Archive for February 12th, 2009
ವೇಣು ಬರೆದ “ಟ್ರಾಫಿಕ್ ಸಿಗ್ನಲ್”
ಬ್ಲಾಗಿಗ ವೇಣುವಿನೋದ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ನಾವು ನಿತ್ಯವೂ ನಿಂತು ಹೋಗುವ ಟ್ರಾಫಿಕ್ ಸಿಗ್ನಲ್ ನ ಕ್ಷಣಗಳನ್ನು ಕಟ್ಟಿಕೊಟ್ಟ ಭಂಡಾರ್ಕರ್ ರ “ಟ್ರಾಫಿಕ್ ಸಿಗ್ನಲ್” ಕುರಿತು ಅವರ ಅನಿಸಿಕೆ ಇಲ್ಲಿ ನೀಡಲಾಗಿದೆ. ಆದ್ದರಿಂದ ನೀವೂ ಕೆಲ ಕಾಲ ಇಲ್ಲಿ ನಿಂತು, ಓದಿ, ನಿಮ್ಮ ಅಭಿಪ್ರಾಯ ಹಾಕಿ ಮುಂದೆ ಹೋಗಿ…!

ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿರುವಾಗ ರಸ್ತೆ ಪಕ್ಕದಿಂದ ಹುಟ್ಟಿಕೊಂಡು ಭಿಕ್ಷೆ ಕೇಳುತ್ತಾ, ಇಯರ್ ಬಡ್ಸ್ ಮಾರುತ್ತಾ ಬರುವವರನ್ನು ನೋಡಿದ್ದೇವೆ…ಆದರೆ ಇವರ ಹಿಂದಿನ ಪ್ರಪಂಚಗಳು, ಅದರ ಇಕನಾಮಿಕ್ಸ್ ಸಾಮಾನ್ಯವಾಗಿ ಅರ್ಥವಾಗುವುದಿಲ್ಲ, ಅಥವಾ ನಮಗೆ ಬೇಕಿಲ್ಲ.
ಮಧುರ್ ಭಂಡಾರ್ಕರ್ ಅವರ ಟ್ರಾಫಿಕ್ ಸಿಗ್ನಲ್ ಸಿನಿಮಾ ಮಾಡಿದ್ದು ಈ ಒಂದು ಜಗತ್ತಿನ ಅನಾವರಣ.
ಟ್ರಾಫಿಕ್ ಸಿಗ್ನಲ್ ಒಂದನ್ನು ನಂಬಿಕೊಂಡು ಒಂದು ವರ್ಗದ ಜನರೇ ಬದುಕುತ್ತಿದ್ದಾರೆ ಎಂಬ ಸತ್ಯವನ್ನು ಮನಮುಟ್ಟುವಂತೆ ತೋರಿಸುತ್ತದೆ ಚಿತ್ರ. ಟ್ರಾಫಿಕ್ ಸಿಗ್ನಲ್ ಬದಲಾಗುವಷ್ಟರಲ್ಲೇ ತಮ್ಮ ವಹಿವಾಟು ಮುಗಿಸುವ ಡೆಡ್ಲೈನ್ ಇವರಿಗೆ.
ಪ್ರಮುಖ ಪಾತ್ರಗಳೂ 5-6 ಅಷ್ಟೇ. ಉಳಿದ ಪಾತ್ರಗಳೆಲ್ಲ ಸದ್ದಿಲ್ಲದೆ ತಮ್ಮಷ್ಟಕ್ಕೇ ಸರಿದು ಹೋಗುತ್ತವೆ. ವೇಶ್ಯೆಯ ಪಾತ್ರದಲ್ಲಿ ಕೊಂಕೊನಾ ಸೇನ್ ಶರ್ಮ, ಮಾದಕ ವ್ಯಸನಿಯಾಗಿ ರಣವೀರ್ ಶೋರೆ, ಸ್ಥಳೀಯ ಡಾನ್ ಆಗಿ ಸುಧೀರ್ ಮಿಶ್ರ, ಬೀದಿ ಬದಿಯಲ್ಲಿ ಡ್ರೆಸ್ ಮಾರುತ್ತಾ ಸಿಲ್ಸಿಲಾನ ಮನಸು ಕದಿಯುವ ಹುಡುಗಿ ನೀತು ಚಂದ್ರ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರ ಎಂಟರ್ಟೈನಿಂಗ್ ಅಲ್ಲ ಎಂಬ ಕಾರಣಕ್ಕಾಗೋ ಏನೋ ಅಷ್ಟೇನೂ ಯಶಸ್ಸು ಗಳಿಸಲಿಲ್ಲ. ಆದರೆ ಪ್ರಾಯೋಗಿಕವಾಗಿ ಉತ್ತಮ ಪ್ರಯತ್ನ ಎಂಬ ಹೆಗ್ಗಳಿಕೆಯನ್ನಂತೂ ಪಡೆದುಕೊಂಡಿದೆ.
ಟ್ರಾಫಿಕ್ ಸಿಗ್ನಲ್ನಿಂದಾಗಿಯೇ ಬದುಕು ರೂಪಿಸಿಕೊಂಡ ಜನ..ಅವರಿಗೊಬ್ಬ ಯುವ ಮುಂದಾಳು ಸಿಲ್ಸಿಲಾ(ಕುನಾಲ್ ಖೇಮು), ಇವರೆಲ್ಲರನ್ನೂ ಕುಣಿಸುವ ರಾಜಕಾರಣಿ-ಗೂಂಡಾ ಕೊಂಡಿ. ಸ್ಲಂಗಳಲ್ಲಿರುವವರ ಬದುಕು ಹಸನಾಗಲು, ಅವರಿಗೆ ನಾಯಕನಾದ ಸಿಲ್ಸಿಲಾ ಪ್ರಯತ್ನಿಸುತ್ತಾನೆ. ಅಷ್ಟರಲ್ಲೇ ಈ ಟ್ರಾಫಿಕ್ ಸಿಗ್ನಲ್ ತೆಗೆಸಿ ಹಾಕಿ ಫ್ಲೈಓವರ್ ಹಾಕಿದರೆ ತಮಗೆ ಹೇಗೆ ಲಾಭ ಎನ್ನುವುದನ್ನು ಮೇಲೆ ಕುಳಿತವರು ನಿರ್ಧರಿಸುತ್ತಾರೆ. ಇದರ ಒಳಾರ್ಥಗಳನ್ನು ಜೀರ್ಣಿಸಿಕೊಳ್ಲುವುದು ನಾಯಕನಿಗೆ ಅಸಾಧ್ಯವಾಗುತ್ತದೆ. ಇದಕ್ಕೆ ಅಡ್ಡ ಬರುವ ಇಂಜಿನಿಯರ್ ಒಬ್ಬ ವ್ಯವಸ್ಥೆಗೆ ಬಲಿಯಾಗುತ್ತಾನೆ, ಅದಕ್ಕೂ ನಾಯಕನೇ ತನಗೆ ಅರಿವಿಲ್ಲದಂತೆ ಕಾರಣನಾಗುತ್ತಾನೆ
ಮಧುರ್ ಭಂಡಾರ್ಕರ್ ಉತ್ಸವ ಆರಂಭ
ಸಾಂಗತ್ಯದ ಉತ್ಸವ ಪ್ರಾರಂಭವಾಗಿದೆ. ಹಲವು ಗೆಳೆಯರು-ಬ್ಲಾಗಿಗರು ಮಧುರ್ ಭಂಡಾರ್ಕರ್ ಅವರ ಚಿತ್ರಗಳ ಬಗ್ಗೆ ತಮ್ಮ ಅನಿಸಿಕೆಯನ್ನು ಕಳುಹಿಸಿದ್ದಾರೆ. ನಿಜವಾಗಲೂ ಅಚ್ಚರಿಯೆಂದರೆ ಇಷ್ಟು ಬೇಗ ತಮ್ಮ ಬರಹಗಳನ್ನು ಕಳುಸಿಯಾರು ಎಂದು ನಿರೀಕ್ಷಿಸಿರಲಿಲ್ಲ. ಜತೆಯಾಗಿ ನಾಲ್ಕು ಹೆಜ್ಜೆ ಹಾಕುವ ಮಂದಿ ಉತ್ಸಾಹ ಕಂಡರೆ ನಾಲ್ಕೇಕೆ….ಇನ್ನೂ ಒಂದಿಷ್ಟು ಹೆಜ್ಜೆ ಇಡಬೇಕೆನ್ನಿಸುತ್ತದೆ.
ಇಂದಿನಿಂದ ಮಧುರ್ ಭಂಡಾರ್ಕರ್ ಉತ್ಸವಕ್ಕೆ ನಿಜವಾದ ಚಾಲನೆ ಸಿಕ್ಕಂತೆ. ಇಲ್ಲಿ ಬರುವ ವಿಮರ್ಶೆ, ಬರಹಗಳಿಗೆ ನಿಮ್ಮ ಅಭಿಪ್ರಾಯಗಳನ್ನೂ ಮುಕ್ತವಾಗಿ saangatya@gmail.com ಗೆ ಕಳುಹಿಸಬಹುದು. ಒಟ್ಟೂ ಮುಕ್ತವಾಗಿ ಒಬ್ಬ ನಿರ್ದೇಶಕನ ಪ್ರಯತ್ನ, ಪರಿಶ್ರಮ, ವಿಶಿಷ್ಟತೆ ಬಗ್ಗೆ ಆರೋಗ್ಯಕರವಾದ ಚರ್ಚೆಯಾಗಬೇಕೆಂಬುದೇ ಸಾಂಗತ್ಯದ ಆಶಯ. ನಿಮ್ಮೆಲ್ಲರ ಬೆಂಬಲವೇ ಮತ್ತಷ್ಟು ಉತ್ಸವಕ್ಕೆ ಹುರುಪು ತುಂಬಬಲ್ಲದು.




