Archive for the ‘ಡಾಕ್ಯುಮೆಂಟರಿ-Doccumentary’ Category
ದ.ರಾ. ಬೇಂದ್ರೆ ಕುರಿತ ಸಾಕ್ಷ್ಯಚಿತ್ರ
ಬೆಂದ್ರೆ ಕುರಿತ ಸಾಕ್ಷ್ಯಚಿತ್ರದ ಬಗ್ಗೆ ಪುಟ್ರದಾಗಿ ಬರೆದಿರುವವರು ಕಾರ್ತಿಕ್ ಪರಾಡ್ಕರ್ ತಮ್ಮ ಬ್ಲಾಗ್ ನಲ್ಲಿ. ಅದನ್ನಿಲ್ಲಿ ಪ್ರಕಟಿಸಲಾಗಿದೆ. ಇದೇ ರೀತಿ ಒಳ್ಳೊಳ್ಳೆ ಡಾಕ್ಯುಮೆಂಟರಿಗಳ ಕುರಿತು ತಮ್ಮಲ್ಲಿ ಮಾಹಿತಿ ಇದ್ದರೆ ನಮಗೆ ಕಳಿಸಬಹುದು.
ದ.ರಾ.ಬೇಂದ್ರೆ ಕುರಿತು ಗಿರೀಶ್ ಕಾರ್ನಾಡ್ ನಿರ್ಮಿಸಿದ ಸಾಕ್ಷ್ಯಚಿತ್ರ ಇವತ್ತಿಗೂ ನೆನಪಾದಾಗ ಪುಳಕವಾಗುತ್ತದೆ..
ಸಾಕ್ಷ್ಯಚಿತ್ರವೊಂದನ್ನು ಅದೆಷ್ಟು ಆತ್ಮೀಯವಾಗಿ ತೆರೆಯ ಮೇಲೆ ತೆರೆದಿಡಬಹುದು ಎನ್ನುವುದನ್ನು ತೋರಿಸಿಕೊಡುತ್ತದೆ ಅವರ ಪ್ರಯತ್ನ. ಕಪ್ಪು-ಬಿಳುಪಿನ ಬಣ್ಣಗಳಲ್ಲಿ ಕವಿಯ ಅತೀ ಚಿಕ್ಕ ವಿವರವನ್ನೂ ಕೂಡಾ ಅವರು ದಾಖಲಿಸುತ್ತಾರೆ (ಉದಾ: ದ.ರಾ. ಬೇಂದ್ರೆ ಯಾವಾಗಲೂ ತಮ್ಮ ಕೋಣೆಯಲ್ಲಿ ಪುಸ್ತಕಗಳನ್ನು ಹರಡಿಕೊಂಡಿರುತ್ತಿದ್ದದ್ದು).
ಧಾರವಾಡದ ಹಾದಿಗಳಲ್ಲಿ ಬೇಂದ್ರೆ ಸಾಗುತ್ತಿದ್ದರೆ ನೋಡುಗನಿಗೆ ರೋಮಾಂಚನ. ಅವರ ನಡಿಗೆ, ಕೊಡೆ, ಮಳೆ, ಹಣ್ಣು ಮಾರುವವರ ಜೊತೆ ಒಡನಾಡುವ ರೀತಿ ಎಲ್ಲವನ್ನು ಯಾವುದೇ ಕ್ರತ್ರಿಮತೆ ಇಲ್ಲದೆ ಗಿರೀಶ್ ಕಾರ್ನಾಡ್ ದ್ರಶ್ಯದಲ್ಲಿ ದಾಖಲು ಮಾಡುತ್ತಾರೆ. ಈ ಸಾಕ್ಶ್ಯಚಿತ್ರದಲ್ಲಿರುವ ಕೆಲವೊಂದು ಶಾಟ್ ಗಳು ವಾರೆವ್ವಾ ಎನ್ನುವಂತಿವೆ. ಸಾಕ್ಶ್ಯಚಿತ್ರಗಳ ನಿರ್ಮಾಣದ ಬಗ್ಗೆ ಆಸಕ್ತಿ ಇರುವವರು ಇದನ್ನು ತಪ್ಪದೇ ನೋಡಬೇಕು..
ಇದೆಲ್ಲಕ್ಕಿಂತ ಹೆಚ್ಚಾಗಿ ಈ ಸಾಕ್ಷ್ಯಚಿತ್ರದಲ್ಲಿ ನಮ್ಮೆಲ್ಲರನ್ನು ಪುಳಕಿತರನ್ನಾಗಿ ಮಾಡುವ ಅಂಶವೊಂದಿದೆ. ಸ್ವತಃ ದ.ರಾ. ಬೇಂದ್ರೆ ಇಲ್ಲಿ ತಮ್ಮ ” ವಿಶ್ವಮಾತೆಯ ಗರ್ಭ ಕಮಲಜಾತ…” ಕವನವನ್ನು ವಾಚನ ಮಾಡಿದ್ದಾರೆ.
ಈಗಂತೂ ಕವನ ವಾಚನವೇ ಅಪರೂಪ. ಇಂತಹ ಸಂದರ್ಭದಲ್ಲಿ ಬೇಂದ್ರೆಯಂತಹ ಕವಿಯ ಸಾಲುಗಳನ್ನು ಅವರ ಬಾಯಲ್ಲಿ ಕೇಳಿ ಪಡೆದುಕೊಳ್ಳುವ ಸುಖಕ್ಕೆ ಸಾಟಿ ಯಾವುದಿದೆ ನೀವೇ ಹೇಳಿ. ಸಂಪರ್ಕ ಕೊಂಡಿ ನೋಡಿ.
” ಶ್ರೀ ಮುಖ”-ಕಯ್ಯಾರ ಕಿಞ್ಞಣ್ಣ ರೈ ಕುರಿತ ಸಾಕ್ಷ್ಯಚಿತ್ರ
ಶ್ರೀಮುಖ ಕಯ್ಯಾರ ಕಿಞ್ಞಣ್ಣ ರೈ ಕುರಿತ ಸಾಕ್ಷ್ಯಚಿತ್ರ. ಮಂಗಳೂರಿನ ದೃಶ್ಯ ಕ್ರಿಯೇಷನ್ಸ್ ರೂಪಿಸಿದೆ. ಆ ಕುರಿತು ಹೇಮಶ್ರಿ ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಈ ಸಾಕ್ಷ್ಯಚಿತ್ರ ತಯಾರಾದದ್ದು 2005 ರಲ್ಲಿ. ಇದನ್ನು ನಿರ್ಮಿಸಿದ್ದು ಮಂಗಳೂರಿನ ದೃಶ್ಯ ಕ್ರಿಯೇಷನ್ಸ್.
ಡಾ ಕಯ್ಯಾರ ಕಿಞ್ಞಣ್ಣ ರೈ ಅವರ ಬದುಕು, ಬರಹ ಮತ್ತು ಹೋರಾಟಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಈ 27 ನಿಮಿಷಗಳ ಸಾಕ್ಷ್ಯಚಿತ್ರ.
ಕಾಸರಗೋಡು ಕನ್ನಡನಾಡು ಎನ್ನುವ ಕನಸನ್ನು ಆರಲು ಬಿಡದೆ ತನ್ನ ಬರಹ ಬದುಕನ್ನು ಗಡಿನಾಡಿನ ಹೋರಾಟಕ್ಕೆ ಪಣ ಇಟ್ಟ ಕಯ್ಯಾರರು ಅಪ್ಪಟ ಗಾಂಧೀವಾದಿ.
ಕಯ್ಯಾರರ ಮುಂದಿನ ಪೀಳಿಗೆಗೆ ಅವರ ಹೋರಾಟದ ಕಾವು ತಲುಪಲಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇದುವರೆಗೂ ಕರ್ನಾಟಕ ಗಡಿನಾಡು ಸಮಸ್ಯೆ ಬೂದಿ ಮುಚ್ಚಿದ ಕೆಂಡವಾಗಿಯೇ ಉಳಿದುಕೊಂಡಿದೆ. ಪ್ರಸ್ತುತ ರಾಜಕೀಯ, ಪ್ರಾದೇಶಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ಗಡಿನಾಡು ಸಮಸ್ಯೆ ಪರಿಹಾರವಾಗುವುದು ದೂರದ ಮಾತಷ್ಟೇ ಅಲ್ಲ ಅದು ಸಮಸ್ಯೆಯನ್ನು ಸರಳಗೊಳಿಸುವ ಪ್ರಕ್ರಿಯೆಯಾಗದೆ ಇನ್ನಷ್ಟು ಗೊಂದಲದ ಗೂಡನ್ನಾಗಿಸುವುದರಲ್ಲಿ ಸಂಶಯವಿಲ್ಲ.
ಈ ಹಿನ್ನೆಲೆಯಲ್ಲಿ ಕಯ್ಯಾರರ ಏಕವ್ಯಕ್ತಿ ಹೋರಾಟ ಅರ್ಥ ಕಳೆದುಕೊಂಡಿರುವುದು ವಿಷಾದ. ಆದರೂ, ತಾನು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿ ತಮ್ಮ ತೊಂಬತ್ತನಾಲ್ಕರ ಇಳಿವಯಸ್ಸಿನಲ್ಲೂ ಯುವ ಜನಾಂಗಕ್ಕೆ ಸ್ಪೂರ್ತಿ, ಉತ್ಸಾಹದ ಚಿಲುಮೆಯಾಗಿದ್ದಾರೆ ಕಯ್ಯಾರ ಕಿಞ್ಞಣ್ಣ ರೈ.
ಮೊದಲನೇ ಭಾಗದ ಸಂಪರ್ಕಕೊಂಡಿ
ಎರಡನೇ ಭಾಗ
ಮೂರನೇ ಭಾಗ
ನಾಲ್ಕನೇ ಭಾಗ
ಅಕ್ಷತಾರ “ಇನ್ ಮೆಮೊರಿ ಆಫ್ ಫ್ರೆಂಡ್ಸ್”
ಅಕ್ಷತಾ ಭಟ್ ಅವರು ಮಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕರು. ಸಿನಿಮಾವನ್ನು ನೋಡುವುದು ಅವರ ಹವ್ಯಾಸ. ಆನಂದ ಪಟವರ್ಧನ್ ನಿರ್ದೇಶಿಸಿರುವ “ಇನ್ ಮೆಮೊರಿ ಆಫ್ ಫ್ರೆಂಡ್ಸ್” ಡಾಕ್ಯುಮೆಂಟರಿ ಬಗೆಗಿನ ಅವರ ಲೇಖನವಿದು.
ಮರೆಯಾದ ಗೆಳೆಯನ ನೆನಪಿನಲ್ಲಿ….
ಅದು ಎಪ್ಪತ್ತರ ದಶಕ. ಧಾರ್ಮಿಕ ಮೂಲಭೂತವಾದಿಗಳಿಂದ ಭಾರತ ಹರಿದು ಹಂಚಿಹೋಗುತ್ತಿದ್ದ ಕಾಲ. ಸರಕಾರದ ದಬ್ಬಾಳಿಕೆಯನ್ನು ಸಹಿಸಲಾಗದೇ ಸಾಮಾನ್ಯ ಜನತೆ ನಲುಗುತ್ತಿದ್ದ ಸಮಯ. ಇಡೀ ಪಂಜಾಬ್ ರಾಜ್ಯ ಭಯೋತ್ಪಾದನೆಯ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿತ್ತು. ರಾಜಕೀಯ ಹಾಗೂ ಧಾರ್ಮಿಕ ಸಮರಗಳು ಹಿಂಸಾರೂಪವನ್ನು ತಾಳಿದ್ದವು. ಯುವಜನತೆ ಧ್ವೇಷದ ಬೇಗೆಯಲ್ಲಿ ಬೇಯುತ್ತಿತ್ತು. ಆಗ…ದಶಕಗಳ ಹಿಂದೆ ಪಂಜಾಬ್ನಲ್ಲಿದ್ದ ಶಾಂತಿಯನ್ನು ಮರಳಿ ತರಲು ಎರಡು ಸಮುದಾಯಗಳು ಪಣತೊಟ್ಟವು… ಕೋಮು ಸೌಹಾರ್ಧತೆಯ ಕನಸನ್ನು ಕಂಡವು. ಹಿಂದೂ ಹಾಗೂ ಸಿಖ್ಗಳು ಒಟ್ಟಾಗಿ ಶಾಂತಿ ಮಂತ್ರವನ್ನು ಜನತೆಗೆ ಬೋಧಿಸಿದವು.

ಆನಂದ್ ಪಟವರ್ಧನ್ ನಿರ್ದೇಶನದ ’ಇನ್ ಮೆಮೊರಿ ಆಫ್ ಫ್ರೆಂಡ್ಸ್’ ಭಾರತದ ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಗಲಭೆಗಳ ನೈಜ ಚಿತ್ರಣ. ಎಪ್ಪತ್ತರ ದಶಕದಲ್ಲಿ ಭಯೋತ್ಪಾದನೆ, ಹಿಂಸೆ, ಧರ್ಮಾಂಧತೆಗಳಿಂದ ಬಳಲಿ ಬೆಂಡಾಗಿದ್ದ ಪಂಜಾಬ್ ಈ ಚಿತ್ರದ ಕಥಾವಸ್ತು. ಕ್ರಾಂತಿಗೆ ಕ್ರಾಂತಿಯಿಂದಲೇ ಉತ್ತರ ನೀಡಬೇಕೇ ವಿನಃ ಶಾಂತಿಯಿಂದಲ್ಲ ಎಂಬ ತತ್ವದೊಂದಿಗೆ ದೇಶಕ್ಕಾಗಿ ವೀರಮರಣವನ್ನಪ್ಪಿದ ಭಗತ್ ಸಿಂಗ್ ಈ ಚಿತ್ರದ ರಿಯಲ್ ಹೀರೋ.
ಭಗತ್ ಸಿಂಗ್ ಯಾರು? ಈ ಸಾಕ್ಷ್ಯ ಚಿತ್ರವನ್ನು ನೋಡುತ್ತಿದ್ದಂತೇ ವೀಕ್ಷಕರನ್ನು ಕಾಡುವ ಸಾಮಾನ್ಯ ಪ್ರಶ್ನೆಯಿದು. ಬ್ರಿಟಿಷರ ದಬ್ಬಾಳಿಕೆಗೆ ಕ್ರಾಂತಿಯ ಮೂಲಕ ಉತ್ತರಕೊಟ್ಟ ಭಗತ್ ಕೆಲವರಿಗೆ ದೇಶಭಕ್ತ…ಇನ್ನು ಕೆಲವರಿಗೆ ಭಯೋತ್ಪಾದಕ..ಸ್ವತಃ ಭಗತ್ ಹೇಳುವಂತೇ ಆತನೊಬ್ಬ ನಾಸ್ತಿಕ…ಹಾಗಾದರೇ ನಿಜವಾಗಿಯೂ ಭಗತ್ ಯಾರು? ವೀಕ್ಷಕ ಯೋಚನಾಮಗ್ನನಾಗುತ್ತಾನೆ..ಚಿತ್ರ ಮುಂದುವರಿಯುತ್ತದೆ.
ತನ್ನ ಇಪ್ಪತ್ತಮೂರನೇ ವಯಸ್ಸಿನಲ್ಲೇ ದೇಶಕ್ಕಾಗಿ ಹೋರಾಡಿ ಭಗತ್ ಗಲ್ಲಿಗೇರುತ್ತಾನೆ…ಸಾಯುವ ಕಾಲದಲ್ಲಿ ಆತ ಇಡೀ ಪಂಜಾಬ್ನ ನಾಯಕನಾಗಿರುತ್ತಾನೆ. ಆತನ ಸಿದ್ಧಾಂತಗಳಿಂದ ಪ್ರಭಾವಿತವಾದ ಪಂಜಾಬ್ನ ಯುವಜನತೆ ಆತನನ್ನು ದೇವರಂತೆ ಪೂಜಿಸುತ್ತಿರುತ್ತದೆ. ಆತನ ಸಾವು ಇಡೀ ಪಂಜಾಬನ್ನೇ ತಲ್ಲಣಗೊಳಿಸುತ್ತದೆ.
ವಾಸ್ತವತೆ ಹಾಗೂ ವಸ್ತುನಿಷ್ಟತೆ ಪಟವರ್ಧನ್ ಡಾಕ್ಯೂಮೆಂಟರಿಗಳ ವಿಶೇಷತೆ. ವಿಷಯ ವಸ್ತುವನ್ನು ತಾರ್ಕಿಕವಾಗಿ ಯೋಚಿಸುವಲ್ಲಿ ಇವರ ಚಿತ್ರಗಳು ಯಶಸ್ವಿಯಾಗಿವೆ. ಇನ್ ಮೆಮೊರಿ ಆಫ್ ಫ್ರೆಂಡ್ಸ್ ಯಾವುದೇ ಒಂದು ಸಿದ್ಧಾಂತವನ್ನು ಗುರಿಯಾಗಿಟ್ಟುಕೊಂಡಿಲ್ಲ. ಪಂಜಾಬ್ನಲ್ಲಿ ಮೂಲಭೂತವಾದದ ಹುಟ್ಟಿಗೆ ಕಾರಣಗಳೇನು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದೇ ಈ ಸಾಕ್ಷ್ಯಚಿತ್ರದ ಉದ್ದೇಶ. ಹಳ್ಳಿ ಹಳ್ಳಿಗಳಲ್ಲಿ ಕೋಮುಸೌಹಾರ್ಧತೆಯ ಬೀಜಬಿತ್ತಿ ಶಾಂತಿ ಸ್ಥಾಪನೆಯೆಡೆ ಶ್ರಮಿಸುವ ಲೆಫ್ಟ್ ಗ್ರೂಪ್ ರ್ಯಾಲಿಗಳ ನೈಜ ಚಿತ್ರಣ ಚಿತ್ರದ ವಿಶೇಷತೆ.
ಸ್ವಾತಂತ್ರ್ಯಪೂರ್ವದಲ್ಲಿ ದೇಶಕ್ಕಾಗಿ ವೀರಮರಣವನ್ನಪ್ಪಿದ ಪಂಜಾಬ್ನ ಕ್ರಾಂತಿಕಾರಿ ಭಗತ್ ಸಿಂಗ್ನ ಜೀವನ ಹಾಗೂ ಅದೇ ಪಂಜಾಬ್ನಲ್ಲಿ ಹುಟ್ಟಿದ ಭಯೋತ್ಪಾದನೆ ಇವೆರಡನ್ನು ತಮ್ಮ ಸಾಕ್ಷ್ಯಚಿತ್ರದಲ್ಲಿ ಆನಂದ್ ವಿಶ್ಲೇಷಿಸಿದ ರೀತಿ ಪ್ರಶಂಸಾನರ್ಹ.
ಧರ್ಮ, ನಾಸ್ತಿಕತೆ ಹಾಗೂ ವರ್ಗ ಸಂಘರ್ಷಗಳ ಕುರಿತ ಭಗತ್ ಸಿಂಗ್ನ ಬರಹಗಳು ಮತ್ತು ಚಿಂತನೆಗಳನ್ನು ಜನತೆಗೆ ತಲುಪಿಸುವುದೇ ಈ ಚಿತ್ರದ ಉದ್ದೇಶ. ಭಗತ್ ಮರಣದ ಬಳಿಕ ಆತನ ಸ್ಮರಣಾರ್ಥ ಪಂಜಾಬ್ನೆಲ್ಲೆಡೆ ಬಲಪಂಥೀಯರು ಕೈಗೊಂಡ ರ್ಯಾಲಿಗಳು ಭಗತ್ ನನ್ನು ಹುತಾತ್ಮನನ್ನಾಗಿ ಚಿತ್ರಿಸುತ್ತದೆ. ಚಿತ್ರದುದ್ದಕ್ಕೂ ಭಗತ್ ಸಂಘರ್ಷ ಹಾಗೂ ಶಕ್ತಿಯ ಸಂಕೇತವಾಗಿ ಬಿಂಬಿತವಾಗುತ್ತಾನೆ. ಇನ್ ಮೆಮೊರಿ ಆಫ್ ಫ್ರೆಂಡ್ಸ್ ಐವತ್ತು ವರುಷಗಳ ಹಿಂದೆ ಮಡಿದ ಕ್ರಾಂತಿಕಾರಿಯೋರ್ವನ ಆತ್ಮಚರಿತ್ರೆಯಲ್ಲ. ಬದಲಾಗಿ ಆತನ ಸಿದ್ಧಾಂತವನ್ನು ತಮ್ಮ ಅಗತ್ಯತೆಗಳಿಗೆ ತಕ್ಕಂತೆ ಬದಲಾಯಿಸಿ ಅದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿರುವ ಮೂಲಭೂತವಾದಿಗಳ ಕಥೆ.
ತೊಂಭತ್ತರ ದಶಕದಲ್ಲಿ ಬಿಡುಗಡೆಗೊಂಡ ಅರವತ್ತು ನಿಮಿಷಗಳ ಈ ಸಾಕ್ಷ್ಯಚಿತ್ರ ಮುಗಿಯುತ್ತಿದ್ದಂತೇ ಭಗತ್ ಹಾಗೂ ಆತನ ತತ್ವಗಳು ವೀಕ್ಷರನ್ನು ಸಂಪೂರ್ಣವಾಗಿ ಆವರಿಸುತ್ತವೆ. ಆತ ಅಂದಿನ ಸಿದ್ಧಾಂತಗಳನ್ನು ಇಂದಿಗೂ ಪ್ರಸ್ತುತವಾಗಿರಿಸಿರುವ ‘ಇನ್ ಮೆಮೊರಿ ಆಫ್ ಫ್ರೆಂಡ್ಸ್’ ಡಾಕ್ಯುಮೆಂಟರಿ ಲೋಕಕ್ಕೆ ಆನಂದ್ ಪಟವರ್ಧನ್ ನೀಡಿರುವ ಅಮೂಲ್ಯ ಕೊಡುಗೆ.
ಡಾಕ್ಯುಮೆಂಟರಿ : ಇನ್ ಮೆಮೊರಿ ಆಫ್ ಫ್ರೆಂಡ್ಸ್ ನಿರ್ದೇಶನ :ಆನಂದ ಪಟವರ್ಧನ್, ಮಾಹಿತಿಗೆ ಪಟವರ್ಧನ್ ಗೆ ಭೇಟಿ ಕೊಡಿ.




