“ಬ್ರೇಕಿಂಗ್ ನ್ಯೂಸ್” ಕುರಿತು ಬರೆದಿದ್ದಾರೆ ನಹುಷ. ಅವರ ಅಭಿಪ್ರಾಯಕ್ಕೆ ನೀವೂ ಪ್ರತಿಕ್ರಿಯಿಸಬಹುದು.
ನಾಗತಿಹಳ್ಳಿ ಚಂದ್ರಶೇಖರ್ ಅವರ “ಬ್ರೇಕಿಂಗ್ ನ್ಯೂಸ್’, ಆ ಕ್ಷಣದ ಭಂಗುರಕ್ಕಷ್ಟೇ ಸೀಮಿತವಾಯಿತೇ?
ನನಗೆ ಅನ್ನಿಸಿದ್ದು ಅದೇ ಪ್ರಶ್ನೆ. ಸಾಮಾನ್ಯವಾಗಿ ಪ್ರಸ್ತುತ ಮಾಧ್ಯಮಗಳಲ್ಲಿ ಬಳಕೆಯಲ್ಲಿರುವ ಬ್ರೇಕಿಂಗ್ ನ್ಯೂಸ್ ಆ ಕ್ಷಣದ್ದಷ್ಟೇ. ನಂತರದ ಕ್ಷಣದಲ್ಲಿ ಉಳಿಯುವಂಥದ್ದಲ್ಲ. ಈ ಚಲನಚಿತ್ರವೂ ಹಾಗೆಯೇ ಆಗಿ ಹೋಯಿತಲ್ಲ ಎಂಬ ದುಃಖವಿದೆ.

ಚಲನಚಿತ್ರದಂಥ ಪ್ರಭಾವಿ ಮಾಧ್ಯಮದಲ್ಲಿ ವರ್ತಮಾನವೂ ಚರ್ಚೆಗೊಳಗಾಗಬೇಕೆಂದು ಬಯಸುವವರಲ್ಲಿ ನಾನೂ ಒಬ್ಬ. ಸಮಕಾಲೀನ ಬೆಳವಣಿಗೆಯನ್ನು ಸಾಕ್ಷ್ಯಚಿತ್ರದ ಮಾದರಿಯಾಗಿಸದೇ, ಫೀಚರ್ ಫಿಲ್ಮ್ ಮಾದರಿಗೆ ಒಗ್ಗಿಸಿ ರೂಪಿಸುವುದು ತೀರಾ ಕಷ್ಟವಿರಬಹುದು. ಜತೆಗೆ ಇಂಥ ಪ್ರಯತ್ನವನ್ನು ಯಾರೋ ಕೆಲವರು ಕೈಗೆತ್ತಿಕೊಳ್ಳಬಹುದು. ಶ್ಯಾಂಬೆನಗಲ್ ಅಂಥವರು ಇಂಥ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಕನ್ನಡದ ವಾಣಿಜ್ಯ ಚಿತ್ರಗಳ ಜಗತ್ತಿನಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಆ ಸಾಧ್ಯತೆ ಇರಬಹುದೆಂಬ ನಿರೀಕ್ಷೆ ಈಗ ಸುಳ್ಳಾಗಿದೆ.
ಮಾಧ್ಯಮಗಳ ಬಗೆಗಿನ ನಂಬಿಕೆ ಈಗ ಎಷ್ಟರಮಟ್ಟಿಗೆ ಸುಳ್ಳಾಗಿದೆ, ಸುಳ್ಳಾಗುತ್ತಿದೆ ಎಂಬುದು ಗೊತ್ತೇ ಇರುವಂಥದ್ದು. ಹಿಂದೆಂದಿಗಿಂತಲೂ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿರುವ ಕಾಲವಿದು. ಇಂತಹ ಸಂದರ್ಭದಲ್ಲಿ ಬ್ರೇಕಿಂಗ್ ನ್ಯೂಸ್ ಅಂಥದೊಂದು ಚರ್ಚೆಗೆ ಧ್ವನಿಯಾಗಬಹುದು ಅಥವಾ ಚರ್ಚೆಯ ವಿಸ್ತಾರವನ್ನು iತ್ತಷ್ಟು ಹೆಚ್ಚಿಸಬಹುದೆಂದು ಅಂದುಕೊಂಡಿದ್ದೆ. ಅದಾಗಲಿಲ್ಲ.
ಇತ್ತೀಚೆಗೆ ಬಂದ ಅಮೀರ್ಖಾನ್ನ “ಪೀಪ್ಲಿ ಲೈವ್’, ರಾಂಗೋಪಾಲ್ ವರ್ಮರ “ರಣ್’ ಎಲ್ಲವೂ ಮಾಧ್ಯಮ ಜಗತ್ತಿನೊಳಗಿನ ಸಂಪೂರ್ಣ ಒಳಗನ್ನು ತೋರಿಸಲಿಲ್ಲ. ಕನ್ನಡದಲ್ಲಿ ಅಂಥ ಚಿತ್ರ ಬಂದದ್ದು ನನ್ನ ನೆನಪಿನಲ್ಲಿಲ್ಲ. ಈ ಮಾತೂ ಸುಳ್ಳಲ್ಲ. ಪೀಪ್ಲಿ ಲೈವ್, ಒಂದು ಬಗೆಯ ವಿಡಂಬನೆಯ ಅತಿರೇಕವೆನಿಸಿದರೆ, “ರಣ್’ ಎಲ್ಲರಿಗೂ ಅರ್ಥವಾಗದ ದೊಡ್ಡ ಪ್ರಮೇಯವೆನಿಸಿತಷ್ಟೇ. ಅದನ್ನೂ ಒಂದು ಥ್ರಿಲ್ಲರ್ ಎಂಬಂತೆ ಸವಿದ ಮಂದಿಯೂ ಇದ್ದಾರೆ. ಮಧುರ್ ಭಂಡಾರ್ಕರ್ ರ “ಕಾರ್ಪೋರೇಟ್’ ಚಿತ್ರ ಹೇಗೆ ಒಂದು ಕಾರ್ಪೋರೇಟ್ ಕಂಪನಿಗಳು ತಮ್ಮ ನಾಗಾಲೋಟವನ್ನು ಕಾದುಕೊಳ್ಳಲು ಹೆಣೆಯುವ ತಂತ್ರ-ಪ್ರತಿತಂತ್ರಗಳನ್ನು ಹೇಳಿದಾಗಲೇ ಕಾರ್ಪೋರೇಟ್ ಜಗತ್ತಿನ ಮತ್ತೊಂದು ಮಜಲು ತಿಳಿದದ್ದು. ಇಂದು ಮಾಧ್ಯಮಗಳೂ ಕಾರ್ಪೋರೇಟ್ ಕಂಪನಿಗಳೇ ಎಂಬುದೂ ಪ್ರಸ್ತುತವೇ.

ಬ್ರೇಕಿಂಗ್ ನ್ಯೂಸ್ ನ ಕಥೆ ವಿವರಿಸುವುದೇನೋ ಇಲ್ಲಿ ಅಗತ್ಯವಿಲ್ಲ ಎಂದೆನಿಸುತ್ತದೆ. ಹಾಗೆ ಹೇಳುವುದಾದರೂ, ಒಬ್ಬ ವರದಿಗಾರ ಟಿಆರ್ ಪಿ ಏರಿಸದ (ಮಾಧ್ಯಮ ಜಗತ್ತಿನ ಮಾರುಕಟ್ಟೆ ಪ್ರಪಂಚ ವ್ಯಾಖ್ಯಾನಿಸಿದ ಹಾಗೆ) ಕೃಷಿ, ಗ್ರಾಮೀಣ ಜಗತ್ತು ಇತ್ಯಾದಿ ಸಂಗತಿಗಳ ಕುರಿತು ಸುದ್ದಿ ತರುತ್ತಿರುತ್ತಾನೆ. ಇದು ಉಪಯೋಗವಾಗದು. ಆಗ ಚಾನೆಲ್ನ ಮುಖ್ಯಸ್ಥ, ಸರಿಯಾದ ಸುದ್ದಿ ತಾರದಿದ್ದರೆ ಕೆಲಸದಿಂದ ತೆಗೆದುಹಾಕುವುದಾಗಿ ಹೇಳುತ್ತಾನೆ. ಆಗ ಅವನು ಟಿಆರ್ಪಿ ಏರಿಸುವ ಸುದ್ದಿ ಹುಡುಕುತ್ತಾ ಹೋಗಿ, ಆಗ ತಾನೇ ಬಿಸಿ ಬಿಸಿ ಚರ್ಚೆಗೆ ಕಾರಣರಾಗಿದ್ದ ಲೋಕಾಯುಕ್ತರನ್ನು ಸಂದರ್ಶನ ಮಾಡಲು ಬೆಳಗ್ಗೆಯೇ ಹೋಗಿ, ಬೈಸಿಕೊಂಡು ಕೆಲಸ ಕಳೆದು ಕೊಳ್ಳುತ್ತಾನೆ. ಲೋಕಾಯುಕ್ತರ ಮಗಳು, ಹಾಗೆ ಬೆಳಗ್ಗೆ ಬರುವಂತೆ ಹೇಳಿ ಮೋಸ ಮಾಡಿರುತ್ತಾಳೆ. ಅದಕ್ಕೆ ಪ್ರತೀಕಾರ ತೀರಿಸಬೇಕೆಂದು ವರದಿಗಾರ, ಅವಳನ್ನು ಹಿಡಿಯಲು ಹೊಂಚುಹಾಕುತ್ತಿರುವಾಗ, ಲೋಕಾಯುಕ್ತರಿಂದ ಪೆಟ್ಟು ತಿಂದ ಗ್ಯಾಂಗ್ ಸಹ ಅವಳ ಅಪಹರಣಕ್ಕೆ ಸಂಚು ಮಾಡುತ್ತಿರುತ್ತದೆ. ಹೀಗೆ…ಏನೇನೋ ಆಗಿ ಕೊನೆಗೆ ಅವನಿಗೆ ಕೆಲಸ ಸಿಕ್ಕು, ಗ್ಯಾಂಗ್ ಸಿಕ್ಕಿಬಿದ್ದು, ಇವರಿಬ್ಬರಿಗೂ ಮದುವೆಯಾಗುತ್ತದೆ…!
ಕಥೆಯ ನಿರೂಪಣೆ ನೆಲೆಯಲ್ಲಿ ಹೇಳುವುದಾದರೆ, ಏನೂ ಇಲ್ಲ. ತೀರಾ ಬೋರೆನಿಸುವ ಹಾಗೆ, ರೇಜಿಗೆ ಹುಟ್ಟಿಸುವ ಹಾಗೆ ಹೇಳಲಾಗಿದೆ. ಸಿನಿಮಾ ನೋಡಿದ ಕೂಡಲೇ, ಕಥೆ ಎಳೆಯೇನೋ ಇದೆ, ಅದಕ್ಕೆ ರಕ್ತ-ಮಾಂಸ ತುಂಬಲು ಕೊಂಚವೂ ಕಾಳಜಿ ವಹಿಸಿಲ್ಲವೆಂಬುದು ತಿಳಿದು ಬಿಡುತ್ತದೆ. ಕೊಂಚವೂ ಹೋಂ ವರ್ಕ್ ಇಲ್ಲದ, ಚಿತ್ರಕಥೆಯನ್ನು ಹೆಚ್ಚು ಸಮರ್ಥವಾಗಿಸುವಲ್ಲಿ ಏನೇನೋ ಆಸಕ್ತಿ ತಳೆಯದೇ ರೂಪಿಸಿದ ಚಿತ್ರವೆಂಬುದು ಸ್ಪಷ್ಟ.
ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮ ಹೆಚ್ಚು ಪ್ರಭಾವಶಾಲಿಯಾಗಿರುವಾಗ, ಅದರ ಕುರಿತೇ ಚರ್ಚಿಸಬಹುದಾದದ್ದು ಎಷ್ಟೊಂದಿತ್ತು ? ಚರ್ಚೆ ಎಲ್ಲವೂ ಸಿನಿಮಾವಾಗದೆಂಬ ಅರಿವು ನನಗಿದ್ದೂ, ಈ ಮಾತನ್ನು ಉಲ್ಲೇಖಿಸುತ್ತಿರುವ ಕಾರಣವೆಂದರೆ, ಚರ್ಚಿತ ಅಂಶಗಳನ್ನೂ ಸಿನಿಮಾ ಪಾತ್ರಗಳಿಂದ ಹೇಳಿಸಿ ರಂಜಿಸುತ್ತಲೇ ವಾಸ್ತವವನ್ನು ಹೇಳುವ ಕಲೆಗಾರಿಕೆ ಸಿನಿಮಾ ಮಾಡುವವನಿಗಿರುತ್ತದೆಂಬುದು ನನ್ನ ನಂಬಿಕೆಯೂ ಸಹ. ಶ್ಯಾಂ ಬೆನಗಲ್ರ ಹಲವು ಸಿನಿಮಾಗಳು ಈ ಮಾತನ್ನು ನಿಜವಾಗಿಸಿವೆ. “ವೆಲ್ ಕಂ ಟು ಸಜ್ಜನ್ಪುರ್’ ಸಿನಿಮಾ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನೇ ತೀರಾ ವಿಡಂಬಿಸಿದೆ. “ವೆಲ್ಡನ್ ಅಬ್ಬಾ’ ಸಹ ಅದೇ ನೆಲೆಯದ್ದೇ. ಇಂಥದ್ದೇ ಧಾಟಿಯಲ್ಲೇ ಚಿತ್ರ ಮಾಡಬೇಕೆಂದೂ ನಾನು ಹೇಳುತ್ತಿಲ್ಲ. ಆದರೆ, ಆ ದಿಕ್ಕಿನಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರು ಯಾಕೆ ಪ್ರಯತ್ನಿಸಲಿಲ್ಲ. “ಅಮೆರಿಕ ಅಮೆರಿಕ’, “ಉಂಡೂ ಹೋದ, ಕೊಂಡೋ ಹೋದ’ ದಂಥ ಸಿನಿಮಾ ಕೊಟ್ಟವರಿಗೆ ಇದು ಸಾಧ್ಯವಾಗಲಿಲ್ಲವೇ? ಎಂಬುದು ನನ್ನ ಪ್ರಶ್ನೆ.














ಅಮೇರಿಕಾ ಅಮೇರಿಕಾ ನ೦ತರ ನಾಗತಿಹಳ್ಳಿ ಸುಮಾರು ಸಿನೆಮಾ ಮಾಡಿದ್ದಾರೆ.ಒಲವೆ ಜೀವನ ಲೆಕ್ಕಾಚಾರ, ನೂರು ಜನ್ಮಕೂ ಇತ್ಯಾದಿ. ಮತ್ತೆ ಆ ಚಿತ್ರಗಳ ಮೂಲಕ ನಾವು ಅವರಿ೦ದ ಹೆಚ್ಚೇನೂ ನಿರೀಕ್ಷಿಸಬಾರದು ಎಂದು ತಿಳಿಸಿಕೊಟ್ಟಿದ್ದಾರೆ. ಬ್ರೆಕಿ೦ಗ ನ್ಯೂಸ್ ನಲ್ಲೂ ಅದೇ ಆಗಿದೆ. ಯಾವುದರ ಅರಿವೂ ಇಲ್ಲದ೦ತೆ ಒಬ್ಬ ಸಿನಿಮಾ ವಿದ್ಯಾರ್ಥಿಯ೦ತೆ ಸಿನೆಮಾ ಮಾಡಿದ್ದಾರೆ. http://www.ravindrataklies.blogspot.in
ನಾಗತಿಹಳ್ಳಿ ಚಂದ್ರಶೇಕರ್, ಐನ್ದಿರ್ತರೆ ಬಳಿ ಅಸಭ್ಯವಾಗಿ ನಡೆದುಕೊಂಡು ಅದು ಒಂದು ಬ್ರೆಅಕಿಂಗ್ ನ್ಯೂಸ್ ಆಗಿತ್ತು. ಆ ಮೀಡಿಯದ ಮೇಲೆ ಕೋಪಗೊಂಡು ಆಗ ನಡೆದದ್ದು ಮೀಡಿಯಾ ಟೀಆರ್ಪೀಗಾಗೆ ವಿನಃ ತನ್ನದೇನು ತಪ್ಪಿಲ್ಲ ಎಂದು ತೋರಿಸಿಕೊಳ್ಳಲು ಹೋಗಿ ಎಡವಿದ್ದಾರೆ. ಮೊದ ಮೊದಲು ರಾಕ್ಲೈನ್ ವೆಂಕಟೇಶ್ ಚಿತ್ರದ ನಿರ್ಮಾಪಕ ಅಂತೆಲ್ಲ ಪ್ರಚಾರ ಮಾಡಿ ಕೊನೆಗೆ ಅವರು ಕೈ ಎತ್ತಿದಾಗ ತಾವೇ ತಮ್ಮ ಹಣ (ಅದೆಲ್ಲಿಂದ ಬಂತೋ?) ಹಾಕಿ ಈ ಚಿತ್ರ ಮಾಡಿ, ಹಣ ವ್ಯಾಯ ಮಾಡಿದ್ದಾರೆ. ತಮ್ಮ ಅಮೇರಿಕಾ ಅಮೇರಿಕಾ, ನನ್ನ ಪ್ರೀತಿಯ ಹುಡುಗಿ ಹಾಗು ಅಮೃತಧಾರೆ ಏಕೆ ಗೆದ್ದಿತು ಎಂದು ಆತ್ಮ ಶೋಧನೆ ಮಾಡಿಕೊಳ್ಳುವುದು ಒಳ್ಳೆಯದು. ಆ ಚಿತ್ರಗಳಲ್ಲಿ ನಾಗತಿಹಳ್ಳಿಯಾ ಹೆಸರಿಗಿಂತ ಶೇಕಡಾ 95 ಬೇರೆಯದೇ ಕಾರಣ ಇತ್ತು. ಅದನ್ನು ಅರ್ಥ ಮಾಡಿಕೊಳ್ಳದೆ ತಮ್ಮನ್ನು ಪುಟ್ಟಣ್ಣ, ನಾಗಾಭರಣ ರಂತಹ ಕ್ರಿಯಶೀಲರೊಡನೆ ಹೋಲಿಸಿಕೊಂಡು ಬೇಸ್ತು ಬಿದ್ದಿದ್ದಾರೆ.
so the disaster continues….