Archive for the ‘ಚಿತ್ರ ಸುದ್ದಿ’ Category
ಈ ಶನಿವಾರ ಚಲನಚಿತ್ರ ರಸಗ್ರಹಣ ಶಿಬಿರ
ಮಂಡ್ಯ ರಮೇಶರ “ನಟನ” ಸಂಸ್ಥೆ ಡಿ. 12 ಮತ್ತು 13 (ಈ ಶನಿವಾರ, ಭಾನುವಾರ)ದಂದು ಚಲನಚಿತ್ರ ರಸಗ್ರಹಣ ಶಿಬಿರ ಏರ್ಪಡಿಸಿದೆ.
ಮೈಸೂರಿನ ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಶಿಬಿರ ನಡೆಯಲಿದ್ದು, ಶಿಬಿರ ಶುಲ್ಕ 150 ರೂ. ಗಳು ಮಾತ್ರ. ಖ್ಯಾತ ನಿರ್ದೇಶಕ ಬಿ. ಸುರೇಶ್, ತಜ್ಞರಾದ ರಘುನಾಥ್, ವಿನಯ್ ಮುಂತಾದವರು ಶಿಬಿರ ನಡೆಸಿಕೊಡುವರು.
ವಿಶ್ವದ ಒಳ್ಳೆ ಚಿತ್ರಗಳ ಪ್ರದರ್ಶನ, ಸಂವಾದ, ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು. ಇದೊಂದು ವಿಶಿಷ್ಟ ಪ್ರಯತ್ನವಾಗಿದ್ದು, ನೇರವಾಗಿ ಸ್ಥಳಕ್ಕೇ ಬಂದೂ ಹೆಸರನ್ನು ನೋಂದಾಯಿಸಬಹುದು. ಮಾಹಿತಿ ಮತ್ತು ಹೆಸರು ನೋಂದಣಿಗೆ 9972391577, 9480468327, 0821- 2562208.
ಜತೆಗೆ ಡಿ.13 ರಂದು “ರತ್ನಪಕ್ಷಿ” ನಾಟಕ ಪ್ರದರ್ಶನವಿದೆ. ಇದರ ನಿರ್ದೇಶನ : ಮಂಡ್ಯ ರಮೇಶ್, ರಚನೆ : ಕೆ. ರಾಮಯ್ಯ.
ಕಿರುಚಿತ್ರಗಳಿಗೊಂದು ವೇದಿಕೆ-ನಮ್ಮೂರ ಫಿಲ್ಮೋತ್ಸವ
ಮೈಸೂರಿನ “ಗ್ಯಾಂಗ್ವೇಜ್” ಹಾಗೂ “ಮೈಸೂರು ಫಿಲ್ಮ್ ಸೊಸೈಟಿ” ಜಂಟಿಯಾಗಿ ಜನವರಿಯಲ್ಲಿ ಕಿರು ಚಿತ್ರೋತ್ಸವ ಏರ್ಪಡಿಸಿವೆ.
ರಾಜ್ಯದ ಎಲ್ಲ ಸಿನಿಮಾ ಆಸಕ್ತರು, ಡಿಪ್ಲೊಮಾ ವಿದ್ಯಾರ್ಥಿಗಳು, ಚಲನಚಿತ್ರ ಶಿಕ್ಷಣ ನೀಡುವ ಸಂಸ್ಥೆಗಳು, ಅನಿಮೇಷನ್, ವೀಡಿಯೋ ಸಂಸ್ಥೆಗಳು, ವೃತ್ತಿ, ಅರೆವೃತ್ತಿ, ಹವ್ಯಾಸಿ ಚಿತ್ರ ನಿರ್ದೇಶಕರು ತಮ್ಮ ಚಿತ್ರಗಳನ್ನು ಕಳುಹಿಸಬಹುದು. ಯಾವುದೇ ಪ್ರವೇಶ ಶುಲ್ಕವಿಲ್ಲ.

ನಿಯಮಗಳೆಂದರೆ :
ಚಿತ್ರವು 2 ರಿಂದ 30 ನಿಮಿಷಗಳ ಅವಧಿಯದ್ದಾಗಿರಬೇಕು.
ಯಾವುದೇ ಭಾಷೆಯಲ್ಲಿ, ಭಾಷಾರಹಿತವಾಗಿ, ಅನಿಮೇಷನ್ ರೂಪದಲ್ಲೂ ಇರಬಹುದು. ಆದರೆ ಸಬ್ ಟೈಟಲ್ ಗಳು ಮುದ್ರಿತವಾದ ಪ್ರತಿಯೇ ಆಗಿರಬೇಕು.
ಚಿತ್ರದ ಡಿವಿಡಿ ಪ್ರತಿ (ಮೂಲ ಮತ್ತು ನಕಲು) ಮುಂದಾಗಿ ಕಳುಹಿಸಿಕೊಡಬೇಕು.
ಸಂಸ್ಥೆ ಅಥವಾ ವ್ಯಕ್ತಿಯ ಸಂಪರ್ಕ ವಿಳಾಸ, ದೂರವಾಣಿ, ಮೊಬೈಲ್, ಇಮೇಲ್, ಚಿತ್ರ ತಂಡದ ಅಥವಾ ವ್ಯಕ್ತಿಗಳ ಭಾವಚಿತ್ರ, ಪರಿಚಯಪತ್ರ, ಚಿತ್ರ ನಿರ್ಮಾಣದ ಬಗ್ಗೆ ಮಾಹಿತಿ ಜೊತೆಗೆ ಸ್ಕ್ರಿಪ್ಟ್ ಕಳುಹಿಸಬೇಕು.
ಚಿತ್ರವು ಸಂಪೂರ್ಣ ಸ್ವಂತದ್ದಾಗಿರಬೇಕು. ಯಾವುದೇ ರೀತಿಯ ನಕಲು, ಮರು ನಿರ್ಮಾಣ, ಭಾಷಾಂತರಗಳಿಗೆ ಅವಕಾಶವಿಲ್ಲ. ಸಾಹಿತ್ಯ ಕೃತಿಯನ್ನು ಆಧರಿಸಿದ್ದರೆ ಮೂಲ ಲೇಖಕರ ಅನುಮತಿ ಪತ್ರ ಲಗತ್ತಿಸಬೇಕು.
ಚಿತ್ರ ಅಥವಾ ಚಿತ್ರದ ವಿವರವನ್ನು ಡಿಸೆಂಬರ್ 26 ರೊಳಗೆ ಕಳುಹಿಸಬೇಕು. ಚಿತ್ರಗಳನ್ನು ಪ್ರದರ್ಶಿಸುವುದು ಅಥವಾ ಬಿಡುವುದು ಆಯ್ಕೆ ಸಮಿತಿಯ ನಿರ್ಧಾರಕ್ಕೆ ಸಂಬಂಧಿಸಿದ್ದು.
ಚಿತ್ರಗಳನ್ನು ಕಳುಹಿಸುವ ವಿಳಾಸ :
ಧರ್ಮೇಶ್ ಎಂ.ಎಸ್, H-10 C.F.T.R.I CAMPUS, MYSORE-13, MO-98864 98866, e mail-dharmavangogh@yahoo.com.
ಹರಿಪ್ರಸಾದ್ ಕಶ್ಯಪ್, ಮೊಬೈಲ್ : 97421 91586, email-haridontworry@gmail.com
ಧನಂಜಯ ಕಾಳೇನಹಳ್ಳಿ, ಮೊಬೈಲ್&98449 90203, email-dhana.gs@gmail.com,
ಮಾಹಿತಿಗೆ : www.gangwayz.org
ಪ್ರೊ.ವಿಎನ್ಎಲ್ ರ ‘ಸಿನಿಮಾಂತರಂಗ’ ಬಿಡುಗಡೆ
ಸಿನಿಮಾದ ಅಂತರಂಗವನ್ನು ಹೇಳುತ್ತಲೇ ಒಬ್ಬ ಸಿನಿಮಾಸಕ್ತನಿಗೆ ಸಾಕಷ್ಟು ಸಂಗತಿಗಳನ್ನು ತಿಳಿಸುವ ಪ್ರೊ. ವಿ. ಎನ್. ಲಕ್ಷ್ಮೀನಾರಾಯಣರ “ಸಿನಿಮಾಂತರಂಗ” ಕೃತಿ ಬಿಡುಗಡೆಯಾಯಿತು. ಅದರ ಕುರಿತ ವರದಿ ಪ್ರಕಟಿಸಲಾಗಿದೆ.
ಸಿನಿಮಾಕ್ಕೆ ಸಂಬಂಧಿಸಿದ ಒಳನೋಟಗಳನ್ನು ತೆರದಿಡುವ ಪ್ರೊ.ವಿ. ಎನ್. ಲಕ್ಷ್ಮೀನಾರಾಯಣ್ ಅವರ ‘ಸಿನಿಮಾಂತರಂಗ’ ಕಿರು ಹೊತ್ತಗೆ ಭಾನುವಾರ ಮೈಸೂರಿನಲ್ಲಿ ಬಿಡುಗಡೆಯಾಯಿತು.
ಮೈಸೂರು ಫಿಲ್ಮ್ ಸೊಸೈಟಿ ಪ್ರಕಟಿಸಿರುವ ಹೊತ್ತಗೆಯನ್ನು ಅನಾವರಣಗೊಳಿಸಿದ ಹಿರಿಯ ಸಾಹಿತಿ ಡಾ.ಪ್ರಭುಶಂಕರ ,ಸಿನಿಮಾ ಪ್ರಪಂಚದ ಸಮಸ್ತ ಸಂಗತಿಗಳನ್ನು ಲಕ್ಷ್ಮೀನಾರಾಯಣ ಅವರು ಅತ್ಯಂತ ಎಚ್ಚರಿಕೆಯಿಂದ ವಿಮರ್ಶಿಸಿದ್ದಾರೆ. ಪುಟ್ಟ ಪುಸ್ತಕದಲ್ಲಿ ಅಗಾಧ ಜ್ಞಾನ ರಾಶಿಯನ್ನು ಹಿಡಿದಿಟ್ಟಿದ್ದಾರೆ ಎಂದರು.
ಪುಸ್ತಕವನ್ನು ಓದುತ್ತಿದ್ದರೆ ಅನೇಕ ದೇಶಗಳಲ್ಲಿ ಬೇರೆ ಬೇರೆ ಕಾಲಗಳಲ್ಲಿ ಸಂಚರಿಸಿದ ಅನುಭವವಾಗುತ್ತದೆ. ಕೃತಿ ಸಾಧನೆ,ಸಿದ್ಧಿಯ ಫಲ. ಚರ್ಚೆಗೆ ಪಂಥಾಹ್ವಾನ ನೀಡುವ ರೀತಿಯಲ್ಲಿ ಕಲಾತ್ಮಕವಾಗಿ ನಿರೂಪಿಸಿದ್ದು, ಕೃತಿ ‘ಅಂಗೈಯಲ್ಲಿ ಬ್ರಹ್ಮಾಂಡ’ವನ್ನು ತೋರಿಸಿದಂತಿದೆ ಎಂದು ಶ್ಲಾಘಿಸಿದರು.
ಚರ್ಚೆಗೆ ಮಾರ್ಗದರ್ಶಿ
ಪುಸ್ತಕವನ್ನು ಪರಿಚಯಿಸಿದ ಪ್ರಶಾಂತ್ ಪಂಡಿತ್, ಸಿನಿಮಾದ ಸವಾಲುಗಳನ್ನು ತಲಸ್ಪರ್ಶಿಯಾಗಿ ನಿರೂಪಿಸಲಾಗಿದೆ.ಸಿನಿಮಾ ಸೊಸೈಟಿಗಳಲ್ಲಿ ನಡೆಯುವ ಚರ್ಚೆಗಳಿಗೆ ಮಾರ್ಗದರ್ಶಿಯಾಗುವಂತ ಹೊತ್ತಗೆ. ಇಂಗ್ಲಿಷ್ಗೆ ಭಾಷಾಂತರವಾದರೆ ಹೆಚ್ಚು ಚರ್ಚೆಗೆ ಅನುಕೂಲವಾಗುತ್ತದೆ ಎಂದು ಆಶಿಸಿದರು.‘ಸಣ್ಣ ಪುಸ್ತಕ ಅನೇಕ ದೊಡ್ಡ ಸಂಗತಿಗಳನ್ನು ತೆರೆದಿಡುತ್ತದೆ ’ಎಂದು ಡಾ.ಪಿ.ವೆಂಕಟೇಶ್ ಅಭಿಪ್ರಾಯಪಟ್ಟರು.
ಮೈಸೂರು ಫಿಲ್ಮ್ ಸೊಸೈಟಿ ಆಯೋಜಿಸಿದ್ದ ಎರಡು ದಿನದ ಚಲನಚಿತ್ರ ರಸಗ್ರಹಣ ಶಿಬಿರದಲ್ಲಿ ಭಾಗವಹಿಸಿದ್ದವರಿಗೆ ಪ್ರಮಾಣ ಪತ್ರ ವಿತರಿಸಿ ಕೃತಿ ಕುರಿತು ಮಾತನಾಡಿದ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್, ಇಂಥ ಅರ್ಥಪೂರ್ಣ ಲೇಖನವನ್ನು ಇಷ್ಟು ಸರಳವಾಗಿ ಚಲನಚಿತ್ರ ಆಸಕ್ತರಿಗೆ ತಲುಪಿಸಿದ ಉದಾಹರಣೆ ಕನ್ನಡದಲ್ಲಿ ಮಾತ್ರವಲ್ಲ ಇಂಗ್ಲಿಷ್ನಲ್ಲಿಯೂ ಕಂಡಿಲ್ಲ. ಸಿನಿಮಾ ಸಾಧ್ಯತೆಗಳ ಕುರಿತು ಪ್ರೊ.ವಿಎನ್ಎಲ್ ಅಪೂರ್ವ ನೋಟಗಳನ್ನು ನೀಡಿದ್ದಾರೆ. ಕೆಲವು ಅಪ್ರಿಯ ಸತ್ಯಗಳನ್ನು ಹೇಳುವ ಧೈರ್ಯವನ್ನೂ ಮಾಡಿದ್ದಾರೆ ಎಂದು ಹೇಳಿದರು.

ಮೈಸೂರಿನಲ್ಲಿ ಭಾನುವಾರ ನಡೆದ ‘ಸಿನಿಮಾತರಂಗ ’ ಕಿರು ಹೊತ್ತಗೆ ಬಿಡುಗಡೆ ಕಾರ್ಯಕ್ರಮದಲ್ಲಿ ಜಿ.ಎಸ್.ಭಾಸ್ಕರ್, ಡಾ.ಪ್ರಭುಶಂಕರ ,ಪ್ರೊ.ವಿ. ಎನ್. ಲಕ್ಷ್ಮೀನಾರಾಯಣ್ .
ಪುಸ್ತಕವನ್ನು ಇಂಗ್ಲಿಷ್ಗೆ ಯಾರೂ ಭಾಷಾಂತರಿಸಬಹುದು;ಹಕ್ಕು ಸ್ವಾಮ್ಯದ ನಿರ್ಬಂಧವಿಲ್ಲ. ಮಾರಾಟದಿಂದ ಬರುವ ಲಾಭ ಮೈಸೂರು ಫಿಲ್ಮ್ ಸೊಸೈಟಿಗೆ ಸೇರಿದ್ದು ಎಂದು ಪ್ರೊ.ಲಕ್ಷ್ಮೀನಾರಾಯಣ ಪ್ರಕಟಿಸಿದರು. ಮನು ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದ ನಂತರ ‘ದಿ ರೆಡ್ ಬೆಲೂನ್’ ಚಿತ್ರ ಪ್ರದರ್ಶನವಾಯಿತು. (ವರದಿ ಕೃಪೆ : ವಿಜಯ ಕರ್ನಾಟಕ)
ಉಮಾಶ್ರೀ ಶ್ರೇಷ್ಠ ನಟಿ, ಪ್ರಕಾಶ್ ರೈ (ರಾಜ್)ಗೆ ಶ್ರೇಷ್ಠ ನಟ ಪುರಸ್ಕಾರ
ಮತ್ತೊಮ್ಮೆ ಕನ್ನಡದ ನವಿಲು ರಾಷ್ಟ್ರಮಟ್ಟದಲ್ಲಿ ಗರಿಗೆದರಿ ನಿಂತಿದೆ. ೨೦೦೭ ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ.
ಹೆಸರಾಂತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ‘ಗುಲಾಬಿ ಟಾಕೀಸ್’ ನ ಅಭಿನಯಕ್ಕೆ ಶ್ರೇಷ್ಠ ನಟಿ ಪ್ರಶಸ್ತಿ ಉಮಾಶ್ರೀಯವರ ಪಾಲಾಗಿದೆ. ಹಾಗೆ ನೋಡಿದರೆ ಶ್ರೇಷ್ಠ ನಟ ಪುರಸ್ಕಾರವೂ ಕನ್ನಡಿಗನಿಗೇ ದೊರೆತಿದೆ.
ತಮಿಳು ಭಾಷೆಯ ‘ಕಾಂಚೀವರಂ’ ಚಲನಚಿತ್ರದ ಅಭಿನಯಕ್ಕೆ ಪ್ರಕಾಶ್ ರೈ (ರಾಜ್) ಗೆ ದಕ್ಕಿದೆ. ಜೊತೆಗೆ ಕಾಂಚೀವರಂ ಚಿತ್ರ ಅತ್ಯುತ್ತಮ ಚಿತ್ರವಾಗಿಯೂ ಆಯ್ಕೆಯಾಗಿದೆ.

ಗುಲಾಬಿ ಟಾಕೀಸ್ ಚಿತ್ರದಲ್ಲಿ ಉಮಾಶ್ರೀ
1998 ರಲ್ಲಿ ಪ್ರಕಾಶ್ ರೈ ‘ಇರುವರ್’ ಚಿತ್ರದ ಪೋಷಕ ನಟನ ಪಾತ್ರದಲ್ಲಿ ತೋರಿದ ಅಭಿನಯಕ್ಕೆ ಪ್ರಶಸ್ತಿ ಪಡೆದಿದ್ದರು. ಅತ್ಯುತ್ತಮ ನಿರ್ದೇಶಕ : ಆಡೂರು ಗೋಪಾಲಕೃಷ್ಣನ್, ಚಿತ್ರ : ನಾಲು ಪೆಣ್ಣುಂಗಲ್ (ಮಲಯಾಳಂ)
ಅತ್ಯುತ್ತಮ ನಟ : ಪ್ರಕಾಶ್ ರಾಜ್ (ರೈ), ಚಿತ್ರ : ಕಾಂಚೀವರಂ
ಅತ್ಯುತ್ತಮ ನಟಿ : ಉಮಾಶ್ರೀ, ಚಿತ್ರ : ಗುಲಾಬಿ ಟಾಕೀಸ್
ಅತ್ಯುತ್ತಮ ಚಿತ್ರ : ಕಾಂಚೀವರಂ, ನಿರ್ದೇಶನ : ಪ್ರಿಯದರ್ಶಿನ್ (ತಮಿಳು)
ಇಂದಿರಾಗಾಂಧಿ ಪ್ರಶಸ್ತಿ (ಮೊದಲಬಾರಿಗೆ ನಿರ್ದೇಶಿಸಿದವರಿಗೆ) ಚಿತ್ರ : ಶಿವಾಜಿ ಚಂದ್ರ ಭೂಷಣ್, ಚಿತ್ರ :ಫ್ರೋಜನ್.

ಪ್ರಕಾಶ್ ರೈ
ಅತ್ಯುತ್ತಮ ಮಕ್ಕಳ ಚಿತ್ರ : foto
ಅತ್ಯುತ್ತಮ ಬಾಲನಟ : ಶರದ್ ಗೋಯೆಕರ್, ಚಿತ್ರ : ಟಿಂಗ್ಯಾ, ಮರಾಠಿ
ತೀರ್ಪುಗಾರರ ವಿಶೇಷ ಪ್ರಶಸ್ತಿ (ಉತ್ತಮ ಚಿತ್ರ ಮತ್ತು ಚಿತ್ರಕಥೆ ಪ್ರಶಸ್ತಿ): ಫೆರೋಜ್ ಅಬ್ಬಾಸ್ ಖಾನ್ರ ಗಾಂಧಿ ಮೈ ಫಾದರ್.
ಅತ್ಯುತ್ತಮ ಪೋಷಕ ನಟ : ದರ್ಶನ್ ಜಾರಿವಾಲಾ, ಚಿತ್ರ : ಗಾಂಧಿ ಮೈ ಫಾದರ್.
ಅತ್ಯುತ್ತಮ ಪೋಷಕ ನಟಿ : ಶೆಫಾಲಿ ಷಾ, ದಿ ಲಾಸ್ಟ್ ಇಯರ್
ಅತ್ಯುತ್ತಮ ಮನರಂಜನಾ ಚಿತ್ರ : ಚಕ್ ದೇ
ಅತ್ಯುತ್ತಮ ಕೌಟುಂಬಿಕ ಚಿತ್ರ : ತಾರೇ ಜಮೀನ್ ಪರ್
ರಾಷ್ಟ್ರೀಯ ಭಾವ್ಯೆಕ್ಯ ಕುರಿತ ಅತ್ಯುತ್ತಮ ಚಿತ್ರಕ್ಕೆ ನೀಡುವ ನರ್ಗೀಸ್ ದತ್ ಪ್ರಶಸ್ತಿ : ಧರ್ಮ
ಅತ್ಯುತ್ತಮ ಹಿನ್ನೆಲೆ ಗಾಯಕ : ಶಂಕರ್ ಮಹದೇವನ್, ತಾರೇಜಮೀನ್ ಪರ್ ಚಿತ್ರದ ‘ಮೆರಿ ಮಾ’ ಹಾಡಿಗೆ.
ಅತ್ಯುತ್ತಮ ಹಿನ್ನೆಲೆ ಗಾಯಕಿ : ಶ್ರೇಯಾ ಘೋಷಲ್, ಚಿತ್ರ : ಜಬ್ ವಿ ಮೆಟ್
ಅತ್ಯುತ್ತಮ ಅನಿಮೇಷನ್ ಚಿತ್ರ : ಇನಿಮೆ ನಂಗಾಥಾನ್ (ತಮಿಳು)
ಅತ್ಯುತ್ತಮ ಛಾಯಾಗ್ರಹಣ : ಶಂಕರ್ ರಾಮನ್, ಚಿತ್ರ : ಫ್ರೋಜನ್
ಅತ್ಯುತ್ತಮ ಸಂಕಲನ : ಅಜಿತ್ ಕುಮಾರ್, ನಾಲು ಪೆಣ್ಣುಂಗಲ್
ಅತ್ಯುತ್ತಮ ಕಲಾ ನಿರ್ದೇಶಕ : ಸಾಬು ಸಿರಿಲ್, ಚಿತ್ರ : ಓಂ ಶಾಂತಿ ಓಂ
ಅತ್ಯುತ್ತಮ ಸಂಗೀತ ನಿರ್ದೇಶಕ : ಔಸೇಪ್ಪಚನ್ (Ouseppachan)
ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಕುರಸೋವಾ ಚಿತ್ರೋತ್ಸವಕ್ಕೆ ಚಾಲನೆ
ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಶುಕ್ರವಾರ ಅಕಿರಾ ಕುರಸೋವಾ ಚಿತ್ರೋತ್ಸವ ಉದ್ಘಾಟನೆಯಾಗಿದ್ದು, ಶನಿವಾರ ಮತ್ತು ಭಾನುವಾರ ಸಂಜೆ 6. 30 ಕ್ಕೆ ಮತ್ತೆರಡು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಬೆಂಗಳೂರಿನ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಶುಕ್ರವಾರ ಹೆಸರಾಂತ ನಿರ್ದೇಶಕ ಅಕಿರಾ ಕುರಸೋವಾ ಚಿತ್ರೋತ್ಸವ ಉದ್ಘಾಟನೆಗೊಂಡಿತು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಹಾಗೂ ಚಿತ್ರನಿರ್ದೇಶಕ ಟಿ.ಎಸ್. ನಾಗಾಭರಣ ಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಪಿ. ಶೇಷಾದ್ರಿ, ಸುಚಿತ್ರಾ ಫಿಲ್ಮ್ ಸೊಸೈಟಿಯ ವ್ಯವಸ್ಥಾಪಕ ಟ್ರಸ್ಟಿ ವಿದ್ಯಾಶಂಕರ್ ಹಾಗೂ ಶೆಮರಾವೋ ಕಂಪನಿಯ ನಿರ್ದೇಶಕ ಹಿರಾನ್ ಗದಾ ಭಾಗವಹಿಸಿದ್ದರು.
ಉದ್ಘಾಟನೆ ನಂತರ “ರಾಶೊಮನ್” ಚಲನಚಿತ್ರ ಪ್ರದರ್ಶನಗೊಂಡಿತು. ಆ. 1 ರಂದು (ಶನಿವಾರ) ಸಂಜೆ 6. 30 ಕ್ಕೆ ಕುರಸೋವಾರ “ಮದಾದ್ಯೋ’ ಹಾಗೂ ಆ. 2 ರಂದು ಸಂಜೆ 6. 30 ಕ್ಕೆ ಮತ್ತೊಂದು ಅತ್ಯುತ್ತಮ ಚಿತ್ರ “ರಾನ್” ಪ್ರದರ್ಶನಗೊಳ್ಳಲಿವೆ. ಮಾಹಿತಿಗೆ 26711785.




