ಟೀನಾ ಅವರು ಕಳಿಸಿದ ಅಲೆಮಾರಿಯ ಕುಮಾರ್ ಅವರ “ಒಳಗೂ-ಹೊರಗೂ’ ಬ್ಲಾಗ್ ನಲ್ಲಿದ್ದ ಸ್ಲಂಡಾಗ್ ಮಿಲೇನರ್ ಕುರಿತಾದ ಬರಹದೊಂದಿಗೆ ಈ ಸಂವಾದವನ್ನು ಮುಗಿಸುತ್ತಿದ್ದೇವೆ. ಒಂದು ಚಿತ್ರವನ್ನು ಭಿನ್ನ ಭಿನ್ನ ನೆಲೆಯಲ್ಲಿ ಅರ್ಥೈಸಲು, ವ್ಯಾಖ್ಯಾನಿಸಲು ಸಾಧ್ಯ ಎಂಬುದನ್ನು ಈ ಸಂವಾದ ಸಾಧ್ಯವಾಗಿಸಿದೆ. ಇಷ್ಟೊಂದು ದಿನದ ಚರ್ಚೆಯ ನಂತರವೂ, ಇಷ್ಟೆಲ್ಲಾ ಆಯಾಮದ ಬರಹಗಳನ್ನುಓದಿದ ಮೇಲೂ ನಿಮ್ಮೊಳಗೇ ಉಳಿದುಕೊಂಡಿರಬಹುದಾದ ಪ್ರಶ್ನೆಗಳಿದ್ದರೆ saangatya@gmail.com ಕಳಿಸಿ. ಅದೇ ನಿಜವಾದ ಉಪಸಂಹಾರ.

*

ತುಂಬಾ ದಿನಗಳೇನಾಗಿಲ್ಲ. ಕಳೆದ ವರ್ಷ ನವೆಂಬರ್ನಲ್ಲಿ ಭಾರತೀಯ ಲೇಖಕ ಅರವಿಂದ ಅಡಿಗ ಬರೆದ ದಿ ವೈಟ್ ಟೈಗರ್ಗೆ ಬೂಕರ್ ಪ್ರಶಸ್ತಿ ಗಳಿಸಿತು. ಆಗ ಒಂದಿಷ್ಟು ಮಂದಿ ಭಾರತವನ್ನು ಭ್ರಷ್ಟರಾಷ್ಟ್ರವೆಂದು ಕೆಟ್ಟದಾಗಿ ಬಿಂಬಿಸಿ ವಿದೇಶಿಯರಿಂದ ಭೇಷ್ ಅನ್ನಿಸಿಕೊಳ್ಳುತ್ತಾರೆ, ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತಾರೆಂದು ಟೀಕಿಸಿದರು.

10-15 ದಿನಗಳ ಹಿಂದೆ ಬ್ರಿಟನ್ನಿನ ಚಿತ್ರ ನಿರ್ದೇಶಕ ಡ್ಯಾನಿ ಬೋಯ್ಲ್ ಚಿತ್ರ ಸ್ಲಮ್ ಡಾಗ್ ಮಿಲೇನಿಯರ್ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆಯಿತು. ಆಗಲೂ ಅಂಥದ್ದೇ ಟೀಕೆ, ಬೊಬ್ಬೆ. ; ಭಾರತವನ್ನು ಕೀಳಾಗಿ ಬಿಂಬಿಸುತ್ತಾರೆ.

 

ಈ ಬೊಬ್ಬೆಯ ಹಿಂದಿನ ಉದ್ದೇಶ ಭಾರತ ಅತಿ ಸುಸಂಸ್ಕೃತರು ಇರುವ ದೇಶ. ಸಾಂಸ್ಕೃತಿಕವಾಗಿ, ಬೌದ್ಧಿಕವಾಗಿ ಬೆಳೆದಿರುವ ದೇಶ. ಇದು ಜಗತ್ತಿನಲ್ಲಿ ಅಪಾರ ಸಾಧನೆ ಮಾಡಿದೆ. ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡಿದೆ. ಇಂಥ ರಾಷ್ಟ್ರವನ್ನು ಕೆಟ್ಟದಾಗಿ ಬಿಂಬಿಸಿದರೆ ಅದನ್ನು ವಿರೋಧಿಸಬೇಕು ಎಂಬುದಷ್ಟೇ.

ನಮ್ಮ ಸಾಧನೆಗಳಷ್ಟೇ ಜಗತ್ತಿಗೆ ಗೊತ್ತಾಗಬೇಕು. ನಮ್ಮೊಳಗಿರುವ ನ್ಯೂನ್ಯತೆಗಳಲ್ಲ ಎಂಬುದು ಇಂಥ ವಾದದ ನಿಲವು. ಇದಕ್ಕೆ ರಾಷ್ಟ್ರಪ್ರೇಮ, ರಾಷ್ಟ್ರೀಯತೆಯ ಮುಖವಾಡ.

ನಾನು ದಿ ವೈಟ್ ಟೈಗರ್ ಓದಿದ್ದೇನೆ. ಸ್ಲಮ್ ಡಾಗ್ ನೋಡಿದ್ದೇನೆ. ಎರಡರಲ್ಲೂ ಸುಳ್ಳಿಲ್ಲ. ಎರಡೂ ವಾಸ್ತವವನ್ನು ವೈಭವೀಕರಿಸೋಲ್ಲ.

ಈ ಎರಡು ಭಿನ್ನ ಮಾಧ್ಯಮದ ಕಲಾಕೃತಿಗಳಲ್ಲಿ ಕಾಣಿಸುವ ನಾಯಕರು ಮತ್ತು ಅವರ ಕಥೆ ನಿರ್ಲಕಷಿತ ಸಮುದಾಯದ ಪ್ರತಿನಿಧಿಯಾಗಿ ನಮ್ಮನ್ನು ಎದುರಾಗುತ್ತವೆ. ಮತ್ತು ಅವರಲ್ಲೂ ಇರುವ ಮಹಾತ್ವಾಕಾಂಕ್ಷೆ, ಅದನ್ನು ಸಾಧಿಸಿಯೇ ತೀರುವ ಛಲವನ್ನು ನಮ್ಮ ಅರಿವಿಗೆ ಮುಟ್ಟಿಸುತ್ತವೆ.

ವೈಟ್ ಟೈಗರ್ನಲ್ಲಿ ರಿಕ್ಷಾವಾಲನ ಮಗನೊಬ್ಬ ಸಮಾಜದ ಭಾಗವಾಗಿ ತನ್ನ ಸಂಪರ್ಕಕ್ಕೆ ಬಂದ ಜನರನ್ನು ನೋಡಿ, ಅವರ ಮಾತು, ಕೆಲಸಗಳನ್ನೇ ಅನುಸರಿಸುತ್ತಾ, ಕಲಿಯುತ್ತಾ ಬೆಳೆಯುತ್ತಾನೆ. ದೊಡ್ಡದೊಂದು ಕಾರ್ಪೋರೇಟ್ ಕಂಪನಿ ಕಟ್ಟುತ್ತಾನೆ. ಈ ಸುದೀರ್ಘ ಹಾದಿಯಲ್ಲಿ ತಾನು ಕಂಡ ರಾಜಕಾರಣಿಗಳು, ತನ್ನನ್ನು ಸಾಕಿದ ಮಾಲಿಕರು, ಡ್ರೈವರ್ಗಳು.. ಹೀಗೆ ಎಲ್ಲ ವರ್ಗಗಳ ವ್ಯಕ್ತಿಗಳನ್ನು, ಭಾರತವನ್ನು, ಬಡತನವನ್ನು ವಿವರಿಸುತ್ತಾನೆ. ಇಂಥದ್ದೊಂದು ಪಾತ್ರವನ್ನು ವಸ್ತುನಿಷ್ಠವಾಗಿ ನಮ್ಮ ಮುಂದಿಡುತ್ತಾರೆ ಕಾದಂಬರಿಕಾರ ಅರವಿಂದ. ನಾಯಕ ಪ್ರತಿಯೊಂದು ಕೆಲಸದ ಹಿಂದೆ ಒಂದು ವರ್ಗದ ಒತ್ತಡ ಮತ್ತು ಶೋಷಣೆ ಎಲ್ಲವನ್ನೂ ಸೂಕ್ಷ್ಮವಾಗಿ ಹೇಳುತ್ತಾರೆ.

ಮುಂಬೈನ ಧಾರಾವಿಯಂಥ ಸ್ಲಮ್ಗಳಿಗೆ ಹೋದರೆ ನಿಕೃಷ್ಟ ಜೀವನದಿಂದ ಮೇಲೆ ಬಂದ ಹತ್ತಾರು ಮಂದಿ ಅನುಭವ ಹಂಚಿಕೊಳ್ಳುತ್ತಾರೆ.

ಇನ್ನು ಸ್ಲಮ್ ಡಾಗ್ ಮಿಲೇನಿಯೇರ್. ಇಲ್ಲೂ ಅಷ್ಟೇ. ಇಂದಿಗೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೊಳಗೇರಿಗಳ ಬಗ್ಗೆ ಅಲ್ಲಿ ವಾಸಿಸುವವರ ಬಗ್ಗೆ, ಅವರ ಆಸೆ, ಆಕಾಂಕ್ಷೆಗಳ ಬಗ್ಗೆ ಹೇಳುತ್ತದೆ. ಅದನ್ನೇ ಬಿಂಬಿಸುತ್ತದೆ. ವಿದೇಶಿ ನಿರ್ದೇಶಕನೊಬ್ಬ ಚಿತ್ರಿಸಿದ್ದು ಸೋಕಾಲ್ಡ್ ದೇಶಪ್ರೇಮಿಗಳಿಗೆ ಮತ್ತಷ್ಟು ಕೋಪ ತರಿಸಿದ್ದು ಟೀಕೆಗಳು ಹೆಚ್ಚಾಗಲು ಕಾರಣ. ಇರಲಿ.

ವೈಟ್ ಟೈಗರ್ ಮತ್ತು ಸ್ಲಮ್ ಡಾಗ್ ಮೂಕವಾಗಿ ಪ್ರತಿಪಾದಿಸುವ ಒಂದು ದೊಡ್ಡ ಸಂಗತಿ ಎಂದರೆ; ಅಲ್ಪ ಅಕ್ಷರ ಜ್ಞಾನ, ಅಪಾರ ಲೋಕಜ್ಞಾನ. ವೈಟ್ ಟೈಗರ್ನ ನಾಯಕ ಬಲ್ರಾಮ್ ಆಗಲೀ, ಸ್ಲಮ್ಡಾಗ್ ಜಮಾಲ್ ಮಲಿಕ್ ಇಬ್ಬರೂ ಅಷ್ಟೇ. ಶಾಲೆಗೆ ಹೋಗಲಾಗದೇ ದಾರಿಯಲ್ಲಿ, ಕೆಲಸ ಮಾಡುವಲ್ಲಿ ಸಿಕ್ಕ, ಕಂಡ ಜನರಿಂದ ಕಲಿತು ಬೆಳೆಯುತ್ತಾರೆ.

ವೈಟ್ ಟೈಗರ್ನ ಕಾದಂಬರಿಕಾರ ಮತ್ತು ಸ್ಲಮ್ ಡಾಗ್ ಚಿತ್ರದ ನಿರ್ದೇಶಕರ ಇಬ್ಬರೂ ಸುಳ್ಳು ಹೇಳಿದ್ದಾರೆಂದು ಪುಸ್ತಕ ಓದಿದ, ಸಿನಿಮಾ ನೋಡಿದ ಯಾರಿಗೂ ಅನ್ನಿಸುವುದಿಲ್ಲ.

ಯಾಕೆಂದರೆ ಅವರು ಬಡತವನ್ನು ರಮ್ಯವಾಗಿಸುವುದಿಲ್ಲ. ಭಾರತೀಯರು ಆರ್ಥಿಕವಾಗಿ ಬಡವರಿರಬಹುದು. ಆದರೆ ಭಾವನೆಗಳಲ್ಲಿ ಶ್ರೀಮಂತರು ಎಂದು ಆತ್ಮವಂಚನೆಯ, ಬಡತನವನ್ನು ರಮ್ಯವಾಗಿಸುವ ಮಾತುಗಳನ್ನು ಹೇಳುವುದಿಲ್ಲ.
ಸುಳ್ಳಲ್ಲ…!

ಸ್ಲಮ್ಡಾಗ್ ನೆಪದಲ್ಲಿ ದೇಶ ಪ್ರೇಮ, ರಾಷ್ಟ್ರೀಯತೆಯ ಮಾತನಾಡುತ್ತಿರುವವರದ್ದು ಒಂದೇ ವಾದ. ಭಾರತವನ್ನು ಬಡ ಹಾಗೂ ಸ್ಲಮ್ಗಳಿಂದ ಕೂಡಿದ ರಾಷ್ಟ್ರವೆಂದು ಬಿಂಬಿಸಲಾಗುತ್ತಿದೆ.

ಹಾಗಾದರೆ ಭಾರತದಲ್ಲಿ ಸ್ಲಮ್ಗಳೇ ಇಲ್ಲವೆ? ಯೋಜನಾ ಆಯೋಗದ ಇತ್ತೀಚಿನ ಅಂಕಿ ಅಂಶಗಳು ಹೇಳುತ್ತವೆ, ಭಾರತದ ೧.೨ ಶತಕೋಟಿ ಜನಸಂಖ್ಯೆಯ ಪೈಕಿ ೬೮ ಕೋಟಿ ಮಂದಿ ಸ್ಲಮ್ಗಳಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಅರ್ಧಕ್ಕೂ ಹೆಚ್ಚು ಜನರಿಗೆ ದಿನದ ಆಹಾರ ಒದಗಿಸಿಕೊಳ್ಳುವುದೂ ಕಷ್ಟ.

ಏಷ್ಯಾದ ಅತಿ ದೊಡ್ಡ ಕೊಳಗೇರಿ ಮುಂಬೈನ ಧಾರಾವಿಯಲ್ಲಿ ವಾಸಿಸುವವರ ಸಂಖ್ಯೆ 6 ಲಕ್ಷ. ದೇಶದ ರಾಜಧಾನಿ ದೆಹಲಿಯಲ್ಲಿ ಸುಮಾರು ಸ್ಲಮ್ಗಳಿವೆ. ಇಲ್ಲಿ ಸುಮಾರು ೪೦ ಲಕ್ಷ ಮಂದಿ ವಾಸಿಸುತ್ತಿದ್ದಾರೆ.

ಇಂಥ ಹುಣ್ಣನ್ನು ಅಂಗೈಯಲ್ಲೇ ಇಟ್ಟುಕೊಂಡು, ಇದು ಯಾರಿಗೂ ಗೊತ್ತಾಗಬಾರದು ಎನ್ನುತ್ತಿದ್ದಾರೆ ಮಹಾನ್ ದೇಶಪ್ರೇಮಿಗಳು.

ಇದರಿಂದ ಸಾಧಿಸುವುದಾದರೂ ಏನು? ಕೊಳಗೇರಿಗಳಿಲ್ಲ ಎಂದು ಹೇಳಿ ದೇಶವನ್ನು ಪ್ರಕಾಶಿಸುವ ಮೂರ್ಖತನದಿಂದ ಭಾರತದ ಅಭಿವೃದ್ಧಿ ರಾಷ್ಟ್ರವೋ, ವಿಶ್ವದ ಶಕ್ತಿಕೇಂದ್ರವೋ ಆಗಿ ಬಿಡುತ್ತದೋ?

ಆರ್ಥಿಕವಾಗಿ ಜರ್ಝರಿತವಾಗಿರುವ ಅಮೆರಿಕ, ಲಾಭದ ಆಸೆ ತೋರಿಸಿ ಮುಳುಗುತ್ತಿರುವ ಸತ್ಯಂ ಮಾಡಿದ್ದು ಇಂಥದ್ದೇ ಕೆಲಸ. ಈಗ ಅವುಗಳಿಗೆ ಒದಗಿದಿ ಸ್ಥಿತಿ ನಮ್ಮ ಮುಂದೆ ಕಣ್ಣ ಮುಂದೆ..

ರ್ ಯಾ ಗ್ ಟು ರಿಚಸ್…

ಸ್ಲಮ್ ಡಾಗ್ನಲ್ಲೇ ಆಗಲಿ, ವೈಟ್ ಟೈಗರ್ನಲ್ಲೇ ಆಗಲಿ ನಮಗೆ ಕಾಣುವುದು ಬೇರೆ…

ತಮ್ಮೆಲ್ಲಾ ಮಿತಿಗಳ ನಡುವೆ ಏನನ್ನಾದರೂ ಸಾಧಿಸಲು ಪ್ರಯತ್ನ ಮಾಡುವವರಿದ್ದಾರೆ ಎನ್ನುವುದು. ರಿಕ್ಷಾವಾಲಾನ ಮಗ, ಅಲ್ಪ- ಅಕ್ಷರ- ಜ್ಞಾನಿ, ಬೆಂಗಳೂರಿನಲ್ಲಿ ಒಂದು ಕಾರ್ಪೋರೇಟ್ ಕಂಪನಿ ಕಟ್ಟಿ, ಚೀನಾದ ಪ್ರಧಾನಿಗೆ ಪತ್ರ ಬರೆಯುವಷ್ಟು ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಕೊಳಗೇರಿಯ ಹುಡುಗ ಲಕ್ಷಾಂತರ ಪ್ರೇಕ್ಷಕರ ಮುಂದೆ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಕೋಟಿ ಒಡೆಯನಾಗುವುದಕ್ಕೆ ಸಾಧ್ಯವಾಗುತ್ತದೆ.

ಹೀಗೆ ರ್ಯಾಗ್ ಟು ರಿಚಸ್ ತತ್ವವನ್ನು ಇವು ಪ್ರತಿಪಾದಿಸುತ್ತವೆ. ಇದನ್ನು ಅಮೆರಿಕನ್ನರು ಅಮೆರಿಕನ್ ಡ್ರೀಮ್, ಹೋರೇಷಿಯೋ ಆಲ್ಗರ್ ಮಿಥ್ ಎನ್ನುತ್ತಾರೆ.

ಏನೂ ಇಲ್ಲದ, ಏನೂ ಅಲ್ಲದ ಸ್ಥಿತಿಯಿದ ಮಹತ್ವದ ಸಾಧನೆ ಮಾಡುವುದು ಈ ಅಮೆರಿಕದ ಕಾದಂಬರಿಕಾರ ಹೊರೇಷಿಯಾ ಆಲ್ಗರ್ನ ತತ್ವ. ಈತನ ಕಾದಂಬರಿಗಳ ಪ್ರತಿ ನಾಯಕನೂ ಹೀಗೆ ಚಿಂದಿಯಿಂದ ಚಿನ್ನದ ಉಪ್ಪರಿಗೆ ಏರಿದವನೇ. ಹಾಗಾದರೆ ಹೊರೇಷಿಯೋ ಅಮೆರಿಕದ ದ್ರೋಹಿಯೇ? ಅಲ್ಲ ಅಮೆರಿಕದ ಆತ್ಮಸ್ಥೈರ್ಯ ಹೆಚ್ಚಿಸಿದ, ಆತ್ಮವಿಶ್ವಾಸದ ತುಂಬಿದ ಬರಹಗಾರನೆಂದು ಇವತ್ತಿಗೂ ಅಮೆರಿಕ ಸ್ಮರಿಸುತ್ತದೆ.

ಪ್ರಶ್ನಾರ್ಹ ರಾಷ್ಟ್ರೀಯತೆ…

ರಾಷ್ಟ್ರಪ್ರೇಮ, ರಾಷ್ಟ್ರೀಯತೆ ಕೂಡ ಇವತ್ತಿನ ಮಾರುಕಟ್ಟೆ ಸರಕು. ನೀವು ಎಸ್ಸೆಮ್ಮೆಸ್ ಮೂಲಕ ನಿಮ್ಮ ರಾಷ್ಟ್ರಪ್ರೇಮ ಸಾಬೀತು ಮಾಡಬಹುದು. ನಿಮ್ಮ ಎಸ್ಸೆಮ್ಮೆಸ್ ಸ್ವೀಕರಿಸುವವರು ಹಣ ಎಣಿಸಿಕೊಳ್ಳುತ್ತಾರೆ. ನಿಮ್ಮ ರಾಷ್ಟ್ರಪ್ರೇಮವನ್ನು ಯಾರನ್ನಾದರೂ ಕೊಂದು ಸಾಬೀತು ಮಾಡಬಹುದು. ನಿಮಗೆ ಪ್ರೇರೇಪಿಸಿದವರು ತಮ್ಮ ಬಲ ಪ್ರದರ್ಶಿಸಿ ರಾಜಕೀಯವಾಗಿ ಮೇಲೇರಬಹುದು. ಕಲ್ಪಿತ ಭಾವನೆಯೊಂದು ಏನೆಲ್ಲಾ ಮಾಡುತ್ತದೆ ನೋಡಿ.

ಇದು ರಾಷ್ಟ್ರಪ್ರೇಮ, ಅಥವಾ ರಾಷ್ಟ್ರೀಯತೆಯಾ? ನನಗಿನ್ನು ಅಸ್ಟಷ್ಟ.

ಬೆನೆಡಿಕ್ಟ್ ಆಂಡರ್ಸನ್ ಎನ್ನುವ ಚಿಂತಕ ರಾಷ್ಟ್ರೀಯತೆ ಕುರಿತು ಹೇಳುತ್ತಾರೆ: ” ಈ ಕಲ್ಪನೆಯ ಭಾವನಾತ್ಮಕತೆ ಎಷ್ಟು ಉದಾತ್ತವೆಂದರೆ ಅದೇ ಸಮುದಾಯದ ಒಳಗೇ ಇರುವ ಪರಸ್ಪರರ ನಡುವೆ ಇರಬಹುದಾದ ಅಸಮಾನತೆಗಳು, ಶೋಷಣೆಗಳು ಪರಿಗಣನೆಗೆ ಬಾರದ ಬಾರದೆ ರಾಷ್ಟ್ರೀಯತೆ ಎಂಬುದು ಗಾಢವಾಗಿ, ಢಾಳವಾಗಿ ಸಮಾನಂತರ ಸಂಗಾತಿತನವೆಂಬಂತೆ ಗ್ರಹಿಸಲ್ಪಡುತ್ತದೆ”.

ಕೊಳಗೇರಿಯವನ ಸಾಧನೆಗಿಂತ, ಕೊಳಗೇರಿ ಇದೆ ಎಂಬುದೇ ಅವಮಾನ ಉಂಟು ಮಾಡುತ್ತದೆ ಎಂಬುದು ಎಂಥ ರಾಷ್ಟ್ರೀಯತೆ, ದೇಶಪ್ರೇಮ?

About these ads

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s