Archive for the ‘ಭಾರತೀಯ ಪನೋರಮಾ’ Category
ನಿಶಾಂತ್-ಶ್ಯಾಂ ಬೆನಗಲ್ ರ ಒಂದು ಕಲಾಕೃತಿ
ರವಿರಾಜ್ ಗಲಗಲಿ ಬರೆದ ನಿಶಾಂತ್ ಸಿನಿಮಾದ ಬರಹವಿದು. ಶ್ಯಾಂ ಬೆನಗಲ್ ನಿರ್ದೇಶಿಸಿದ್ದ ಚಿತ್ರ, ಗೋವಿಂದ ನಿಹಲಾನಿಯವರ ಛಾಯಾಗ್ರಹಣ. ಒಂದು ಅದ್ಭುತ ಚಿತ್ರದ ಬಗೆಗಿನ ಲೇಖನವಿದು.
ಆ ಪುಟ್ಟ ಹಳ್ಳಿಯಲ್ಲಿ ಮೌನವೇ ಸರ್ವತ್ರ ಸಾಧನ, ಮೌನವೇ ಭಾಷೆ, ಮೌನದ್ದೇ ಸಂವಹನ. ಗ್ರಾಮದ ಜಮೀನ್ದಾರ ಸಹೋದರರು ನಡೆಸುವ ದೌರ್ಜನ್ಯ, ಅತ್ಯಾಚಾರಕ್ಕೆ ಮೌನವೇ ಉತ್ತರ. ಖ್ಯಾತ ನಿರ್ದೇಶಕ ಶ್ಯಾಂ ಬೆನಗಲ್ 1976 ರಲ್ಲಿ ನಿರ್ದೇಶಿಸಿದ ನಿಶಾಂತ್ ಚಿತ್ರದ ಒನ್ ಲೈನ್ ಕತೆಯಿದು.
ನಿಶಾಂತ್ ಅರ್ಥಾತ್ ರಾತ್ರಿಯ ಕೊನೆ, ಚಿತ್ರದಲ್ಲೆಲ್ಲ ಕತ್ತಲೆ ಬೆಳಕಿನ ಆಟವನ್ನಾಡಿದ್ದಾರೆ ಶ್ಯಾಂ. 1945 ರಲ್ಲಿ ಆಂಧ್ರ ಪ್ರದೇಶದ ಗ್ರಾಮವೊಂದರಲ್ಲಿ ನಡೆಯುವ ಜಮೀನ್ದಾರರ ದೌರ್ಜನ್ಯ ಇಲ್ಲಿ ಕತೆಯಾಗಿದೆ. ಆ ಹಳ್ಳಿಯಲ್ಲಿ ಜಮೀನ್ದಾರರು ಹೇಳಿದ್ದೆ ಮಾತು, ಆಡಿದ್ದೇ ಆಟ. ಹಿರಿಯಣ್ಣ ಹಾಗೂ ಇಬ್ಬರು ಸಹೋದರರ ಜಮೀನ್ದಾರರ ಕುಟುಂಬ ಅಕ್ಷರಶ: ಹಳ್ಳಿಯನ್ನು ನರಕವಾಗಿಸುತ್ತಾರೆ. ಸಂತೆಯಲ್ಲಿ ಕೋಳಿ ಮಾರುವವಳ ಬುಟ್ಟಿಗೆ ಜಮೀನ್ದಾರರ ಸಹೋದರರು ಕೈ ಹಾಕಿದರೆ ಬುಟ್ಟಿಯಲ್ಲಿನ ಕೋಳಿಗಳು ಅವರ ಹೊಟ್ಟೆ ಹಸಿವು ತಣಿಸಿದರೆ, ಕೋಳಿ ಮಾರುವಾಕೆ ದೇಹದ ಹಸಿವು ಪೂರೈಸಬೇಕು. ಹಿರಿಯಣ್ಣ (ಅಮರೀಶ್ ಪುರಿ), ಕಿರಿಯವ (ಡಾ.ಮೋಹನ್ ಅಗಾಸೆ), ಚಿಕ್ಕ ಸಹೋದರ (ಅನಂತ್ ನಾಗ್) ಸುತ್ತ ಚಿತ್ರದ ಕತೆ ಸುತ್ತುತ್ತದೆ. Read the rest of this entry »
ಜುಕ್ತಿ ಟಕೋ ಆರ್ ಗಪ್ಪೋ (ಕಾರಣ, ವಾದ ಮತ್ತು ಕಥೆ)
ಸಾಂಗತ್ಯ ಕುಪ್ಪಳ್ಳಿಯಲ್ಲಿ ನಡೆಸಿದ ಚಿತ್ರೋತ್ಸವದಲ್ಲಿ ನಾವು ನೋಡಿದ ಸಿನಿಮಾ.
ಋತ್ವಿಕ್ ಘಟಕ್ ಅದ್ಭುತ ನಿರ್ದೇಶಕ. ಅದರಲ್ಲೂ ಸತ್ಯಜಿತ್ ರೇ ಕುರಿತೇ ಬಹಳಷ್ಟು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ನಾವು ಬೇಕೆಂದೇ ಋತ್ವಿಕ್ ಘಟಕ್ ಫಿಲ್ಮ್ ಕುರಿತು ಚರ್ಚಿಸಲು ನಿರ್ಧರಿಸಿದೆವು. ಘಟಕ್ ಭಾರತೀಯ ಚಿತ್ರರಂಗ ಕಂಡ ಒಬ್ಬ ಅತ್ಯುತ್ತಮ ನಿರ್ದೇಶಕ. ನಿಜವಾಗಲೂ ಭಾರತೀಯ ಸಿನಿಮಾ ಮಾದರಿಯನ್ನು ಬೆಳೆಸಿದವ. ಅಂದರೆ ನಮ್ಮದೇ ನೀರು…ನಮ್ಮದೇ ನೆಲ…ನಮ್ಮದೇ ಬೀಜ…ಹಾಗೂ ನಮ್ಮ ಅಂಗಳದಲ್ಲೇ ಅರಳಿದ ಮಲ್ಲಿಗೆ. ಅವರ ಜೀವನ ಚರಿತ್ರೆಯೂ ಎನ್ನಬಹುದಾದ “ಜುಕ್ತಿ ಟಕೋ ಆರ್ ಗಪ್ಪೋ’ ಕುರಿತು ಇಲ್ಲಿ ಬರೆದಿರುವವರು ಚೇತನಾ ತೀರ್ಥಹಳ್ಳಿ
~
ಜುಕ್ತಿ, ಟಕೋ ಆರ್ ಗಪ್ಪೋ. ಅಂದರೆ- ಕಾರಣ, ವಾದ, ಮತ್ತು ಕಥೆ. ಈ ಶೀರ್ಷಿಕೆ, ಈ ಸಿನೆಮಾವನ್ನು ನೋಡಬಹುದಾದ ಆಯಾಮಗಳನ್ನು ಸೂಚ್ಯವಾಗಿ ತಿಳಿಸುತ್ತದೆ.
‘…. ಆರ್ ಗಪ್ಪೋ’ ಬಂಗಾಳದ ಇಂಟಲೆಕ್ಚುಯಲ್ ನಿರ್ದೇಶಕ ಋತ್ವಿಕ್ ಘಟಕ್ ಅವರ ಕೊನೆಯ ಪ್ರಸ್ತುತಿ. ಆಂಶಿಕವಾಗಿ ಅವರ ಬಯಾಗ್ರಫಿ ಕೂಡಾ.
~
ಬಂಗಾಳ ವಿಭಜನೆಯ ನೋವನ್ನು ಎದೆಯಲ್ಲಿ ಹೊತ್ತ, ಕುಡಿತದ ಚಟಕ್ಕೆ ದಾಸನಾಗಿ ತನ್ನನ್ನು ತಾನೇ ನಾಶ ಮಾಡಿಕೊಳ್ಳುವ ನೀಲಕಂಠ ಒಂದು ಕಾಲದ ಚಿಂತಕ ಹಾಗೂ ಬುದ್ಧಿಜೀವಿ. ಅವನ ಅಲೆಮಾರಿತನ ಮತ್ತು ಚಟಗಳಿಂದ ಬೇಸತ್ತ ಪತ್ನಿ ದುರ್ಗಾ ಮನೆ ಖಾಲಿ ಮಾಡಿ, ತನ್ನ ಮಗನನ್ನು ಕರೆದುಕೊಂಡು ಊರು ಬಿಟ್ಟು ಹೊರಡುವ ದೃಶ್ಯದೊಂದಿಗೆ ಸಿನೆಮಾ ಶುರುವಾಗುತ್ತದೆ.
ನೀಲಕಂಠನ ಪಾಲಿಗೆ ಕುಡಿತ ಚಟವಲ್ಲ. ಅದು ಅವನ ಜೀವನವೇ ಎನ್ನುವಷ್ಟು ಅನಿವಾರ್ಯ. ಅವನ ದೇಖರೇಖಿಗೆ ಆತನ ಶಿಷ್ಯ, ನಿರುದ್ಯೋಗಿ ನಚಿಕೇತ ಜೊತೆನಿಲ್ಲುತ್ತಾನೆ. ಅವರು ಆ ಖಾಲಿ ಮನೆಯನ್ನು ಬಿಟ್ಟು ಹೊರಡುವ ಮುನ್ನ ಅಲ್ಲಿಗೊಬ್ಬಳು ಯುವತಿಯ ಪ್ರವೇಶವಾಗುತ್ತದೆ. ಬಾಂಗ್ಲಾ ದೇಶದ ಉದಯದೊಂದಿಗೆ ನಿರಾಶ್ರಿತಳಾಗುವ ಹುಡುಗಿ ಬಂಗಬಾಲಾ ನೀಲಕಂಠನಲ್ಲಿ ಆಶ್ರಯ ಬೇಡುತ್ತಾಳೆ. ನೆಲೆ ಕಳೆದುಕೊಂಡ ನೀಲಕಂಠ ಆಕೆಯ ರಕ್ಷಣೆಯ ಭಾರ ಹೊರುತ್ತಾನೆ!
ಅದಾಗಲೇ ಮಾರಾಟವಾಗಿರುವ ಮನೆ ತೊರೆದು ಹೊರಡುವ ಮೂವರು ಗಲ್ಲಿ ಗಲ್ಲಿಗಳಲ್ಲಿ ಅಲೆಯುತ್ತ ದಿನ ದೂಡುತ್ತಾರೆ. ಇದೇ ಸಂದರ್ಭದಲ್ಲಿ ಸಂಸ್ಕೃತ ಪಂಡಿತ ಜಗನ್ನಾಥನ ಪರಿಚಯವಾಗುತ್ತದೆ. ಈತ ಕೂಡ ನೆಲೆ ಇಲ್ಲದ ಮತ್ತೊಬ್ಬ ನಿರಾಶ್ರಿತ. ಈ ನಾಲ್ಕು ಜನರ ತಂಡ ಕಲ್ಕತ್ತೆ ತೊರೆದು ಹೊರಡುತ್ತದೆ. ತನ್ನ ಪತ್ನಿಯ ಮನೆರುವ ಕಾಂಚನಪುರಕ್ಕೆ ನೀಲಕಂಠ ಅವರೆಲ್ಲರನ್ನೂ ಕರೆದುಕೊಂಡು ಹೊರಡುತ್ತಾನೆ.
ಅವರ ಈ ಪ್ರಯಾಣ ಒಂದು ಅದ್ಭುತ ಅನುಭವ. ನೀಲಕಂಠನ ಬಯಕೆಯ ಬಾಂಗ್ಲಾ ಅವರು ಸಾಗುವ ಹಳ್ಳಿಗಳಲ್ಲಿ ಅನಾವರಣಗೊಳ್ಳುತ್ತ ಹೋಗುವಂತೆ ತೋರುತ್ತದೆ. ಹೀಗೇ ಅವರು ಹಳ್ಳಿಯೊಂದರ ಮನೆಯಲ್ಲಿ ಆಶ್ರಯ ಕೋರುತ್ತಾರೆ. ಅದು, ಛೌ ನೃತ್ಯಕ್ಕೆ ಮುಖವಾಡಗಳನ್ನು ತಯಾರಿಸುವ ಪಂಚಾನನ ಉಸ್ತಾದನ ಮನೆ. ಆತನ ಮನೆಯಲ್ಲಿ ತಂಗಿದ್ದು, ದುರ್ಗೆ ದುಷ್ಟರನ್ನು ಸಂಹರಿಸುವ ನೃತ್ಯವನ್ನು ನೋಡಿಕೊಂಡು ಮುಂದೆ ಹೊರಡುತ್ತಾರೆ. ಅಲ್ಪ ಕಾಲದ ಅವರ ನಡು”ನ ಬಾಂಧವ್ಯ ಅಗಲಿಕೆಯ ಸಂದರ್ಭದಲ್ಲಿ ತನ್ನ ಗಾಢತೆಯನ್ನು ತೋರಿಸಿಕೊಡುತ್ತದೆ. ತಮ್ಮ ನೆಲವನ್ನು, ತಮ್ಮ ಜನರನ್ನು ಕಳೆದುಕೊಂಡ ಅವರು, ಎರಡು ದಿನಗಳ ಬಂಧು ಉಸ್ತಾದನನ್ನು ಅಗಲುವಾಗ ಬಿಕ್ಕಿ ಬಿಕ್ಕಿ ದುಃಖಿಸುತ್ತಾರೆ. ನೃತ್ಯದ ದುರ್ಗೆಯ ಮುಖವಾಡ ಬಂಗಬಾಲಾಳಲ್ಲಿ ಆವೇಶ ಹುಟ್ಟುಹಾಕಿರುತ್ತದೆ.
ಮುಂದುವರೆದ ಪ್ರಯಾಣದಲ್ಲಿ, ಹಳ್ಳಿಯ ಮುಖಂಡನೊಬ್ಬನ ಬಂದೂಕಿಗೆ ಜಗನ್ನಾಥ ಅನಿರೀಕ್ಷಿತವಾಗಿ ಬಲಿಯಾಗುವ ಪ್ರಸಂಗ ಒದಗಿಬರುತ್ತದೆ. ಬಂಗಬಾಲಾಳ ಆವೇಶ ಅದಕ್ಕೆ ಕಾರಣವಾಗುವುದು ವಿಪರ್ಯಾಸ. ಸಹಪಯಣಿಗನ ಸಾವಿನಿಂದ ಪ್ರಯಾಣವೇನೂ ನಿಲ್ಲುವುದಿಲ್ಲ. ಕೊನೆಗೂ ಉಳಿದ ಮೂವರು ಕಾಂಚನ ಪುರವನ್ನು ಬಂದು ತಲಪುತ್ತಾರೆ.
ಪತ್ನಿಯನ್ನು ಅರಸಿ ಬರುವ ನೀಲಕಂಠನ ಗಮ್ಯ ಅದಲ್ಲ. ಜೊತೆಗೆ ದುರ್ಗಾ ಕೂಡ ಅವನಿಗೆ ಮರಳಿ ಹೋಗುವಂತೆ ತಾಕೀತು ಮಾಡುತ್ತಾಳೆ. ನೀಲಕಂಠ ಅಲ್ಲಿಂದ ಹೊರಡುವ ಮುನ್ನ, ಮರುದಿನ ಮುಂಜಾನೆ ಮಗನನ್ನು ಸಮೀಪದ ಕಾಡಿಗೆ ಕರೆತರುವಂತೆ ಕೇಳಿಕೊಳ್ಳುತ್ತಾನೆ. ಮೊದಲ ಸೂರ್ಯ ರಶ್ಮಿಯೊಂದಿಗೆ ಮಗನ ಮುಖ ನೋಡಬೇಕೆನ್ನುವ ಬಯಕೆ ಅವನದು. ಕಾಡಿಗೆ ತೆರಳುವ ನೀಲಕಂಠನ ತಂಡಕ್ಕೆ ನಕ್ಸಲೀಯರ ಗುಂಪು ಎದುರಾಗುತ್ತದೆ. ಆತ ಅವರೊಂದಿಗೆ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಮಾತನಾಡುತ್ತಾನೆ. ಇರುಳು ಕಳೆಯುತ್ತದೆ.
ಮರುದಿನ ಮುಂಜಾನೆ ದುರ್ಗಾ ಮಗನನ್ನು ಕರೆದುಕೊಂಡು ಕಾಡಿಗೆ ಬರುತ್ತಾಳೆ. ಅದೇ ವೇಳೆಗೆ ಪೋಲಿಸರು ಮುತ್ತಿಗೆ ಹಾಕಿ ನಕ್ಸಲೀಯರ ಮೇಲೆ ದಾಳಿ ನಡೆಸುತ್ತಾರೆ. ಗುಂಡಿನ ಚಕಮಕಿಯ ಸದ್ದಡಗುತ್ತಿದ್ದಂತೆ ನೀಲಕಂಠ ಎದ್ದುನಿಲ್ಲುತ್ತಾನೆ, ಪೋಲಿಸನೊಬ್ಬನ ಪಿಸ್ತೂಲಿಗೆ ಬಲಿಯಾಗುತ್ತಾನೆ.
~
ಈ ಚಿತ್ರದುದ್ದಕ್ಕೂ ನೀಲಕಂಠನ ನೆಲದ ಹಂಬಲ, ಸೋಲು, ಹತಾಶೆಗಳು ಸೂಕ್ಷ್ಮವಾಗಿ ಅನಾವರಣಗೊಳ್ಳುತ್ತ ಸಾಗಿದೆ. ಇದು, ಬೇರ್ಪಡಿಕೆಯ ನೋವು. ಚಿತ್ರದ ಆರಂಭದಲ್ಲಿ ಪತಿ ಪತ್ನಿಯ ಬೇರ್ಪಡಿಕೆಯ ದೃಶ್ಯವಿದ್ದರೂ ನೀಲಕಂಠನಲ್ಲಿ ನೆಲದಿಂದ ಬೇರ್ಪಟ್ಟ ದುಃಖವನ್ನೇ ನಾವು ಮುಖ್ಯವಾಗಿ ಕಾಣುತ್ತೇವೆ. ಬಾಂಗ್ಲಾದ ಒಗ್ಗೂಡುವಿಕೆಯ ಕನಸು ಕಾಣುವ ನೀಲಕಂಠ ತನ್ನ ಪತ್ನಿಯೊಂದಿಗೆ ಒಗ್ಗೂಡಲು ಸಾಧ್ಯವಾಗದೆ ಹೋಗುವುದೊಂದು ವಿಡಂಬನೆ. ತನ್ನ ಅಸ್ತಿತ್ವ ನಾಶದ ಕಾರಣದಿಂದಾಗಿ ಉಂಟಾದ ಚಡಪಡಿಕೆಂದಲೇ ಆತನ ಅಸ್ತಿತ್ವ ಕುಡಿತದಲ್ಲಿ ಕರಗುತ್ತ ಹೋಗುತ್ತದೆ. ಆದರೆ ಆತ, ಜೀವನಕ್ಕಾಗಿ ತಾನಲ್ಲದ ಮತ್ತೊಂದು ಪಾತ್ರವನ್ನು ಅಭಿನುಸಲು ತಯಾರಿಲ್ಲದ ಪ್ರಾಮಾಣಿಕ. ಇದು, ಆತ ಶತ್ರುಜಿತ್ ಎನ್ನುವ ಮತ್ತೊಬ್ಬ ಮಾಜಿ ಚಿಂತಕನೊಂದಿಗೆ ನಡೆಸುವ ಸಂಭಾಷಣೆಯಲ್ಲಿ ನಿರೂಪಿತವಾಗಿದೆ.
ಈ ಸಿನೆಮಾ ನೆಲೆ ಕಳೆದುಕೊಂಡವರ ಹುಡುಕಾಟವನ್ನು ಬಿಂಬಿಸುತ್ತದೆ. ಇಲ್ಲಿ ನೀಲಕಂಠ ಎರಡೂ ಬಗೆಯಲ್ಲಿ ನೆಲೆ ಕಳೆದುಕೊಂಡವನಾಗಿದ್ದಾನೆ. ಅವನ ಪ್ರಯಾಣ ಬಾಹ್ಯ ನೆಲೆಯನ್ನು ಹುಡುಕುವುದಕ್ಕಾದರೆ, ಕುಡಿತದ ಮೈಮರೆವು ಒಳಗಿನ ಹುಡುಕಾಟದ ಪ್ರಕ್ರಿಯೆಯಂತೆ ತೋರುತ್ತದೆ.
ಅವನ ನಿರುದ್ಯೋಗಿ ಮತ್ತು ನಿರಾಶ್ರಿತ ಸಾಥಿಗಳು ಅವನ ಅಲೆಮಾರಿತನದ ಅನಾಥಪ್ರಜ್ಞೆಯನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡುತ್ತಾರೆ. ಕಾಡಿನಲ್ಲಿ ಅವಿತು ನೆಲಕ್ಕಾಗಿ ಹೋರಾಡುವ ನಕ್ಸಲರನ್ನು ಆತ ಭೇಟಿಯಾಗುವುದು ಕೂಡ ಒಂದು ಸಂಕೇತವೇ.
ಜುಕ್ತಿ, ಟಕೋ ಆರ್ ಗಪ್ಪೋ… ಕಾರಣ, ವಾದ ಮತ್ತು ಕಥೆ; ಇದು ತರ್ಕವನ್ನು ಮೀರಿದ ಸಿನೆಮಾ. ಪ್ರತಿ ಬಾರಿ ನೋಡಿದಾಗಲೂ ಭಿನ್ನ ಅನುಭವಗಳನ್ನು ಕಟ್ಟಿಕೊಡುತ್ತ, ನಮ್ಮನ್ನೂ ತನ್ನಲ್ಲಿ ಒಳಗೊಳ್ಳುತ್ತ ಸಾಗುತ್ತದೆ. ಸಿನೆಮಾದ ಕಥೆಯ ಸಂದರ್ಭ ನಾಲ್ಕು ದಶಕ ಹಿಂದಿನದಾದರೂ ಅದರ ಭಾವ ಸದಾ ಕಾಲಕ್ಕೂ ಸಲ್ಲುತ್ತದೆ.
~ ~
ಭಾಷೆ: ಬಂಗಾಳಿ
ಇಸವಿ : ೧೯೭೪
ನಿರ್ದೇಶನ: ಋತ್ವಿಕ್ ಘಟಕ್
ಮುಖ್ಯ ತಾರಾಗಣ: ನೀಲ ಕಂಠ- ಋತ್ವಿಕ್ ಘಟಕ್
ನಚಿಕೇತ- ಸೌಗತ ಬರ್ಮನ್
ಬಂಗ ಬಾಲಾ- ಸಾಂಮ್ಲಿಮಿತ್ರ
ದುರ್ಗಾ- ತೃಪ್ತಿ ಮಿತ್ರ
ಸತ್ಯ- ಋತಬನ್ ಘಟಕ್




