Archive for the ‘ಲೇಖನ’ Category
ಒಂದು ಚಿತ್ರಕ್ಕೆ ಪ್ರೇರಣೆ ಒಂದೇ ಸಂಗತಿಯಲ್ಲ : ಯೋಗರಾಜಭಟ್
ಒಂದು ಚಿತ್ರ ನಿಮಗೆ ಇಂಥದ್ದರಿಂದ ಪ್ರೇರಣೆಗೊಂಡಿರಬಹುದು ಎಂದೆನಿಸುವುದು ಸಹಜ. ಆದರೆ ನಿರ್ದೇಶಕನಾದವನಿಗೆ ಅಂತದೊಂದು ಕಥಾವಸ್ತು (ಥೀಮ್) ಕೇವಲ ಒಂದರಿಂದಲೇ ಮೂಡಿರದು. ಬದಲಾಗಿ ಹತ್ತು ಹಲವು ಸಂಗತಿಗಳಿಂದ ಪ್ರಭಾವಕ್ಕೊಳಗಾಗಿರುತ್ತಾನೆ ಎಂದವರು “ಮನಸಾರೆ” ಚಲನಚಿತ್ರ ನಿರ್ದೇಶಕ ಯೋಗರಾಜ ಭಟ್.
ಸಂವಾದ.ಕಾಂ ಬೆಂಗಳೂರಿನಲ್ಲಿ ಏರ್ಪಡಿಸಿದ್ದ “ಮನಸಾರೆ” ಕುರಿತ ಸಂವಾದದಲ್ಲಿ ಮನಸಾರೆ ತಂಡ, ಸಂವಾದ. ಕಾಂನ ಶೇಖರ್ ಪೂರ್ಣ, ದಟ್ಸ್ ಕನ್ನಡ. ಕಾಂನ ಎಸ್ಕೆ ಶಾಂ ಸುಂದರ್, ಟೀನಾ ಶಶಿಕಾಂತ್, ಹೇಮಾ ಪವಾರ್ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು. ಸಂವಾದ ಚೆನ್ನಾಗಿ ನಡೆಯಿತು. ಈ ಹಿನ್ನೆಲೆಯಲ್ಲಿ ಯೋಗರಾಜ ಭಟ್ಟರ ಮಾತಿನ ಝಲಕ್ ಅನ್ನು ನೀಡಲಾಗಿದೆ.

“ಮನಸಾರೆ ಚಿತ್ರದ ಕುರಿತೇ ನೋಡಿ. ಸಿಗ್ಮಂಡ್ ಫ್ರಾಯಿಡ್ ನ ಯಾವುದೋ ಸಾಲು ಮೂಲ ಸೆಲೆಯಾಯಿತು. ಹಾಗೆಯೇ ಶಿವರಾಮ ಕಾರಂತರ ಯಾವುದೋ ಮಾತು ಸಹ ಸೆಲೆಯನ್ನು ಬೆಳೆಸಿತು. ಹೀಗೆ…ಹತ್ತು ಹಲವು ಸಂಗತಿಗಳಿಂದ ಪ್ರಭಾವಿತಕ್ಕೊಳಗಾಗಿ ಒಂದು ರೂಪ ಪಡೆಯುತ್ತದೆ. ಹಾಗಾಗಿ ಇಂಥದ್ದೇ ಸಿನಿಮಾದಿಂದ ಪ್ರಭಾವಿತ ಎಂಬುದಾಗಲೀ, ಇಂಥ ಸಿನಿಮಾವೇ ಇದಕ್ಕೆ ಕಾರಣ ಎಂಬುದಾಗಲೀ ಹೇಳಲಾಗದು. ಹಾಗೆ ಒಂದು ಥೀಮ್ ಸಿದ್ಧಗೊಳ್ಳುವುದಿಲ್ಲ’. Read the rest of this entry »
ಸದಭಿರುಚಿಯ ಚಲನಚಿತ್ರಗಳ ಮಾರುಕಟ್ಟೆ-ಗುಲ್ಬರ್ಗ ಫಿಲ್ಮ್ ಕ್ಲಬ್ ಯತ್ನ
ಸದಭಿರುಚಿಯ ಚಿತ್ರಗಳನ್ನು ಜನರಿಗೆ ಮುಟ್ಟಿಸಲು ಸಮುದಾಯ ಅ. 30 ರಿಂದ ನ. 5 ರವರೆಗೆ ಬೆಂಗಳೂರಿನಲ್ಲಿ ಚಲನಚಿತ್ರೋತ್ಸವ ಸಂಘಟಿಸುತ್ತಿದೆ. ಅರ್ಥ, ಗುಬ್ಬಚ್ಚಿಗಳು, ಬನದ ನೆರಳು, ದಾಟು ಚಿತ್ರಗಳು ಪ್ರದರ್ಶನಗೊಳ್ಳುವಂಥವು. ಈ ಹಿನ್ನೆಲೆಯಲ್ಲಿ ಸದಭಿರುಚಿಯ ಚಲನಚಿತ್ರ ಮಾರುಕಟ್ಟೆ ಹಾಗೂ ಆ ನಿಟ್ಟಿನಲ್ಲಿ ಫಿಲ್ಮ್ ಕ್ಲಬ್ ಗಳ ಪ್ರಯತ್ನದ ನೆಲೆಯಲ್ಲಿ ಬಿ. ಸುರೇಶರು ಬರೆದ ಲೇಖನವಿದು. ಒಂದು ಒಳ್ಳೆಯ ಚರ್ಚೆಗೆ ವೇದಿಕೆಯಾಗುವಂಥದ್ದು. ನಿಮ್ಮ ಅಭಿಪ್ರಾಯವನ್ನು saangatya@gmail.com ಗೆ ಕಳಿಸಿ.
ಚಲನಚಿತ್ರಕ್ಕೆ ನೂರಾಹತ್ತುವರ್ಷಗಳ ಇತಿಹಾಸವಿದೆ. ಆದರೆ ಸದಭಿರುಚಿಯ ಚಿಂತನೆಗೆ ಇರುವುದು ಸಾವಿರಾರು ವರುಷಗಳ ಇತಿಹಾಸ. ಮನುಷ್ಯನಿಗೆ ನಾಗರೀಕತೆ ಎಂಬುದನ್ನು ಒದಗಿಸಿಕೊಟ್ಟದ್ದೆ ಸಾಮಾಜಿಕ ಎಚ್ಚರವುಳ್ಳ ಸದಭಿರುಚಿಯ ಚಿಂತಕರು. ಹೀಗಾಗಿ ಸದಭಿರುಚಿ ಎಂಬುದು ಮಾನವ ಇತಿಹಾಸದ ಜೊತೆಗೇ ತಳುಕು ಹಾಕಿಕೊಂಡಂತಹ ಸುದೀರ್ಘ ಸತ್ಯ. ಕಾಲದಿಂದ ಕಾಲಕ್ಕೆ ಈ ಸದಭಿರುಚಿಯ ಚಿಂತನೆಯಲ್ಲಿ ಪಲ್ಲಟಗಳಾಗಿವೆ. ಅದು ಅತ್ಯಂತ ಸಹಜ. ಏಕೆಂದರೆ, ಯಾವುದನ್ನು ಬುದ್ಧಿವಂತರು ಒಂದು ಸೂತ್ರವಾಗಿ ಸೂಚಿಸುತ್ತಾರೋ ಅದು ಕಾಲಾನುಕ್ರಮದಲ್ಲಿ ವ್ಯಾಪಾರಿಗಳ ಕೈಗೆ ಸಿಕ್ಕು ಜನಪ್ರಿಯತೆಯ ಹಣೆಪಟ್ಟಿಯನ್ನು ಪಡೆದುಕೊಂಡು ಬಿಡುತ್ತದೆ.
ಇದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಒಂದೊಮ್ಮೆ ಹೊಸಅಲೆಯ ಚಿತ್ರ ತಯಾರಕರು ಮಾಡಿದ ವಾಸ್ತವವಾದಿ ಪ್ರಯೋಗಗಳು (ನಿಹಲಾನಿ ಅವರ `ಅರ್ಧಸತ್ಯ’, `ಆಕ್ರೋಶ್’ ಶ್ಯಾಮ್ ಬೆನಗಲ್ ಅವರ `ಅಂಕುರ್’, `ಮಂಥನ್’) ನಂತರದ ದಿನಗಳಲ್ಲಿ ಪ್ರಧಾನವಾಹಿನಿಯ ಚಿತ್ರರಂಗದ ಪ್ರಧಾನ ಅಸ್ತ್ರವಾದುದನ್ನು (ರಾಮಗೋಪಲ್ ವರ್ಮ ಅವರ ಎಲ್ಲಾ ಚಿತ್ರಗಳು) ನಾವೆಲ್ಲರೂ ನೋಡಿದ್ದೇವೆ. (ಇದು ಕನ್ನಡದ ಸಂದರ್ಭದಲ್ಲಿಯೂ ಆಗಿದೆ. ಸದಭಿರುಚಿಯ ಸಿನೆಮಾಗಳ ಪ್ರಭಾವದಿಂದಲೇ ಸುನೀಲ್ ಕುಮಾರ್ ದೇಸಾಯ್ ಮತ್ತು ಕಾಶೀನಾಥ್ ರಂತಹ ಚಿತ್ರನಿರ್ದೇಶಕರು ಪ್ರಧಾನ ವಾಹಿನಿಯಲ್ಲಿ ಗುರುತಿಸಿಕೊಂಡದ್ದನ್ನ ಗಮನಿಸಬಹುದು.) ಹಾಗೇ ನೋಡಿದರೆ ನಮ್ಮ ಪ್ರಧಾನವಾಹಿನಿ ಚಿತ್ರರಂಗದಲ್ಲಿ ಇದ್ದಂತಹ ಅತಿರೇಕಿತ ವಾಸ್ತವವಾದಿ ನಿರೂಪಣೆಯನ್ನ (ಇದನ್ನು ಡ್ರಾಮ್ಯಾಟಿಕ್ ಎನ್ನಬಹುದು. ಏಕೆಂದರೆ ಆರಂಭಕಾಲದ ಟಾಕಿ ಚಿತ್ರಗಳು ಬಳಸಿಕೊಂಡದ್ದು ಆಗ ಪ್ರಚಲಿತವು, ಪ್ರಖ್ಯಾತವು ಆಗಿದ್ದ ಕಂಪೆನಿ ಥಿಯೇಟರ್ ಗಳ ನಿರೂಪಣಾ ಕ್ರಮವನ್ನ. ವಿವರಗಳಿಗೆ ಇದೇ ಲೇಖಕರ `ಬೆಳ್ಳಿಅಂಕ’ ದ ಸಂಕಲನ ಕಲೆ ಲೇಖನವನ್ನು ಗಮನಿಸಬಹುದು.) ಇದನ್ನು ಸಹಜ ವಾಸ್ತವದ ಕಡೆಗೆ ತಿರುಗುವಂತೆ ಮಾಡಿದ್ದು ಸದಭಿರುಚಿಯ ಚಿತ್ರ ಚಿಂತಕರು. (ಎನ್.ಲಕ್ಷ್ಮೀನಾರಾಯಣ್ ಅವರ `ಉಯ್ಯಾಲೆ’, `ನಾಂದಿ’ ಮತ್ತು ಎಂ.ಆರ್.ವಿಠಲ್ ಅವರ `ಮಿಸ್.ಲೀಲಾವತಿ’ಯಂತಹ ಚಿತ್ರಗಳ ಪ್ರಭಾವ ನೇರವಾಗಿ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳ ಮೇಲೆ ಆಗಿರುವುದನ್ನ ಚಿತ್ರದ ನಿರೂಪಣಾ ಶೈಲಿಯ ದೃಷ್ಟಿಯಿಂದ `ಬೆಳ್ಳಿಮೋಡ’, `ಗೆಜ್ಜೆಪೂಜೆ’ಯಲ್ಲಿ ಗಮನಿಸಬಹುದು.) ಈ ದೃಷ್ಟಿಕೋನದಿಂದ ಗಮನಿಸುವುದಾದರೆ ಸದಭಿರುಚಿ ಎಂಬುದು ಕಾಲದಿಂದ ಕಾಲಕ್ಕೆ ತನ್ನ ಆಕಾರ-ಸ್ವರೂಪ-ವಿನ್ಯಾಸವನ್ನ ಬದಲಿಸಿಕೊಳ್ಳುತ್ತ ಮತ್ತು ತನ್ನದನ್ನ ಇತರರಿಗೆ ಹಂಚುತ್ತಾ ಸಾಗಿ ಬಂದಿದೆ. ಇದನ್ನ ನಾನು `ಅಂಗಿ ಬದಲಿಸುವ ಪ್ರಕ್ರಿಯೆ’ ಎನ್ನುತ್ತೇನೆ. ಇದು ಜನಪ್ರಿಯ ಮೌಲ್ಯಗಳ ವಿರುದ್ಧ ಸದಾ ಈಸುವಂತಹ-ಜೀವಿಸುವಂತಹ ಎಚ್ಚರದ ಗಂಟೆ! ಇದರಿಂದಾಗಿಯೇ ಸದಭಿರುಚಿ ಎಂಬುದು ಎಲ್ಲಾ ಕಾಲದಲ್ಲೂ ಪ್ರಧಾನವಾಹಿನಿಯಿಂದ `ಹೊರಗೆ’ ನಿಂತು ಹೊಸದನ್ನು ಹುಡುಕುವ ಯತ್ನ ಮಾಡುತ್ತಿರುತ್ತದೆ. (ಈ ನನ್ನ ಲೇಖನದ ಉದ್ದಕ್ಕೂ ನಾನು ಈ `ಅಂಗಿ ಬದಲಿಸುವ’ ಮತ್ತು `ಹೊರಗೆ’ ಉಳಿಯುವ ವಿವರಗಳನ್ನು ಆಗಾಗ ಹೇಳುತ್ತೇನೆ.) Read the rest of this entry »
ಮೀನಾ ಕುಮಾರಿಯ ಕವಿತೆಗಳು
ಚಿತ್ರನಟಿ ಮೀನಾಕುಮಾರಿಯ ನಟನೆ ಬಗ್ಗೆ ಎಲ್ಲರಿಗೂ ತಿಳಿದದ್ದೇ. ಆಕೆ ಬರೆದ ಪದ್ಯ (ಗಜಲ್)ಗಳ ಬಗ್ಗೆ ಗೊತ್ತಿರುವುದು ಕಡಿಮೆ. ಅಂಥ ಒಂದನ್ನು ಎಸ್. ಕುಮಾರ್ ಅನುವಾದಿಸಿದ್ದಾರೆ. ಅದನ್ನು ವಿಶೇಷ ಎಂದು ಪ್ರಕಟಿಸಲಾಗಿದೆ.

ಒಂದು ನೀರವ ನಿಶ್ಶಬ್ದದಲ್ಲಿ
ನೆರಳೊಂದರ ಸರಿದಾಟ
ಕಾರ್ಗತ್ತಲ ದುಃಖ ಏಕಾಂತದಲ್ಲಿ
ದೂರದಲ್ಲಿ ದೀಪದ ಮಿಣುಕು
ನಿನ್ನ ಪ್ರೇಮರೋಗಿಯ ಎದೆಯೊಳಗೆ
ಉಸಿರು ನಿಂತು ನಿಂತು ಬಂದಂತೆ.
ನನ್ನ ಕಣ್ಣೀರ ಕನ್ನಡಿಯಲ್ಲಿಂದು
ಯಾರೋ ನಗುತ್ತಾ ನಿಂತಿದ್ದಾರೆ.
ಯಾರೋ ಮನೆ ಬಾಗಿಲು ಬಡಿಯುತ್ತಾರೆ
ಯಾವುದೋ ಸಂದೇಶ ಬಂದು ಹೋಗುತ್ತದೆ.
ರಾತ್ರಿಯಲ್ಲೊಂದು ಹೆಸರಿಲ್ಲದ ದಾರಿ
ಕ್ಷಣಕ್ಷಣಕ್ಕೂ ಯಾರನ್ನೋ ಕರೆಯುತ್ತಿದೆ.
ಅಪರಿಚಿತನ ದನಿಗೆ ಯಾಕೆ
ಈ ಆತ್ಮತಂತಿ ಝಣ್ಣೆನ್ನುತ್ತದೋ! Read the rest of this entry »
ಚಿತ್ರಗೀತೆಗಳ ಹಕ್ಕು ಯಾರಿಗೆ ಸೇರಬೇಕು ?-ಮಾಹಿತಿಯುಕ್ತ ಲೇಖನ
ಚಿತ್ರಗೀತೆಗಳ ಹಕ್ಕಿನ ಬಗ್ಗೆ ದೊಡ್ಡ ಚರ್ಚೆ ಆರಂಭವಾಗಿದೆ. ಟಿ ವಿ ವಾಹಿನಿಗಳಲ್ಲಿ ಟಿಆರ್ ಪಿ ದೆಸೆಯಿಂದ ಹೆಚ್ಚುತ್ತಿರುವ ರಿಯಾಲಿಟಿ ಷೋ ನಿಂದ ಚಿತ್ರಗೀತೆಗಳ ಹಕ್ಕು ಎಲ್ಲರಿಗೂ ಸೇರಬೇಕು ಎಂಬ ಮಾತು ಆರಂಭವಾಗಿದೆ. ಈ ಮಧ್ಯೆ ತೀವ್ರಗೊಳ್ಳುತ್ತಿರುವ ಚರ್ಚೆಯ ಮಧ್ಯೆ ಎನ್. ಎಸ್. ಶ್ರೀಧರಮೂರ್ತಿ ವಿಜಯ ಕರ್ನಾಟಕದ ವಿಕಾಸ ಪುಟದಲ್ಲಿ ಈ ಕುರಿತೇ ಮಾಹಿತಿಪೂರ್ಣ ಲೇಖನ ಬರೆದಿದ್ದಾರೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ.
ಚಿತ್ರಗೀತೆಗಳು ಹಕ್ಕು ಯಾರದು? ಎಂಬ ಹಳೆಯ ಪ್ರಶ್ನೆಗೀಗ ಮತ್ತೆ ಚಾಲನೆ ದೊರಕಿದೆ. ಮಾತ್ರವಲ್ಲ ಇದು ಕೇವಲ ಚರ್ಚೆಯ ಮಟ್ಟದಲ್ಲಿರದೆ ನ್ಯಾಯಾಲಯದ ಮೆಟ್ಟಿಲನ್ನು ಏರಿದೆ. ಬಹು ಚರ್ಚೆಯ ನಂತರವೇ ಇಂಡಿಯನ್ ಪರ್ಫಾರ್ಮಿಂಗ್ ರೈಟ್ಸ್ ಸೊಸೈಟಿ (ಐ ಪಿ.ಆರ್.ಎಸ್) ಚಿತ್ರಗೀತೆಗಳ ಹಕ್ಕುಗಳನ್ನು ಹೊಂದಿದ ರಾಷ್ಟ್ರೀಯ ಸಂಸ್ಥೆ ಎಂಬ ಮನ್ನಣೆ ಪಡೆದಿತ್ತು. 1996ರ ಮಾರ್ಚ್ 27 ರಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ 1957ರ ಕೃತಿಸ್ವಾಮ್ಯ ಕಾಯಿದೆ ಸೆಕ್ಷನ್ 33(3)ರಂತೆ ಅಧಿಕೃತ ಮನ್ನಣೆ ಒದಗಿಸಿತ್ತು. ಅಲ್ಲಿಂದ ಮುಂದೆ ಕೆಲವು ಮಹತ್ತರ ಬೆಳವಣಿಗೆಗಳಾದವು. ಜಾಗತೀಕರಣದ ಹಿನ್ನೆಲೆಯಲ್ಲಿ ಬಹುಮಾಧ್ಯಮಗಳ ಕಾಲ ಬಂದಿತು.
ಚಿತ್ರಗೀತೆಗಳ ವಾಣಿಜ್ಯಿಕ ಬಳಕೆ ನಿರೀಕ್ಷೆಗಿಂತಲೂ ಹೆಚ್ಚಾಯಿತು. ರಸಮಂಜರಿಗಳು ಹೆಚ್ಚಾದವು. ಮೊಬೈಲ್ಗಳ ರಿಂಗ್ ಟೋನ್ಗಳಾಗಿ ಚಿತ್ರಗೀತೆಗಳು ಬಳಕೆಯಾದವು. ಎಲ್ಲಾ ಟಿ.ವಿ ವಾಹಿನಿಗಳಲ್ಲೂ ರಿಯಾಲಿಟಿ ಶೋಗಳು ಆರಂಭವಾದವು. ಎಫ್.ಎಂಗಳು ಖಾಸಗಿಯವರಿಗೆ ತೆರೆದು ಕೊಂಡಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಹೆಚ್ಚಾದವು. ಇವುಗಳಲ್ಲಿ ಹೆಚ್ಚಿನವು ಚಿತ್ರಗೀತೆಗಳನ್ನೇ ಅವಲಂಬಿಸಿದ್ದವು. ಇಲ್ಲೆಲ್ಲ ಬಳಕೆಯಾಗುವ ಚಿತ್ರಗೀತೆಗಳಿಗೆ ಐಪಿಆರ್ಎಸ್ ತನ್ನ ನಿಯಮದಂತೆ ಹಣ ವಸೂಲಿ ಆರಂಭಿಸಿತು. 1973 ರಲ್ಲಿ ಕೇವಲ 900 ರೂ. ಹಂಚಿಕೆಯಿಂದ ಆರಂಭವಾಗಿದ್ದ ಐಪಿಆರ್ಎಸ್ 2007-08 ನೇ ಸಾಲಿಗೆ 17 ಕೋಟಿ 7 ಲಕ್ಷದ 43 ಸಾವಿರ ರೂಪಾಯಿಗಳಷ್ಟು ಬೃಹತ್ ಮೊತ್ತವನ್ನು ಗೌರವಧನವಾಗಿ ಸಂಗ್ರಹಿಸಿತು. ಈ ಬೃಹತ್ ಮೊತ್ತವೇ ಸಮಸ್ಯೆಯ ಮೂಲ ಎನ್ನಬಹುದು.
ಐಪಿಆರ್ಎಸ್ ಅನ್ವಯ ಚಿತ್ರಗೀತೆಗಳಿಗೆ ಮೂವರು ಕಾನೂನು ಬದ್ಧ ಹಕ್ಕುದಾರರಿರುತ್ತಾರೆ. ಗೀತ ರಚನೆಕಾರ, ಸಂಗೀತಗಾರ ಮತ್ತು ಸಂಗೀತ ಸಂಸ್ಥೆ. ಇವರ ನಡುವೆ ಶೇ. 50 ಸಂಗೀತ ಸಂಸ್ಥೆಗಳಿಗೆ, ಶೇ. 25 ಸಂಗೀತ ನಿರ್ದೇಶಕನಿಗೆ, ಶೇ.12.5 ಗೀತರಚನೆಕಾರ ನಿಗೆ ಹಂಚಿಕೆಯಾಗುತ್ತದೆ. ಉಳಿದ ಹಣ ಆಡಳಿತಾತ್ಮಕ ವೆಚ್ಚಕ್ಕೆ ಬಳಕೆಯಾಗುತ್ತದೆ. ಐಪಿಆರ್ಎಸ್ನ ಅಸ್ತಿತ್ವವನ್ನೇ ಪ್ರಶ್ನಿಸಿದ ಸಂಸ್ಥೆ ಇಂಡಿಯನ್ ಮ್ಯೂಸಿಕ್ ಇಂಡಸ್ಟ್ರಿ (ಐಎಂಐ) ಅದು ಸಂಗೀತ ಸಂಸ್ಥೆಗಳ ಅಖಿಲ ಭಾರತ ಮಟ್ಟದ ಒಕ್ಕೂಟ. ಈ ಸಂಸ್ಥೆಯ ಪ್ರಕಾರ ಚಿತ್ರಗೀತೆಗಳು ವಾಣಿಜ್ಯಿಕವಾಗಿ ಬಳಕೆಯಾದಾಗ ಲಭಿಸುವ ಗೌರವಧನಕ್ಕೆ ಗೀತರಚನೆಕಾರರು ಮತ್ತು ಸಂಗೀತ ನಿರ್ದೇಶಕರು ಅರ್ಹರಲ್ಲ. ಏಕೆಂದರೆ ಕೃತಿಸ್ವಾಮ್ಯ ಹಕ್ಕು ಕಾಯಿದೆಯ 53 (ವಿ) ಪ್ರಕಾರ ‘ಯಾವುದೇ ವ್ಯಕ್ತಿಯ ಸೃಜನಶೀಲತೆ ಅದರ ಅನುಷಂಗಿಕ ಕಾರಣಕ್ಕಾಗಿ ಬಳಕೆಯಾದರೆ ಅವರು ಆ ಮಟ್ಟಿಗಿನ ಸಂಭಾವನೆಗೆ ಅರ್ಹರಾಗುತ್ತಾರೆಯೇ ಹೊರತು ಲಾಭಾಂಶಕ್ಕೆ ಅಲ್ಲ’. Read the rest of this entry »
ಚಿತ್ರೋತ್ಸವದ ಅನುಭವ-ಒಂದು ಚಿತ್ರದ ಅನಿಸಿಕೆ
ಶಮ ನಂದಿಬೆಟ್ಟ ಪುಟ್ಟ ಸಾಲುಗಳಲ್ಲಿ ಚಿತ್ರೋತ್ಸವದ ಬಗೆಗಿನ ಅನುಭವದೊಂದಿಗೆ ಒಂದು ಚಲನಚಿತ್ರದ ಅನಿಸಿಕೆಯನ್ನು ಬರೆದಿದ್ದಾರೆ. ಅದನ್ನು ಇಲ್ಲಿ ಹಾಕಲಾಗಿದೆ.
ಕುಪ್ಪಳ್ಳಿಯ ತಣ್ಣನೆ ಹವೆಯಲ್ಲಿ ಕಾಲಿಟ್ಟ ನಮಗೆ ಸಂಭ್ರಮದ ಚಿತ್ರೋತ್ಸವದ ಆರಂಭಕ್ಕೇ ಸಿಕ್ಕಿದ್ದು ಬೇಂದ್ರೆ ತಾತನ ಕುರಿತಾದ ಸಾಕ್ಷ್ಯ ಚಿತ್ರ. ಕೆಲವು ಕಡೆಯಂತೂ ಅವರೇ ಎದ್ದು ಬಂದಂತೆ ಭಾಸ.
ನಂತರದ್ದು “ಕಾರಂತಜ್ಜನಿಗೊಂದು ಪತ್ರ” ಸಚ್ಚಿದಾನಂದ ಹೆಗಡೆಯವರ ಕಥೆ, ಜೋಗಿಯವರ ಚಿತ್ರಕಥೆಯಿರುವ ಈ ಸಿನೆಮಾ ನೋಡಿದ್ದು ಕಥೆ ಆಧಾರಿತ ಚಿತ್ರಗಳ ವಿಭಾಗದಲ್ಲಿ. ಭಾರತಿ ಶಂಕರ್ ನಿರ್ದೇಶನ ಬಿಗುವಿಲ್ಲದೆ ಸಾಗಿದಂತೆಯೂ ಮೂವತ್ತು ನಿಮಿಷಗಳಲ್ಲಿ ಮುಗಿಸಬಹುದಾದ ಚಿತ್ರವನ್ನು ಗಂಟೆಗಟ್ಟಲೇ ತೋರಿಸಿದಂತೆಯೂ ನನಗನಿಸಿದ್ದು ಬಹುಶ: ಸೋಜಿಗವೇನಲ್ಲ. Read the rest of this entry »
ಗುರುಪ್ರಸಾದರ ಪಾಠ ಎರಡು…ಎದ್ದೇಳು ಮಂಜುನಾಥ…!
ಜಗ್ಗೇಶ್ ಹಾಗೂ ಗುರುಪ್ರಸಾದ್ ಜೋಡಿಯ “ಎದ್ದೇಳು ಮಂಜುನಾಥ” ಚಿತ್ರ ತೆರೆ ಕಂಡ ಮೇಲೆ ಭಿನ್ನ ಭಿನ್ನ ಅಭಿಪ್ರಾಯ ಬರುತ್ತಿವೆ. ಇದು ಬಹು ನಿರೀಕ್ಷೆಯ ಚಿತ್ರ. “ಮಠ” ಚಿತ್ರದ ನಿರ್ದೇಶನದ ಖ್ಯಾತಿ ಗುರುಪ್ರಸಾದರ ಹಿಂದಿತ್ತು, ಜಗ್ಗೇಶರಿಗೆ ಅವರ ಅಭಿನಯ ಬಂಡವಾಳವಾಗಿತ್ತು. ಎರಡೂ ಕೂಡಿ ಬಂದ ಚಿತ್ರದ ಬಗ್ಗೆ ಕೇಳುತ್ತಿರುವ ಧ್ವನಿಗಳು ಹಲವು. ಒಂದು ಚಿತ್ರ ಏನೆಲ್ಲಾ ಕೊಟ್ಟು ಯಶಸ್ಸಾಗಬಲ್ಲದು ? ಏನೆಲ್ಲಾ ಕೊಡದೇ ಸೋಲಬಲ್ಲದು? ಹೊಸಬಗೆಯಿಂದ ನೋಡಲು ಸಾಧ್ಯವೇ ? ಹೀಗೆ..ಅಂಥ ಒಂದು ಧ್ವನಿಯನ್ನು ಚೇತನಾ ತೀರ್ಥಹಳ್ಳಿ ಹೊರಡಿಸಿದ್ದಾರೆ. ಸಾಂಗತ್ಯದ ಉದ್ದೇಶ ಒಂದು ಚಿತ್ರದ ಕುರಿತು ಆರೋಗ್ಯಕರ ಚರ್ಚೆಯಾಗಬೇಕೆಂಬುದು. ವ್ಯಕ್ತಿ-ವ್ಯಕ್ತಿ ನಡುವಿನ ಸಂಘರ್ಷವೆನಿಸದೇ ಒಂದು ಮಾಧ್ಯಮದ (media)ಉತ್ಕರ್ಷದ ಸಾಧ್ಯತೆಯನ್ನು ಅಳೆಯುವ ಕಾತುರ. ನೀವೂ ಧ್ವನಿಯಾಗಿ. ಚಿತ್ರ ಕಂಡಿರುವವರು ಮೌಲ್ಯಯುತ ಅಭಿಪ್ರಾಯವನ್ನು saangatya@gmail ಗೆ ಕಳಿಸಿ.
ಬೇಸರದಿಂದಿದ್ದೇನೆ. ‘ಎದ್ದೇಳು ಮಂಜುನಾಥ’ ನೋಡಿಬಂದೆ. ಯಾರೋ ಸ್ಲಮ್ ಡಾಗಿಗಿಂತ ಮೊದಲೇ ಕನ್ನಡದವ್ರು ಹಿಂಗೆಲ್ಲ ಯೋಚಿಸಿದ್ರು ಅಂತ ಶಿಫಾರಸು ಕೊಟ್ಟಿದ್ರು. ನಮ್ಮಲ್ಲೂ ಈ ಥರದ ಕ್ವೆಶ್ಚನ್ ಆನ್ಸರ್ ಸಿನೆಮಾನಾ? ಅಂತ ಕುತೂಹಲ ಕುಣೀತಿತ್ತು. ಆದ್ರೆ…
ಸುಮಾರು ಎರಡು ವರ್ಷಗಳ ನಂತರ ಹೊಸ ಕನ್ನಡ ಸಿನೆಮಾ ನೋಡಲು ಹೊರಟಿದ್ದಕ್ಕೆ ತಕ್ಕ ಶಾಸ್ತಿಯಾಯ್ತು ಬಿಡಿ! ಅಬ್ಬಬ್ಬಬ್ಬಬ್ಬ…. ಸಿನೆಮಾ ಲಾಂಗ್ವೇಜಲ್ಲೇ ಹೇಳ್ಬೇಕೂಂದ್ರೆ, ‘ಅದೇನ್ ಕುಯ್ದಿದಾರ್ರೀ ಅವ್ರು?’ ಸಿನೆಮಾ ಶುರುವಿಂದ ಕೊನೆತನಕ ಗುರು ಪ್ರಸಾದರು ತಮ್ಮೆಲ್ಲ ಬುದ್ಧಿವಂತಿಕೇನೂ ಮತ್ತೆ ಅವಕಾಶವೇ ಸಿಗೋಲ್ವೇನೋ ಅನ್ನೋ ಹಾಗೆ ಹರಿಬಿಟ್ಟಿದಾರೆ. ಕೆಲವೊಮ್ಮೆ ಕೆಲವನ್ನ ಬುದ್ಧಿವಂತಿಕೆ ಅಂತ ತಪ್ಪು ತಿಳ್ಕೊಂಡ ಹಾಗೂ ಇದೆ! Read the rest of this entry »
ಕನ್ನಡ ಚಿತ್ರರಂಗದ ಕೆಲವು ಪ್ರಥಮಗಳು…!
ಕನ್ನಡ ಚಿತ್ರರಂಗದ ಹಲವು ಪ್ರಥಮಗಳ ಬಗ್ಗೆ ಸಂಗ್ರಹಿತ ಲೇಖನವಿದು.
ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಇತ್ತೀಚೆಗಷ್ಟೇ ಜರುಗಿತು. ಅದಾಗಲಿಲ್ಲ, ಇದಾಗಲಿಲ್ಲ. ಅದೂ ಆಗುತ್ತದೆ, ಇದೂ ಆಗುತ್ತದೆ…ಎಂದು ಅವರಿವರ ಹೇಳಿಕೆ-ಸ್ಪಷ್ಟನೆ ಮಧ್ಯೆ ಮಹೋತ್ಸವ ಜರುಗಿ ಹೋದದ್ದು ಗೊತ್ತಾಗಲಿಲ್ಲ.
ಚಿತ್ರರಂಗದ ನೇಪಥ್ಯಕ್ಕೆ ಸರಿದರೆ ಅದು ಸಾಗಿ ಬಂದ ಹೆಜ್ಜೆಗಳೆಲ್ಲಾ ಹೊಳೆಯುತ್ತವೆ. ಹೀಗೇ ಕುಳಿತು ಒಂದಿಷ್ಟು ಮಾಹಿತಿಯನ್ನು ಕಲೆ ಹಾಕಿದ್ದೇನೆ. ಇದು ಸಮಗ್ರವೂ ಅಲ್ಲ ; ಚಿಕ್ಕದೊಂದು ನೋಟವಷ್ಟೇ.
ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನ’ (ವಾಕ್ಚಿತ್ರ) ಬಿಡುಗಡೆಯಾದದ್ದು 1934 ರ ಮಾರ್ಚ್ 3 ರಂದು. ಅದರೊಳಗಿನ ಸಿಂಹ ಬರುವ ದೃಶ್ಯ ಕಂಡು ಹಲವು ಮಂದಿ ಚಿತ್ರ ಮಂದಿರದಲ್ಲೇ ಮೂರ್ಚೆ ಹೋಗಿದ್ದರಂತೆ. ಇನ್ನು ಕೆಲವರು ಸಿಂಹ ಬಂದೇ ಬಿಟ್ಟಿತೆಂದು ಹೆದರಿ ಸಿನಿಮಾ ಮಂದಿರದಿಂದ ಕಾಲ್ಕಿತ್ತಿದ್ದರಂತೆ. ನಿರ್ದೇಶನ : ಯರಗುಡಿಪಟಿ ವರದಾ ರಾವ್, ಕಥೆ : ಬೆಳ್ಳಾವೆ ನರಹರಿಶಾಸ್ತ್ರಿ, ತಾರಾಗಣ : ಆರ್. ನಾಗೇಂದ್ರರಾವ್, ಸುಬ್ಬಯ್ಯನಾಯ್ಡು, ಇಂದುಬಾಲಾ ಇತ್ಯಾದಿ, ನಿರ್ಮಾಪಕ : ಚಮನ್ ಲಾಲ್ ದೂಂಗಾಜಿ, ಸಂಗೀತ : ಆರ್. ನಾಗೇಂದ್ರರಾವ್, ನರಹರಿ ಶಾಸ್ತ್ರಿ. 170 ನಿಮಿಷದ ಚಿತ್ರ, 40 ಸಾವಿರ ವೆಚ್ಚ. Read the rest of this entry »
ಚಿತ್ರ ವಿಮರ್ಶೆ ಎಂಬ ಈಗಿನ ಲೆಕ್ಕಾಚಾರ
ಸುಧಾ ಅವರು ಚಿತ್ರ ವಿಮರ್ಶೆ ಕುರಿತು ಬರೆದು ಕಳಿಸಿರುವ ಲೇಖನ “ನಿಮ್ಮದೇ ಅಂಕಣ” ದಲ್ಲಿ ಪ್ರಕಟಿಸಲಾಗಿದೆ. ಇದರ ಚರ್ಚೆಯನ್ನು ನೀವು ಮುಂದುವರಿಸಬಹುದು. ಓದಿ ಪ್ರತಿಕ್ರಿಯಿಸಿ sudhaparampalli@rediffmail.com
ಸಾಂಗತ್ಯ ಸಂವಾದ ಆರಂಭಿಸುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ. ಯಾವ ವಿಷಯ ಎಂದು ಕೇಳಿದ್ದೀರಿ. ನಾನು ಇಲ್ಲಿ ವಿಷಯವನ್ನು ಸಲಹೆ ಮಾಡುತ್ತಿಲ್ಲ. ಆದರೆ ನನ್ನೊಳಗಿನ ಒಂದು ಸಂಗತಿಯನ್ನು ತಿಳಿಸುತ್ತೇನೆ. ಅದೇ ಸಂವಾದಕ್ಕೆ ವಿಷಯವಾಗಬಹುದು : ಅಥವಾ ಆ ಎಳೆಯನ್ನು ಇಟ್ಟುಕೊಂಡೂ ಇನ್ನೂ ಹತ್ತಾರು ಸಂಗತಿಗಳ ಬಗ್ಗೆಯೂ ಚರ್ಚಿಸಬಹುದು.
ನಾನು ಹೀಗೇ ಸಿನಿಮಾಗಳನ್ನು ನೋಡುವ ಹವ್ಯಾಸಿ. ಸಿನಿಮಾದ ಭಾಷೆ ಸಂಪೂರ್ಣ ಅರ್ಥವಾಗಿಲ್ಲ. ಆದರೆ, ಒಂದಷ್ಟು ಮಟ್ಟಿಗೆ ಪರವಾಗಿಲ್ಲ. ಇದು ನನ್ನದೇ ಪ್ರಯತ್ನ. ಯಾವುದೇ ಪುಸ್ತಕ ಆಶ್ರಯ ಅಥವಾ ವಿಮರ್ಶೆಯ ಆಶ್ರಯಕ್ಕೆ ಹೋಗಲಿಲ್ಲ.
ನನಗಿಂದಿಗೂ ಕಾಡುವಂತದ್ದು ಎಂದರೆ ಚಿತ್ರ ವಿಮರ್ಶೆಯ ಬಗ್ಗೆ. ಅದರಲ್ಲೂ ಈಗಿನ ಪತ್ರಿಕಾ ವಿಮರ್ಶೆಗಳ ಬಗ್ಗೆ. ಎಂಟು -ಹತ್ತು ವಾಕ್ಯವೃಂದಗಳಲ್ಲಿ ಪ್ರತಿ ಭಾನುವಾರ ಪ್ರಕಟಗೊಳ್ಳುವ ವಿಮರ್ಶೆ ಯಾವ ತೆರನಾದ ಸುಖ ಯಾರಿಗೆ ನೀಡುತ್ತದೆ ಎಂಬುದು ತಿಳಿದಿಲ್ಲ. ಕಾರಣವಿಷ್ಟೇ, ಸಿನಿಮಾಸಕ್ತರಿಗೆ ಒಂದಿನಿತೂ ಆಸಕ್ತಿ ಮೂಡಿಸುವಂಥ ಸಂಗತಿಗಳಾಗಲೀ, ಮಾಹಿತಿಯಾಗಲೀ ಆ ಬರಹಗಳಲ್ಲಿರುವುದಿಲ್ಲ.
ನನ್ನ ಅನುಮಾನ ಏನೆಂದರೆ, ಆ ಬರಹ ಏನನ್ನು ಹೇಳೀತು ಎಂಬುದಕ್ಕೆ ಯಾವುದೇ ಅಂಶವಿಲ್ಲ. ಒಂದು ಚಿತ್ರದ ಬಗ್ಗೆ ಗಂಭೀರವಾಗಿ ಆಲೋಚಿಸುವುದು ಹಾಗೂ ಬರೆಯುವುದು ದಿನ ಪತ್ರಿಕೆಗಳಲ್ಲಿ ಸಾಧ್ಯವಿಲ್ಲ ಎಂಬ ಮಾತಿದೆ. ಇರಬಹುದು, ಹಾಗೆಂದು ಒಟ್ಟೂ ಬರೆದರೆ ಯಾರಿಗೆ ಲಾಭ ? ಈ ಮಾತು ಕೆಲವರಿಗೆ ಇಷ್ಟವಾಗದಿರಬಹುದು. ಅದು ಬೇರೆ ಸಂಗತಿ. Read the rest of this entry »
ಹುಚ್ಚು ಹುಡುಗರ ಸಾಹಸ-”…ಜಾಗ ದೊರೆಯುತ್ತದೆ !

ಮೈಸೂರು ಹುಡುಗರೇ ರೂಪಿಸಿದ ಚಿತ್ರ “..ಜಾಗ ದೊರೆಯುತ್ತದೆ” ಮೊದಲ ಪ್ರದರ್ಶನ ಜೂ. 6 ರಂದು ಮೈಸೂರು ವಿವಿ ಸೆನೆಟ್ ಭವನದಲ್ಲಿ. ನೀವು ನಿಮ್ಮ ಗೆಳೆಯರಿಗೆ ಹೇಳಿ.
”…ಜಾಗ ದೊರೆಯುತ್ತದೆ”- ಇದು ಮೈಸೂರು ಹುಡುಗರೇ ರೂಪಿಸಿರುವ ಹೊಸ ಚಿತ್ರದ ಹೆಸರು.
ಸಿನಿಮಾ ನೋಡುವುದನ್ನೇ ಗೀಳಾಗಿಸಿಕೊಂಡು ಉದ್ಯೋಗವನ್ನು ಹುಡುಕುತ್ತಲೇ ಸಿನಿಮಾ ಮಾಡಲು ಹೊರಟು ಮಾಡಿ ಪೂರೈಸಿದವರು. ಮೊದಲು ಇವರ ಪ್ರಯತ್ನಕ್ಕೆ ಅಭಿನಂದನೆ ಹೇಳಬೇಕು.
ಈ ಚಿತ್ರದಲ್ಲಿ ಹತ್ತು ಹಲವು ವಿಶೇಷಗಳಿವೆ. ಅವುಗಳನ್ನೆಲ್ಲಾ ಪಟ್ಟಿ ಮಾಡುತ್ತಾ ಹೋಗುವುದಕ್ಕಿಂತ ಹಾಗೆಯೇ ಅವಲೋಕಿಸಿದರೆ ಸಿಗುವುದು ಬಹಳಷ್ಟಿದೆ. ಹಲವು ಯುವಕರೇ ಕೂಡಿಕೊಂಡು ನಿರ್ದೇಶನದಿಂದ ಹಿಡಿದು, ಸಂಗೀತ, ಸಂಕಲನದವರೆಗೂ ನಿರ್ವಹಿಸಿದ್ದಾರೆ. ಅದೇ ಎಲ್ಲರೂ ಗಮನಿಸಬೇಕಾದ ಸಂಗತಿ. ಇವರು ಹುಟ್ಟಿಹಾಕಿದ ಸಂಸ್ಥೆ “ಗ್ಯಾಂಗ್ವೇಜ್” ಪ್ರೊಡಕ್ಷನ್ಸ್.
ಇದೇ ಸಂದರ್ಭದಲ್ಲಿ ಮತ್ತೊಂದು ನೆನಪಿಸಿಕೊಳ್ಳುವ ಸಂಗತಿಯೆಂದರೆ, ಇವರೆಲ್ಲರೂ ಯಾರೋ ಒಬ್ಬ ನಿರ್ಮಾಪಕನನ್ನು ಹುಡುಕಿಕೊಂಡು, ಅವನಿಗೆ ದುಡ್ಡು ತರುವಂಥ ಸಂಗತಿಗಳನ್ನು ಹೆಕ್ಕಿ ಕೊಟ್ಟು ಚಿತ್ರ ನಿರ್ಮಿಸಿಲ್ಲ. ಹೀಗೇ ಒಂದು ಕನಸು ಕಂಡಿತು, ಅದನ್ನು ನನಸಾಗಿಸಲು ನಾವು ಪ್ರಯತ್ನಪಟ್ಟೆವು ಎಂಬುದು ಆ ತಂಡದ ಅಭಿಮತ.

ಮ್ಯಾಕ್ಸಿಂ ಗಾರ್ಕಿಯ ನಾಟಕ “ದಿ ಲೋವರ್ ಡೆಪ್ತ್ಸ್” ಕನ್ನಡದ ಸಿನಿಮಾ ರೂಪದಲ್ಲಿ, ಅದರಲ್ಲೂ ಇಂದಿನ ರಿಸೆಷನ್ (ಜಾಗತಿಕ ಹಿಂಜರಿತ) ಸಂದರ್ಭಕ್ಕೆ ಮರು ವ್ಯಾಖ್ಯಾನಗೊಂಡು ಬಂದಿರುವ ಚಿತ್ರ “…ಜಾಗ ದೊರೆಯುತ್ತದೆ”.
ಇಡೀ ಚಿತ್ರದ ಲೋಕೇಷನ್ ಒಂದೇ. ಅಂದರೆ ಒಂದೇ ಮನೆ. ಅದರೊಳಗೆ 17 ಪಾತ್ರಗಳ ಬದುಕು ಅನಾವರಣಗೊಳ್ಳುತ್ತದೆ. ಇನ್ನು ಸಿನಿಮಾ ರೂಪುಗೊಂಡ ಕಥೆಯೂ ಬೇರೆ. ಒಂದಿಷ್ಟು ಮಂದಿ ಪೋಷಕರು, ಆಸಕ್ತರಿಂದಲೇ ಹಣ ಕ್ರೋಢೀಕರಿಸಿ ಮೂರು ಲಕ್ಷ ರೂ. ನಲ್ಲಿ ಈ ಸಿನಿಮಾ ಸಿದ್ಧಪಡಿಸಲಾಗಿದೆ. ಕಡಿಮೆ ಬಜೆಟ್ ಎಂದು ಮೂಗು ಮುರಿಯುವಂತಿಲ್ಲ. ಚಿತ್ರದ ಪ್ರಯತ್ನದಲ್ಲಿ ವೃತ್ತಿ ಪರತೆ ಇದೆ.
ಒಂದಂತೂ ಅಚ್ಚರಿಯ ಸಂಗತಿ. ಈಗ ಬರೀ ನಾಯಕಿಯ ಹಾಡಿನ ಡ್ರೆಸ್ ಗೆ ಮೂರು ಲಕ್ಷ ಸಾಲದು. ಇಂಥ ಹೊತ್ತಿನಲ್ಲಿ ಎರಡೂವರೆ ಗಂಟೆಯ ಒಂದು ಸಿನಿಮಾವನ್ನು ಮಾಡಿರುವುದು ಸಾಹಸದ ಮಾತೇ. ಇದು ನಿಜವಾದ “ಕಮ್ಯುನಿಟಿ ಫಿಲ್ಮ್ ಮೇಕಿಂಗ್”.

ಈ ಚಿತ್ರದಲ್ಲಿ ನಟರಾಗಿ ಸಿ. ಬಸವಲಿಂಗಯ್ಯನಿಂದ ಹಿಡಿದು ಹಲವರು ಅಭಿನಯಿಸಿದ್ದಾರೆ. ಎಲ್ಲರೂ ರಂಗದ ಮೂಲದಿಂದ ಬಂದವರು. ನಾಟಕದ ಹುಚ್ಚು ಸಿನಿಮಾ ಮಾಡಲು ಪ್ರೇರೇಪಿಸಿತಂತೆ. ಇವರು ಸದ್ಯಕ್ಕೆ ದೊಡ್ಡ ಮಟ್ಟದಲ್ಲಿ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡುವ ಸಾಹಸ ಮಾಡುತ್ತಿಲ್ಲ. ಆದರೆ ನಿಮ್ಮೂರಿನಲ್ಲಿ ಆ ಚಿತ್ರ ತೋರಿಸಲು ಪ್ರಯತ್ನ ಪಟ್ಟರೆ ಅದಕ್ಕೆ ಅವಕಾಶ ಕಲ್ಪಿಸುತ್ತಾರಂತೆ.
ಎನ್.ಎಸ್.ಇಸ್ಲ್ಹಾವುದ್ದೀನ್ ನಿರ್ದೇಶನ. ಶಿವಶಂಕರನ್ ಕ್ಯಾಮೆರಾ ನಿರ್ವಹಣೆ. ಸಂಗೀತ-ಧರ್ಮೇಶ್, ನಿತಿನ್ ಶಾಸ್ತ್ರಿ , ಎಸ್.ಹಬೀಬುಲ್ಲಾ ಸಂಕಲನ . ಬಾದಲ್ ನಂಜುಂಡಸ್ವಾಮಿ ಕಲಾ ನಿರ್ದೇಶನ. ಕುಲ್ದೀಪ್ ವಸ್ತ್ರ ವಿನ್ಯಾಸ. ಹರಿಪ್ರಸಾದ್ ಕಶ್ಯಪ್, ಎನ್.ಎಸ್.ನಾಗಭೂಷಣ, ಆರ್.ಸುನೀಲ್, ಕೆ.ಎ.ಧನಂಜಯ, ಇಸ್ಲ್ಹಾವುದ್ದೀನ್, ವಿಶಾಲ್ ಆರ್ ಮಹಾಲೆ ಚಿತ್ರಕತೆ. ಅಶ್ವಿನ್ ಪಾಲ್,ಸೋಮ್ಕುಮಾರ್ ಪ್ರೊಡಕ್ಷನ್ ನಿರ್ವಹಣೆ.

ಶೂಟಿಂಗ್ ನ ಒಂದು ದೃಶ್ಯ
‘ಖಳ’ ರು ನಾಯಕರಲ್ಲ : ಖಳನಾಯಕರು ನಾಯಕರೇ !
ಅಮೃತ ಮಹೋತ್ಸವದ ಸಂಭ್ರಮದಲ್ಲಿ ಖಳನಾಯಕರನ್ನು ಮರೆತಿದ್ದರ ಬಗ್ಗೆ ಅವರ ಪುತ್ರರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಹೋರಾಟಕ್ಕೆ ನಿಂತಿದ್ದಾರೆ. ಒಂದು ಮನೆಯ ಉತ್ಸವದ ಸಂದರ್ಭದಲ್ಲಿ ಮನೆಯವರನ್ನೇ ಅದೇ ಮನೆಯವರೇ ಮರೆತರೆ ಹೇಗೆ ಎಂಬುದು ದರ್ಶನ್ ಮತ್ತಿತರರ ಪ್ರಶ್ನೆ. ಆ ಎಳೆಯನ್ನೇ ಇಟ್ಟುಕೊಂಡು ನಿರಮಿತ್ರ ಈ ಲೇಖನವನ್ನು ಬರೆದಿದ್ದಾರೆ. ನಿಮಗೆ ಏನನ್ನಿಸುತ್ತದೋ ಅದನ್ನು ಹೇಳಿ.
ನಮ್ಮ ಖಳನಾಯಕರನ್ನು ಹೀಗೆ ಮರೆತಿದ್ದು ತಪ್ಪು.
ಕನ್ನಡ ಚಿತ್ರರಂಗ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಇವರನ್ನು ನೆನಪಿಸಿಕೊಳ್ಳಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರಿಗೆ ಪುರಸೊತ್ತು ಸಿಗಲಿಲ್ಲವೇ ? ಎಂಬ ಪ್ರಶ್ನೆ ಉದ್ಭವಿಸಿದ್ದು ನಿಜ. ಕಾರಣ, ಯಾರು ಏನೇ ಹೇಳಬಹುದು. ಆದರೆ ಖಳ ನಾಯಕರನ್ನು ಬಿಟ್ಟು ಚಿತ್ರರಂಗವಿಲ್ಲ ಎಂಬುದು ನಿರ್ವಿವಾದದ ಸಂಗತಿ.
ಆ ಸ್ಮರಣ ಸಂಚಿಕೆಯಲ್ಲಿ ಇವರಿಗೆ ಸ್ಥಳ ಕಲ್ಪಿಸಲು ಇರಲಿಲ್ಲವೆಂಬ ಮಂಡಳಿಯ ವಾದವೇ ಸರಿಯಲ್ಲ. ಜತೆಗೆ ‘ತುರ್ತಿತ್ತು, ಕೆಲಸದ ಒತ್ತಡವಿತ್ತು, ಅದಕ್ಕೆ ಸಮಿತಿ ರಚಿಸಲಾಗಿತ್ತು. ಅವರು ಕೈಗೊಂಡ ನಿರ್ಧಾರ. ಇನ್ನು ಸರಿಪಡಿಸುತ್ತೇವೆ’ ಎನ್ನುವುದೆಲ್ಲಾ ಅರ್ಥವಿಲ್ಲದ ವಾದ. ಈ ಹಿನ್ನೆಲೆಯಲ್ಲಿ ದರ್ಶನ್ ಮತ್ತಿತರರು ಹೋರಾಟಕ್ಕೆ ಇಳಿದಿರುವುದು ಸರಿ.
ಒಬ್ಬ ನಾಯಕ ನಟನ ಅಭಿನಯವನ್ನು ಮೆಚ್ಚಿಕೊಂಡಷ್ಟೇ ಮಂದಿ ನಮ್ಮ ಖಳನಾಯಕರ ನಟನೆಯನ್ನು ಒಪ್ಪಿಕೊಂಡವರಿದ್ದಾರೆ. ಇಂದಿಗೂ ನನಗೆ ವಜ್ರಮುನಿ, ತೂಗು ದೀಪ ಶ್ರೀನಿವಾಸ್, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಸುಧೀರ್ ಅವರ ನಟನೆಯನ್ನು ನೋಡಿದರೆ ಅಚ್ಚರಿ ಎನಿಸುತ್ತದೆ. ತೂಗುದೀಪ ಶ್ರೀನಿವಾಸರ ಹಲವು ಪಾತ್ರಗಳು ನನ್ನ ಕಣ್ಣ ಮುಂದಿವೆ. ಹಾಗೆಯೇ ಮುಸುರಿಯವರ ಪಾತ್ರವಿಲ್ಲದೇ ಚಿತ್ರರಂಗವೇ ಶೂನ್ಯ ಎನಿಸುತ್ತದೆ. ಹಾಗೆಯೇ ದಿನೇಶ್ರ ನಟನೆಯೂ ಅಷ್ಟೇ. ಸುಧೀರರ ಕಂಠವೇ ನಡುಗಿಸುವಂಥದ್ದು, ಸುಂದರ್ ಕೃಷ್ಣ ಅರಸ್ರ ಆ ನಗುವೇ ಹಲವು ಸನ್ನಿವೇಶಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ. ವಜ್ರಮುನಿಯ ವಿವಿಧ ಖಳ ನಾಯಕನ ಪಾತ್ರಗಳನ್ನು ಹೊರತುಪಡಿಸಿ ಕನ್ನಡ ಚಿತ್ರರಂಗವನ್ನು ಕಟ್ಟಿ ಕೊಡಲು ಸಾಧ್ಯವಿದೆಯೇ?
ನನ್ನ ವಾದಕ್ಕೆ ಒಂದು ನೆಲೆಯಿದೆ. ಸುಮ್ಮನೆ ಖಳನಾಯಕರನ್ನು ಹೊಗಳುತ್ತಿಲ್ಲ. ಸಾಮಾನ್ಯವಾಗಿ ಚಿತ್ರಗಳಲ್ಲಿ ನಾಯಕನಿಗಿಂತ ಖಳನಾಯಕರಿಗೇ ನಿಜವಾದ ಸವಾಲ್. ಪ್ರತಿ ಬಾರಿಯೂ ಅಗ್ನಿಪರೀಕ್ಷೆಗೆ ಒಡ್ಡಿಕೊಳ್ಳುವವರು ಅವರು. ನಾಯಕ ನಟನಿಗೆ ಎಲ್ಲ ಗುಣಾವಿಶೇಷಣಗಳಿರುತ್ತವೆ. ಅವನು ಎಂದಿಗೂ ನ್ಯಾಯದ ಪಕ್ಷಪಾತಿ. ಕಳ್ಳರಿಗೆ ಸಿಂಹಸ್ವಪ್ನವಾಗುವವನು, ಶೂರ, ಸಾಹಸಿ ಎಲ್ಲವೂ. ಹಾಗೆ ವಿವರಿಸಲಾದ ನಾಯಕನ ಎದುರಿಗೆ ಸೋಲನ್ನು ಒಪ್ಪಿಕೊಳ್ಳಬೇಕಾದವರು ಖಳನಾಯಕರು.
ತಮ್ಮ ನಟನೆಯ ಸಾಮರ್ಥ್ಯದಿಂದಲೇ ನಾಯಕನಿಗೆ ಸವಾಲುಗಬೇಕಾದುದು ನಿಜವಾದ ಅರ್ಥದಲ್ಲಿ ಅಗ್ನಿ ಪರೀಕ್ಷೆಯೇ. ಇವರ ಹಿಂದೆ ಯಾವ ಗುಣಾವಿಶೇಷಣಗಳೂ ಇರುವುದಿಲ್ಲ. ಅಷ್ಟೇ ಏಕೆ ? ಎಲ್ಲರ ಕಣ್ಣ ಮುಂದೆಯೂ ಖಳನಂತೆ, ಸಮಾಜದ್ರೋಹಿಯಂತೆಯೇ ಚಿತ್ರಿಸಿಕೊಳ್ಳಬೇಕು. ಇವರನ್ನು ಜನರ ಮುಂದೆ ಒಳ್ಳೆಯವರಂತೆ ಬಿಂಬಿಸುವ ಯಾವ ‘ಫೋರ್ಸ್’ ಸಹ ಕೆಲಸ ಮಾಡುವುದಿಲ್ಲ. ಇಂಥ ಸಂದರ್ಭದಲ್ಲೇ ಸಿಕ್ಕ ಪಾತ್ರದಲ್ಲೇ ತಮ್ಮ ಅಭಿನಯವನ್ನು ಪ್ರಚುರಪಡಿಸಬೇಕು. ನಾಯಕನಿಗೆ ವಿರುದ್ಧವಾಗಿ ಜನರ ಮನಸ್ಸನ್ನು ಗೆಲ್ಲಬೇಕು.
ಹರಿಯುವ ನದಿಯಲ್ಲಿ ಈಜುವುದು ಸುಲಭ, ನಮ್ಮ ನಾಯಕರಂತೆ. ಆದರೆ ಖಳನಾಯಕರು ಅಲೆಯ ವಿರುದ್ಧ ಈಜಬೇಕು. ಕಷ್ಟವೇ ತಾನೇ. ಇಷ್ಟೇ ಅಲ್ಲ, ಚಿತ್ರ ರಸಿಕರೇ ನಾಯಕನಿಗೆ ಪರ್ಯಾಯವಾದ ನೆಲೆಯಲ್ಲಿ ನಿಲ್ಲುವ ವಿಲನ್ ಗಳಿಗೆ ‘ಖಳನಾಯಕ’ ಎಂದು ಪಟ್ಟ ಕೊಟ್ಟಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ರಂಜಿಸುತ್ತಲೆ ತಮ್ಮ ಪ್ರತಿಭೆಯನ್ನು ಮತ್ತಷ್ಟು ದೃಢೀಕರಿಸುತ್ತಾ ಹೋಗುವ ಇವರನ್ನು ಮರೆಯುವುದು ಎಷ್ಟು ಸರಿ ?
ಪಾತ್ರಗಳು ಮುಂದುವರಿಯುವುದು ಮತ್ತು ಜೀವ ತಳೆಯುವುದು ಒಂದೇ ನೆಲೆಯಲ್ಲಲ್ಲ. ಸಜ್ಜನನಾದ ನಾಯಕನ ಒಳ್ಳೆತನ ಸಾಬೀತು ಪಡಿಸಲು ಎದುರಿಗೆ ಒಬ್ಬ ಕೆಟ್ಟವನಿರಬೇಕು. ಇಲ್ಲದಿದ್ದರೆ ಯಾವ ಪಾತ್ರಗಳೂ ಬೆಳೆಯುವುದಿಲ್ಲ. ಬದುಕಿನ ಗತಿಯೂ ಅಷ್ಟೇ. ಹೀಗೆ ನಮ್ಮ ಬದುಕಿನ ನೆಲೆಯನ್ನೇ ಇಟ್ಟುಕೊಂಡು ನಿರ್ಮಿಸಿದ ಚಿತ್ರಗಳಲ್ಲಿ ಇಬ್ಬರೂ ಅನಿವಾರ್ಯವಾಗಿದ್ದರು. ಪರಸ್ಪರ ಬೆನ್ನನ್ನು ತಟ್ಟಿಕೊಳ್ಳುತ್ತಲೇ ಇಬ್ಬರ ಬೆಳೆದು ನಿಂತರು. ಆದರೆ ಈಗ ಮಾತ್ರ ಮತ್ತೆ ನಾಯಕರ ಪಕ್ಷಪಾತಿಯಾಗುವುದು ಎಷ್ಟು ಸರಿ ಎಂಬುದು ನನ್ನ ಪ್ರಶ್ನೆ.
ಚಿತ್ರದೊಳಗೆ ಖಳನಾಯಕ ಬೆಳೆಯುವ ಮತ್ತು ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಪರಿ ಎರಡೂ ಅಮೋಘವಾದುದೇ. ರಾವಣನನ್ನು ರಾಮ ಕೊಂದ ಎಂದ ಮಾತ್ರಕ್ಕೆ ರಾವಣನ ಕಿಮ್ಮತ್ತು ಕಡಿಮೆಯಾಗುವುದು ಎಳ್ಳಷ್ಟೂ ಸರಿಯಲ್ಲ. ಕಾರಣ, ರಾಮಾಯಣದಲ್ಲೂ ರಾಮ ಮತ್ತು ರಾವಣ ಇಬ್ಬರೂ ಸಮಬಲರೇ. ಒಳ್ಳೆಯದೇ ಸಮಾಜದಲ್ಲಿ ಉಳಿಯಬೇಕೆಂಬ ತತ್ವವೇನೋ ? ಕೊನೆಯಲ್ಲಿ ರಾವಣ ಹತನಾದ. ರಾಮ ವಿಜೃಂಭಿಸಿದ. ಅಂದ ಮಾತ್ರಕ್ಕೆ ರಾಮನಾಗಲೀ, ಪುರಾಣವಾಗಲೀ ರಾವಣನನ್ನು ಕಡೆಗಣಿಸಿಲ್ಲ. ರಾವಣನಿಲ್ಲದೇ ರಾಮಾಯಣವೂ ಇಲ್ಲ. ಇನ್ನೂ ವಿಪರ್ಯಾಸದ ಸಂಗತಿಯೆಂದರೆ ನಾಯಕರಂತೆಯೇ ಇದ್ದು ರಾವಣನಂತೆ ನಿಜ ಜೀವನದಲ್ಲಿ ಇದ್ದವರು ಬೇಕಾದಷ್ಟು ಮಂದಿ ಚಿತ್ರರಂಗದಲ್ಲಿದ್ದರು. ಅದ್ಯಾವುದೂ ಇಲ್ಲಿ ಪರಿಗಣಿತವಾಗಿಲ್ಲ.
ಹಾಗಾಗಿ ನನಗೆ ನಟನ ಅಭಿನಯ ಬಹಳ ಮುಖ್ಯ. ಅವನು ಪಾತ್ರಕ್ಕೆ ಜೀವ ತುಂಬುವ ಬಗೆ, ಅದರೊಳಗೆ ಪರಕಾಯ ಪ್ರವೇಶ ಮಾಡಿದವನಂತೆ ತಲ್ಲೀನವಾಗುವ ರೀತಿ, ನಮ್ಮನ್ನು ಒಳಗೊಳ್ಳುವ ನೆಲೆ-ಇವೆಲ್ಲವೂ ಬಹಳ ಮುಖ್ಯ ಎನಿಸುತ್ತದೆ. ಆ ಪ್ರಯತ್ನದಲ್ಲಿ ಸಂಪೂರ್ಣ ಯಶಸ್ವಿಯಾಗುವವನಿಗೆ ಶ್ರೇಷ್ಠ ನಟನೆಂಬ ಅಭಿದಾನ ದಕ್ಕಲೇಬೇಕು. ಜತೆಗೆ ಆ ನೆಲೆಯಲ್ಲಿ ಮತ್ತೆ ನಾಯಕ, ಖಳನಾಯಕ ಎಂಬ ಭೇದ ಬರಕೂಡದು. ಒಂದುವೇಳೆ ಅದೂ ಬಂದರೆ ಆ ನಡೆ ಕಲೆಯ ಆರಾಧಕ ಮನೋಭಾವದ್ದಾಗದು. ಅದು ರಾಜಕೀಯ ಮನಸ್ಸಿನ ಸ್ಥಿತಿ.
ಈಗಲೂ ಇಂಥದೊಂದು ಕ್ಷುಲ್ಲಕ ರಾಜಕೀಯ, ದಿವ್ಯ ನಿರ್ಲಕ್ಷ್ಯ, ಅವಗಣನೆ ಎಲ್ಲವೂ ದೊಡ್ಡ ತಪ್ಪಿಗೆ ಕಾರಣವಾಗಿದೆ ಎಂದು ಅನಿಸುತ್ತದೆ. ಮಹೋತ್ಸವದ ಸಂಘಟನೆಯ ಕೀರ್ತಿ ಹೊತ್ತುಕೊಳ್ಳುವ ಮಂಡಳಿ, ಈ ನಡೆಯನ್ನು ಎಚ್ಚರದಿಂದ ಇಡಬೇಕಿತ್ತು. ತುಸು ಹೆಚ್ಚುವರಿ ಹೊಣೆಗಾರಿಕೆಯಿಂದ ನಿಭಾಯಿಸಬೇಕಿತ್ತು. ಆ ನಿಟ್ಟಿನಲ್ಲಿ ಅದು ಸೋತಿದೆ ಎಂದೇ ಅನಿಸುತ್ತದೆ.
ಒಟ್ಟೂ ನಾಯಕರಂತೆಯೇ ಅನಿಭಿಷಿಕ್ತವಾಗಿ ದೊರೆಗಳಂತಿದ್ದು ಚಿತ್ರರಂಗದಲ್ಲಿ ಪಡಿಯಚ್ಚು ಮೂಡಿಸಿದವರನ್ನು ನೆನೆಯದಿದ್ದರೆ ಬೇಸರ ತರುವಂಥದ್ದು. ಒಂದು ಸ್ಮರಣೀಯ ಗಳಿಗೆಯಲ್ಲಿ ಕುಟುಂಬದವರನ್ನೆಲ್ಲಾ ಸ್ಮರಿಸಿಕೊಳ್ಳಬೇಕೆನ್ನುವುದು ಅತ್ಯಂತ ಒಳ್ಳೆಯ ಮಾನವೀಯ ನಡವಳಿಕೆ ಎಂಬುದು ಅನಿಸಿಕೆ.
ಸದಾ ಇಂಥ ‘ತೂಗುದೀಪ‘ ಗಳು ಬೆಳಗುತ್ತಲೇ ಇರುತ್ತವೆ ; ಆ ಬೆಳಕನ್ನು ತುಂಬಿಕೊಂಡು ಸಾಗಬೇಕಾದುದು ನಮ್ಮ ಕೆಲಸ. ಇಲ್ಲದಿದ್ದರೆ ನಮ್ಮೊಳಗಿನ ಕತ್ತಲೆಗೆ ನಷ್ಟ ; ನಗುತ್ತಿರುವ ಬೆಳಕಿಗಲ್ಲ !




