Archive for the ‘Uncategorized’ Category
ಕಿರುಚಿತ್ರಗಳಿಗೊಂದು ವೇದಿಕೆ-ನಮ್ಮೂರ ಫಿಲ್ಮೋತ್ಸವ
ಮೈಸೂರಿನ “ಗ್ಯಾಂಗ್ವೇಜ್” ಹಾಗೂ “ಮೈಸೂರು ಫಿಲ್ಮ್ ಸೊಸೈಟಿ” ಜಂಟಿಯಾಗಿ ಜನವರಿಯಲ್ಲಿ ಕಿರು ಚಿತ್ರೋತ್ಸವ ಏರ್ಪಡಿಸಿವೆ.
ರಾಜ್ಯದ ಎಲ್ಲ ಸಿನಿಮಾ ಆಸಕ್ತರು, ಡಿಪ್ಲೊಮಾ ವಿದ್ಯಾರ್ಥಿಗಳು, ಚಲನಚಿತ್ರ ಶಿಕ್ಷಣ ನೀಡುವ ಸಂಸ್ಥೆಗಳು, ಅನಿಮೇಷನ್, ವೀಡಿಯೋ ಸಂಸ್ಥೆಗಳು, ವೃತ್ತಿ, ಅರೆವೃತ್ತಿ, ಹವ್ಯಾಸಿ ಚಿತ್ರ ನಿರ್ದೇಶಕರು ತಮ್ಮ ಚಿತ್ರಗಳನ್ನು ಕಳುಹಿಸಬಹುದು. ಯಾವುದೇ ಪ್ರವೇಶ ಶುಲ್ಕವಿಲ್ಲ.

ನಿಯಮಗಳೆಂದರೆ :
ಚಿತ್ರವು 2 ರಿಂದ 30 ನಿಮಿಷಗಳ ಅವಧಿಯದ್ದಾಗಿರಬೇಕು.
ಯಾವುದೇ ಭಾಷೆಯಲ್ಲಿ, ಭಾಷಾರಹಿತವಾಗಿ, ಅನಿಮೇಷನ್ ರೂಪದಲ್ಲೂ ಇರಬಹುದು. ಆದರೆ ಸಬ್ ಟೈಟಲ್ ಗಳು ಮುದ್ರಿತವಾದ ಪ್ರತಿಯೇ ಆಗಿರಬೇಕು.
ಚಿತ್ರದ ಡಿವಿಡಿ ಪ್ರತಿ (ಮೂಲ ಮತ್ತು ನಕಲು) ಮುಂದಾಗಿ ಕಳುಹಿಸಿಕೊಡಬೇಕು.
ಸಂಸ್ಥೆ ಅಥವಾ ವ್ಯಕ್ತಿಯ ಸಂಪರ್ಕ ವಿಳಾಸ, ದೂರವಾಣಿ, ಮೊಬೈಲ್, ಇಮೇಲ್, ಚಿತ್ರ ತಂಡದ ಅಥವಾ ವ್ಯಕ್ತಿಗಳ ಭಾವಚಿತ್ರ, ಪರಿಚಯಪತ್ರ, ಚಿತ್ರ ನಿರ್ಮಾಣದ ಬಗ್ಗೆ ಮಾಹಿತಿ ಜೊತೆಗೆ ಸ್ಕ್ರಿಪ್ಟ್ ಕಳುಹಿಸಬೇಕು.
ಚಿತ್ರವು ಸಂಪೂರ್ಣ ಸ್ವಂತದ್ದಾಗಿರಬೇಕು. ಯಾವುದೇ ರೀತಿಯ ನಕಲು, ಮರು ನಿರ್ಮಾಣ, ಭಾಷಾಂತರಗಳಿಗೆ ಅವಕಾಶವಿಲ್ಲ. ಸಾಹಿತ್ಯ ಕೃತಿಯನ್ನು ಆಧರಿಸಿದ್ದರೆ ಮೂಲ ಲೇಖಕರ ಅನುಮತಿ ಪತ್ರ ಲಗತ್ತಿಸಬೇಕು.
ಚಿತ್ರ ಅಥವಾ ಚಿತ್ರದ ವಿವರವನ್ನು ಡಿಸೆಂಬರ್ 26 ರೊಳಗೆ ಕಳುಹಿಸಬೇಕು. ಚಿತ್ರಗಳನ್ನು ಪ್ರದರ್ಶಿಸುವುದು ಅಥವಾ ಬಿಡುವುದು ಆಯ್ಕೆ ಸಮಿತಿಯ ನಿರ್ಧಾರಕ್ಕೆ ಸಂಬಂಧಿಸಿದ್ದು.
ಚಿತ್ರಗಳನ್ನು ಕಳುಹಿಸುವ ವಿಳಾಸ :
ಧರ್ಮೇಶ್ ಎಂ.ಎಸ್, H-10 C.F.T.R.I CAMPUS, MYSORE-13, MO-98864 98866, e mail-dharmavangogh@yahoo.com.
ಹರಿಪ್ರಸಾದ್ ಕಶ್ಯಪ್, ಮೊಬೈಲ್ : 97421 91586, email-haridontworry@gmail.com
ಧನಂಜಯ ಕಾಳೇನಹಳ್ಳಿ, ಮೊಬೈಲ್&98449 90203, email-dhana.gs@gmail.com,
ಮಾಹಿತಿಗೆ : www.gangwayz.org
ಒಂದು ಚಿತ್ರಕ್ಕೆ ಪ್ರೇರಣೆ ಒಂದೇ ಸಂಗತಿಯಲ್ಲ : ಯೋಗರಾಜಭಟ್
ಒಂದು ಚಿತ್ರ ನಿಮಗೆ ಇಂಥದ್ದರಿಂದ ಪ್ರೇರಣೆಗೊಂಡಿರಬಹುದು ಎಂದೆನಿಸುವುದು ಸಹಜ. ಆದರೆ ನಿರ್ದೇಶಕನಾದವನಿಗೆ ಅಂತದೊಂದು ಕಥಾವಸ್ತು (ಥೀಮ್) ಕೇವಲ ಒಂದರಿಂದಲೇ ಮೂಡಿರದು. ಬದಲಾಗಿ ಹತ್ತು ಹಲವು ಸಂಗತಿಗಳಿಂದ ಪ್ರಭಾವಕ್ಕೊಳಗಾಗಿರುತ್ತಾನೆ ಎಂದವರು “ಮನಸಾರೆ” ಚಲನಚಿತ್ರ ನಿರ್ದೇಶಕ ಯೋಗರಾಜ ಭಟ್.
ಸಂವಾದ.ಕಾಂ ಬೆಂಗಳೂರಿನಲ್ಲಿ ಏರ್ಪಡಿಸಿದ್ದ “ಮನಸಾರೆ” ಕುರಿತ ಸಂವಾದದಲ್ಲಿ ಮನಸಾರೆ ತಂಡ, ಸಂವಾದ. ಕಾಂನ ಶೇಖರ್ ಪೂರ್ಣ, ದಟ್ಸ್ ಕನ್ನಡ. ಕಾಂನ ಎಸ್ಕೆ ಶಾಂ ಸುಂದರ್, ಟೀನಾ ಶಶಿಕಾಂತ್, ಹೇಮಾ ಪವಾರ್ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು. ಸಂವಾದ ಚೆನ್ನಾಗಿ ನಡೆಯಿತು. ಈ ಹಿನ್ನೆಲೆಯಲ್ಲಿ ಯೋಗರಾಜ ಭಟ್ಟರ ಮಾತಿನ ಝಲಕ್ ಅನ್ನು ನೀಡಲಾಗಿದೆ.

“ಮನಸಾರೆ ಚಿತ್ರದ ಕುರಿತೇ ನೋಡಿ. ಸಿಗ್ಮಂಡ್ ಫ್ರಾಯಿಡ್ ನ ಯಾವುದೋ ಸಾಲು ಮೂಲ ಸೆಲೆಯಾಯಿತು. ಹಾಗೆಯೇ ಶಿವರಾಮ ಕಾರಂತರ ಯಾವುದೋ ಮಾತು ಸಹ ಸೆಲೆಯನ್ನು ಬೆಳೆಸಿತು. ಹೀಗೆ…ಹತ್ತು ಹಲವು ಸಂಗತಿಗಳಿಂದ ಪ್ರಭಾವಿತಕ್ಕೊಳಗಾಗಿ ಒಂದು ರೂಪ ಪಡೆಯುತ್ತದೆ. ಹಾಗಾಗಿ ಇಂಥದ್ದೇ ಸಿನಿಮಾದಿಂದ ಪ್ರಭಾವಿತ ಎಂಬುದಾಗಲೀ, ಇಂಥ ಸಿನಿಮಾವೇ ಇದಕ್ಕೆ ಕಾರಣ ಎಂಬುದಾಗಲೀ ಹೇಳಲಾಗದು. ಹಾಗೆ ಒಂದು ಥೀಮ್ ಸಿದ್ಧಗೊಳ್ಳುವುದಿಲ್ಲ’. Read the rest of this entry »
“ಕುಟ್ಟಿ ಜಪಾನ್” ನಮ್ಮ ಹೆಮ್ಮೆಯೋ? ಭ್ರಮೆಯೋ?-ಸಾಕ್ಷ್ಯಚಿತ್ರ ಕುರಿತ ಲೇಖನ
ಉಜಿರೆ ಧರ್ಮಸ್ಥಳದ ರಾಕೇಶ್ ಎನ್. ಎಸ್. ಬರೆದಿರುವ ಲೇಖನ ಬಾಲ ಕಾರ್ಮಿಕರ ಕುರಿತಾದ ಸಾಕ್ಷ್ಯಚಿತ್ರ “ಕುಟ್ಟಿ ಜಪಾನಿನ್ ಕುಜಂದೈಗಲ್’ (Kutti Japanin Kuzhandhaigal). ಇದರ ನಿರ್ದೇಶಕ ಚಲಂ ಬೆಣ್ಣೂರ್ ಕರ್. ಈ ಬಗ್ಗೆ ನಿಮ್ಮ ದೃಷ್ಟಿಕೋನವಿದ್ದರೆ ಹಂಚಿಕೊಳ್ಳಿ.
ಅಲ್ಲಿ ದುಡಿಯಬೇಕಾದ ಜೀವಗಳು ಆಡುತ್ತವೆ, ಆಡಬೇಕಾದ ಜೀವಗಳು ದುಡಿಯುತ್ತವೆ… ಸಾವಿರ ಕನಸುಗಳಿರಬೇಕಾದ ಕಂಗಳಲ್ಲಿ ಇದ್ದದ್ದು, ಇರುವುದು ಬರೀ ಕಾಸು… ಕಾಸು… ಬರೇ ನೋವೇ ಜೀವನ… ದುಡಿಯುವುದೇ ಆನಂದ ಎಂದು ತಿಳಿದುಕೊಂಡು ಅದರಂತೆಯೇ ಬದುಕುವವರಿಗೆ ಜೀವನದ ಮತ್ತೊಂದು ಮುಖದ ಪರಿಚಯವಾಗುವುದಾದರು ಹೇಗೆ? ಅಥವಾ ಜೀವನಕ್ಕೆ ಮತ್ತೊಂದು ಮುಖವಿದೆ ಎಂದು ತಿಳಿಯುವುದಾದರೂ ಹೇಗೆ? ಕಾಡುತ್ತದೆ. ಕೆಲವರಿಗೆ ಜೀವನ ಅದೇಷ್ಟು ದುರ್ಭರ ಎಂದೆನಿಸಿಬಿಡುತ್ತದೆ. ಬರೀ ಹತ್ತು ರೂಪಾಯಿಗೆ 10 ರಿಂದ 14 ಗಂಟೆಗಳ ಕಾಲ ದುಡಿಯಬೇಕಾದ ಸ್ಥಿತಿ ತಲುಪಿರುವ ಪುಟಾಣಿಗಳು ಸರಳುಗಳೆಡೆಯಿಂದ ನಕ್ಕಾಗ, ಇಡೀ ಮಾನವಕುಲವನ್ನು ಹಂಗಿಸಿದಂತಾಗುತ್ತದೆ. ವೇಗವಾಗಿ ಟೈಪಿಂಗ್ ಮಾಡುವುದನ್ನೇ ನೈಪುಣ್ಯತೆ ಎಂದು ಭಾವಿಸಿರುವ ಅಧುನಿಕ ಮಾನವ ಆ ಹಸುಳೆಗಳು ಕ್ಷಣಾರ್ಧದಲ್ಲಿ ಬೆಂಕಿಪೊಟ್ಟಣ, ಪಟಾಕಿ ತಯಾರಿಸುವಾಗ ಅಬ್ಬೆಪಾರಿಯಾಗಿ ಬಿಡುತ್ತಾನೆ. ಒಂಚೂರು ಸೂಕ್ಷ್ಮ ಹೃದಯಿಯಾದರೆ ಆತನ ಕಣ್ಣಂಚಲ್ಲಿ ತುಂತುರು ಖಂಡಿತ.
‘ಕುಝಾನ್ದೈಗಲ್’ ಇಂತಹ ಚಿತ್ರಣವಿರುವ ಸಾಕ್ಷ್ಷಚಿತ್ರ. ಭಾರತದ ಪಟಾಕಿ ರಾಜಧಾನಿ ಎಂದು ಕರೆಸಿಕೊಳ್ಳುವ ಶಿವಕಾಶಿಯಲ್ಲಿನ ಪಟಾಕಿ ಮತ್ತು ಬೆಂಕಿ ಪೊಟ್ಟಣ ತಯಾರಿಸುವ ಕಾರ್ಖಾನೆಗಳಲ್ಲಿ ದುಡಿಯುವ ಮಕ್ಕಳ ಬವಣೆಯನ್ನು ನಮ್ಮೆದುರು ಬೆತ್ತಲುಗೊಳಿಸುವ ಪ್ರಯತ್ನ ಈ ಸಾಕ್ಷ್ಯಚಿತ್ರದ್ದು. Read the rest of this entry »
ಬೆಳಕಿಗೆ ಭಾಷ್ಯ ಬರೆದವರಲ್ಲ ; ಭಾಷೆ ಬರೆದವರು ಭಾಸ್ಕರ್ !
ಜಿ.ಎಸ್. ಭಾಸ್ಕರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಬ್ಬ ಒಳ್ಳೆಯ ಛಾಯಾಗ್ರಾಹಕರು. ಬೆಳಕಿನ ಸಾಧ್ಯತೆಯನ್ನು ದುಡಿಸಿಕೊಳ್ಳುತ್ತಾ ಚಿತ್ರದ ಸನ್ನಿವೇಶಗಳಿಗೆ ಅರ್ಥ ಕಲ್ಪಿಸುವ ಬಗೆ ಅವರೊಳಗಿನದು. ಅನ್ವರ್ಥಕ ಎಂಬಂತೆ ತಮ್ಮೊಳಗೆ ಬೆಳಗುವ ಸೂರ್ಯನನ್ನು ಇಟ್ಟುಕೊಂಡು ಅವನನ್ನೇ ದುಡಿಸಿಕೊಂಡವರು ಎನ್ನುತ್ತಾರೆ ಪತ್ರಕರ್ತ ಮುರಳೀಧರ ಖಜಾನೆ.
ನನಗೆ ನೆನಪಿರುವಂತೆ 1992ರ ಸಂದರ್ಭ. ಪ್ರಸಿದ್ಧ ಚಿತ್ರ ನಿರ್ದೇಶಕಿ ಸಾಯಿ ಪರಾಂಜಪೆ ತಮ್ಮ “ಪಪೀಹಾ’ ಚಿತ್ರವನ್ನು ನಾಗಪುರ ಅರಣ್ಯ ಪ್ರದೇಶದಲ್ಲಿ ಚಿತ್ರಿಸಲು ಸಜ್ಜಾಗಿದ್ದರು. ತಂಡವೂ ಸಿದ್ಧವಾಗಿತ್ತು, ದುರದೃಷ್ಟವಶಾತ್, ಚಿತ್ರೀಕರಣ ಸ್ಥಳಕ್ಕೆ ಬರಬೇಕಿದ್ದ ಅವರ ಉಪಕರಣಗಳನ್ನು ಹೊತ್ತ ವಾಹನ ಅಪಘಾತಕ್ಕೆ ಒಳಗಾದ ಸುದ್ದಿ ಸಿಕ್ಕಿತು. ಯಾವುದೇ ಬದಲಿ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಗಳೇ ಇರಲಿಲ್ಲ. ಗುಡ್ಡಗಾಡು ಸಮುದಾಯದ ಕುರಿತಾದ ಚಿಕ್ಕ ಬಜೆಟ್ನ ಚಿತ್ರವದು. ಅಷ್ಟೇ ಅಲ್ಲ, ಚಿತ್ರದ ಕೆಲ ಭಾಗಗಳನ್ನು ಚಿತ್ರೀಕರಿಸಿ ಅದನ್ನು ಆಧರಿಸಿಯೇ ಚಿತ್ರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ಉದ್ದೇಶ ಹೊಂದಿದ್ದರು.

ಸರಿ, ವಾಪಸು ಹೋಗುವಂತಿರಲಿಲ್ಲ. ಏನಾದರೂ ಆಗಲಿ ಎಂದು ಹೊಸ ಪ್ರಯತ್ನಕ್ಕೆ ಮುಂದಾದರು. ಅಲ್ಲೇ ಇದ್ದ ಯುವ ಕ್ಯಾಮೆರಾಮ್ಯಾನ್ಗೆ ಕರೆದು “ನಮ್ಮಲ್ಲಿ ಈಗ ಲಭ್ಯವಿರುವ ಉಪಕರಣಗಳಲ್ಲೇ ಚಿತ್ರೀಕರಣ ಶುರು ಮುಗಿಸೋಣ. ಒಂದುವೇಳೆ ಸಾಧ್ಯವಾಗದಿದ್ದರೆ ಈ ಯೋಜನೆಗೇ ಅಂತ್ಯ ಹಾಡೋಣ’ ಎಂದರು. ಈ ಯುವ ಕ್ಯಾಮೆರಾಮ್ಯಾನ್ ಇದ್ದ ಆಯ್ಕೆಗಳು ಎರಡೇ.
“ಇಲ್ಲ ರಿಸ್ಕ್ ತೆಗೆದುಕೊಂಡು ಚಿತ್ರೀಕರಣ ಮುಗಿಸಬೇಕು. ಇಲ್ಲವೇ ಇಡೀ ಯೋಜನೆ ಕೈ ಬಿಡಲು ಕಾರಣಕರ್ತನಾಗಬೇಕು’. ಆದರೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ನ ಗರಡಿಯಲ್ಲಿ ತರಬೇತಾದ ಆ ಯುವಕ “ರಿಸ್ಕ್’ ತೆಗೆದುಕೊಳ್ಳಲು ನಿರ್ಧರಿಸಿದ. ಒಂದು ಪುಟ್ಟ ಲೈಟು ಮತ್ತು ಕೆಲವು ಥರ್ಮೋಕೋಲ್ ತುಂಡುಗಳನ್ನು ಬಳಸಿಕೊಂಡು ಚಿತ್ರೀಕರಣಕ್ಕೆ ಸಜ್ಜಾದ. ಅರಣ್ಯದಲ್ಲೇ ಪ್ರಕೃತಿ ದತ್ತವಾಗಿ ಲಭ್ಯವಾದ ಬೆಳಕಿನ ಸಾಧ್ಯತೆಯನ್ನೇ ದುಡಿಸಿಕೊಂಡು ಥರ್ಮೋಕೋಲ್ ಬಳಸಿಕೊಂಡು ಹಗಲಿನ ಬೆಳಕಿನ ವಿನ್ಯಾಸವನ್ನು ರೂಪಿಸಿಕೊಂಡ. ಮೂರು ಹಂತದಲ್ಲಿ ಒಂದೇ ಚಿತ್ರಿಕೆ (ಶಾಟ್) ಯನ್ನು ಚಿತ್ರೀಕರಿಸುವ ಸಂದರ್ಭದಲ್ಲಿ, ಈ ಪುಟ್ಟ ಲೈಟ್ ಸಹಾಯಕ್ಕೆ ಬಂದಿತು. ಹಲವು ಅಡ್ಡಿಗಳ ಮಧ್ಯೆಯೂ ಹೊಸದನ್ನು ಹುಡುಕಿಕೊಂಡ. ಪೆಟ್ರೋಮ್ಯಾಕ್ಸ್ ದೀಪಗಳನ್ನು ಬಳಸಿಕೊಂಡ…ಹೀಗೆ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ. Read the rest of this entry »
ಹಾಡು ಹಕ್ಕಿಯ ಹೃದಯಗೀತೆ ಮಂಗಳವಾರ ಬಿಡುಗಡೆ
ಬಹುಶಃ ಭಾರತೀಯ ಚಿತ್ರರಂಗದ ಗಾನಕೋಗಿಲೆ ಲತಾ ಮಂಗೇಶ್ವರರ ಬಗ್ಗೆ ಕನ್ನಡದಲ್ಲಿ ಬರುತ್ತಿರುವ ಮೊದಲ ಪುಸ್ತಕ ಇದು ಇರಬೇಕು.
ವಿಜಯ ಕರ್ನಾಟಕದ ಸುದ್ದಿ ಸಂಪಾದಕ ವಸಂತ ನಾಡಿಗೇರರು ಬರೆದ “ಹಾಡುಹಕ್ಕಿಯ ಹೃದಯಗೀತೆ” ಮಂಗಳವಾರ (ಅ.27) ಸಂಜೆ 6 ಕ್ಕೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕೆಇಬಿಯ ಭವನದ ಸರ್.ಎಂ.ವಿ. ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ.
ಗಾಯನ ಕ್ಷೇತ್ರದ ಮತ್ತೊಬ್ಬ ಧ್ರುವತಾರೆ ಎಸ್. ಪಿ. ಬಾಲಸುಬ್ರಹ್ಮಣ್ಯಂ ಕೃತಿಯನ್ನು ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ನಟಿ ಹಾಗೂ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷೆ ಜಯಮಾಲಾ, ನಟ ರಮೇಶ್ ಅರವಿಂದ್ ಭಾಗವಹಿಸುವರು. ವಿಜಯ ಕರ್ನಾಟಕದ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸುವರು.
ವಸಂತ ನಾಡಿಗೇರರು, ವಿಜಯ ಕರ್ನಾಟಕದ ಸಿನಿಮಾ ಪುರವಣಿಯಲ್ಲಿ ಬರೆದ ಬರಹಗಳಿವು. ಗಾನ ಕೋಗಿಲೆಯ ಜೀವನ ಚರಿತ್ರೆ ಕುರಿತು ಬರಿದೇ ಮಾಹಿತಿಯಲ್ಲ ; ಒಂದು ಒಳ್ಳೆಯ ಅನುಭವದಂತೆ ಕಟ್ಟಿಕೊಟ್ಟಿದ್ದಾರೆ.
ಕೃತಿ ಬಿಡುಗಡೆಗೆ ಎಲ್ಲರಿಗೂ ಸ್ವಾಗತಿಸಿದ್ದಾರೆ ಲೇಖಕರು. ಸ್ಥಳ : ಸರ್.ಎಂ.ವಿ ಭವನ, ಕೆಇಬಿ ಸಂಘ ಕಟ್ಟಡ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು. ಕೃತಿ ಬಿಡುಗಡೆಯ ನಂತರ ಲೇಖಕರಿಗೆ ಶುಭಾಶಯ ಹೇಳಿ : 93431 09195.
ಡಿಸ್ಟ್ರಿಕ್ಟ್ 9 : ಈ ವರ್ಷದ ರಮ್ಯ, ಅದ್ಭುತ, ನೈಜ ಸಿನೆಮಾ
ಬೇಳೂರು ಸುದರ್ಶನರು ಮತ್ತೆ ಆರಂಭಿಸಿದ್ದಾರೆ. ಅವರು “ಡಿಸ್ಟ್ರಿಕ್ಟ್ 9″ ಚಿತ್ರದ ಬಗ್ಗೆ ಬರೆದಿರುವ ಲೇಖನ ವಿಶಿಷ್ಟವಾಗಿದೆ. ಓದಿ ಪ್ರತಿಕ್ರಿಯಿಸಿ.
ಅನ್ಯಗ್ರಹಜೀವಿಗಳ ಬಗ್ಗೆ ನೀವು ಎಷ್ಟೇ ಹಾಲಿವುಡ್ ಬ್ಲಾಕ್ಬಸ್ಟರ್ಗಳನ್ನು ನೋಡಿರಬಹುದು. ಎಷ್ಟೆಲ್ಲ ಸ್ಪೆಶಿಯಲ್ ಎಫೆಕ್ಟ್ಗಳನ್ನು ಅನುಭವಿಸಿ ರೋಮಾಂಚಿತರಾಗಿರಬಹುದು. ಡಿಸ್ಟ್ರಿಕ್ಟ್ 9 ಸಿನೆಮಾವನ್ನೂ ಅದೇ ಪಟ್ಟಿಗೆ ಸೇರಿಸೋದು ಅಸಾಧ್ಯ. ಇದೂ ಅನ್ಯಗ್ರಹ ಜೀವಿಗಳನ್ನು ಕುರಿತೇ ಇದೆ; ಇಲ್ಲೂ ಹತ್ತಾರು / ನೂರಾರು ಸ್ಪೆಶಲ್ ಎಫೆಕ್ಟ್ಗಳಿವೆ. ಇಲ್ಲೂ ಇಂಡಿಪೆಂಡೆನ್ಸ್ ಡೇ ಸಿನೆಮಾದಲ್ಲಿ ಕಾಣುವಂಥ ಬೃಹತ್ ಅನ್ಯಗ್ರಹ ನೌಕೆಯಿದೆ. ಸಿಗಡಿ ಮೀನಿನ ದೇಹವುಳ್ಳ ಅನ್ಯಗ್ರಹಜೀವಿಗಳ ವಸಾಹತೇ ಇಲ್ಲಿದೆ.

ಈ ಎಲ್ಲ ವಿಶೇಷಗಳ ಜೊತೆಗೆ ಈ ಸಿನೆಮಾಗೆ ಇನ್ನೊಂದು ವಿಶಿಷ್ಟ ಗುಣವಿದೆ: ಸಹಜ, ಮಾನವೀಯ ಭಾವನೆಗಳು. ಇಂಥದ್ದೊಂದು ಸಿನೆಮಾವನ್ನು ಹಾಲಿವುಡ್ ಯಾವಾಗಲೋ ಮಾಡಬಹುದಿತ್ತು. ಮನುಷ್ಯ ಸಹಜ, ವಾಸ್ತವ ಸನ್ನಿವೇಶಗಳನ್ನು ಕಲ್ಪಿಸಿಕೊಂಡು, ಮನುಕುಲದ ಈಗಿನ ಜನಾಂಗೀಯ ವರ್ಣಭೇದ ಇತ್ಯಾದಿ ಜೀವವಿರೋಧಿ ಸಮಸ್ಯೆಗಳನ್ನು ಸೂಚ್ಯವಾಗಿ ಬಿಂಬಿಸುವ, ಇಂಥ ಏಲಿಯನ್ ಮೂವೀ ಮಾಡಲು ದಕ್ಷಿಣ ಆಫ್ರಿಕಾದ ನಿರ್ದೇಶಕ ನೀಲ್ ಬ್ಲೋಮ್ಕ್ಯಾಂಪ್ ಬರಬೇಕಾಯ್ತು.
ಪ್ರತೀ ಸಲ ಅನ್ಯಗ್ರಹ ಜೀವಿಗಳು ಬರೋ ಸಿನೆಮಾದಲ್ಲಿ ಅವು ಮನುಷ್ಯನಿಗೆ ಏನೇನು ಮಾಡುತ್ತವೆ ಅನ್ನೋ ಚಿತ್ರಣ ಇರುತ್ತೆ. ಇಲ್ಲಿ, ಅವುಗಳನ್ನು ನಾವು ಅರ್ಥಾತ್ ಮನುಷ್ಯರು ಹೇಗೆ ನಡೆಸಿಕೊಳ್ಳುತ್ತೇವೆ ಎಂಬ (ಅ) ಮಾನವೀಯ ಚಿತ್ರಣವಿದೆ.
ಶತಮಾನಗಳ ಕಾಲ ಈ ಭೂಮಿಯ ಮೇಲೆ ಮನುಷ್ಯರ ಮೇಲೆ ಮನುಷ್ಯರೇ ನಡೆಸಿದ ಅಮಾನುಷ ದಮನದ ಇತಿಹಾಸವೇ ಇರಬೇಕಾದರೆ, ಈಗಲೂ ಇಂಥ ಮಾನವ ಹಕ್ಕುಗಳ ದಮನ ನಡೆಯುತ್ತಿರೋವಾಗ, ಈ ಸಿನೆಮಾದ ಕಥೆಯನ್ನು ಬೆಳೆಸುವುದು ಕಷ್ಟವೇನಲ್ಲ! Read the rest of this entry »
“ನನ್ನ ಬದುಕಿಗೂ, ಗುಲಾಬಿ ಬದುಕಿಗೂ ಸಾಮ್ಯ ಇದೆ”
ಮೈಸೂರಿನಲ್ಲಿ ಪತ್ರಕರ್ತರ ಸಂಘ ಏರ್ಪಡಿಸಿದ್ದ ಸಂವಾದದಲ್ಲಿ ಉಮಾಶ್ರೀ ಮನಬಿಚ್ಚಿ ಮಾತನಾಡಿದರು. ತಮ್ಮ ಬದುಕಿನ ಅನುಭವಗಳನ್ನೆಲ್ಲಾ ವಿವರಿಸಿದರು. ಅದರ ಪುಟ್ಟ ವರದಿಯನ್ನು ಮೈಸೂರಿನ ನಚಿಕೇತ ಕಳಿಸಿಕೊಟ್ಟಿದ್ದಾರೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ.
“ನನ್ನನ್ನು ಸದಾ ಕಾಡುವವಳು ಶರ್ಮಿಷ್ಠೆ…”
ಹೀಗೆ ಮಾತು ಆರಂಭಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಉಮಾಶ್ರೀ, ತನ್ನ ನಟನೆಯ ಅನುಭವವನ್ನು ವಿವರಿಸಿದ್ದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಶುಕ್ರವಾರ ಏರ್ಪಡಿಸಿದ್ದ ಸಂವಾದದಲ್ಲಿ.
“ಎಲ್ಲರೂ ನನಗೆ ತೃಪ್ತಿ ಬಂದ ಪಾತ್ರಗಳ ಬಗ್ಗೆ ಕೇಳ್ತಾರೆ. ಆದರೆ ನನಗೆ ಅಂಥ ತೃಪ್ತಿ ಇನ್ನೂ ಬಂದಿಲ್ಲ, ಬಹುಶಃ ಕಲಾವಿದೆಗೆ ತೃಪ್ತಿ ಎಂದಿರದು. ಆಂಧ್ರದ ನಿರ್ಮಲಮ್ಮ ಎಂಬ ನಟಿ ತನ್ನ ಜೀವನದ ಕೊನೆ ಕ್ಷಣದವರೆಗೂ ನಟಿಸಿದರು, ನಟಿಸುತ್ತಿದ್ದಾಗಲೇ ನಿಧನಕ್ಕೀಡಾದರು. ಅಂದರೆ ಆ ಕ್ಷಣದವರೆಗೂ ತೃಪ್ತಿಯ ನೆಲೆಯಲ್ಲಿ ಹುಡುಕಾಟ ನಡೆದೇ ಇರುತ್ತದೆ. ಆದರೆ, ನನ್ನನ್ನು ಕಾಡಿದ ಪಾತ್ರಗಳಿವೆಯೇ ಎಂದು ಕೇಳಿದರೆ ಹೌದು, ಇದೆ. ಅದು ಶರ್ಮಿಷ್ಠೆಯದು. ಯಯಾತಿಗೆ ಕೊನೆವರೆಗೂ ಸಾಥ್ ನೀಡಿದ ಶರ್ಮಿಷ್ಠೆ ರಾಕ್ಷಸ ಕುಲದಲ್ಲಿ ಹುಟ್ಟಿದರೂ ನನಗೆ ಆದರ್ಶ ಎಂದು ತೋರುತ್ತಾಳೆ. ತನ್ನ ಲಾಭದವರೆಗೆ ಕಾದು ಕೂಡಲೇ ಹೊರಟು ಹೋದ ದೇವಯಾನಿ ಮಾನವ ಕುಲದಲ್ಲಿ ಹುಟ್ಟಿದ್ದರೂ ರಾಕ್ಷಸಳಂತೆಯೇ ವರ್ತಿಸಿದಳು”.
“ಹಾಗೆಯೇ ಒಡಲಾಳದ ಸಾಕಮ್ಮ ನನ್ನೊಳಗೆ ಗಟ್ಟಿತನ ಬೆಳೆಸಿದವಳು. ನನ್ನ ಅದೃಷ್ಟವೇ ಹೀಗೇ ಎಂದು ಭಿಕ್ಷೆ ಬೇಡಲು ಸಿದ್ಧಳಾಗಲಿಲ್ಲ. ಎರಡು ಕೋಳಿ ಸಾಕ್ಕೊಂಡು, ಮೊಟ್ಟೆ-ಗಿಟ್ಟೆ ಮಾರ್ಕೊಂಡು ಬದುಕ್ತೀನಿ ಎನ್ನೋ ಛಲ ತೋರಿದಳು. ಅಂಥ ಗಟ್ಟಿಗಿತ್ತಿ ಆಕೆ”.
“ಗುಲಾಬಿ ಪಾತ್ರಕ್ಕೂ ನನ್ನ ಬದುಕಿಗೂ ಒಂದಷ್ಟು ಸಾಮ್ಯವಿದೆ. ದಾಂಪತ್ಯ ಜೀವನದಿಂದ ಇಬ್ಬರೂ ವಂಚಿತರಾದವರೇ. ಆಕೆ ಭ್ರಮಾಲೋಕದಲ್ಲಿ ವಿಹರಿಸುತ್ತಾ ಬದುಕಿದವಳು. ನಾನು ಚಿತ್ರಲೋಕದಲ್ಲಿ ಕಳೆಯುತ್ತಾ ಬದುಕು ರೂಪಿಸಿಕೊಂಡವಳು”.
“ಏನೇ ಹೇಳಿ. ನಟನೆಯ ಕೃಷಿ ಮಾಡಲಿಕ್ಕೆ, ಕಲಿಯಲಿಕ್ಕೆ ರಂಗಭೂಮಿಯೇ ಸಮರ್ಥ ವೇದಿಕೆ. ಕಿರುತೆರೆತಯಾಗಲೀ, ಬೆಳ್ಳಿತೆರೆಯಾಗಲೀ ಅಲ್ಲ. ಈಗಿನವರು ರಂಗಭೂಮಿಗೆ ಬರದೇ ನೇರವಾಗಿ ಕಿರುತೆರೆಗೆ ಬರ್ತಾರೆ. ದಿಢೀರ್ ದುಡ್ಡು, ಪ್ರಖ್ಯಾತಿ ಸಿಗೋದು ನಿಜ. ಆದರೆ ಕಲಿಕೆಗೆ ಅವಕಾಶ ಸಿಗದು. ಮೂರು ಇಲ್ಲವೇ ಐದು-ಹತ್ತು ಧಾರಾವಾಹಿಗಳಲ್ಲಿ ಆ ನಟಿ ಹಳಬಳಾಗಿಬಿಡುತ್ತಾಳೆ. ಮುಖ ಹಳಸಲು ಎನಿಸುತ್ತದೆ. ಅಷ್ಟೆ ಭವಿಷ್ಯ. ರಂಗಭೂಮಿಯಲ್ಲಿ ತಾಲೀಮು ಪಡೆದು ಬಂದರೆ ಸಾಕಷ್ಟು ವರ್ಷ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಲು ಸಾಧ್ಯ. ಹಾಗಾಗಿ ಗಟ್ಟಿಯಾದ ಕಲಾವಿದರು ಚಿತ್ರರಂಗಕ್ಕೆ ಸಿಗದಿರುವುದಕ್ಕೂ ಕಾರಣವಿದೆ”.
“ನಾನು ಈ ವಯಸ್ಸಿನಲ್ಲಿ ಹೀರೋಯಿನ್ ಆಗಿದ್ದೇನೆ. ರಂಗಭೂಮಿಯಲ್ಲಿ ನಾಯಕ ನಟ, ನಾಯಕ ನಟಿ, ಪೋಷಕ ನಟ, ಪೋಷಕ ನಟಿ ಎಂಬ ಪ್ರತ್ಯೇಕತೆಯಿಲ್ಲ. ಆದರೆ ಸಿನಿಮಾದಲ್ಲಿ ಅಂಥದೊಂದು ಗೆರೆಗಳನ್ನು ಹಾಕಿಕೊಂಡಿದ್ದೇವೆ. ಆ ಪದ್ಧತಿ ಬೆಳೆದುಬಂದಿದೆ. ಅದನ್ನು ನಾನಿಲ್ಲಿ ದೂರುತ್ತಿಲ್ಲ. ಆದರೆ ಒಬ್ಬ ನಾಯಕಿಯೇ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಬೇಕೇಹೊರತು ಪೋಷಕ ನಟಿಯಲ್ಲ. ಇದುವರೆಗೆ ಪೋಷಕ ನಟಿ ಎನಿಸಿಕೊಂಡಿದ್ದೆ. ಈಗ ಗುಲಾಬಿಯ ಪಾತ್ರದಿಂದ ಉತ್ತಮ ನಟಿಯಾಗಿ ಪರಿಗಣಿತವಾಗಿದ್ದೇನೆ. ಅದೇ ಸಂತೋಷ”.
ಒಂದು ಸಂದರ್ಭದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದೆ ನಿಜ, ಅದೇ ಹುಡುಗರು ದೊಡ್ಡವರಾಗಿ ನನ್ನ ನಟನೆಯನ್ನು ಮೆಚ್ಚುತ್ತಿದ್ದಾರೆ ಎಂಬುದು ಅವರ ಸಂತೋಷದ ನುಡಿ. ಸಂಘದ ಅಧ್ಯಕ್ಷ ಕೆ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರಭುರಾಜನ್, ಖಜಾಂಚಿ ಕುಂದೂರು ಉಮೇಶ ಭಟ್ಟ ಭಾಗವಹಿಸಿದ್ದರು.
ಹೊಸ ಅಂಕಣದಲ್ಲಿ “ಪೋಸ್ಟ್ ಮ್ಯಾನ್ ಇನ್ ದಿ ಮೌಂಟೇನ್ಸ್”
ನಮ್ಮಲ್ಲಿ ಹೊಸದಾಗಿ ಆರಂಭವಾಗಿರುವ ಅಂಕಣ ಸಿನಿಮಾ “ಸ್ಕೋಪ್’. ಒಂದು ಚಿತ್ರದ ಬಗ್ಗೆ ಕೂಲಂಕಷ ಅಧ್ಯಯನವನ್ನು ಕೈಗೊಳ್ಳುವ ನೆಲೆಯಿದು. ಈ ಮೂಲಕ ಸಿನಿಮಾವನ್ನು ಅರ್ಥಮಾಡಿಕೊಳ್ಳುವ ಬಗೆ. ಒಂದು ರೀತಿಯಲ್ಲಿ ಅಕಾಡೆಮಿಕ್ ನೆಲೆಯಲ್ಲಿರುತ್ತದೆ. ನಮ್ಮ ನೆಚ್ಚಿನ ಸಿನಿ ತಜ್ಞ ಪರಮೇಶ್ ಗುರುಸ್ವಾಮಿ ಸಿನಿಮಾಗಳನ್ನು ಆಗಾಗ್ಗೆ ವಿಶ್ಲೇಷಿಸುವರು. ಬರಹ ಅಧ್ಯಯನ ನೆಲೆಯಲ್ಲಿರುವುದರಿಂದ ಮೂರ್ನಾಲ್ಕು ಕಂತುಗಳಲ್ಲಿ ಪ್ರಕಟವಾಗುತ್ತದೆ. ಇದನ್ನು ಓದಿ ಪ್ರತಿಕ್ರಿಯಿಸಿ. ಸಾಂಗತ್ಯ ಬರಿದೇ ಸಿನಿಮಾ ಅನಿಸಿಕೆಗಳನ್ನು ಹೇಳುವುದಿಲ್ಲ ; ಸಿನಿಮಾವನ್ನು ಎಲ್ಲರೊಳಗೆ ಬೆಳೆಸುವ ಪ್ರಯತ್ನ ಅದರದ್ದು. ಆ ನೆಲೆಯಲ್ಲಿ ಈ ಅಂಕಣ.
ಸಾಂಗತ್ಯ 2008 ರ ಕುಪ್ಪಳ್ಳಿ ಚಲನಚಿತ್ತ್ರೋತ್ಸವದಲ್ಲಿ ನಾವು ನೋಡಿದ ಚಿತ್ರಗಳಲ್ಲೆಲ್ಲ ಪೋಸ್ಟ್ ಮ್ಯಾನ್ ಇನ್ ದಿ ಮೌಂಟೈನ್ಸ್ ಚಿತ್ರವು ಪ್ರೇಕ್ಷಕರ ಮನಸ್ಸಿನಾಳಕ್ಕೆ ಇಳಿದ ಚಿತ್ರ. ಈ ಚಿತ್ರದ ಮುಖ್ಯ ಪಾತ್ರಗಳು ಮತ್ತು ಘಟನೆಗಳು ನಮ್ಮದೇ ಅನುಭವದ ಭಾಗವಾಗಿ ಬಿಡುತ್ತವೆ. ಸರಳವಾದ ನೇರ ಕಥಾನಕವನ್ನು ಸಿನೆಮಾ ತಾಂತ್ರಿಕತೆಯ ನವಿರಾದ ಕುಸುರಿ ಮತ್ತು ಹದವಾದ ಕಲಾತ್ಮಕ ನೇಯ್ಗೆಯ ಮೂಲಕ ಅದ್ಭುತ ಕೃತಿಯನ್ನಾಗಿ ನಿರ್ದೇಶಕ ಕಡೆದಿದ್ದಾನೆ.

ಕಥೆ ಇಷ್ಟೆ: ಅಪ್ಪ, ಪರ್ವತ ಶ್ರೇಣಿಗಳಲ್ಲಿರುವ ಊರುಗಳಿಗೆ ಪತ್ರಗಳನ್ನು ಹಂಚುತ್ತಿದ್ದ ಅಂಚೆಯ ಮನುಷ್ಯ. ಈಗ ಮಂಡಿ ನೋವಿನಿಂದಾಗಿ ನಿವೃತ್ತ. ಅದೇ ಕೆಲಸವನ್ನು ಇಲಾಖೆ ಅವನ ಮಗನಿಗೆ ಕೊಟ್ಟಿದೆ. ಮಗನ ಮೊದಲ ಸಲ ಡ್ಯೂಟಿಯನ್ನು ನಿರ್ವಹಿಸಲು ಮಾರ್ಗದರ್ಶಕನಾಗಿ ಅಪ್ಪನೂ ಜೊತೆಯಲ್ಲಿ ಹೊರಡುತ್ತಾನೆ. ಅವರಿಬ್ಬರೂ ವಾಪಸ್ಸು ಬರುವವರೆಗಿನ ಚಿತ್ರಣವೇ ಈ ಸಿನೆಮ. ಸುಂದರವಾದ ಪರ್ವತ ಶ್ರೇಣಿಗಳ ಒಡಲಿನಲ್ಲಿ ಸಾಗುವ ಇವರಿಬ್ಬರ ಪಯಣ ಪ್ರೇಕ್ಷಕರ ಪಯಣವೂ ಆಗಿಬಿಡುತ್ತದೆ. ಈ ಪಯಣದಲ್ಲಿ ಒಂದು ನಾಯಿಯೂ ಅವರ ಜತೆಯಿರುತ್ತದೆ. ಗುತ್ತಿಯ ನಾಯಿಯ ಹಾಗೇ. ಈ ನಾಯಿ ಚಿತ್ರದಲ್ಲಿ ಇರದಿದ್ದರೆ ಈ ಚಿತ್ರ ಚೆನ್ನಾಗಿಯೇ ಇರುತ್ತಿತ್ತು. ಆದರೆ ಪ್ರೇಕ್ಷಕರಿಗೆ ಈಗಿರುವಷ್ಟ್ಟು ಆಪ್ತವಾಗುತ್ತಿರಲಿಲ್ಲ.
ಸಾಮಾನ್ಯವಾಗಿ ಯಾವುದೇ ನಿರೂಪಣಾತ್ಮಕ ಕಲೆಯಲ್ಲಿ ಪಯಣದ ನಿರೂಪಣೆಯು ಪಾತ್ರಗಳಿಗೆ ಕಲಿಕೆಯ ಮತ್ತು ಬೆಳವಣಿಗೆಯ ಅವಕಾಶವನ್ನೂ ಒದಗಿಸುತ್ತದೆ. ಅಪ್ಪ, ಮಗ ಮತ್ತು ನಾಯಿ, ಈ ಮೂರು ಜೀವಿಗಳು ಒಂದುವರೆ ಘಂಟೆಗೂ ಕಡಿಮೆ ಅವಧಿಯ ಈ ಚಿತ್ರದಲ್ಲಿ ಮಾಡುವ ಪಯಣ, ಪರಸ್ಪರರನ್ನು ಅರಿಯುವ, ತಮ್ಮನ್ನು ತಾವೆ ಅರಿತುಕೊಳ್ಳುವ ಮತ್ತು ಬದುಕಿನ ಬಗ್ಗೆ ಸಹ ಅರಿಯುವ ಪಯಣವಾಗಿದೆ. ಈ ಪಯಣ ಸಂವೇದನಾಶೀಲ ಪ್ರೇಕ್ಷಕರ ಪಯಣವೂ ಆಗುತ್ತದೆ.
ಇಂಥ ನವಿರಾದ, ಪ್ರೇಕ್ಷಕರ ಮನಸ್ಸಿನಾಳದಲ್ಲಿ ಬದುಕಿನ ಬಗ್ಗೆ ಧನಾತ್ಮಕ ಸೆಲೆಗಳನ್ನು ತಟ್ಟುವ ಚಿತ್ರವನ್ನು ಮಾಡುವಾಗ ನಿರ್ದೇಶಕ ತಾಂತ್ರಿಕವಾಗಿ ಚಿತ್ರಕಥೆ, ಚಿತ್ರೀಕರಣ ಮತ್ತು ಸಂಕಲನ ತಂತ್ರಗಳನ್ನು ಹೇಗೆ ದುಡಿಸಿಕೊಂಡಿದ್ದಾನೆ ಎಂಬುದು ನನ್ನ ಮುಖ್ಯ ಆಸಕ್ತಿ. ಅದನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸುತ್ತಿದ್ದೇನೆ.
ಪ್ರಾರಂಭದಲ್ಲಿ ಮಂಜಿನಿಂದಾವೃತವಾದ ಸುಂದರವಾದ ಮಲೆನಾಡಿನ ಹಲವು ಮನೆಗಳ ಗುಂಪಿನ ಟಾಪ್ ಆಂಗಲ್ ಷಾಟ್ (top angle shot)ಫೇಡ್ ಇನ್(fade in ) ಆಗುತ್ತದೆ. ಇದು ಗದ್ದೆಗಳ ಅಂಚಿಗಿರುವ ಮಂಜಿನಿಂದಾವೃತವಾದ ಮನೆಗಳ, ಆ ಮನೆಗಳ ಹಿಂದೆ ಪುಟ್ಟ ಗುಡ್ಡ ಮತ್ತು ಮರಗಳಿರುವ ಪ್ಯಾನ್ ಷಾಟ್(pan shot)ಗೆ ಡಿಸಾಲ್ವ್(dissolve)ಆಗುತ್ತದೆ. ಗದ್ದೆಗಳ ಮಧ್ಯದಲ್ಲೇ ಊರಿಗೆ ಸಾಗಿರುವ ಬಂಡಿ ರಸ್ತೆಯಿದೆ. ಈ ಷಾಟ್ ಕೊನೆಯಲ್ಲಿ ಊರಿನ ಕಾಲು ಹಾದಿಯಿಂದ ಮನೆಯೊಂದರ ಹಿತ್ತಿಲಿಗೆ ಪ್ಯಾನ್ ಆಗುವ ಷಾಟ್ಗೆ ಡಿಸಾಲ್ವ್ ಆಗುತ್ತದೆ. ಆ ಮನೆಯ ಗೋಡೆಯಲ್ಲಿರುವ ಪುಟ್ಟ ಕಿಟಕಿಯಿಂದ ಒಳಗೆ ಉರಿಯುತ್ತಿರುವ ದೀಪದ ಕಿತ್ತಳೆ ರಂಗಿನ ಬೆಳಕು ಮಿಣಕುತ್ತಿದೆ. ಮೂರು ಷಾಟ್ಗಳ ಈ ಸಂಕಲನ ತುಣುಕು ಸುಭಗ ಸಂಕಲನ ತಂತ್ರದಿಂದ ಇಡೀ ಚಿತ್ರದ ನವಿರುತನವನ್ನು ಪರ್ವತ ಪ್ರದೇಶದ ಹಸಿರು, ಅಲ್ಲಲ್ಲೆ ಹಾಸಿದಂತಿರುವ ಬಿಳಿ ಮಂಜು, ಮಲೆನಾಡಿನ ಶೀತ ಮತ್ತು ಚಳಿ, ಒಟ್ಟಾಗಿರುವ ಬೆಚ್ಚಗಿನ ಮನೆಗಳು ಹಾಗು ಜೀವಂತಿಕೆಯ ಹಿತವೆನಿಸುವ ಕಿತ್ತಳೆ ಬಣ್ಣದ ಬೆಳಕಿನ ಮೂಲಕ ನಾಂದಿ ಹಾಡುತ್ತದೆ.
ಎಲ್ಲ ಕಲಾ ಪ್ರಕಾರಗಳು ತಮ್ಮ ಮಾಧ್ಯಮದ ಮಿತಿಗಳನ್ನು ವಿಸ್ತರಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರುತ್ತವೆ. ಅದಕ್ಕಾಗಿ ಇತರ ಕಲೆಗಳಲ್ಲಿನ ತಂತ್ರಗಳನ್ನು ಸಲಕರಣೆಗಳನ್ನು ಅಗತ್ಯಕ್ಕೆ ತಕ್ಕಂತೆ ದುಡಿಸಿಕೊಳ್ಳುತ್ತ ರೂಢಿಗತ ರೀತಿಗಳನ್ನು ಮಾರ್ಗಗಳನ್ನು ಪ್ರಯೋಗಕ್ಕೆ ಒಡ್ಡುತ್ತ ಸೃಜನಶೀಲವಾಗುತ್ತವೆ. ಬೇಲೂರು ಹಳೆಬೀಡಿನ ಶಿಲ್ಪವು ನೃತ್ಯದ ಲಾಲಿತ್ಯವನ್ನು ಮತ್ತು ಕಾವ್ಯದ ಛಂದವನ್ನು ಬಳಸಿಕೊಂಡಿದೆ.
ದೇವನೂರರ ಕುಸುಮಬಾಲೆ, ನೃತ್ಯದ ಲಾಲಿತ್ಯ, ಶಿಲ್ಪದ ಸೌಷ್ಟವ ಮತ್ತು ಕುಸುರಿಯನ್ನ ಬಳಸಿಕೊಂಡರೆ ತೇಜಸ್ವಿಯವರ ಬರಹ, ಛಾಯಾಗ್ರಹಣದ ದೃಶ್ಯಾತ್ಮಕತೆ ಮತ್ತು ಚಲನಚಿತ್ರದ ಚಲನಶೀಲತೆಯನ್ನು ದುಡಿಸಿಕೊಂಡಿವೆ. ಇತರ ಕಲಾತ್ಮಕ ಅಭಿವ್ಯಕ್ತಿ ಮಾಧ್ಯಮಗಳಿಗೆ ಹೋಲಿಸಿದರೆ ಚಲನಚಿತ್ರವು ತೀರ ಇತ್ತೀಚಿನದು. ಬಹಳ young. ಉಳಿದೆಲ್ಲವುಗಳಿಗಿಂತ ತಾಂತ್ರಿಕವಾಗಿ ಸಂಕೀರ್ಣವಾದುದು. ಆದರೆ ಉಳಿದೆಲ್ಲ ಪ್ರಕಾರಗಳನ್ನು ತನ್ನ ಅಗತ್ಯಕ್ಕೆ ದುಡಿಸಿಕೊಳ್ಳುವುದು ಮಾತ್ರವಲ್ಲ. ಅವುಗಳ ತಂತ್ರಗಳನ್ನು ಮತ್ತು ಕೌಶಲಗಳನ್ನು ಸಹ ಯಾವುದೇ ರೀತಿಯ ಎಗ್ಗಿಲ್ಲದೆ ಸಲೀಸಾಗಿ ಎತ್ತಿ ದಕ್ಕಿಸಿಕೊಂಡು ತನ್ನದೇ ಆದ ಹೊಸ ಆಯಾಮವನ್ನು ಕಲ್ಪಿಸಿಕೊಳ್ಳುತ್ತದೆ. ಇದು ಬೆರಗುಗೊಳಿಸುವಂಥ ಎರವಲು!
ಚಲನಚಿತ್ರ್ತ್ರವೊಂದರ ತಯಾರಿಕೆಯು ಮುಖ್ಯವಾಗಿ ಮೂರು ಹಂತಗಳನ್ನು ಒಳಗೊಳ್ಳುತ್ತದೆ. ನಿರ್ಮಾಣ ಪೂರ್ವ, ನಿರ್ಮಾಣ ಮತ್ತು ನಿರ್ಮಾಣೋತ್ತರ ಎಂದು ಗುರುತಿಸಿ ಬಹುದು. ಈ ಹೆಸರುಗಳು ಅಷ್ಟೇನು ಸಮಾಧಾನಕರವಲ್ಲದ ಇಂಗ್ಲಿಷ್ನ ಅನುವಾದ. ನಿರ್ಮಾಣ ಪೂರ್ವದಲ್ಲಿ ಕಥೆ ಅಥವಾ ತಿರುಳಿನ ಆಯ್ಕೆ ಮತ್ತು ಚಿತ್ರ ಕಥೆಯ ರಚನೆಯಾಗುತ್ತದೆ. ಒಂದು ಆಯಾಮದಲ್ಲಿ ಇದು ಸಾಹಿತ್ಯ ರಚನೆಯೇ ಆದರೂ ಮುಖ್ಯವಾಗಿ ಚಿತ್ರೀಕರಣ ಮತ್ತು ಸಂಕಲನದ ತಾಂತ್ರಿಕ ಆಯಾಮವು ಇಲ್ಲಿ ಸವಾರಿ ಮಾಡುತ್ತಿರುತ್ತದೆ. ಸಂಭಾಷಣೆ ಇಲ್ಲಿ ನಾಟಕವನ್ನು ಅನುಕರಿಸುತ್ತದೆ. ಪುನಃ ಮುಂದಿನೆರಡು ಹಂತಗಳು ಸಂಭಾಷಣೆಯನ್ನು ರೂಪಿಸುತ್ತಿರುತ್ತವೆ. ಏನೇ ಆದರೂ ಈ ಹಂತವು ಮೂಲಭೂತವಾಗಿ ಸಾಹಿತ್ಯ ರಚನೆಯೆ.
ಚಿತ್ರಕಥೆಯನ್ನಾಧಾರವಾಗಿಟ್ಟುಕೊಂಡು ಚಿತ್ರೀಕರಣ ನಡೆಯುತ್ತದೆ. ಚಿತ್ರೀಕರಣ ಹಂತದಲ್ಲಿ ನಿರ್ದೇಶಕ(ಕಿ) ನಿಜವಾದ ಕ್ಯಾಪ್ಟನ್. ನಿರ್ದೇಶಕರ ಅಗತ್ಯವನ್ನು ನಾನಾ ತರಹದ ಕುಶಲ ಕರ್ಮಿಗಳು ಈ ಹಂತದಲ್ಲಿ ಪೂರೈಸುತ್ತಾರೆ. ನಾಟಕ ಮತ್ತು ನೃತ್ಯಗಳ ಪ್ರಸಾಧನ, ವೇಷ ಭೂಷಣ, ಅಭಿನಯಗಳನ್ನು ಬಳಸಿಕೊಂಡರೂ ಇಲ್ಲಿ ನಾಟಕೀಯವಾಗಬಾರದು. ಚಲನಚಿತ್ರದ ಶೈಲಿ ನಾಟಕ ಶೈಲಿಗಿಂತ ವಿಭಿನ್ನ. ಸೆಟ್ಗಳಿಗೆ ಕಟ್ಟಡ ರಚನೆಯಂತೇ ನಿರ್ಮಾಣ, ಸುಣ್ಣ ಬಣ್ಣಗಳು, ಪೀಠೋಪಕರಣಗಳ ಕೆಲಸವಾಗಬೇಕು. ಆದರೆ ಅದು ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ಸಿನೆಮಾ ತಾಂತ್ರಿಕತೆಯ ಅಗತ್ಯವನ್ನನುಸರಿಸಬೇಕು.
ಎಲ್ಲ ಅಂಶಗಳೂ ನಿರ್ದೇಶಕರ ಪರಿಕಲ್ಪನೆಯ ಪ್ರಕಾರ ಸೂಕ್ಷ್ಮವಾಗಿ ರೂಪುಗೊಳ್ಳುತ್ತವೆ. ಸಿನೆಮಾ, ವಾಸ್ತವಕ್ಕೆ ಹತ್ತಿರವಾದ, ಪ್ರೇಕ್ಷಕರಲ್ಲಿ ಇದು ವಾಸ್ತವವೇ ಎಂಬಂಥ ಭ್ರಮೆಯನ್ನುಂಟು ಮಾಡುವ ಮಹಾನ್ ಮೋಸದ ಮಾಧ್ಯಮ. ಮೋಸ ಎಚಿದರೆ ಪ್ರೇಕ್ಷಕರಿಗೆ ತೆರೆಯ ಮೇಲೆ ತಾವು ನೋಡುತ್ತಿರುವುದು ನಿಜವಾಗಲೂ ನಡೆಯುತ್ತಿದೆ ಎಂದು ನಂಬಿಸುವ ಕಲೆ. ಈ ನಂಬಿಸುವ ಕಲೆಯನ್ನು ಕರಗತ ಮಾಡಿಕೊಂಡ ನಿರ್ದೇಶಕರೆ ಯಶಸ್ವಿ ನಿರ್ದೇಶಕರು. ಚಿತ್ರೀಕರಿಸುವಾಗ ಒಮ್ಮೆ ಕ್ಯಾಮೆರಾ ಆನ್ ಮಾಡಿ ಚಿತ್ರೀಕರಿಸಿ ಸ್ಟಾಪ್ ಮಾಡಿದರೆ ಒಂದು ಷಾಟ್ ತೆಗೆದಾಯಿತು ಅಂತ. ಯಾವುದೇ ಕಾರಣಕ್ಕೆ ಅದೇ ಷಾಟನ್ನು ಪುನಃ ತೆಗೆದರೆ ಅದು ಆ ಷಾಟಿನ ಇನ್ನೊಂದು ಟೇಕ್. ಷಾಟ್ಗಳು ವಾಕ್ಯದಲ್ಲಿನ ಪದಗಳಿದ್ದ ಹಾಗೆ. ಪದಗಳು ಕನಿಷ್ಟ ಎರಡು ಗ್ರಹಿಕೆಗಳಲ್ಲಿ ಕೆಲಸ ಮಾಡುತ್ತವೆ. ಒಂದು ಶಬ್ದದ ಮೂಲಕ. ಮತ್ತೊಂದು ಆ ಶಬ್ದಗಳಿಂದ ಮನಸ್ಸಿನಲ್ಲಿ ಮೂಡುವ ಚಿತ್ರದ ಮೂಲಕ. ಷಾಟ್ಗಳು ಗ್ರಹಿಕೆಗಿಂತ ಮುಖ್ಯವಾಗಿ ಪ್ರೇಕ್ಷಕರ ಸಂವೇದನೆಗೆ ತಾಕುತ್ತವೆ.
ಒಂದು ಚಿತ್ರದ ನಿಜವಾದ ಕಟ್ಟೋಣವು ಮೂರನೆಯ ಹಂತದಲ್ಲಿ ನಡೆಯುತ್ತದೆ. ವಾಕ್ಯದಲ್ಲಿ ಹೇಗೆ ಪದಗಳನ್ನು ಬಳಸುತ್ತೇವೆಯೊ ಹಾಗೆ ದೃಶ್ಯ(scene)ಗಳಲ್ಲಿ ಷಾಟ್ಗಳನ್ನು ಬಳಸಲಾಗುತ್ತದೆ. ಸಂಕಲನ ಕ್ರಿಯೆಯು ಶಿಲ್ಪಿಯೊಬ್ಬ ಅಗತ್ಯವಿಲ್ಲದ ಭಾಗಗಳನ್ನು ಬಿಟ್ಟು ಕಲ್ಲು ಅಥವಾ ಕಾಷ್ಠ ಅಥವಾ ಇನ್ನಾವುದೇ ವಸ್ತುವಿನಲ್ಲಿ ಮೂರ್ತಿಯನ್ನು ಸಾಕಾರಗೊಳಿಸುವಂಥ ಕಲ್ಪನೆ ಮತ್ತು ಕೌಶಲವನ್ನು ಆಶಿಸುತ್ತದೆ.
ಪ್ರತಿಮೆಯೊಂದರ ಕೈಯಲ್ಲಿ ತೆಗೆಯಲಾಗದ ಬಳೆಯನ್ನು ಶಿಲ್ಪಿ ಹೇಗೆ ತೊಡಿಸಿರಬಹುದು ಎಂದು ತಲೆ ಕೆಡಿಸುವ ಕರಾರುವಾಕ್ಕಾದ ಕಲ್ಪನೆ ಮತ್ತು ಸೂಕ್ಷ್ಮ ಕೌಶಲ. ಕುರೋಸಾವ ಮೊದಲಾದ ದಿಗ್ಗಜರು ತಾವು ಚಿತ್ರವೊಂದನ್ನು ಸಂಕಲನ ಮೇಜಿನ ಮೇಲೇ ಸೃಷ್ಟಿಸುತ್ತೇವೆ, ಉಳಿದದ್ದೆಲ್ಲ ಅದಕ್ಕೆ ಪೂರ್ವಸಿದ್ಧತೆ ಮಾತ್ರ ಎಂದು ಹೇಳಿಕೊಂಡಿದ್ದಾರೆ. ಇಲ್ಲಿ ಚಿತ್ರಕ್ಕೆ ಪೂರಕವಾದ ಶಬ್ದ ಜೋಡಣೆಯೂ ಆಗುತ್ತದೆ. ಈ ಹಂತದಲ್ಲಿ ಚಿತ್ರಕ್ಕೆ ವಜ್ರದ ಕಟ್ಟಡ ಮತ್ತು ಮೆರಗು ದೊರೆಯುತ್ತದೆ.
ಮೊದಲಿಗೆ ಪೋಸ್ಟ್ಮನ್ ಇನ್ ದಿ ಮೌಂಟೈನ್ಸ್ ಚಿತ್ರದ ಚಿತ್ರಕಥೆಯನ್ನು ತೆಗೆದುಕೊಳ್ಳೋಣ. ಅಧ್ಯಯನದ ದೃಷ್ಟಿಕೋನದಿಂದ ಒಂದೇ ಚಿತ್ರದ ಕನಿಷ್ಟ ಎರಡು ಚಿತ್ರಕಥೆಗಳನ್ನು ನೋಡ ಬಹುದು. ಬಹುತೇಕ ಚಿತ್ರೀಕರಣಪೂರ್ವ ರಚಿಸಿದ ಚಿತ್ರಕಥೆಯು ಚಿತ್ರೀಕರಣ ಸಂದರ್ಭದಲ್ಲಿ ಒಂದು ಸಾರಿ, ಮತ್ತೆ ಸಂಕಲನ ಸಮಯದಲ್ಲಿ ಮತ್ತೊಂದು ಸಾರಿ ಬದಲಾವಣೆಗೊಳಗಾಗುತ್ತದೆ.
ಇನ್ನೊಂದು ಅರ್ಥದಲ್ಲಿ ಮೊದಲು ರಚಿಸುವ ಚಿತ್ರಕಥೆಯು ಚಿತ್ರ ತಯಾರಿಕೆಗೆ ಮಾರ್ಗದರ್ಶಿ ಸೂತ್ರ ಅಥವ ನೀಲನಕ್ಷೆ ಮಾತ್ರ. ಮೊದಲು ರಚಿಸಿಕೊಂಡ ಚಿತ್ರಕಥೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರೀಕರಣ ನಡೆಯುತ್ತದೆ. ಲೊಕೇಶನ್, ಕಲಾವಿದರ ಪ್ರತಿಭೆ, ಛಾಯಾಗ್ರಾಹಕರ ಸೂಚನೆ, ನಿರ್ದೇಶಕರ ಮನಸ್ಸಿನಲ್ಲಿ ಮೂಡುವ ಹೊಸ ಹೊಳಹು ಇನ್ನು ಹಲವಾರು ಅಂಶಗಳು ಬರವಣಿಗೆಯ ರೂಪದಲ್ಲಿರುವ ಚಿತ್ರಕಥೆಯನ್ನು ಆ ಚಿತ್ರದ ಆಶಯಕ್ಕನುಸಾರವಾಗಿ ಉತ್ತಮೀಕರಿಸುತ್ತವೆ, ಅಧ್ವಾನೀಕರಣವೂ ಆಗಬಹುದು. ಈ ಹಂತದಲ್ಲಿ ಸಿನಿ ಅಭಿವ್ಯಕ್ತಿಗೆ ಅಗತ್ಯವಾದ ಎಲ್ಲ ರೀತಿಯ ವಿವರಗಳು ಸೇರ್ಪಡೆಯಾಗುತ್ತವೆ.
ಸಂಕಲನ ಸಮಯದಲ್ಲಂತೂ ಮೂಲ ಚಿತ್ರಕಥೆಯಲ್ಲಿನ ದೃಶ್ಯಗಳ ಅನುಕ್ರಮಣಿಕೆಯಿಂದ ಹಿಡಿದು ಬೇರೆಲ್ಲವೂ ಚಿತ್ರದ ಮುಖ್ಯ ಆಶಯವೊಂದನ್ನು ಬಿಟ್ಟು ಸಂಪೂರ್ಣವಾಗಿ ಬದಲಾಗಿಬಿಡಬಹುದು. ಇಲ್ಲಿ ಚಿತ್ರವೊಂದು ನಿಜವಾಗಲೂ ಅರಳುತ್ತದೆ. ಚಿತ್ರವೊಂದರ ನಿಜವಾದ ಸೃಷ್ಟಿಕ್ರಿಯೆ ನಡೆಯುವುದು ಈ ಹಂತದಲ್ಲೆ. ಸಾಮಾನ್ಯವಾಗಿ ಚಿತ್ರ ಪೂರ್ಣಗೊಂಡ ನಂತರದ ಚಿತ್ರಕಥೆಯು ಮೂಲ ಚಿತ್ರಕಥೆಗಿಂತ ವಿಭಿನ್ನವಾಗಿರುತ್ತದೆ. ಪ್ರಕಟಗೊಂಡಿರುವ ಮೂಲ ಚಿತ್ರಕಥೆಯೊಂದಿಗೆ ಪೂರ್ಣಗೊಂಡ ಚಿತ್ರವನ್ನು ಹೋಲಿಸಿ ಅಧ್ಯಯನ ಮಾಡುವಾಗ ಹೊಂದಿಕೆಯಾಗದೆ ವಿದ್ಯಾರ್ಥಿಗಳು ಗಲಿಬಿಲಿಗೊಳ್ಳುವುದನ್ನ ಅನೇಕ ಬಾರಿ ಕಂಡಿದ್ದೇನೆ. ಇಲ್ಲಿ ಪೂರ್ಣಗೊಂಡಿರುವ ಪೋಸ್ಟ್ಮನ್ ಇನ್ ದಿ ಮೌಂಟೈನ್ಸ್ ಚಿತ್ರದ ಸ್ಥೂಲ ಚಿತ್ರಕಥೆಯನ್ನು ಗಮನಿಸೋಣ.
ಚಿತ್ರದ ತಿರುಳು ಇಷ್ಟೆ: ಪರ್ವತ ಪ್ರದೇಶದಲ್ಲಿ ಅಪ್ಪ ಮತ್ತು ಮಗನ 223 ಕಿ.ಮೀ. ಪಯಣ 3 ಹಗಲು ಮತ್ತು 2 ರಾತ್ರಿಗಳ ಅವಧಿಯಲ್ಲಿ. ಉದ್ದೇಶ, ಅಕಾಲಿಕವಾಗಿ ಅಂಚೆಯಾಳಿನ ಕೆಲಸದಿಂದ ನಿವೃತ್ತನಾಗಿರುವ ಅಪ್ಪ ಮಗನಿಗೆ ಮಾರ್ಗದರ್ಶನ ಮಾಡುವುದು. ಇದು ಚಿತ್ರ ಮುಗಿಯುವ ವೇಳೆಗೆ ಅಂಚೆ ಕೆಲಸದ ಮಾರ್ಗದರ್ಶನ ಮಾತ್ರವಾಗಿ ಉಳಿಯುವುದಿಲ್ಲ. ಬದುಕಿನ ಉತ್ತಮ ಮೌಲ್ಯಗಳ ಮಾರ್ಗದರ್ಶನವೂ ಆಗಿಬಿಡುತ್ತದೆ.
ಮನೆಯಿಂದ ಹೊರಟು ಪರ್ವತಗಳಲ್ಲಿರುವ ಊರುಗಳಿಗೆ ಅಂಚೆ ಬಟವಾಡೆ ಮಾಡಿ ಮರಳುವಷ್ಟರಲ್ಲಿ ಅಪ್ಪ ಮಗ ಪರಸ್ಪರರನ್ನು ಹೆಚ್ಚು ಅರಿಯುತ್ತಾರೆ. ಮಗ ಅಪ್ಪನಿಂದ ತನ್ನ ಹೊಸ ಕೆಲಸದ ಬಗ್ಗೆ ಕಲಿತುಕೊಂಡ ಹಾಗೇ ಅಪ್ಪ ಮಗನಿಂದ ಮನೆಯ ಬಗ್ಗೆ, ಊರಿನ ಬಗ್ಗೆ, ತನ್ನ ಹೆಂಡತಿಯ ಬಗ್ಗೆ, ವ್ಯವಸ್ಥೆಯ ಬಗ್ಗೆ ಅರಿತುಕೊಳ್ಳುತ್ತಾನೆ. ಇವರಿಬ್ಬರ ಜೊತೆ ಪಯಣಿಸುವ ನಾಯಿ ಇಡೀ ಚಿತ್ರಕ್ಕೆ ಅಂತಃಕರಣ, ಲವಲವಿಕೆ ಮತ್ತು ಜೀವಂತಿಕೆಯನ್ನು ತುಂಬುತ್ತದೆ. ಪ್ರಾರಂಭದಲ್ಲಿ ತಾನೊಬ್ಬನೇ ಡ್ಯೂಟಿಗೆ ಹೋಗುತ್ತಿದ್ದೇನೆಂದು ಭಾವಿಸಿರುವ ಉತ್ಸಾಹಿ ಮಗನ ಜೊತೆ ಅವನಿಗೆ ದಾರಿ ಸರಿಯಾಗಿ ಗೊತ್ತಿಲ್ಲ. ಜೊತೆಯಲ್ಲಿ ನೀನೂ ಹೋಗು ಎಂದು ಅಪ್ಪ ನಾಯಿಗೆ ಹೇಳಿದರೆ ಅದು ಒಲ್ಲೆ ಎಂದು ಹಿಂದೆ ಉಳಿಯುತ್ತದೆ. ಆಗ ಮಗ, ಅದು ಇಲ್ಲೇ ಇರಲಿ. ನನಗೆ ತೊಂದರೆ ತಪ್ಪುತ್ತದೆಎನ್ನುತ್ತಾನೆ. ಆದರೆ ಮುಂದೆ ಆ ನಾಯಿ ಇವನ ತೊಂದರೆಗಳನ್ನು ತಪ್ಪಿಸುತ್ತದೆ.
ಪಯಣ ಮುಗಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ನಾಯಿಯೊಂದಿಗೆ ಮಗನ ಸಂಬಂಧ ಅವರಪ್ಪನಷ್ಟೇ ಅವಿನಾಭಾವದ್ದಾಗಿರುತ್ತದೆ. ಬೆಟ್ಟದ ತುದಿಯಲ್ಲಿನ ಅರವಂಟಿಗೆಯಂಥ ಬೃಹತ್ ಕಟ್ಟಡದಲ್ಲಿ ಇವನ ಅನನುಭವದ ಸಣ್ಣ ಎಚ್ಚರ ತಪ್ಪಿನಿಂದಾಗಿ ಜೋರಾಗಿ ಬೀಸುವ ಗಾಳಿಯಲ್ಲಿ ಕೆಲವು ಪತ್ರಗಳು ಹಾರಿ ಹೋಗುತ್ತಿದ್ದಾಗ ಅಪ್ಪ ಕೆಲವನ್ನು ಹಿಡದುಕೊಳ್ಳುತ್ತಾನೆ. ಇನ್ನೇನು ಕೈ ತಪ್ಪಿಯೇ ಹೋಯಿತು ಎಂದುಕೊಂಡಿದ್ದ ಪತ್ರವೊಂದನ್ನು ವೇಗವಾಗಿ ಓಡಿ ಈ ನಾಯಿ ಲಾಘವದಿಂದ ಹಾರಿ ಹಿಡಿಯುತ್ತದೆ. ಅಪ್ಪ ತನ್ನ ಕೆಲಸಕ್ಕೆ ಎಷ್ಟು ಅರ್ಪಿಸಿಕೊಂಡಿರುತ್ತಾನೆಂದರೆ ಅವನ ಪ್ರಾಣವನ್ನೇ ಕಾಪಾಡಿದಷ್ಟು ಸಮಾಧಾನವಾಗುತ್ತದೆ ಅವನಿಗೆ. ಮಗನಿಗೆ ನಾಯಿ ಹೀರೊ ಆಗಿಬಿಡುತ್ತದೆ. (ಮುಂದಿನ ಕಂತಿಗೆ ಕಾಯಿರಿ)
ರಂಜಿತ್ ಬರೆದ “ಪೇಜ್ 3″
“ಪೇಜ್ 3″ ಬರುವ ಮೊದಲು ಚಾಂದಿನಿ ಬಾರ್ ದೊಡ್ಡ ಹಿಟ್ ಆಗಿತ್ತು. ಬಾರ್ ಹುಡುಗಿಯರ ಕುರಿತು ಇದ್ದ ಚಿತ್ರ ವಿಮರ್ಶಕರಿಂದಲೂ ಬಾಯಿ ತುಂಬಾ ಮೆಚ್ಚುಗೆ ಗಳಿಸಿತ್ತು..ಅದರ ನಂತರ ಬಂದ “ಸತ್ತಾ”, “ಆನ್” ಚಿತ್ರ ತಾರಾಗಣ ದೊಡ್ಡದಾಗಿದ್ದರೂ ಅಷ್ಟಾಗಿ ಬಾಕ್ಸ್ ಆಫೀಸ್ ಗಳಿಕೆ ಪಡೆಯಲಿಲ್ಲ. ತನ್ನ ಮ್ಯಾಜಿಕ್ ನ್ನು ಮರುಕಳಿಸಲು ಮಧುರ್ ಆಯ್ದುಕೊಂಡದ್ದು ಈ ಪೇಜ್ 3 ಸೆಲೆಬ್ರಿಟಿಗಳ ಡಾಂಭಿಕತೆಗಳ ಬಗ್ಗೆ. ಲೇಖನದ ಮೊದಲು ನೀಡಿದ್ದ ಪಲ್ಲವಿಯ ಸಾಲು ಹೇಳುವಂತೆ ಅಲ್ಲಿನ ವಿಚಿತ್ರ ಸಂಬಂಧಗಳ ಕುರಿತು ಮನಕಲಕುವಂತೆ ವಿವರಿಸುತ್ತದೆ.“ಸತ್ತಾ” ಕುರಿತು ಟೀನಾರ ವಿಮರ್ಶೆ
ಟೀನಾ ಶಶಿಕಾಂತ್ ಅವರು ಭಂಡಾರ್ಕರ್ ಅವರ “ಸತ್ತಾ” ಸಿನೆಮಾ ಕುರಿತು ವಿಮರ್ಶೆ ಬರೆದಿದ್ದಾರೆ. “ಸತ್ತಾ” ಮಧುರ್ ರೂಪಿಸಿದ ಅತ್ಯುತ್ತಮ ಸಿನೆಮಾಗಳಲ್ಲಿ ಒಂದು. ಮಹಿಳೆಯನ್ನೇ ಕೇಂದ್ರೀಕರಿಸಿದ ಈ ಚಿತ್ರದಲ್ಲಿ ನಟಿ ರವೀನಾ ಟಂಡನ್ ಹಾಗೂ ಅತುಲ್ ಕುಲಕರ್ಣಿ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಚಿತ್ರ ಬಿಡುಗಡೆಯಾದ ವರ್ಷ 2003.
*
‘ಸತ್ತಾ’ ಎಂದರೆ ಅಧಿಕಾರ.
ತನ್ನ ಮೊದಲ ಸಿನೆಮಾ ‘ಚಾಂದನೀ ಬಾರ್ ‘ ನಿಂದ ಎಲ್ಲರ ಗಮನ ಸೆಳೆದ ನಿರ್ದೇಶಕ ಮಧುರ್ ಭಂಡಾರ್ಕರ್ ತನ್ನ ಎರಡನೇ ಚಲನಚಿತ್ರಕ್ಕೆ ರಾಜಕೀಯವನ್ನು ವಸ್ತುವಾಗಿಸಿಕೊಂಡಿದ್ದು ಅದರಲ್ಲೂ ಮಹಿಳಾ ಕೇಂದ್ರೀಕೃತ ಕಥೆಯೊಂದನ್ನು ಆಯ್ದುಕೊಂಡಿದ್ದು ಎಲ್ಲರ ಹುಬ್ಬೇರಿಸಿತು. ಕಾರಣ ರಾಜಕೀಯವನ್ನು ವಸ್ತುವಾಗಿಸಿಕೊಂಡ ಹಲವಾರು ಸಿನೆಮಾಗಳು ಹಿಂದಿಯಲ್ಲಿ ನೂರಾರು ತಯಾರಾಗಿವೆ. ಮಹಿಳೆಯನ್ನು ಪ್ರಮುಖ ವಸ್ತುವಾಗಿಟ್ಟುಕೊಂಡು ಮಾಡಿದ ಸಿನೆಮಾಗಳು ಬಾಕ್ಸ್ ಆಫೀಸಿನಲ್ಲಿ ಗೆಲ್ಲುವುದಿಲ್ಲ ಅನ್ನುವದು ಸಿನಿಮಾ ರಂಗದಲ್ಲಿ ಪ್ರಚಲಿತ ವಿಷಯ. ಈ ಅಪವಾದವನ್ನು ಸುಳ್ಳು ಮಾಡದಲೆ ಈ ಚಲನಚಿತ್ರ ಸೋತೂ ಹೋಯಿತು. ಆದರೆ ಅನೇಕ ಸಿನಿಮಾಪ್ರಿಯರು ಇದನ್ನು ‘ಒಳ್ಳೆಯ’ ಸಿನೆಮಾಗಳ ಕ್ಯಾಟಗರಿಗೆ ಸೇರಿಸಿದರು.

ಮಧುರ್ ಭಂಡಾರ್ಕರ್ ಯಾವುದೇ ವಸ್ತುವನ್ನು ಆಯ್ಕೆ ಮಾಡಿಕೊಳ್ಳಲಿ, ಅದರ ಬಗ್ಗೆ ಆಸ್ಥೆಯಿಂದ ಸಂಶೋಧನೆ ಮಾಡಿ, ನೈಜತೆಯೊಡನೆ ಸಿನೆಮಾ ತಯಾರಿಸುತ್ತಾರೆ ಅನ್ನುವುದು ನಮಗೆ ಈಗಾಗಲೆ ತಿಳಿದಿರುವ ಮಾತು. ‘ಸತ್ತಾ’ ಬಗೆಗೂ ನಾವು ಇದೇ ಮಾತನ್ನು ಹೇಳಬಹುದು. ಭಾರತೀಯ ರಾಜಕೀಯ ವ್ಯವಸ್ಥೆ, ರಾಜಕಾರಣಿಗಳ ಗುದ್ದಾಟ, ಹಿಪಾಕ್ರಸಿ, ಅಧಿಕಾರ ಲಾಲಸೆ ಮೊದಲಾದವುಗಳ ಬಗ್ಗೆ ನೈಜ ಘಟನೆಗಳನ್ನು ಆಧರಿಸಿ ತಯಾರಾದ ಈ ಚಿತ್ರ ಒಂದು ಕಮೆಂಟರಿ ಇದ್ದಹಾಗಿದೆ. ರಾಜಕೀಯದ ಬಗ್ಗೆ ದೂರ ನಿಂತು ಲೇವಡಿಮಾಡುವ ನಮ್ಮಂತಹ ಯುವಜನರಲ್ಲೊಬ್ಬಾಕೆ ಸ್ವತಹ ರಾಜಕೀಯಕ್ಕೆ ಕಾಲಿಟ್ಟಾಗ ಏನೇನು ಕಾಣಬರುತ್ತದೆ ಎನ್ನುವುದನ್ನು ನಿರ್ದೇಶಕ ಪರಿಣಾಮಕಾರಿಯಾಗಿ ತೋರಿಸಿಕೊಡುತ್ತಾರೆ.
ನಾಯಕಿ ಅನುರಾಧಾ ಸೆಹಗಲ್ ಮಹತ್ವಾಕಾಂಕ್ಷೆಯ ಹೆಣ್ಣು. ಮಧ್ಯಮವರ್ಗದ ಪರಿವಾರಕ್ಕೆ ಸೇರಿದ ಅನುರಾಧಾಳಿಗೆ ರಾಜಕಾರಣಿಗಳನ್ನು ಕಂಡರಾಗದು. ತನ್ನ ಕೆಲಸದಲ್ಲಿ ಉನ್ನತ ಹುದ್ದೆ ಪಡೆದುಕೊಂಡು ಯಾರಾದರು ಸಿರಿವಂತ ಹುಡುಗನನ್ನು ಮದುವೆಯಾಗುವ ಕನಸು ಅನುರಾಧಾಳದು. ಅದಕ್ಕೆ ತಕ್ಕ್ಕ ಹಾಗೆ ರಾಜಕಾರಣಿ ಮಹೇಂದ್ರ ಚೌಹಾನನ ಮಗ ವಿವೇಕ್ ಚೌಹಾನ್ ಆಕೆಯಲ್ಲಿ ಅನುರಕ್ತನಾಗುತ್ತಾನೆ. ತನ್ನ ಬಯಕೆಗೆ ತಕ್ಕ ಜೋಡಿ ದೊರಕಿತೆನ್ನುವ ಸಂತಸದಲ್ಲಿ ಅನುರಾಧಾ ವಿವೇಕನನ್ನು ವರಿಸುತ್ತಾಳೆ. ಮದುವೆಯ ಮಾತುಕತೆಯ ಸಮಯದಲ್ಲಿಯೆ ಆಕೆಯ ತಾಯಿಯ ‘ಸಿಂಗಲ್ ಪೇರೆಂಟ್ ‘ ಸ್ಟೇಟಸ್ಸಿನ ಬಗ್ಗೆ ವಿವೇಕನ ಪರಿವಾರದಿಂದ ಪ್ರಶ್ನೆಗಳೇಳುತ್ತವೆ. ಮಣಿಯದ ಅನುರಾಧಾ ತನ್ನನ್ನು ತಂದೆಯ ಸಹಾಯವಿಲ್ಲದೆಯೆ ಬೆಳೆಸಿದ ತಾಯಿಯಿಂದಲೆ ಕನ್ಯಾದಾನ ಮಾಡಿಸಿಕೊಳ್ಳುತ್ತಾಳೆ.
ಮದುವೆಯ ನಂತರ ಅನುರಾಧಾಳ ಕನಸುಗಳು ಒಂದೊಂದಾಗಿ ಕರಗತೊಡಗುತ್ತವೆ. ಪರಿವಾರಕ್ಕಾಗಿ ಆಕೆ ತನ್ನ ಕೆಲಸವನ್ನು ಬಿಡಬೇಕಾಗುತ್ತದೆ. ಆಕೆಯನ್ನು ಮನೆಯ ಅಲಂಕಾರಕ್ಕೆ ಹಾಗೂ ಹಾಸಿಗೆಗೆ ಸೀಮಿತವೆಂಬಂತೆ ಕಾಣುವ ವಿವೇಕನ ಇನ್ನೊಂದು ಮುಖದ ಪರಿಚಯ ಆಕೆಗೆ ಆಗತೊಡಗುತ್ತದೆ. ಅನುರಾಧಾಳ ಸ್ವಾಭಿಮಾನ ಆಕೆಯನ್ನು ವಿವೇಕನೆದುರು ನಿಂತು ಆತನನ್ನು ಪ್ರಶ್ನಿಸುವಂತೆ ಪ್ರೇರೇಪಿಸುತ್ತದೆ. ಇದನ್ನು ಸಹಿಸದ ವಿವೇಕ ಆಕೆಯನ್ನು ನಿಂದಿಸಲು ಆರಂಭಿಸುತ್ತಾನೆ. ಹೀಗೇ ಒಂದು ದಿನ ಗಂಡಹೆಂಡಿರ ನಡುವೆ ಜಗಳವಾದಾಗ ವಿವೇಕ ಕೋಪದಲ್ಲಿ ಗೆಳೆಯನ ಜತೆ ಒಂದು ಪಬ್ಬಿಗೆ ನುಗ್ಗುತ್ತಾನೆ. ಅಲ್ಲಿ ಸಮಯ ಮೀರಿತೆಂದು ಮದ್ಯ ನೀಡಲು ಒಲ್ಲೆನೆನುವ ಬಾರ್ ಮೆಯಿಡ್ ಮೇಲೆ ಕೋಪಗೊಂಡು ಆಕೆಯ ಮೇಲೆ ಗುಂಡುಹಾರಿಸುತ್ತಾನೆ. ಈ ಘಟನೆ ಜೆಸ್ಸಿಕಾ ಲಾಲ್ ಪ್ರಕರಣವನ್ನು ನೆನಪಿಸುತ್ತದೆ. ಮಹೇಂದ್ರ ಚೌಹಾನನ ನಂತರ ಪಕ್ಷದ ಯುವನಾಯಕನಾಗಬೇಕಾಗಿದ್ದ ವಿವೇಕ ಜೈಲುಕಂಬಿ ಎಣಿಸುವಂತಾಗುತ್ತದೆ.
ಈಗ ಎಲ್ಲರ ದೃಷ್ಟಿ ಅನುರಾಧಾಳೆಡೆಗೆ ತಿರುಗುತ್ತದೆ. ಅತ್ತೆ ಮಾವಂದಿರಿಗೆ ಇಷ್ಟವಿಲ್ಲದಿದ್ದರೂ ಎಲ್ಲರ ಒತ್ತಡಕ್ಕೆ ಮಣಿದು ಅನುರಾಧಾ ವಿವೇಕನ ಸ್ಥಾನದಲ್ಲಿ ನಿಂತು ಚುನಾವಣೆ ಗೆಲ್ಲುತ್ತಾಳೆ. ಮೆಲ್ಲಮೆಲ್ಲಗೆ ರಾಜಕೀಯದಲ್ಲಿ ಪಳಗಲು ಆರಂಭಿಸುತ್ತಾಳೆ. ಆಕೆಯನ್ನು ಆರಂಭದಲ್ಲಿ ಸುಮ್ಮನೆ ಗಮನಿಸುವ ಪಕ್ಷದ ಹಿರಿಯ ನಾಯಕ ಯಶವಂತ ಆಕೆಗೆ ಸಹಾಯ ಮಾಡುತ್ತಾನೆ, ರಾಜಕೀಯ ಗುರುವಾಗುತ್ತಾನೆ. ತನ್ನ ಯಶಸ್ಸು ಸಹಿಸದೆ ಅವಮಾನಿಸಲೆತ್ನಿಸುವ ಅತ್ತೆಮಾವಂದಿರನ್ನು ಅನುರಾಧಾ ಎದುರಿಸಿ ತೊರೆದುಬರುತ್ತಾಳೆ. ರಾಜಕೀಯ ಕೊಂಚಕೊಂಚವಾಗಿ ಹೆಬ್ಬಾವಿನಂತೆ ಅನುರಾಧಾಳನ್ನು ನುಂಗಲು ತೊಡಗುತ್ತದೆ. ಎಲ್ಲವನ್ನು ಅಚ್ಚರಿಯಿಂದ ಗಮನಿಸುತ್ತಲೇ ಕಲಿಯುವ ಅನುರಾಧಾಳಿಗೆ ಯಶವಂತನೇ ಊರುಗೋಲು. ಈ ನಡುವೆ ಆಕೆಗೆ ಎದುರುನಿಲ್ಲುವ ಎಲ್ಲರನ್ನೂ ಯಶವಂತ ಒಬ್ಬೊಬ್ಬರನ್ನಾಗಿ ನಿವಾರಿಸುತ್ತಾನೆ. ಅನುರಾಧಾ ಹಾಗೂ ಯಶವಂತರಲ್ಲಿ ಪ್ರೀತಿ ಮೊಳೆಯುತ್ತದೆ.
ಚುನಾವಣೆಯ ಸಂದರ್ಭ ಒದಗಿಬಂದಾಗ ಅನುರಾಧಾಳಿಗೆ ತಾನು ಸಿಲುಕಿಕೊಂಡ ಜಾಲ ಎಂತಹದು ಎಂದು ಅರಿವಾಗತೊಡಗುತ್ತದೆ. ಮುಖ್ಯಮಂತ್ರಿಸ್ಥಾನ ಬೇಕೆನ್ನುವ ಮಹತ್ವಾಕಾಂಕ್ಷೆಯುಳ್ಳ ಯಶವಂತ ಅನುರಾಧಾಳನ್ನು ತನ್ನ ರಾಜಕೀಯ ಲಾಲಸೆಗಾಗಿ ಬಳಸಿಕೊಳ್ಳುತ್ತಿರುವುದು, ತನ್ನ ಗಂಡ ವಿವೇಕನೇ ಸೇರಿದಂತೆ ಹಲವಾರು ಜನರ ವಿರೋಧಿಗಳ ಹತ್ಯೆಗೆ ಕಾರಣನಾಗಿರುವದು ತಿಳಿದುಬಂದಾಗ ಅನುರಾಧಾ ಬದಲಾಗುತ್ತಾಳೆ. ರಾಜಕೀಯದಲ್ಲಿ ಯಾರನ್ನೂ ನಂಬಕೂಡದೆಂಬ ಪಾಠ ಕಲಿತುಕೊಳ್ಳುತ್ತಾಳೆ. ಒಬ್ಬ ಮಾಮೂಲಿ ಹೆಣ್ಣಿನಿಂದ ನುರಿತ ರಾಜಕಾರಣಿಯಾಗಿ ಬದಲಾಗುತ್ತಾಳೆ. ಯಶವಂತನ ವಿಧಾನವನ್ನು ಅವನ ವಿರುದ್ಧವೇ ಪ್ರಯೋಗಿಸುತ್ತಾಳೆ. ಲಿಯಾಕತ್ ಅಲಿ ಬೇಗನಂತಹ ಕುಟಿಲನನ್ನೂ ಚತುರತೆಯಿಂದ ಬಗ್ಗುಬಡಿಯುತ್ತಾಳೆ. ತನಗೇ ರಾಜಕೀಯ ಪೀಠ ದೊರೆಯುವಾಗ ಅದನ್ನು ನಿರಾಕರಿಸಿ ‘ಕಿಂಗ್ ಮೇಕರ್ ‘ ಆಗುವ ನಿರ್ಧಾರ ಮಾಡುತ್ತಾಳೆ.
ಎಲ್ಲ ರಾಜಕೀಯ ಸಿನೆಮಾಗಳಂತೆ ಈ ಸಿನೆಮಾ ಕೂಡ ಹಲವಾರು ಕ್ಲೀಷೆಗಳನ್ನೊಳಗೊಂಡಿದೆ. ಆದರು ಪರಿಣಾಮಕಾರಿ ನಿರ್ದೇಶನ, ರವೀನಾ ಹಾಗೂ ಅತುಲ್ ಕುಲಕರ್ಣಿಯವರ ನಟನೆ, ಪೋಷಕಪಾತ್ರಗಳ ಉತ್ತಮ ನಿರ್ವಹಣೆಯಿಂದಾಗಿ ಸಿನೆಮಾ ಉತ್ತಮಗೊಂಡಿದೆ. ಭಂಡಾರ್ಕರರ ಎಲ್ಲ ಸಿನೆಮಾಗಳಂತೆ ಇಲ್ಲಿಯೂ ಕೂಡ ಮಹಿಳಾ ಪಾತ್ರಕ್ಕೆ ಪ್ರಾಮುಖ್ಯ ದಕ್ಕಿದೆ. ನೈಜ ಶೈಲಿ ಒಮ್ಮೊಮ್ಮೆ ಹೆಚ್ಚಾಯಿತೆನಿಸಿ ರಾಮ್ ಗೋಪಾಲ್ ವರ್ಮಾನ ನೆನಪು ಬರಿಸಿದರು ಹಿಡಿತ ತಪ್ಪದೆ ಸಾಗುತ್ತದೆ. ಕೊನೆಯಲ್ಲಿ ತನ್ನ ಬಲಹೀನತೆಗಳನ್ನು ತನ್ನ ಶಕ್ತಿಯಾಗಿಸಿಕೊಳ್ಳುವ ನಾಯಕಿಯ ಪಾತ್ರ ಮನಸ್ಸಿನಲ್ಲಿ ನಿಲ್ಲುತ್ತದೆ.




