿದ್ದವು.
ಲೇಟಾಗಿ ಬರುವುದಿಲ್ಲ..
ಸೋರಿ ಕೇಳುವುದಿಲ್ಲ..
ಆಸಿಡ್ ಹಾಕುವುದಿಲ್ಲ.
ಇನ್ನೇನೋ ಬರೆಯಬೇಕಾದ ನೆನಪಿಸಿ ಇಟ್ಟುಕೊಳ್ಳಬೇಕಾದ ಸಾಹಿತ್ಯವೇನೂ ಅಲ್ಲ. ಏಳು ಜ್ಞಾನಪೀಠ ಪ್ರಶಸ್ತಿ ಸಂದಿರುವ ಕನ್ನಡ ಭಾಷೆ ಇದೇನಾ ಎನ್ನುವ ಸಂದೇಹ ಒಂದು ಕ್ಷಣ ಮನಸ್ಸಿನಲ್ಲಿ ಸುಳಿಯಿತು.
ಕನ್ನಡ ಹಾಡುಗಳ ಗುಣಮಟ್ಟ ಕಡಿಮೆಯಾಗಿದೆ ಎಂಬುವುದರಲ್ಲಿ ಸಂದೇಹವಿಲ್ಲ. ಆತಂಕದ ವಿಚಾರವೆಂದರೆ ಈಗಿನ ಚಿತ್ರ ಸಂಗೀತದ ಹಾಡುಗಳಲ್ಲಿ ಅರ್ಥವಿಲ್ಲ. ಅರ್ಥವಿದ್ದರೂ ಆಳವಿಲ್ಲ. ಆದರೂ ಇಂತಹ ಹಾಡುಗಳೇ ಬಹುಜನರಿಗೆ ಮೆಚ್ಚುಗೆಯಾಗುತ್ತಿವೆ.
ಹೊಡಿ ಮಗ, ಹಳೆ ಪಾತ್ರೆ,ಚಿತ್ರಾನ್ನ, ಜಿಂಕೆ ಮರಿ ಮುಂತಾದ ಕಳಪೆ ಗುಣಮಟ್ಟದ ಹಾಡುಗಳನ್ನು ನಾವಿಂದು ತುಂಬು ಹೃದಯದಿಂದ ಆನಂದಿಸುತ್ತಿದ್ದೇವೆ. ಇತ್ತೀಚೆಗೆ ಮಕ್ಕಳಲ್ಲೂ ಈ ನಾಲ್ಕೂ ಹಾಡುಗಳು ಅತ್ಯಂತ ಪ್ರಿಯವಾಗಿವೆ ಎಂಬುದು ಖೇದದ ವಿಷಯ. ಈ ಅವನತಿಗೆ ಚಿಂತನೆಯಾಗಬೇಕಾಗಿದೆ. ಇದರ ಸಂಭಾವ್ಯ ಕಾರಣಗಳನ್ನು ಅವಲೋಕಿಸಿದಾಗ ಕೆಳಗೆ ಸೂಚಿಸಿದ ಕೆಲವು ಅಂಶಗಳು ಸ್ವಷ್ಟವಾಗುತ್ತವೆ.
1) ಕನ್ನಡ ಭಾಷೆಯ ಪಾಶ್ಚಾತ್ಯೀಕರಣ :ಇಂದು ಕನ್ನಡ ಹಾಡುಗಳನ್ನು ಆಂಗ್ಲ ಭಾಷೆಯ ಶೈಲಿಯಲ್ಲಿ ಹಾಡುವುದು ರೂಢಿಯಾಗುತ್ತಿದೆ.ಹೀಗೆ ಆಂಗ್ಲದನಿಯ ಕನ್ನಡ ನನ್ನ ಮನಸ್ಸಿನಲ್ಲಿ ಒಂದು ವಿಧವಾದ ಉದ್ವೇಗವನ್ನು ಮೂಡಿಸುತ್ತದೆ.
ಉದಾ: ’ನಮ್ದೇ ಈ ಲೋಕ’ ಎಂಬ ಹಾಡಿನ ವಿಚಿತ್ರವಾದ ಆಂಗ್ಲ ರೀತಿಯ ಉಚ್ಚಾರಣೆ ಮನಸ್ಸಿನಲ್ಲಿ ರೋಷ ಉಕ್ಕಿಸುತ್ತದೆ.
2)ಹಾಡುಬರೆಯುವವರನ್ನು ಕಾಡುವ ಕನ್ನಡ ಶಬ್ದಗಳ ಕೊರತೆ:ಅನ್ಯ ಭಾಷೆಯ ಶಬ್ದಗಳ ಬಾಹುಳ್ಯ ಇತ್ತೀಚಿನ ಚಲನ ಚಿತ್ರ ಹಾಡುಗಳಲ್ಲಿ ಗೋಚರಿಸುತ್ತಿದೆ.ವಿಚಿತ್ರ ಕನ್ನಡ ಪದಗಳ ಬಳಕೆಯೂ ಹೆಚ್ಚುತ್ತಿದೆ. ಕಿಚಾಯಿಸು, ಚಮಕಾಯಿಸು ಮುಂತಾದ ಅಧಿಕವಾಗಿ ಪ್ರಯೋಗಗೊಂಡು ಭಾಷೆಯನ್ನು ಶ್ರೀಮಂತಗೊಳಿಸುವ ಬದಲು ಗಲಾಟೆಯ ವಾತಾವರಣವನ್ನು ಸೃಷ್ಟಿಸುತ್ತವೆ.
ಮಿಶ್ರ ಭಾಷಾ ಹಾಡಿಗೆ ಒಂದು ಉದಾಹರಣೆ :
ಸ್ಟ್ರಾಬೆರಿ ಕೆನ್ನೆಯವಳೇ
ಕ್ಯಾಡ್ಬರೀ ಹುಡುಗನೇ…
ಇತ್ತೀಚಿನ ಸಂದರ್ಶನವೊಂದರಲ್ಲಿ ಜಯಂತ ಕಾಯ್ಕಿಣಿಯವರು ತಮ್ಮ ಒಂದು ಚಿತ್ರಗೀತೆಯ ಸನ್ನಿವೇಶವನ್ನು ವಿವರಿಸುತ್ತಾ..”ಅಸು ನೀಗಿತು” ಎಂಬ ಪದದ ಬಳಕೆ ಎಲ್ಲರಿಗೂ ಆಶ್ಚರ್ಯವನ್ನು ಉಂಟುಮಾಡಿತು ಎಂದು ವಿವರಿಸಿದರು. ’ಅಸು ನೀಗಿತು’ ಎಂಬ ಸರಳ ಕನ್ನಡ ಪದವು ಇತ್ತೀಚೆಗಿನ ಜನಾಂಗದಲ್ಲಿ ಆಶ್ಚರ್ಯವನ್ನು ಉಂಟು ಮಾಡಬೇಕಾದರೆ ಕನ್ನಡದ ತಿಳುವಳಿಕೆ ಎಷ್ಟರಮಟ್ಟಿಗೆ ಕಡಿಮೆಯಾಗಿದೆ ಎಂಬ ಕಳವಳದ ಅಂಶವು ಬೆಳಕಿಗೆ ಬರುತ್ತದೆ.
3)ಕಥಾವಸ್ತುವಿನ ಕೊರತೆ :ಇತ್ತೀಚೆಗೆ ಹೊರಬರುತ್ತಿರುವ 99 % ಕನ್ನಡ ಚಲನಚಿತ್ರಗಳು ಕುಟುಂಬ ಸಮೇತರಾಗಿ ನೋಡಲು ಅರ್ಹವಲ್ಲ.ಕಾರಣಗಳು ಹಲವಾರು.
ಅ)ಮುಖ್ಯವಾಗಿ ಚಿತ್ರದ ಹೆಸರು ಲೂಸ್ ಮಾದ , ಮೆಂಟಲ್ ಮಂಜ, ಸ್ಲಮ್ ಬಾಲ ಮುಂತಾದ ವಿಚಿತ್ರ ಹೆಸರುಗಳು
ಆ)ಮುಜುಗರವಾಗುವ ದೃಶ್ಯಗಳ ಭರಾಟೆ.
ಇ)ಅಸಹಜತೆ :ಸನ್ನಿವೇಶಗಳ ಅಸಹಜತೆ ,ಪಾತ್ರಗಳ ಅಸಹಜತೆ ,ಕಥಾ ಹಂದರದ ಅಸಹಜತೆ,ನಟನೆಯ ಅಸಹಜತೆ.
ಎರಡು ಪ್ರಮುಖ ವಿಷಯಗಳು ಇಂದಿನ ಕನ್ನಡ ಚಲನ ಚಿತ್ರಗಳ ಮೂಲ ಕಥಾವಸ್ತುವಾಗಿ ವಿಜೃಂಭಿಸುತ್ತವೆ.
ಅ)ರಾಜಕೀಯ ಪುಢಾರಿಗಳ ದೌರ್ಜನ್ಯದ ವಿರುದ್ಧ ನಾಯಕನ ಬಂಡಾಯ
ಆ)ಪರಿಸ್ಥಿತಿಯಿಂದ ಬೇಸತ್ತ ಹತಾಶೆಗೊಳಗಾದ ನಾಯಕ ತಪ್ಪು ದಾರಿ ಹಿಡಿದು ರೌಡಿಯಾಗುವ ಕಥೆ.
ಈ ಎರಡು ಕಥಾ ಸುರುಳಿಗಳಲ್ಲಿ ಅವಕಾಶವಿರುವುದು ಹೊಡಿಮಗ , ಬಾರೆ ಮವ್ವೆ ಬಾರೆ ಮುಂತಾದ ಹಾಡುಗಳಿಗೇ ವಿನಹ ಮಾನಸ ಸರೋವರ,’ಸಾಗಲಿ ತೇಲು ತರಂಗದೊಳು..’ ದಂತಹ ಹಾಡುಗಳಿಗಲ್ಲ ಎಂಬುದು ಹಲವು ಚಿತ್ರರಂಗದವರ ಅಂಬೋಣ.ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆ.
ಮೇಲೆ ವ್ಯಕ್ತಪಡಿಸಿರುವ ಅಭಿಪ್ರಾಯವೇ ಇವತ್ತಿನ ಕಳಪೆ ಸಂಗೀತ,ಸಾಹಿತ್ಯದ ಬುನಾದಿ.
ಈ)ಚಿತ್ರರಂಗವು ಕಲಾಮಾಧ್ಯಮದ ಬದಲಾಗಿ ಮಾರುಕಟ್ಟೆಯ ಸರಕಾಗಿ ಮಾರ್ಪಾಡಾಗಿದೆ.ಕಥಾ ವಸ್ತುವಿನ ಕೊರತೆ ಕನ್ನಡ ಸಾಹಿತ್ಯಲೋಕದಲ್ಲಂತೂ ಎಳ್ಳಷ್ಟೂ ಇಲ್ಲ .ಇತ್ತೀಚೆಗಿನ ಯುವ ಲೇಖಕರೂ,ಕವಿಗಳೂ ಬರೆದಿರುವ ಕಥೆ ಮತ್ತು ಕವನ ಸಂಕಲನಗಳೇ ಇವಕ್ಕೆ ಸಾಕ್ಷಿ. ಆದರೆ ಚಿತ್ರರಂಗವು ಅವುಗಳ ಸಮರ್ಪಕ ಬಳಕೆಯನ್ನು ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಮೂಲ ಕಥಾ ವಸ್ತುವಿನ ಚಿಂತನೆ ನಡೆಸುವ ಸೈರಣೆ ಚಿತ್ರರಂಗದ ಹೆಚ್ಚಿನವರಲ್ಲಿ ಉಳಿದಿಲ್ಲ.
ಯಾವತ್ತಿನ ವರೆಗೆ ಕನ್ನಡ ಜನತೆ ಕಳಪೆ ಗುಣಮಟ್ಟದ ಚಿತ್ರಗಳನ್ನು ಮತ್ತು ಹಾಡುಗಳನ್ನು ಬಹಿಷ್ಕರಿಸುವುದಿಲ್ಲವೋ ,ಯಾವತ್ತಿನ ವರೆಗೆ ಕನ್ನಡ ಚಲನ ಚಿತ್ರದ ಸೆನ್ಸಾರ್ ಮಂಡಳಿಯು ಇಂತಹ ಅರ್ಥಹೀನ,ಕೀಳು ಅಭಿರುಚಿಯ ಚಲನಚಿತ್ರಗಳಿಗೆ ಕತ್ತರಿಹಾಕುವುದಿಲ್ಲವೋ ಅಲ್ಲಿಯ ತನಕ ಇದನ್ನೆಲ್ಲಾ ಸಹಿಸಿಕೊಳ್ಳಬೇಕಾದ ದೌರ್ಭಾಗ್ಯ ನಮ್ಮದು.
ತಾವು ಅಂದಿದ್ದು ನಿಜ, ನಶಿಸುವುದಕ್ಕೆ ಬಿಡಬಾರದು ಅಲ್ಲವೇ?
’ ಅಸುನೀಗೀತು ’ ಅಂದ್ರೆ ಬೆಂಗಳೂರಿನ ಪಡ್ಡೆಗಳಿಗೆ ಖಂಡಿತ ಅರ್ಥ ಆಗಲ್ಲ.
ನೆಗೆದು ಬಿದ್ದು ಹೋಯ್ತು ಅನ್ಬೇಕು!
ದುಡ್ಡಿದ್ದವರತ್ರ ಬುದ್ಧಿವ೦ತಿಕೆ ಇಲ್ಲ. ಬುದ್ಧಿ ಇದ್ದವರ ಹತ್ತಿರ ದುಡ್ದಿಲ್ಲ. ಎಲ್ಲವೂ ರಿಯಲ್ ಎಸ್ಟೇಟ್ ರಾಕ್ಷಸನ ಮಹಿಮೆ.
ಐತಲಕ್ಕಡಿ ಹಾಡು ಮಂಡ್ಯ ಭಾಷೆಯಲ್ಲಿದೆ. ನೀವು ಅರ್ಥ ಮಾಡಿಕೊಂಡಿದ್ದು ತಪ್ಪಾಗಿದೆ. ಕನ್ನಡ ಮೀಡಿಯಂ ಆದ ಮಾತ್ರಕ್ಕೆ ಇಡೀ ಕನ್ನಡ ಭಾಷೆಯನ್ನು ಅರೆದು ಕುಡಿದಂತಲ್ಲ. ಬೇರೆ ಬೇರೆ ಪ್ರದೇಶದಲ್ಲಿ ಕನ್ನಡ ನುಡಿ ಬೇರೆ ಬೇರೆ ರೀತಿ ಇರುತ್ತದೆ.
ಮಂಡ್ಯದಲ್ಲಿ ಹುಟ್ಟಿ ಬೆಳೆದು ಅಥವಾ ಅಲ್ಲಿನ ಭಾಷೆ ಮಾತಾಡಿ ಕೇಳಿ ಅಭ್ಯಾಸವಿದ್ದವರಿಗೆ ಆ ಹಾಡು ಸಲೀಸಾಲಿ ಅರ್ಥವಾಗುತ್ತದೆ. ಬೇರೆ ಕಡೆಯವರು ಅರ್ಥಾಗಲಿಲ್ಲ ಅಂತ ಹೀಯಾಳಿಸುವ ಬದಲು ಪ್ರಯತ್ನ ಮಾಡಬೇಕು. ಕನ್ನಡ ಭಾಷೆಯ ಅಲ್ಪ ಜ್ಞಾನವೇ ಇದಕ್ಕೆ ಕಾರಣವಿರಬೇಕು ಎಂದು ಒಪ್ಪಿಕೊಂಡ ಮೇಲೆ ಕನ್ನಡ ಹಾಡುಗಳ ಸಾಹಿತ್ಯದ ವಿಮರ್ಶೆಗಿಳಿದದ್ದೋ ಏಕೋ ಏನೋ!!
ಉಳಿದಂತೆ ನಿಮ್ಮ ಬರಹದ ಆಶಯಕ್ಕೆ ಸಹಮತವಿದೆ.
ಅರ್ಚನಾ, ಬಹಳ ದಿನಗಳ ನಂತರ ನಿಮ್ಮ ಬರಹ ಓದ್ತಾ ಇದೇನೆ. ಲಿರಿಕ್ಸು ಓದ್ತಾ ಇದ್ದ ಹಾಗೆ ವಿಷಯದ ಗಾಂಭೀರ್ಯವನ್ನೂ ಮೀರಿ ನಗು ಉಕ್ಕಿ ಬಂತು. ಏನು ಮಾಡಲಿ? ಶಿವಾನಂದ ಅವರು ಹೇಳುವ ಹಾಗೆ ಐತಲಕ್ಕಡಿ ಅನ್ನುವದು ಮಂಡ್ಯದ ಕಡೆ ಸಾಮಾನ್ಯ ಶಬ್ದ ಆಗಿರಬಹುದು. ಆದರ ಇಲ್ಲಿ ವಿಷಯ ಇರುವದು ಕಳಪೆ ಸಾಹಿತ್ಯದ ಉಪಯೋಗದ ಬಗ್ಗೆ. ಕಡಿಮೆಯಾಗಿರುವ ನಮ್ಮ ಸದಭಿರುಚಿಯ ಬಗ್ಗೆ. ಮುಂಗಾರು ಮಳೆ, ಗಾಳಿಪಟ, ಮಿಲನದಂತಹ ಚಲನಚಿತ್ರಗಳ ಉತ್ತಮಸಾಹಿತ್ಯಕ್ಕೆ ಉತ್ತೇಜನ ಕೊಟ್ಟ ನಾವೇ ಅರ್ಚನಾರವರು ಉಲ್ಲೇಖಿಸಿದಂತಹ ಲಿರಿಕ್ಸನ್ನೂ ಎಂಜಾಯ್ ಮಾಡುತ್ತೀವಿ ಅನ್ನೋದು ವಿಚಿತ್ರ ಅಲ್ಲವೆ? ಇಂತಹ ಹಾಡುಗಳು ಕೆಲಕಾಲದವರೆಗೆ ಪಾಪ್ಯುಲರ್ ಆಗಬಹುದೇನೊ. ಆದರೆ ಎಷ್ಟುದಿನ ಇವು ಜನರ ಮನಸ್ಸಿನಲ್ಲಿ ಉಳೀಬಹುದು? ಒಳ್ಳೆಯ ಸಿನಿಮಾ, ಸಾಹಿತ್ಯವನ್ನ ಕೊಡುವಲ್ಲಿ ನಾವು ನೋಡುಗರ ಪಾತ್ರವೂ ಬಹಳ ಮುಖ್ಯವಾದ್ದು. ನಾವು ತಿರಸ್ಕರಿಸಿದ್ದನ್ನ ಯಾರೂ ನಮಗೆ ಕೊಡೋದಿಲ್ಲ ಅನ್ನೋದು ನಮಗೆ ಗೊತ್ತಿರಬೇಕು. ಏನನ್ನ ತಿರಸ್ಕರಿಸಬೇಕು, ಏನನ್ನ ಪ್ರೋತ್ಸಾಹಿಸಬೇಕು ಅನ್ನೋದು ಕೂಡ. ನಮ್ಮ ಸಿನೆಮಾ ನಮ್ಮನ್ನ ಬಿಂಬಿಸತ್ತೆ ಅಲ್ವೇ? ಅದನ್ನ ಎತ್ತರಕ್ಕೇರುವ ಹಾಗೆ ನೋಡಿಕೊಳ್ಳೋದು ನಮ್ಮ ಕರ್ತವ್ಯ ಕೂಡ.
“ನಮ್ಮ ಸಿನೆಮಾ ನಮ್ಮನ್ನ ಬಿಂಬಿಸತ್ತೆ ಅಲ್ವೇ? ಅದನ್ನ ಎತ್ತರಕ್ಕೇರುವ ಹಾಗೆ ನೋಡಿಕೊಳ್ಳೋದು ನಮ್ಮ ಕರ್ತವ್ಯ ಕೂಡ.” tina helida maathu 1000000% sathya..
YES, WE SHOULD NOT ALLOW OUR KANNADA LANGUAGE FOR DESTROY.
ಇವರ ಇದೇ ಲೇಖನ ಮೊನ್ನೆ ವಿಜಯಕರ್ನಾಟಕದಲ್ಲಿ ಓದಿದ್ದೆ. ಇದು ನೂರಕ್ಕೆ ನೂರು ಸತ್ಯ. ಈಗಿನ ಕೆಲವು (ಹಲವು ಅಂದರೂ ತಪ್ಪಾಗೊಲ್ಲ ಬಿಡಿ!) ಹಾಡುಗಳನ್ನು ಕೇಳುತ್ತಿದ್ದರೆ, ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ!
ಈಗಿನ ಸಾಹಿತ್ಯ ಯಾರಿಗೆ ತಾನೆ ಅರ್ಥವಾಗುತ್ತೆ, ಸಾಹಿತ್ಯ ಬರೆಯುವವರು ಮೊದಲು ಪದದ ಅರ್ಥ ತಿಳಿದು ಬರೆದರೆ ತುಂಬಾ ಒಳ್ಳಯದು, ಹಳ್ಳಿ ಭಾಷೆ ಪಟ್ಟಣದವರಿಗೆ ಅರ್ಥವಾಗಲ್ಲ ಎಂದು ಪೋಲಿ ಪದಗಳನ್ನು ಇತ್ತೀಚಿನ ಚಿತ್ರಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ, ಉದಾ: ಇಂದ್ರ ಚಿತ್ರದ ಗುಮ್ ಗುಮ್ ಗುಮ್ತಾನೆ ಎಂಬ ಪದ ಬೈಗುಳಲ್ಲಿ ಎಷ್ಟರ ಮಟ್ಟಿಗೆ ಚಾಲ್ತಿಯಲ್ಲಿದೆ ಎಂದು ಆ ಹಾಡು ಬರೆದ ಸಾಹಿತಿಗೆ ತಿಳಿಯಲಿಲ್ಲವೆ ?
ಮತ್ತು ಸಂಭಾಷಣೆಯಲ್ಲಿ ವೀರ ಕನ್ನಡಿಗ ಚಿತ್ರದ ಒಂದು ದೃಶ್ಯದಲ್ಲಿ ಹೆಡ್ ಮಾಸ್ತರು ಶಿಕ್ಷಕಿಗೆ, ಮತ್ತೊಬ್ಬ ಶಿಕ್ಷಕಿ ಏನ್ ಕಿಸಿತ್ತಿದ್ದಾಳೆ ಎಂಬ ಪ್ರಶ್ನೆಗೆ ಆ ಶಿಕ್ಷಕಿ ಎನೋ ಕೊಸಿತ್ತಿದ್ದಾಳೆ ಎನ್ನುವ ಸಂಭಾಷಣೆ ಹೇಸಿಗೆ ಹುಟ್ಟಿಸುವುದಿಲ್ಲವೆ, ಮನೆ ಮಂದಿಯೆಲ್ಲ ಕುಳಿತು ಸಿನಿಮಾ ನೋಡುವಾಗ ಮುಜುಗರವಾಗುವುದಿಲ್ಲವೆ, ದಯವಿಟ್ಟು ಕನ್ನಡವನ್ನು ಹೊಲಸು ಮಾಡಬೇಡಿ ನಿಮಗೆ ಒಳ್ಳೆ ಪದಗಳನ್ನು ಬರೆಯಲು ಗೊತ್ತಿಲ್ಲದಿದ್ದರೆ ಸುಮ್ಮನಿದ್ದುಬಿಡಿ