Archive for the ‘ಸಂವಾದ’ Category
ಈ ಭಾನುವಾರ “ಮನಸಾರೆ” ಸಂವಾದ
ಸಂವಾದ.ಕಾಂ ಏರ್ಪಡಿಸಿರುವ ಮನಸಾರೆ ಚಿತ್ರಪ್ರದರ್ಶನ ಹಾಗು ಚಿತ್ರತಂಡದೊಂದಿಗೆ ಸಂವಾದ ನ. 29 ರ ಭಾನುವಾರ ಬೆಳಗ್ಗೆ
ಸಂವಾದದಲ್ಲಿ ಭಾಗವಹಿಸಲಿರುವರು:
ನಿರ್ಮಾಪಕ- ರಾಕ್ಲೈನ್ ವೆಂಕಟೇಶ್
ನಿರ್ದೇಶಕ-ಯೋಗರಾಜ ಭಟ್
ದಿಗಂತ್ – ಕಲಾವಿದ
ನೀತೂ -ಕಲಾವಿದೆ
ರಾಜು ತಾಳಿಕೋಟೆ – ಕಲಾವಿದ
ಮಿತ್ರ – ಕಲಾವಿದ
ಪವನ್ ಕುಮಾರ್ – ಕಲಾವಿದ, ಚಿತ್ರಕತೆಗಾರ
ಸತೀಶ್ – ಕಲಾವಿದ
ಪ್ರದರ್ಶನ: ಸಾಗರ್ ಚಿತ್ರಮಂದಿರ, ಬೆಳಗಿನ ಪ್ರದರ್ಶನ
ಭೋಜನಾನಂತರ ಸಂವಾದ
ಸಂವಾದದ ಸ್ಥಳ: ಅಡಿಗ ರೆಸಿಡೆನ್ಸಿ, ಸಾಗರ್ ಚಿತ್ರಮಂದಿರದ ಹಿಂಭಾಗ
ಚರ್ಚೆಯನ್ನು ನಡೆಸಿಕೊಡಲಿರುವವರು: ಟೀನಾ ಶಶಿಕಾಂತ್, ತುಮಕೂರು – ಲೇಖಕಿ, ಹೇಮಾ ಪವಾರ್ ಲೇಖಕಿ, ಕನ್ನಡ, ಚೇತನಾ ತೀರ್ಥಹಳ್ಳಿ, ಕನ್ನಡಪ್ರಭ, ಸಹ ಸಂಪಾದಕಿ, ಎಸ್ ಆರ್ ರಾಮಕೃಷ್ಣ, ಸುದ್ಧಿ ಸಂಪಾದಕರು, ಸಂಡೇ ಮಿಡ್ ಡೇ, ಎಸ್ ಕೆ ಶ್ಯಾಮಸುಂದರ್, ಸಂಪಾದಕರು, ದಟ್ಸ್ ಕನ್ನಡ.ಕಾಂ
ಕಾರ್ಯಕ್ರಮಕ್ಕೆ ಭಾಗವಹಿಸುವವರು ಪಾಸ್ ಹೊಂದಿರುವುದು ಕಡ್ಡಾಯ.
ಪಾಸ್ ಮತ್ತು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ- ರವಿ-99004 39930, ಕಿರಣ್- 97317 55966, ಅರುಣ್(SAP Labs)-98453 85156, ರಾಜ್ ಕುಮಾರ್ – 94481 71069
ಸಿನಿಮಾ ಎಂದರೆ ಏನು ?
ಸಿನಿಮಾ ಎಂದರೆ ಏನು ?
ಇಂಥದೊಂದು ಪ್ರಶ್ನೆಗೆ ಉತ್ತರ ಹುಡುಕುವಂಥ ಪ್ರಯತ್ನ ಸಾಂಗತ್ಯ ಆರಂಭಿಸುತ್ತಿದೆ. ಬಹಳಷ್ಟು ಬಾರಿ ಸಿನಿಮಾ ಎನ್ನುವುದನ್ನು ಇನ್ನೂ ನಾವು ಸಾಹಿತ್ಯಿಕ ನೆಲೆಯಲ್ಲೇ ಹುಡುಕುವ ಪ್ರಯತ್ನ ನಡೆದಿದೆ. ಸಿನಿಮಾದಲ್ಲಿ ಕಥೆಯನ್ನೇ ಹುಡುಕಿಕೊಂಡು ಬೆನ್ನಟ್ಟಿರುವುದನ್ನು ಕಂಡಿದ್ದೇವೆ. ಒಂದು ದಟ್ಟವಾದ ಕಥೆ ಇಲ್ಲದಿದ್ದರೆ ಸಿನಿಮಾ ಚೆನ್ನಾಗಿಲ್ಲ ಎಂದು ನಿರ್ಧರಿಸುತ್ತೇವೆ. ಹಾಗಾದರೆ ಸಾಹಿತ್ಯವನ್ನು ಯಥಾವತ್ತಾಗಿ ಭಟ್ಟಿ ಇಳಿಸುವುದೇ ಸಿನಿಮಾ ಮಾಧ್ಯಮದ ಸಾಧ್ಯತೆಯೇ ? ದೃಶ್ಯ ಸಾಧ್ಯತೆಗಳ ಪ್ರಯೋಗಶೀಲತೆಗೆ ಅಲ್ಲಿ ಬೆಲೆ ಸಿಗುವುದಿಲ್ಲವೇ ?
ಒಂದು ಸಿನಿಮಾ ಬರಿಯ ಕಥೆಯಿಂದಲೇ ರೂಪುಗೊಳ್ಳುತ್ತದೆಯೇ ಎಂದು ಕೇಳಿದರೆ ಇಲ್ಲ ಎನ್ನುವ ಉತ್ತರ ಸಿಗಬಲ್ಲದು. ಉಳಿದದ್ದು ಏನು ಎಂದು ಕೇಳಿದರೆ ಸಣ್ಣಪುಟ್ಟ ಉತ್ತರದಂತೆ ಛಾಯಾಗ್ರಹಣ, ಸ್ಕ್ರಿಪ್ಟ್, ಸಂಭಾಷಣೆ, ಎಡಿಟಿಂಗ್…ಹೀಗೆ ಇತ್ಯಾದಿಗಳನ್ನು ಹುಡುಕಲು ಶುರು ಮಾಡುತ್ತೇವೆ. ನಿಜವಾಗಲೂ ಹೇಳುವುದಾದರೆ ಸಿನಿಮಾ ನಿರ್ದೇಶಕನ ನಿರ್ದೇಶಿತ ಮಾಧ್ಯಮ ಎನಿಸಿದರೂ ಅದು ಸಾಮೂಹಿಕ ಪ್ರಕ್ರಿಯೆ. ಒಂದು ಸಾಲು ಸಾಲಾಗಿ ನಡೆಯುವ ಸರಣಿ ಕ್ರಿಯೆ. ಸರಣಿಯಲ್ಲಿ ಎಲ್ಲೇ ತಪ್ಪಿದರೂ ಅದರ ಊನ ಮುಚ್ಚಿ ಹಾಕಲಾರದು.

ಹಾಗಾದರೆ ನಾವು ಸಿನಿಮಾದಲ್ಲಿ ಗಮನಿಸಬೇಕಾದದ್ದು ಏನು ? ಕಥೆಯಲ್ಲವೇ ? ಕಥೆ ಅಲ್ಲದಿದ್ದರೆ ಏನನ್ನು ? ಸಿನಿಮಾ ನಿರ್ಮಾಣ ಎಂದರೆ ದುಡ್ಡು ಸುರಿದು ಸುಮ್ಮನಿರುವುದೇ ? ಸಿನಿಮಾ ಮೇಕಿಂಗ್ ಬಗ್ಗೆ ನಮ್ಮ ಆಸಕ್ತಿ ಏಕೆ ಬೆಳೆಯುತ್ತಿಲ್ಲ. ಒಂದು ಒಳ್ಳೆಯ ಚಿತ್ರದ ನಿರ್ಮಾಣದ ಹಿಂದಿನ ಘಟನೆಗಳನ್ನು ಅರ್ಥೈಸಿಕೊಳ್ಳುತ್ತಾ ಸಿನಿಮಾ ರೂಪುಗೊಳ್ಳುವ ಬಗೆಯನ್ನು ತಿಳಿಯಲು ಕುತೂಹಲವೇಕಿಲ್ಲ ?
ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಮ್ಮದು. ಯಾರು ಬೇಕಾದರೂ ಬರೆಯಬಹುದು. ಕೆಲವು ತಜ್ಞರ ಅಭಿಪ್ರಾಯಗಳೂ ಈ ಸರಣಿಯಲ್ಲಿ ಪ್ರಕಟವಾಗಲಿವೆ. “ಸಿನಿಮಾ ಎಂದರೆ ಏನು ?” ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು saangatya@gmail.com OR saangatyaciniblog@gmail.com ಗೆ ಕಳಿಸಬಹುದು.
ಗುರುಪ್ರಸಾದರಿಂದ ಹ್ಯೂಮರಸ್ ಚಿತ್ರಕ್ಕೆ ಕಾಯ್ತಿದ್ದೀವೆ !
ರವಿರಾಜ್,
ಬಹಳ ಸಮಚಿತ್ತದ ಲೇಖನಕ್ಕಾಗಿ ಅಭಿನಂದನೆಗಳು. ಬಹಳ ಇಷ್ಟವಾಯಿತು. ನಾನು ಚಿತ್ರ ನೋಡಿದಾಗ ಪ್ರೇಕ್ಷಕರ ರೆಸ್ಪಾನ್ಸನ್ನೂ ಕೂಡ ಕುತೂಹಲದಿಂದ ಗಮನಿಸುತ್ತ ಇದ್ದೆ. ನೀವು ಹೇಳಿರುವಂತೆ ಕೆಲವಾರು ಕಡೆ ವಿಪರೀತ ಮುಜುಗರ ಬರಿಸುವಂತೆ ಇದ್ದರೂ ನನ್ನ ಸುತ್ತಮುತ್ತಲಿದ್ದ ಹುಡುಗರು ಪ್ರತಿಯೊಂದು ದೃಶ್ಯವನ್ನೂ ಸಿಕ್ಕಾಬಟ್ಟೆ ಎಂಜಾಯ್ ಮಾಡುತ್ತಿರುವ ಹಾಗೆ ಕಂಡಿತು!! ಮಂಜುನಾಥನಿಗೆ ಕೊನೆಗೆ ಬುದ್ಧಿ ಬಂದಾಗ ಎಲ್ಲರಿಗೂ ಬೇಸರವೇ ಆಯಿತು ಅನ್ನುವದು ಅವರ ಉದ್ಗಾರಗಳಿಂದ ಸ್ಪಷ್ಟವಾಯಿತು. ನನಗೆ ಗಾಬರಿಯಾಗಿದ್ದು ಇವರು ಮಲಗಿದ್ದ ಮಂಜುನಾಥನನ್ನೆ ಹೆಚ್ಚಿಗೆ ಮೆಚ್ಚಿಕೊಂಡರಾ ಅಥವಾ ಎಚ್ಚರಗೊಂಡ ಮಂಜುನಾಥನನ್ನೇ ಅನ್ನುವದು ತಿಳಿಯದೇ ಹೋಗಿ ಗೊಂದಲವಾಗಿದ್ದಕ್ಕೆ.
ಸ್ಕ್ರಿಪ್ಟು ನಟರ ನಟನೆಗೆ ತಕ್ಕಂತಿರದೆ ಅವನಿಂದ/ಅವಳಿಂದ ಹೊಸತೇನನ್ನೊ ತಂದುಕೊಡುವಂತೆ ಇದ್ದರೆ ಒಳ್ಳೇದು. ಜಗ್ಗೇಶ್ ಅಂದ ತಕ್ಷಣ ನಾವು ಕೆಲವೊಂದು ಎಕ್ಸ್ ಪೆಕ್ಟೇಶನ್ನುಗಳನ್ನಿಟ್ಟುಕೊಂಡು ಚಲನಚಿತ್ರ ನೋಡಲಿಕ್ಕೆ ಹೋಗುತ್ತೇವೆ. ಜಗ್ಗೇಶರ ಒಂದು ವಿಶಿಷ್ಟತೆ ಅಂದರೆ ಅವರು ಎಂತಹ ದ್ವಂದಾರ್ಥದ ಸಂಭಾಷಣೆಯನ್ನೂ ಸಲೀಸಾಗಿ ನಿಭಾಯಿಸಿಬಿಡುತ್ತಾರೆ. ಚಿತ್ರಕ್ಕೆ ಅದರ ಅವಶ್ಯ ಇರುವುದಾದರೆ ಏನೂ ಮಾಡಲಾಗದು. ಮಂಜನ ಲಫಂಗತನವನ್ನು ತೋರಿಸಲು, ಜಗ್ಗೇಶರ ಫ್ಯಾನುಗಳನ್ನ ಮೆಚ್ಚಿಸಲು ಬಹುಶಃ ಕೆಲವೆಡೆ ಅಂತಹ ಸಂಭಾಷಣೆಯನ್ನು ಬಳಸಿರಬಹುದು.
ಆದರೆ ಮಂಜನ ಉಂಡಾಡಿತನವನ್ನ ತೋರಿಸಲು ಅವರಪ್ಪ ಅಮ್ಮ ಆತನನ್ನು ಹುಡುಕಿಕೊಂಡು ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಆಟೋ ಡ್ರೈವರನ ಕೈಲಿ ಬೈಸಿಕೊಳ್ಳುತ್ತ ಓಡಾಡುವ ಸೀಕ್ವೆನ್ಸಿಗಿಂತ ಹೆಚ್ಚಿಗೆ ಬೇಕಾಗಲಿಕ್ಕಿಲ್ಲ ಅಲ್ಲವೆ? ನಿರ್ದೇಶಕ ತನ್ನ ಕಥೆಗೆ ತಕ್ಕ ಹಾಗೆ ನಟನೆಯನ್ನ ಮೌಲ್ಡ್ ಮಾಡಬೇಕೆ ವಿನಃ ನಟನಿಗೆ ತಕ್ಕ ಹಾಗೆ ಕಥೆಯನ್ನಲ್ಲ. ಯಾವುದು ಸರಿ ಯಾವುದು ತಪ್ಪು ಮತ್ತು ಅದನ್ನ ಹೇಗೆ ತೋರಿಸಿದ್ದಾರೆ ಅನ್ನುವದನ್ನ ಚರ್ಚೆಯ ವಿಷಯವಾಗಿ ತೆಗೆದುಕೊಳ್ಳುವದಾದರೆ ಸಾಕಷ್ಟು ಭಿನ್ನಾಭಿಪ್ರಾಯಗಳು ಬಂದೇ ಬರ್ತವೆ. ಒಬ್ಬರಿಗೆ ಸಲ್ಲುವದು ಇನ್ನೊಬ್ಬರಿಗೆ ಸಲ್ಲದು.
ಅದು ಅವರವರ ಇಷ್ಟಾನಿಷ್ಟ, ಅಭಿರುಚಿ. ಅದರಿಂದ ಸಾಂಗತ್ಯದಲ್ಲಿ ಎಷ್ಟೆಲ್ಲ ಒಳ್ಳೇ ಚರ್ಚೆ ನಡಿಯೋ ಹಾಗಾಗ್ತಿದೆ!! ಮಂಜನ ಲೈಫು, ಆತನ ತಪ್ಪುಗಳನ್ನ ನಿರ್ದೇಶಕ ವೈಭವೀಕರಿಸಿ ತೋರಿಸುತ್ತಲೇ ಆತನ ಅಧಃಪತನದ ಪರಮಾವಧಿಯನ್ನ ಚಿತ್ರೀಕರಿಸುತ್ತ ಹೋಗುತ್ತಾನೆ. ಅದೇ ಈ ಇಶ್ಯೂವನ್ನ – ಅದು ಆಲಸೀ ಯುವಜನತೆ, ನಿರುದ್ಯೋಗ – ಯಾವುದೋ ಒಂದು ಅಂತಿಟ್ಟುಕೊಳ್ಳಿ – ತೀರ ಸೀರಿಯಸ್ಸಾಗಿ ಬಿಂಬಿಸಲು ಹೊರಟಿದ್ದರೆ ಅದನ್ನ ಜನ ಇದೇ ರೀತಿ ರಿಸೀವ್ ಮಾಡುತ್ತಿದ್ದರೆ ಅನ್ನುವ ಡೌಟು ನನಗಿದೆ. ನಮ್ಮ ರಿಸೆಪ್ಷನ್ನು ಹೇಗಿದೆ ಅನ್ನವುದು ನಿರ್ದೇಶಕನ ಬಗ್ಗೆ ಪ್ರಶ್ನೆ ಎತ್ತುವ ಮೊದಲು ನಾವು ನಮಗೆ ಕೇಳಿಕೊಳ್ಳಬೇಕಾಗಿರುವ ಪ್ರಶ್ನೆ.
ನಗಿಸುತ್ತಲೇ ಚುಚ್ಚುವ ಕೆಲಸವನ್ನ ಗುರು ಮಾಡಿದ್ದಾರೆ, ಒಳ್ಳೆಯದು. ಮಠಕ್ಕೆ ಈ ಚಿತ್ರವನ್ನ ಯಾಕೆ ಕಂಪೇರ್ ಮಾಡುವಂತೆ ಇಲ್ಲ ಅಂತ ನೀವು ಹೇಳಿದ್ದು ಸರಿ. ಬರೆ ಸ್ಟಾರ್ಕ್ಯಾಸ್ಟ್ ಒಂದೇ ಅಲ್ಲ, ಮಠದಲ್ಲಿ ಸಿಕ್ಕಾಬಟ್ಟೆ ಇಶ್ಯೂಗಳನ್ನ ಒಂದೇಸಾರಿಗೆ ತೆಗೆದುಕೊಂಡು ಸ್ಕ್ರಿಪ್ಟಿಫೈ ಮಾಡಲಾಗಿತ್ತು. ಗೊಂದಲ ಜಾಸ್ತಿಯಿತ್ತು. ಆದರೆ ಇಲ್ಲಿ ಒಂದುಸಾರಿಗೆ ಒಂದೇ ಇಶ್ಯು ಅಂತ ನಿರ್ದೇಶಕರು ಹೊರಟಿರೋದು ಸರಿಯಾದ ‘ಡೈರೆಕ್ಷನಿ’ನಲ್ಲಿ ಸಾಗುತ್ತಿರೋದರ ಲಕ್ಷಣ ಅನ್ನಿಸ್ತು ನನಗೆ! ಚಿತ್ರ ನನಗೂ ಹಿಡಿಸ್ತು.
ಗುರು ನಮ್ಮಲ್ಲಿನ ಕೆಲವೇ ಜಾಣ ನಿರ್ದೇಶಕರಲ್ಲೊಬ್ಬರು. ಅವರಿಂದ ಮುಂದೆ ಇನ್ನೂ ಒಳ್ಳೆಯ ಹ್ಯಾಮರಸ್.. ಕ್ಷಮ್ಸಿ..ಹ್ಯೂಮರಸ್ ಚಲನಚಿತ್ರಗಳನ್ನ ನಾವು ಬಯಸುತ್ತೇವೆ.——————-ಟೀನಾ ಶಶಿಕಾಂತ್
ಜಾಣ ಪ್ರಶ್ನೆಗಳು ಆಲಸಿ ಮಂಜನದ್ದೋ ? ನಿರ್ದೇಶಕರದ್ದೋ ?
ರವಿರಾಜ್ ಗಲಗಲಿ ಎದ್ದೇಳು ಮಂಜುನಾಥ ಚಿತ್ರ ನೋಡಿ ಬರೆದಿದ್ದಾರೆ. ತಮಗನ್ನಿಸಿದ್ದನ್ನು ಅನಿಸಿಕೆಯಲ್ಲಿ ವ್ಯಕ್ತಪಡಿಸಿರುವ ಅವರು, ತಮ್ಮ ಲೇಖನಕ್ಕೆ ಕೊಟ್ಟಿರುವ ಟೈಟಲ್ ಮೇಲಿನದು “ಜಾಣ ಪ್ರಶ್ನೆಗಳು ಆಲಸಿ ಮಂಜನದ್ದೋ ? ನಿರ್ದೇಶಕರದ್ದೋ?”. ಓದಿ, ಪ್ರತಿಕ್ರಿಯಿಸಿ.
ಒಬ್ಬ ಉತ್ತಮ ಚಿತ್ರ ನಿರ್ದೇಶಕ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ನಿರ್ದೇಶನಕ್ಕೆ ಮುಂದಾಗುತ್ತಾನೆ. ಈ ಪ್ರಶ್ನೆಗಳು ಚಿತ್ರ ನೋಡಿದ ನಂತರ ಪ್ರೇಕ್ಷಕನನ್ನೂ ಕಾಡಬೇಕು. ಹೀಗೆ ಹಲವು ಪ್ರಶ್ನೆಗಳನ್ನಿಟ್ಟುಕೊಂಡು, ಪ್ರೇಕ್ಷಕರ ಮನದಲ್ಲೂ ಹಲವು ಪ್ರಶ್ನೆಗಳನ್ನು ಮೂಡಿಸಿರುವುದು ಗುರುಪ್ರಸಾದ್ರ ಎದ್ದೇಳು ಮಂಜುನಾಥ. ಭಾರಿ ಆಲಸಿಯೊಬ್ಬ ಜೀವಿಸುವ ರೀತಿ, ಸಮಾಜದ ವಿಡಂಬನೆಯನ್ನೇ ಮಾಡುತ್ತ ಮತ್ತೆ ನಿದ್ದೆಗೆ ಜಾರುವ ಕಳ್ಳ ಮಂಜ ಸಮಾಜ, ಸಿನಿಮಾ, ರಾಜಕೀಯ, ಪೊಲೀಸ್ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ನಮ್ಮೆದುರು ಹರಡುತ್ತಾನೆ. ಈ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತ ಹೊರಟರೆ ಮಂಜನ ಬಗ್ಗೆ ಕನಿಕರ ಮೂಡುವುದಿಲ್ಲ, ಬದಲಿಗೆ ಅಭಿಮಾನ ವ್ಯಕ್ತವಾಗುತ್ತದೆ.
ಬದಲಾಗದ ಪರಿಸ್ಥಿತಿ, ಅಸಹಾಯಕತೆ, ತಾನು ಬದಲಾವಣೆಗೆ ಏನಾದರೂ ಮಾಡಬಹುದೇ ಎಂಬ ತುಡಿತದ ಹಾಗೂ ಏನಾದರೂ ಆಗಲಿ ನಮ್ಮ ಸ್ಥಿತಿ ಹೀಗೆ ಎನ್ನುವ ಜನಸಾಮಾನ್ಯನ ನಿರ್ಲಿಪ್ತತೆ ಮಂಜುನಾಥನ ಮೂಲಕ ಚಿತ್ರದಲ್ಲಿ ಪ್ರತಿಬಿಂಬವಾಗಿದೆ. Read the rest of this entry »
ಎದ್ದೇಳು ಮಂಜುನಾಥ- ವಿಕಾಸರ ಅನಿಸಿಕೆ
ಎದ್ದೇಳು ಮಂಜುನಾಥ ಚಿತ್ರದ ಬಗ್ಗೆ ವಿಕಾಸ ಹೆಗಡೆ ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ. ಈ ಚಿತ್ರವನ್ನು ನೋಡುವ ವರ್ಗವನ್ನೂ ಗುರುತಿಸಿ, ಅದನ್ನು ಆಧರಿಸಿ ಆಗಬಹುದಾದ ಪರಿಣಾಮಗಳ ಬಗ್ಗೆ ಇಲ್ಲಿ ವಿಶ್ಲೇಷಿಸಿದ್ದಾರೆ. ನೋಡಿ, ಪ್ರತಿಕ್ರಿಯಿಸಿ.
ಎದ್ದೇಳು ಮಂಜುನಾಥ ಚಿತ್ರವನ್ನು ನೋಡುವುದರಲ್ಲಿ ಮೂರು ತರ:
1. ಜಗ್ಗೇಶ ಅಭಿಮಾನಿಯಾಗಿ 2. ಗುರು ಅಭಿಮಾನಿಯಾಗಿ 3. ಸಾಮಾನ್ಯ ಕನ್ನಡ ಸಿನೆಮಾ ನೋಡುಗನಾಗಿ
ಜಗ್ಗೇಶ್ ಅಭಿಮಾನಿಯಾಗಿ ಹೋಗುವವರಿಗೆ ಅಡಿಯಿಂದ ಮುಡಿಯವರೆಗೂ ಜಗ್ಗೇಶ್ ಜಗ್ಗೇಶ್ ಜಗ್ಗೇಶ್. ಸರಪಟಾಕಿಯಂತೆ ಮಾತುಗಳೇ ಮಾತುಗಳು, ಪಾತ್ರಕ್ಕೆ ತಕ್ಕುದಾದ ಮ್ಯಾನರಿಸಂ, ಸಹಜ ಕಾಮಿಡಿ ಅಭಿನಯ, ನಿಲ್ಲಿಸಲೇ ಆಗದ ನಗು, ಟಾಕೀಸಿನಲ್ಲಿ ಕೂಗಾಟ … ಇದು ಹಬ್ಬ. ಈ ಕೆಟಗರಿಯವರಿಗೆ ಯಾವ ಮೋಸವೂ ಇಲ್ಲದಂತೆ ನೂರಕ್ಕೆ ನೂರು ದುಡ್ಡು ವಸೂಲು. ಇದರಲ್ಲಿ ಕತೆ ಇಲ್ಲ, ಕೊಸರು ಇಲ್ಲ, ಕ್ಲೈಮಾಕ್ಸ್ ಸರಿಯಿಲ್ಲ, ಚಿತ್ರ ನೈಜವಾಗಿಲ್ಲ, ವಿಷುವಲ್ ಇಲ್ಲ ಎಂದೆಲ್ಲಾ ಹೇಳುತ್ತಾ ಕೂರುವುದು ಮೂರ್ಖತನವಾಗಿಬಿಡುತ್ತದೆ. ಅದು ಒಟ್ಟಾಗಿ ನಗಿಸಲೆಂದೇ ಮಾಡಿದ ಜಗ್ಗೇಶ್ ಸಿನೆಮಾ ಮತ್ತು ಅದಕ್ಕಾಗಿಯೇ ಜನ ಅದನ್ನು ಇಷ್ಟಪಡುತ್ತಾರೆ ಕೂಡ. ಇಲ್ಲದಿದ್ದರೆ ಜಗ್ಗೇಶು, ಆತನ ಡೈಲಾಗು, ಆತ ತೋರಿಸುವ ರಾಜ್ ಕುಮಾರ್ ಭಾವ ಕನ್ನಡಿಗರಿಗೆ ಬಹಳ ಹಳೆಯದು.

ಗುರು ಅಭಿಮಾನಿಯಾಗಿ ಹೋಗುವವರಿಗೆ ನಿರ್ದೇಶನ, ಕತೆ, ಚಿತ್ರಕತೆ ಯಾವುದರಲ್ಲೂ ಗುರು ಇಲ್ಲ ಅನ್ನಿಸಿಬಿಡುವುದುಂಟು. ಇದು ‘ಮಠ’ದ ಪರಿಣಾಮ ಎನ್ನಬಹುದು. ಮಠದ ಗುರುವಿನ ಮೇಲೆ ನಿರೀಕ್ಷೆ ಇಟ್ಟು ಹೋಗುವವರಿಗೆ ಇಲ್ಲಿ ಇದ್ದಕ್ಕಿದ್ದಂತೇ ಗುರು ತಮ್ಮ ನಿರ್ದೇಶನದ ಕಾಗುಣಿತವನ್ನೇ ಬದಲಾಯಿಸಿರುವುದರಿಂದ ಚಿತ್ರಕ್ಕೆ ಟ್ಯೂನ್ ಆಗುವುದು ತಡವಾಗಬಹುದು. ಇಲ್ಲಿ ಗುರು ಢಾಳಾಗಿ ಕಾಣುವುದು ಡೈಲಾಗು ಗಳಲ್ಲಿ. ಬದುಕಿಗೆ, ಸಿನೆಮಾ ಜಗತ್ತಿಗೆ ಸಂಬಂಧಿಸಿದ ನೇರ ಮಾರ್ಮಿಕ ಮಾತುಗಳು, ಸಾರ್ವಜನಿಕ ವ್ಯಕ್ತಿಗಳ ಹೆಸರುಗಳ ಬಳಕೆ, ಮದ್ಯ mute mute, ಮಿಮಿಕ್ರಿ ಇದೆಲ್ಲಾ ಗುರುಕೃಪೆ. ತೀರ ಹೇಳಿಕೊಳ್ಳುವಂತದ್ದೇನಿಲ್ಲ ಚಿತ್ರದಲ್ಲಿ ಎನ್ನಿಸಿದರೂ ಕೂಡ ಇಷ್ಟು ಹೊತ್ತು ತನಗೆಲ್ಲೂ ಬೋರಾಗಲೇ ಇಲ್ಲವಲ್ಲ ಮತ್ತು ಸಿನೆಮಾ ವಿಭಿನ್ನವಾಗಿತ್ತಲ್ಲ ಎಂದು ಟಾಕೀಸಿನಿಂದ ಹೊರಬಂದ ಮೇಲಾದರೂ ಗೊತ್ತಾಗುತ್ತದೆ ಮತ್ತು ಈ ಮೂಲಕ ಗುರು ಹೊಸ ಗೆಟಪ್ಪಿನಲ್ಲಿ ಬಂದಿರುವುದು ಅರಿವಾಗುತ್ತದೆ. Read the rest of this entry »
ಚಿತ್ರ ವಿಮರ್ಶೆ ಎಂಬುದು ವೃಥಾ ಚರ್ಚೆಯೇ?
ಸಂವಾದಕ್ಕೆ ಧ್ವನಿಗೂಡಿಸಿರುವವರು ಅನಂತ ಮತ್ತು ವಿ.ರಾ.ಹೆ.. ಒಬ್ಬರು ಚಿತ್ರವನ್ನು ವಿಮರ್ಶಿಸುವುದೇ ತಪ್ಪೇ ? ಎಂಬಂತೆ ತೋರಿದ್ದಾರೆ. ಜತೆಗೆ ವಿ.ರಾ.ಹೆ ಅವರು ಹಿಂದಿ ಕುರಿತು ಕ್ಲಾರಿಫಿಕೇಶನ್ನು ಕೊಟ್ಟಿದ್ದಾರೆ. ಈ ಚರ್ಚೆ ಸಿನಿಮಾ ನಿರ್ಮಾಣ ಕುರಿತು ಚರ್ಚೆ ನಡೆಯಲಿ ಎಂಬುದು ಸಾಂಗತ್ಯದ ಸದಾಶಯ.
ಹಲೋ ಚೇತನಾ ಹಾಗೂ ಬೇಡ ಬಿಡಿ!
ಮೊಟ್ಟ ಮೊದಲನೆಯದಾಗಿ, ನಾನು ಎದ್ದೇಳು ಮಂಜುನಾಥ ನೋಡಿಲ್ಲ, ಈ ವಾರಾಂತ್ಯ ನೋಡಬೇಕೆಂದಿದ್ದೇನೆ. ಅದಕ್ಕೆ ಮೊದಲು ಎರಡು ಮಾತು.
ತಾವುಗಳ ವಿಮರ್ಶೆ ಹಾಗೂ ಚರ್ಚೆಯನ್ನು ಓದಿದೆ. ಎಲ್ಲ ಚಲನ ಚಿತ್ರಗಳನ್ನೂ ಕುರಿತ ಚರ್ಚೆಯಂತೆಯೇ ಇದೂ ಕೂಡ ನಾನಂದುಕೊಂಡ ಹಾಗೆ ಹಾಗೂ ಬಹಳಷ್ಟು ಸಾರಿ ನಾನು ನನ್ನ ಗೆಳೆಯರ ಜೊತೆ, ಚಿತ್ರ ಪ್ರೇಮಿಗಳ ಜೊತೆ ಚರ್ಚಿಸಿದ ಧಾಟಿಯಲ್ಲೇ ಮುಂದುವರೆದು ಕೊನೆಗೊಂದು deadend ನಲ್ಲಿ ನಿಲ್ಲುವ ಸೂಚನೆಗಳು ಕಾಣುತ್ತಿವೆ. Read the rest of this entry »
“ಪ್ರಯೋಗಾತ್ಮಕ ಚಿತ್ರ : ಒಳ್ಳೆಯ ಪ್ರಯತ್ನ”
ಎದ್ದೇಳು ಮಂಜುನಾಥ ಚಿತ್ರ ಕುರಿತ ಸಂವಾದಕ್ಕೆ ಸುಧನ್ವಾ ದೇರಾಜೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಚರ್ಚೆಯನ್ನು ಮುಂದುವರಿಸಿದ್ದಾರೆ. ಹಾಗೆಯೇ ಚೇತನಾರ ಪ್ರತಿಕ್ರಿಯೆಗೆ ಬೇಡಬಿಡಿ ಮರು ಪ್ರತಿಕ್ರಿಯೆ ನೀಡಿದ್ದಾರೆ. ಚರ್ಚೆಯನ್ನು ಮುಂದುವರಿಸಲಿಚ್ಛಿಸುವವರು ಅಭಿಪ್ರಾಯವನ್ನು ಕಳಿಸಿಕೊಡಿ.
“ಬೇಡ ಬಿಡಿ’ ಹೇಳಿದ್ದು ಬಹುಪಾಲು ಸರಿಯಾಗಿದೆ. ಚೇತನಾ ಅವರು ಸುಮಾರು ಎರಡು ವರ್ಷಗಳ ನಂತರ ಕನ್ನಡ ಸಿನಿಮಾ ನೋಡುತ್ತಿರುವುದು, ಕ್ಷಮಿಸಲಾಗದ ಮೊದಲ ತಪ್ಪು ! ಬಹುಶಃ ಅದೇ “ತಪ್ಪು ಗ್ರಹಿಕೆ’ಗೆ ಕಾರಣವಾಗಿರಬೇಕು.
ಕನ್ನಡದ ಮಟ್ಟಿಗೆ ಇದೊಂದು ಉತ್ತಮ ಸಿನಿಮಾ. ಚಿತ್ರಕಲೆ ಅಂದರೆ ಕೇವಲ ಬಣ್ಣ ಮಾತ್ರ ಎನ್ನುವುದೂ ಅಳಿಸಿಹೋಗಿರುವಾಗ, ಸಿನಿಮಾ ಎಂದರೆ ವಿಷುವಲ್ ಮಾತ್ರ ಅಂತ ನಾವೇಕೆ ಅಂದುಕೊಳ್ಳಬೇಕು? ಮಾತನ್ನು ಕೇವಲ ಆಲಿಸುವುದಕ್ಕೂ, ಮಾತಾಡುವವರು ಎದುರೇ ಇರುವುದಕ್ಕೂ ವ್ಯತ್ಯಾಸವಿದೆ. ಮಾತಾಡುವವರನ್ನು ನೋಡುತ್ತಾ ಕೇಳಿದಾಗ ಅದರ ಅನುಭವವೇ ಬೇರೆ. Read the rest of this entry »
“ನನ್ನ ನಿರೀಕ್ಷೆ ಸುಳ್ಳಾಗಿದ್ದು ನಿಜ”
“ಬೇಡಬಿಡಿ” ಎಂಬವರ ಅನಿಸಿಕೆಗೆ ಚೇತನಾ ಅವರು ಉತ್ತರ ಕೊಟ್ಟಿದ್ದಾರೆ. ಸಂವಾದ ಚೆನ್ನಾದ ಕಾವೇರುತ್ತಿದೆ. ಇದಕ್ಕೆ ಎಲ್ಲರೂ ಸೇರಬೇಕೆಂಬುದು ಸಾಂಗತ್ಯದ ಕಾಳಜಿ. ಇದಕ್ಕಾಗಿ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಗಿಂತ ಮೇಲ್ ಮಾಡಿ saangatya@gmail.com.
ಮಿ.ಬೇಡ ಬಿಡಿ ಸಾರ್,
ನಮಸ್ತೇ. ಹೀಗೇ ಪ್ಯಾರಾ ಬೈ ಪ್ಯಾರಾ ರೀತಿಯಲ್ಲೇ ನನ್ನ ಉತ್ತರ.
- ೧ -
ಸ್ಪೂಫ್ ಮತ್ತು ಪಾರಾಡಿಗಳನ್ನ ಬಹಳ ಚೆನ್ನಾಗಿ ಮನದಟ್ಟು ಮಾಡ್ಸಿಸೀರಿ. ಥ್ಯಾಂಕ್ಸ್ (ಸೀರಿಯಸ್ಸಾಗಿ).
- ೨ -
ನೀವು ಎಗ್ಸಾಂಪಲ್ಲುಗಳಿಗೆ ದೂರದೇಶದ ತನಕ ಹೋಗಬೇಕಿಲ್ಲ ಅನ್ಸುತ್ತೆ. ನಮ್ಮಲ್ಲೂ ಈ ಬಗೆಯ ಸಾಕಷ್ಟು ಮೂವೀ, ನಾಟಕ, ಸೀರಿಯಲ್ಲುಗಳಿವೆ. ತತ್ ಕ್ಷಣದ ಹಾಗೂ ಇತ್ತೀಚಿನ ಉದಾಹರಣೆ ಕೊಡಬಹುದಾದರೆ, ‘ಪ್ರೆಸಿಡೆಂಟ್ ಇಸ್ ಕಮಿಂಗ್’ ಸಿನೆಮಾ.
ಈ ಸಿನೆಮಾದಲ್ಲೂ ಅಶ್ಲೀಲ ಸಂಭಾಷಣೆಗಳಿದಾವೆ ಕಣ್ರೀ. ವ್ಯಂಗ್ಯ, ವಿಡಂಬನೆ ಎಲ್ಲಾನೂ ಇವೆ. ಈ ಥರದ ಸಿನೆಮಾಗಳನ್ನ ಸಾಕಶ್ಟು ನೋಡಿದೀನಿ. ಅದೇನೂ ಹೊಸತಲ್ಲ. (ಕನ್ನಡಕ್ಕೆ ಹೊಸತಿರಬಹುದು, ಗೊತ್ತಿಲ್ಲ). ಹಾಗಂತ ಸ್ಪೂಫ್ ಶೈಲಿಯ ಪ್ರಮುಖ ಅಂಶಗಳನ್ನ ಸೇರಿಸಲೇಬೇಕೆಂದು ಅನಗತ್ಯ ಸನ್ನಿವೇಶಗಳಲ್ಲಿ ತೂರಿಸೋದಿದ್ಯಲ್ಲ, ಅದು ನನ್ ಅಬ್ಜೆಕ್ಷನ್ನು. ಉದಾ: ಅಪ್ಪನ್ನ ಮಣ್ಣು ಮಾಡುವಾಗ ‘ಮಣ್ಣಿನ ಮಗನ ಡೈಲಾಗು’. Read the rest of this entry »
Spoof,Parody ಮಾದರಿಯೇ ಈ ಚಿತ್ರದ ವಿಶೇಷ
ಎದ್ದೇಳು ಮಂಜುನಾಥ ಚಿತ್ರಕ್ಕೆ ಚೇತನಾರ ಅನಿಸಿಕೆಗೆ ಹೆಸರು ಹೇಳಲಿಚ್ಛಿಸದವರೊಬ್ಬರು (ಬೇಡ ಬಿಡಿ-ಹೀಗೇ ಅಂಕಿತ ನಾಮವಂತೆ)ಕಳಿಸಿದ ಅಭಿಪ್ರಾಯವಿದು. ಆರೋಗ್ಯಕರ ಸಂವಾದಕ್ಕೆಂದು ಮಾತ್ರ ಹಾಕುತ್ತಿದ್ದೇವೆ.
“ಎದ್ದೇಳು ಮಂಜುನಾಥಾ” ಚಿತ್ರವನ್ನು ಗೆ ಸೇರಿಸಬಹುದು. ಈ genre ಇನ ಚಿತ್ರಗಳಲ್ಲಿ ಕಥೆಗೆ ಅಷ್ಟು ಪ್ರಾಮುಖ್ಯತೆ ನೀಡಿರುವುದಿಲ್ಲ. ಸಮಾಜದಲ್ಲಿ ಪ್ರಚಲಿತವಿರುವ ನಂಬಿಕೆಗಳನ್ನು, ಆ ಸಮಾಜದ ಜನರಲ್ಲಿ ಕಾಣಸಿಗುವ ಹುಚ್ಚುತನಗಳನ್ನು, ಆ ಸಮಾಜದ ಜನಪ್ರಿಯ ವ್ಯಕ್ತಿಗಳನ್ನು, ಆ ವ್ಯಕ್ತಿಗಳು ಮಾಡಿಕೊಂಡಿರುವ ಅವಾಂತರಗಳನ್ನು etc… ಚುಚ್ಚು ಮಾತುಗಳಿಂದ, ಮೊನಚಾದ ಹಾಸ್ಯಾದಿಂದ ಲೇವಡಿ ಮಾಡುವುದು, ಅಣಗಿಸುವುದು ಈ genre ಇನ ಚಿತ್ರಗಳ ಉದ್ದೇಶ. ಹಾಲಿವುಡ್ ನಲ್ಲಿ ಈ ತರಹ ಚಿತ್ರಗಳು ಬರುತ್ತಲೇ ಇರುತ್ತವೆ. Scary movies ಎಂಬುದು ಈ genre ಇನ ಬಹು ಪ್ರಸಿದ್ದ ಸಿನಿಮಾ ಸರಣಿ. “Family Guy”, “South Park”, “Simpsons” ಇವು ಈಗಲೂ ಪ್ರಸಾರವಾಗುತ್ತಿರುವ ಇದೇ genre ಗೆ ಸೇರಿದ ಬಹುಪ್ರಸಿದ್ದ serial ಗಳು. ಇವುಗಳಲ್ಲಿ ಹಾಲಿ,ಮಾಜಿ ಅಮೇರಿಕದ ಅಧ್ಯಕ್ಷರನ್ನು, ಏಸುಕ್ರಿಸ್ತಾನನ್ನು ಸಹ ಬಿಡದೆ ನಿರ್ದಾಕ್ಶಿಣ್ಯವಾಗಿ ಲೇವಡಿ ಮಾಡಲಾಗುತ್ತದೆ. ಇವೆಲ್ಲವೂ ಜನರನ್ನು ನಗಿಸುವಲ್ಲಿ ಯಶಸ್ವಿಯಾಗಿವೆ. ಭಾರತದಲ್ಲೂ ಈ ಕಾರ್ಯಕ್ರಮಗಳ ಕೋಟ್ಯಂತರ ಅಭಿಮಾನಿಗಳಿದ್ದಾರೆ. ನಾನು ಕೂಡ ಒಬ್ಬ.
Spoof,parody ಚಿತ್ರಗಳ ಗುಣಲಕ್ಷಣಗಳೇನೆಂದರೆ: ಸಂಭಾಷಣೆಯೇ ಈ ಚಿತ್ರಗಳ ಜೀವಾಳ; ಅಸಂಬಧ್ಡತೆ, ವಿಕೃತಿ, ಅಶ್ಲೀಲತೆ ಇವೇ ಇದರ ಆಸ್ತಿಗಳು.ಸಮಾಜದಲ್ಲಿ ಕ್ರಾಂತಿವುಂಟು ಮಾಡುವ, ಚಿತ್ರದ ಮೂಲಕ ನೀತಿ ಕತೆ ಹೇಳುವ ಯಾವ ಉದ್ದೇಶವೂ ಈ genre ಇನ ಚಿತ್ರಗಳ ನಿರ್ದೇಶಕರಿಗೆ ಇರುವುದಿಲ್ಲ. Read the rest of this entry »
ಕ್ಲಾಸ್ ಮತ್ತು ಮಾಸ್ ಸೇರಬೇಕಷ್ಟೇ…!
ಟೀನಾಜೀ,
ನಾನು ಸ್ಲಂಡಾಗ್ ಮಟ್ಟ ಎಂದಿದ್ದು ಅದಕ್ಕೇ ಆಗಿತ್ತು. ಆದಿನಗಳು ಎಂಬ ಸಿನೆಮಾದಲ್ಲಿ ಇರದ ಅಥೆಂಟಿಸಿಟಿ ಸ್ಲಂ ಡಾಗ್ ನಂತಹ ಚಿತ್ರಗಳಲ್ಲಿ ಕಾಣುವುದು ಆಶ್ಚರ್ಯವಾಗುತ್ತದೆ. ಮತ್ತೊಂದೇನೆಂದರೆ ನಾವು ಹೋಲಿಕೆ ಮಾಡುವಾಗ ಒಂದು ತಾರೆ ಜಮೀನ್ ಪರ್ ಅಥವಾ ಒಂದು ವೆಡ್ನೆಸ್ಡೇ ಹಿಡಿದುಕೊಂಡು ನಮ್ಮ ಎಲ್ಲಾ ಸಿನೆಮಾಗಳನ್ನು ಅದಕ್ಕೇ ಹೋಲಿಕೆ ಮಾಡಿಬಿಡುತ್ತೇವೆ . ಆದರೆ ಅಲ್ಲೂ ಕೂಡ ಸಿಂಗ್ ಇಸ್ ಕಿಂಗ್, ಕಂಬಕ್ತ್ ಇಷ್ಕ್ ತರಹದ ಬರೀ ಮಾರ್ಕೆಟ್ ಹಿಟ್ ಆದ ಪರಮ ಡಬ್ಬಾ ಚಿತ್ರಗಳೂ ಇವೆ ಮತ್ತು ಅಲ್ಲೂ ಕೂಡ ಅದೇ ‘ಸಿದ್ದಸೂತ್ರ’ದ ಸಿನೆಮಾಗಳೂ ಉಥೇಚ್ಛವಾಗಿ ಬರುತ್ತಿವೆ . ಮುಂಗಾರು ಮಳೆ ‘ಕತೆ’ ಮಾತ್ರ ‘ಸಾಮಾನ್ಯ’ ಅಂದಿದ್ದು ನಾನು.
ಇನ್ನು ಉಳಿದಂತೆ ನೀವು ಕೊಟ್ಟ ಉತ್ತರಕ್ಕೆ, ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ. thanQ. ಕೊನೆ ಪಾಯಿಂಟಿನಲ್ಲಿ ‘ಸಿದ್ಧಸೂತ್ರ’ಗಳ ಪಟ್ಟಿ ಗೆ ಹೊಸದೇನಾದ್ರೂ ಸೇರಿಸಬಹುದಾ ಅಂತ ಯೋಚಿಸಿದರೆ ಏನೂ ಹೊಳೆಯುತ್ತಲೇ ಇಲ್ಲವಲ್ಲ !
ಕ್ಲಾಸ್ ಮತ್ತು ಮಾಸ್ ಎರಡೂ ಸೇರದ ಹೊರತು ಬೇರೆ ಪರಿಹಾರವೇ ಕಾಣುತ್ತಿಲ್ಲ ಸದ್ಯಕ್ಕೆ .
ಚಿತ್ರರಂಗದ ಚರ್ಚಿಸಲಾ(ಗದ)ರದ ಸಂಗತಿಗಳು-ನಿಮ್ಮ ಅಭಿಮತವನ್ನೂ ಹೇಳಿ
ವಿಕಾಸ್ ,
ನನ್ನ ಕಮೆಂಟು ಸುರೇಶರ ಕಂಪಾರಿಸನ್ನಿಗೆ ಕೊಟ್ಟ ಉತ್ತರವಾಗಿದ್ದು ಇಲ್ಲಿ ಸ್ಲಮ್ಡಾಗ್ ಅಳತೆಗೋಲು ಅಥವಾ ಸುಪೀರಿಯರ್ ಅಂತ ಹೇಳೋದಲ್ಲ. ನನ್ನ ಕೆಲವು ಉತ್ತರಗಳು ನಿಮಗಾಗಿ. ಪಾಯಿಂಟ್ ವೈಸ್.
೧. “ನಾವ್ಯಾಕೆ ಇಲ್ಲಿ ಹಿಂದಿ ಚಿತ್ರಗಳನ್ನು ಅಥವಾ ಪ್ರಶಸ್ತಿ ಬಂದ ಮತ್ಯಾವುದೋ ಚಿತ್ರವನ್ನು ಶ್ರೇಷ್ಠತೆಯ ಗುರಿಯನ್ನಾಗಿರಿಸಿಕೊಂಡು ಯೋಚಿಸುತ್ತಿದ್ದೇವೋ ತಿಳಿಯುವುದಿಲ್ಲ. ಕನ್ನಡ ಸಿನೆಮಾಗಳ ಪರಿಸ್ಥಿತಿಗೆ ಈ ಕೀಳರಿಮೆ ಮೊದಲ ಕಾರಣ. ” -
ಇಲ್ಲಿ ಪ್ರಶಸ್ತಿ ಗಳಿಸಿದ ಚಿತ್ರಗಳ ಬಗ್ಗೆ ಮಾತನಾಡಿಲ್ಲ. ಅಲ್ಲಿಯವರೆಗೆ ಹೋಗುವದು ಬೇಡ ಅನ್ನಿಸತ್ತೆ. ನಾನು ಉದಾಹರಿಸಿರುವ ಸಿನೆಮಾಗಳು ಚೊಚ್ಚಲ ನಿರ್ದೇಶನದ ಇಲ್ಲವೆ ಕೆಲವೇ ಲಕ್ಷಗಳ ತೀರ ಕಡಿಮೆ ಬಜೆಟನ್ನಿಟ್ಟುಕೊಂಡು ತಮ್ಮ ಮಣ್ಣ ಸೊಗಡು ಬಿಡದೆ ಫಾರಿನ್ ಲೊಕೇಶನ್ನುಗಳ ಪಾಲಾಗದೆ ಮಾಡಿದ ಸಿನೆಮಾಗಳು. ಇವು ಕಮರ್ಶಿಯಲ್ ಹಿಟ್ಸ್ ಕೂಡ. Read the rest of this entry »
ತಮಿಳು, ಮಲಯಾಳಂಗಿಂತ ನಾವು ಹಿಂದೆಯೇ…
ಸಂವಾದಕ್ಕೆ ತಮ್ಮ ಅಭಿಪ್ರಾಯದ ಮೂಲಕ ಖೋ ಕೊಟ್ಟವರು ಟೀನಾ. ಕನ್ನಡ ಚಲನಚಿತ್ರರಂಗದ ಚರ್ಚಿಸಲಾರದ ಸಂಗತಿಗಳ ಬಗ್ಗೆ ಹೇಳಿದ್ದಾರೆ. ಓದಿ ನೋಡಿ.
ಕೆಲದಿನಗಳ ಬಿಡುವಿನ ನಂತರ ಸಾಂಗತ್ಯಕ್ಕೆ ವಾಪಾಸು ಬಂದು ನೋಡಿದೆ. ಈ ಚರ್ಚೆ ಬಹಳ ಸಲ್ಲುವಂತಹದ್ದು ಅನ್ನಿಸ್ತು. ಸುರೇಶರ ವಾದವನ್ನ ಕೆಲಮಟ್ಟಿಗೆ ನಾನು ಒಪ್ಪುತ್ತೇನೆ ಆದರೆ ಕೆಲವಾದ್ರು ಒಳ್ಳೆ ಚಿತ್ರಗಳು ಇದಾವಲ್ಲ ಅನ್ನೋ ಅಲ್ಪತೃಪ್ತಿ ನಮಗೆ ಬಂದುಬಿಟ್ಟರೆ ಹೇಗೆ? ’ಆ ದಿನಗಳು’ ಹಟ್ ಕೇ ಚಲನಚಿತ್ರ ಅನ್ನಿಸಿದ್ರು ಕೆಲವೊಂದು ಪಾಯಿಂಟುಗಳಲ್ಲಿ ಭಾಳ ವೀಕು ಅನ್ನಿಸ್ತದೆ. ಇದರ ಬಗ್ಗೆ ಒಂದು ಬೇರೆಯ ಡಿಸ್ಕಶನನ್ನೆ ನಡೆಸಲೂ ನಾನು ಸಿದ್ಧ. ಅಥೆಂಟಿಸಿಟಿ ಅನ್ನೋದನ್ನ
ಕೊಡುವ ಲೆಕ್ಕದಲ್ಲಿ ಸುಮಾರು ಅದೇ ಕಾಲಘಟ್ಟವನ್ನು (ಅದಕ್ಕು ಹಿಂದಿನ ಅಂತಲೂ ಹೇಳಬಹುದು)ಚಿತ್ರಿಸುವ ’ಸುಬ್ರಹ್ಮಣ್ಯಪುರಂ’ ಅನ್ನ ನೋಡಿದರೆ ಅದರ ಕಾಸ್ಟ್ಯೂಮಿನಲ್ಲೆ ಕಥೆ ನಡಿಯೋ ಕಾಲಘಟ್ಟದ ಬಗ್ಗೆ ನಮಗೆ ತಿಳಿದುಹೋಗತ್ತೆ. ’ಆ ದಿನಗಳು’ನಲ್ಲಿ ಇಂಥದು ನಮಗೆ ಎಲ್ಲಿ ಕಾಣುತ್ತೆ? ನಾಯಕ ಚೇತನ್ ತೊಡುವ ಬ್ರಾಂಡೆಡ್ ಬಟ್ಟೆ, ನಾಯಕಿಯ ಹೇರ್ ಸ್ಟೈಲ್, ಡ್ರಾಮ್ಯಾಟಿಕ್ ಮಾತುಕತೆ – ಎಲ್ಲಿದೆ ಅಥೆಂಟಿಸಿಟಿ? ಚಿತ್ರ ಚೆನ್ನಾಗಿಲ್ಲ ಅಂತ ಹೇಳಲಾಗದೆ ಇದ್ದರೂನು ನಿರ್ದೇಶಕನ
ಮೊದಲನೆ ಚಿತ್ರ ಅನ್ನೋ ಎಲ್ಲಾ ಲಕ್ಷಣಗಳೂ ಕಾಣತ್ವೆ. ‘ಚೆನ್ನೈ-600028’ ಮತ್ತು ’ಪರುತ್ತಿವೀರನ್’ ಕೂಡ ತಮ್ಮ ಕಥೆಯನ್ನ ತೀರ ಗಟ್ಟಿಯಾಗಿ ಎಸ್ಟಾಬ್ಲಿಶ್ ಆದ ಕ್ಯಾರೆಕ್ಟರುಗಳ ಮೂಲಕ ಕಟ್ಟಿಕೊಡುತ್ತ ಪ್ರೇಕ್ಷಕ ಅವನ್ನ ಯಾವತ್ತಿಗು ಮರೆಯದ ಹಾಗೆ ಮಾಡುತ್ತವೆ. ಕೆಲವೇ ದಶಕಗಳ ಹಿಂದೆ ಅಂತಹ ಒಳ್ಳೆ ಹೆಸರಿರದಿದ್ದ ಮಲಯಾಳಂ ಚಿತ್ರರಂಗಕ್ಕೆ ಇವತ್ತಿಗೆ ಅಂತರ್ರಾಷ್ಟ್ರೀಯ ವಲಯದಲ್ಲೂ ಗೌರವ ದಕ್ಕುತ್ತಾ ಇದೆ. ಇಲ್ಲಿ ನನ್ನ ವಾದ ತಮಿಳು, ಮಲಯಾಳಂ ಚಲನಚಿತ್ರಗಳಷ್ಟು ನಮ್ಮ
ಚಿತ್ರಗಳು ಚೆನ್ನಾಗಿಲ್ಲ ಅನ್ನೋದನ್ನ ಹೇಳೋದಲ್ಲ. ನಮ್ಮ ಪಕ್ಕದ ರಾಜ್ಯದ್ದೆ ಚಿತ್ರರಂಗ ಇವತ್ತು ಹಿಂದೀ ಚಿತ್ರಗಳಿಗೆ ಸಡ್ಡುಹೊಡೆಯುವಷ್ಟು , ಹಿಂದಿ ಚಿತ್ರಗಳು ಅಲ್ಲಿಂದ ಕಥೆಗಳನ್ನ ಆಮದು ಮಾಡುವಷ್ತು ಎತ್ತರಕ್ಕೆ ಬೆಳೆದು ನಿಂತಿರಬೇಕಾದರೆ, ನಾವು ಇನ್ನೂನು ಒಳ್ಳೆಯ ಕಥೆಗಳಿಗೆ ತಿಣುಕಾಡುವುದು, ಯಾವುದೊ ಫಾರ್ಮುಲಾಗೆ ಸಿಕ್ಕಿಕೊಂಡು ಒದ್ದಾಡುವುದು ಯಾಕೆ ನಡೀತಿದೆ? ನಮ್ಮಲ್ಲಿ ನಡಿಯೋದೆ ಹೀಗೆ ಅನ್ನೋ ಸಬೂಬು ಹೇಳೊದು, ಬೆರಳೆಣಿಕೆಯ ಚಿತ್ರಗಳ ಉದಾಹರಣೆ
ನೀಡೋದು ಬಿಟ್ಟು ನಮ್ಮ ಚಿತ್ರರಂಗ ಆತ್ಮವಿಮರ್ಶೆ ಮಾಡಿಕೋಬೇಕು. ಯಾವುದೋ ಕಾರ್ಯಕ್ರಮದಲ್ಲಿ ತನ್ನ ಚೊಚ್ಚಲ ಚಿತ್ರ ನಿರ್ದೇಶಿಸಿ ಯಶಸ್ಸು ಕಂಡಿದ್ದ ಯುವನಿರ್ದೇಶಕನೊಬ್ಬ ನಿರ್ದೇಶನದ ರೂಲ್ಸು ರೆಗ್ಯುಲೇಶನ್ಸು ಹೀಗೇ ಇರಬೇಕು ಅಂತೆಲ್ಲ ಮಾತನಾಡಿದ್ದು ಕೇಳಿ ನಾನು ’ಹಾಗಾದರೆ ನಿರ್ದೇಶನ ಅನ್ನೋದು ಒಂದೇ ಫಾರ್ಮಾಟಿಗೆ ಒಗ್ಗಿರಬೇಕೆ? ಈಗಿನ ಬ್ಲಾಗ್ಯುಮೆಂಟರಿ, ಸಿಜೆ, ಯೂಟ್ಯೂಬು, ಮೊಬೈಲ್ ಫೋನ್ ಮೂವೀಗಳ ಬಗ್ಗೆ ಏನು ಹೇಳುತ್ತೀರ” ಎಂದು ಪ್ರಶ್ನೆಯೊಂದನ್ನ
ಕಳುಹಿಸಿದರೆ ಆತನ ಬಳಿ ಅದಕ್ಕೆ ಉತ್ತರವೆ ಇರಲಿಲ್ಲ!! ’ಸ್ಲಂಡಾಗ್’ ಮಟ್ಟಕ್ಕೆ ಯೋಚಿಸುವ ಬುದ್ಢಿವಂತರು ನಮ್ಮಲ್ಲಿರಬಹುದು. ಆದರೆ ’ಎದ್ದೇಳು ಮಂಜುನಾಥಾ’ ನಮ್ಮನ್ನ ದಾಟಿಹೋಗದೆ ನಮ್ಮಲ್ಲೆ ಉಳಿದುಬಿಡುವುದು ಇದೆಯಲ್ಲ, ಅದು ಬೇಸರದ ಸಂಗತಿ.




