ರಂಜಿತ್ ಅಡಿಗರು ಬರೆದ ಪ್ರಬಂಧವಿದು. ಕನ್ನಡ ಚಿತ್ರಗಳ ಸಮಸ್ಯೆಯನ್ನೂ ಸ್ಥೂಲವಾಗಿ ಹೇಳುವ ಇದನ್ನು ಇಲ್ಲಿ ಪ್ರಕಟಿಸಲಾಗಿದೆ. ಓದಿ ಅಭಿಪ್ರಾಯಿಸಿ

ಇತ್ತೀಚೆಗೆ ಒಂದು ಕನ್ನಡ ಸಿನೆಮಾ ಗೆ ಹೋಗಿದ್ದೆ.

ಆ ಸಿನೆಮಾ ಸ್ವಲ್ಪ ಹಳೆಯದು. ಬಿಡುಗಡೆಯಾಗಿ ಹತ್ತಿರ ಹತ್ತಿರ ೫೦ ದಿನ ಆಗಿತ್ತು. ಒಂದಿಬ್ಬರು ಸಿನೆಮಾ ಗೆಳೆಯರು ಚೆನ್ನಾಗಿದೆ ಮಾರಾಯ ಮಿಸ್ ಮಾಡ್ಬೇಡ ಅಂದಿದ್ದರಿಂದ ಟೀವಿಯಲ್ಲಿ ಜಾಹೀರಾತಿನ ಮಧ್ಯೆ ನೋಡಬೇಕಾದ ದೌರ್ಭಾಗ್ಯ ಬೇಡ ಅಂದುಕೊಂಡು ಥಿಯೇಟರ್ ಗೆ ಹೊರಟಿದ್ದೆ.

ಅವತ್ತು ಶನಿವಾರ. ದಿನದ ಕೊನೆಯ ಶೋ. ಟಿಕೆಟ್ ಸಿಗದಿದ್ದರೆ ತೊಂದರೆ ಅಂದುಕೊಳ್ಳುತ್ತಾ ಬೇಗ ಹೆಜ್ಜೆ ಹಾಕಿದ್ದೆ. ಅಲ್ಲಿ ಥಿಯೇಟರ್ ಕಾಯುತ್ತಿದ್ದ ತಾತಪ್ಪ, ಇನ್ನೂ ಶೋ ಬಿಟ್ಟಿಲ್ಲ ಕಾಯಿರಿ ಅಂದ. ಪಕ್ಕದಲ್ಲೇ ಇದ್ದ ಅಡಿಗಾಸ್ ಗೆ ಹೋಗಿ ಟೀ ಏರಿಸಿಕೊಂಡು ಬರುವ ಹೊತ್ತಿಗೆ ಶೋ ಬಿಟ್ಟಿತ್ತು. ಟಿಕೆಟ್ ಕೌಂಟರ್ ಗೆ ಹೋಗಿ ಒಂದು ಬಾಲ್ಕನಿ ಕೊಡಿ ಅಂದೆ. ಕಿಂಡಿಯ ಒಳಗಿಂದ ಎರಡು ಕಣ್ಣು ಇಣುಕಿ, ’ಸರ್, ಬಾಲ್ಕನಿಯಲ್ಲಿ ನೀವೊಬ್ಬರೇ ಕೂರಬೇಕಾದೀತು ಪರವಾಗಿಲ್ಲವಾ” ಅಂತ ಕೇಳಿದ. ಯಾಕೆ ಸರ್ ಇವತ್ತು ಶನಿವಾರ ಅಲ್ಲವ್ರಾ? ಜನ ಬರಬಹುದು ಅಂದೆ. ಅವನಿಗೆ ಅವನ ಮೇಲೆ ಬೇಜಾನ್ ಆತ್ಮವಿಶ್ವಾಸ ಇತ್ತು. ಇಲ್ಲ ಸರ್, ಜನ ಬರ್ತಾ ಇಲ್ಲ, ನೋಡೋಣ ಈಗ ಫಸ್ಟ್ ಕ್ಲಾಸ್ ಟಿಕೆಟ್ ತಗೊಳ್ಳಿ ನಂತರ ಯಾರಾದರೂ ಬಂದರೆ ಬದಲಾಯಿಸಿ ಕೊಡ್ತೇನೆ ಅಂದ.

ಒಳಗೆ ಬಿಡದ್ದರಿಂದ ಮತ್ತು ತುಂತುರು ಮಳೆ ಶುರುವಾಗಿದ್ದರಿಂದ ಬಾಗಿಲಬಳಿ ಕೂತಿದ್ದೆ. ಏಳೂವರೆಯಾದರೂ ಬೇರೆ ಯಾರೂ ಪತ್ತೆ ಇಲ್ಲ. ಚಿತ್ರ ನೋಡುವುದರ ಬಗ್ಗೆ ಎಷ್ಟು ಆಸೆ ಇಟ್ಟುಕೊಂಡಿದ್ದೆ ಛೇ ಯಾರೂ ಬರದೇ ಹೋದರೆ ಶೋ ಕ್ಯಾನ್ಸಲ್ ಮಾಡಿಸುತ್ತಾರಾ? ಆಗ ನಾನು ಯಾವ ರೀತಿ ಗಲಾಟೆ ಮಾಡಬೇಕು ಅಂತೆಲ್ಲಾ ಯೋಚಿಸುತ್ತಾ ಕೂತೆ.

ಇನ್ನೊಬ್ಬ ಬಂದ. ನನ್ನ ಮುಖ ಅರಳಿತು. ಆತ ಟಿಕೆಟ್ ಕೊಳ್ಳದೇ ಥಿಯೇಟರ್ ಸಿಬ್ಬಂದಿ ಜತೆ ಮಾತಾಡ್ತಾ ಇದ್ದಿದ್ದರಿಂದ ಅವನೂ ಸಿಬ್ಬಂದಿವರ್ಗದವನೇ ಆಗಿದ್ದುದು ಮನವರಿಕೆಯಾಯಿತು. ಆತನೂ ನನ್ನ ಬಳಿಯೇ ಬಂದು ಕೂತ. ಸಮಯ ಆಗಲೇ ಏಳೂ ಮೂವತ್ತೈದು. ಸುಮ್ಮನೆ ಅವನನ್ನು ಕೇಳಿದೆ, ಏನ್ರೀ ಯಾರೂ ಇಲ್ಲ ಈ ಸಿನೆಮಾಕ್ಕೆ ಅಂತ. ಅದಕ್ಕವ, ನೀವೂ ಹೋಗ್ಬಿಡಿ ಸರ್, ಎದುರ್ಗಡೆ ಇರೋ ಥಿಯೇಟರ್ ನಲ್ಲಿ ಮಸ್ತ್ ಪಿಕ್ಚರ್ ಇದೆ.. ಅಂದ. ಕುತೂಹಲದಿಂದ ಯಾವುದು ಕೇಳಿದಾಗ “ತೆಲುಗು, ಗಬ್ಬರ್ ಸಿಂಗ್” ಅಂದ. ಮತ್ತೇನೂ ಮಾತಾಡದೇ ಸುಮ್ಮನಾದೆ.

ಇನ್ನು ಒಂದೆರಡು ನಿಮಿಷ ಆದ ಕೂಡಲೇ ಇನ್ನೊಬ್ಬ ವ್ಯಕ್ತಿ ಬಂದ. ಸಿನೆಮಾ ಶುರುಮಾಡಿದರು. ಇಬ್ಬರೇ ಎರಡು ಮೂಲೆಯನ್ನಲಂಕರಿಸಿ ಕೂತೆವು.

ಚಲನಚಿತ್ರ ಶುರುವಾಯಿತು.

ಮಧ್ಯೆ ಇಂಟರ್ ವಲ್ ಬಿಟ್ಟಾಗ ನನಗೆ ಬಂದಿದ್ದ ಒಂದೆರಡು ಮಿಸ್ಡ್ ಕಾಲ್ ಗಳಿಗೆ ಕಾಲ್ ಮಾಡಿ ಉತ್ತರಿಸುತ್ತಾ ನಿಂತಿದ್ದಾಗ, ನನ್ನ ಕನ್ನಡ ಸಿನೆಮಾ ಪ್ರೀತಿಗೆ ಬರೆ ನೀಡುವಂತೆ ಅಲ್ಲಿನ ವ್ಯವಸ್ಥಾಪಕ ಬಂದು, ’ಸರ್, ಫಿಲ್ಮ್ ಪೂರ್ತಿ ನೋಡ್ತೀರಾ?” ಅಂತ ಕೇಳಿದ.

******

ಇನ್ನೊಂದು ಶನಿವಾರ. ಹಿಂದಿನ ದಿನವೇ ಒಂದು ಡೈಮಂಡ್ ಸ್ಟಾರ್ ಫಿಲಂ ಬಿಡುಗಡೆ ಆಗಿತ್ತು. ನಾನಿರುವ ಸ್ಥಳದಲ್ಲಿ ಯಾವುದು ಹತ್ತಿರದ ಮಲ್ಟಿಪ್ಲೆಕ್ಸ್ ಅಂತ ಹುಡುಕಿ ಅಲ್ಲಿ ಬಿಡುಗಡೆಯಾಗಿದ್ದು ನೋಡಿ ಬಹಳ ಖುಷಿಯಾಯಿತು. ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಬಗ್ಗೆ ತಿಳಿದಿರುವವರಿಗೆ ಅನುಭವವಿರುತ್ತದೆ ಅಲ್ಲಿ ಸಾಮಾನ್ಯವಾಗಿ ಕನ್ನಡ ಸಿನೆಮಾ ಹಾಕೋಲ್ಲ, ಅದರಲ್ಲೂ ಬಿಡುಗಡೆ ಭಾಗ್ಯ ಸಿಗುವುದು ಕೆಲವೇ ಕೆಲ ಸಿನೆಮಾಗೆ ಮಾತ್ರ!

ಖುಷಿಯಿಂದ ಇಂಟರ್ನೆಟ್ ನಿಂದನೇ ಟಿಕೆಟ್ ಕಾದಿರಿಸೋಣ ಅಂತ ನೋಡಿದರೆ ಕೊನೆಯ ಸಾಲು ಹೊರತುಪಡಿಸಿ ಮಿಕ್ಕೆದ್ದೆಲ್ಲಾ ಖಾಲಿ ಇದ್ದವು. ಈ ಏರಿಯಾದ ಜನ ಜಾಸ್ತಿ ಕನ್ನಡ ಫಿಲಮ್ಸ್ ನೋಡುವುದಿಲ್ಲ, ಟಿಕೆಟ್ ಸಿಗುತ್ತದೆ, ಅಲ್ಲಿಯೇ ಹೋಗಿ ಕೊಂಡರಾಯ್ತು ಅಂತ ಹೊರಟೆ.

ಹೊರಟಾದ ನಂತರ ಒಂಥರಾ ಆಗತೊಡಗಿತು, ಒಂದು ವೇಳೆ ಟಿಕೆಟ್ ಸಿಗದೇ ಹೋದರೆ ಅಂತ. ಮೊಬೈಲಿನ ರೇಡಿಯೋ ಕೇಳುತ್ತಾ ಆ ಭಾವವನ್ನು ನೆಗ್ಲೆಕ್ಟ್ ಮಾಡಿದೆ.
ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಒಂದರ್ಧ ಘಂಟೆ ಮುಂಚಿತವಾಗಿಯೇ ತಲುಪಿದೆ.

ಟಿಕೆಟ್ ಕೌಂಟರ್ ನಲ್ಲಿ ಆ ಕನ್ನಡ ಸಿನೆಮಾ ದ ಹೆಸರು ಹೇಳಿದೆ. ಆತ ” ಇಲ್ಲ ಸರ್, ಆ ಶೋ ಕ್ಯಾನ್ಸಲ್ ಆಗಿದೆ”

ಒಂಥರಾ ಶಾಕ್ ನಿಂದ ಆ ಸಾಲು ಸರಿಯಾಗಿ ಕೇಳಿಸಲಿಲ್ಲ. ಅದು ಆತನಿಗೆ ತಿಳಿಯಿತೆಂಬಂತೆ,

“ಹೌದು ಸರ್.. ಶೋ ಕ್ಯಾನ್ಸಲ್ ಆಗಿದೆ” ಅಂದ!

****

ಮನೆಗೆ ಬಂದು ಪೇಪರ್ ಓದುತ್ತಿದ್ದಾಗ ಎರಡು ಕನ್ನಡ ಚಿತ್ರಗಳು ಥಿಯೇಟರ್ ಸಮಸ್ಯೆಯಿಂದಾಗಿ ಜಗಳ ಆಡುತ್ತಿದ್ದ ಬಗ್ಗೆ ಪ್ರಸ್ತಾಪವಿತ್ತು.

About these ads

One Response »

  1. Pramod says:

    ಸಕಲ ಕನ್ನಡಿಗರಿಗಾಗಿ ಮಾಡಿದ, ಕನ್ನಡ ಶಾಲೆಯ ಮೇಷ್ಟ ಕಹಿ ಕಥೆ ‘ಪ್ರಾರ್ಥನೆ’ ನೋಡಲು ಪಿವಿಆರ್ ಗೆ ಹೋಗಿದ್ದೆ. ಥಿಯೇಟರ್ ಪೂರ್ತಿ ನಾಲ್ಕು ಜನ. ಸಮೋಸ, ಪಾಪ್ ಕಾರ್ನ್, ಕೋಕ್ ಮಾರೋರು ಹತ್ತು ಜನರಿದ್ದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s