ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for January 28th, 2009

ವೈಟ್ ಟೈಗರ್, ಸ್ಲಂಡಾಗ್ ಮತ್ತು ದೇಶಪ್ರೇಮ

without comments

ಟೀನಾ ಅವರು ಕಳಿಸಿದ ಅಲೆಮಾರಿಯ ಕುಮಾರ್ ಅವರ “ಒಳಗೂ-ಹೊರಗೂ’ ಬ್ಲಾಗ್ ನಲ್ಲಿದ್ದ ಸ್ಲಂಡಾಗ್ ಮಿಲೇನರ್ ಕುರಿತಾದ ಬರಹದೊಂದಿಗೆ ಈ ಸಂವಾದವನ್ನು ಮುಗಿಸುತ್ತಿದ್ದೇವೆ. ಒಂದು ಚಿತ್ರವನ್ನು ಭಿನ್ನ ಭಿನ್ನ ನೆಲೆಯಲ್ಲಿ ಅರ್ಥೈಸಲು, ವ್ಯಾಖ್ಯಾನಿಸಲು ಸಾಧ್ಯ ಎಂಬುದನ್ನು ಈ ಸಂವಾದ ಸಾಧ್ಯವಾಗಿಸಿದೆ. ಇಷ್ಟೊಂದು ದಿನದ ಚರ್ಚೆಯ ನಂತರವೂ, ಇಷ್ಟೆಲ್ಲಾ ಆಯಾಮದ ಬರಹಗಳನ್ನುಓದಿದ ಮೇಲೂ ನಿಮ್ಮೊಳಗೇ ಉಳಿದುಕೊಂಡಿರಬಹುದಾದ ಪ್ರಶ್ನೆಗಳಿದ್ದರೆ saangatya@gmail.com ಕಳಿಸಿ. ಅದೇ ನಿಜವಾದ ಉಪಸಂಹಾರ.

*

ತುಂಬಾ ದಿನಗಳೇನಾಗಿಲ್ಲ. ಕಳೆದ ವರ್ಷ ನವೆಂಬರ್ನಲ್ಲಿ ಭಾರತೀಯ ಲೇಖಕ ಅರವಿಂದ ಅಡಿಗ ಬರೆದ ದಿ ವೈಟ್ ಟೈಗರ್ಗೆ ಬೂಕರ್ ಪ್ರಶಸ್ತಿ ಗಳಿಸಿತು. ಆಗ ಒಂದಿಷ್ಟು ಮಂದಿ ಭಾರತವನ್ನು ಭ್ರಷ್ಟರಾಷ್ಟ್ರವೆಂದು ಕೆಟ್ಟದಾಗಿ ಬಿಂಬಿಸಿ ವಿದೇಶಿಯರಿಂದ ಭೇಷ್ ಅನ್ನಿಸಿಕೊಳ್ಳುತ್ತಾರೆ, ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತಾರೆಂದು ಟೀಕಿಸಿದರು.

10-15 ದಿನಗಳ ಹಿಂದೆ ಬ್ರಿಟನ್ನಿನ ಚಿತ್ರ ನಿರ್ದೇಶಕ ಡ್ಯಾನಿ ಬೋಯ್ಲ್ ಚಿತ್ರ ಸ್ಲಮ್ ಡಾಗ್ ಮಿಲೇನಿಯರ್ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆಯಿತು. ಆಗಲೂ ಅಂಥದ್ದೇ ಟೀಕೆ, ಬೊಬ್ಬೆ. ; ಭಾರತವನ್ನು ಕೀಳಾಗಿ ಬಿಂಬಿಸುತ್ತಾರೆ.

 

ಈ ಬೊಬ್ಬೆಯ ಹಿಂದಿನ ಉದ್ದೇಶ ಭಾರತ ಅತಿ ಸುಸಂಸ್ಕೃತರು ಇರುವ ದೇಶ. ಸಾಂಸ್ಕೃತಿಕವಾಗಿ, ಬೌದ್ಧಿಕವಾಗಿ ಬೆಳೆದಿರುವ ದೇಶ. ಇದು ಜಗತ್ತಿನಲ್ಲಿ ಅಪಾರ ಸಾಧನೆ ಮಾಡಿದೆ. ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡಿದೆ. ಇಂಥ ರಾಷ್ಟ್ರವನ್ನು ಕೆಟ್ಟದಾಗಿ ಬಿಂಬಿಸಿದರೆ ಅದನ್ನು ವಿರೋಧಿಸಬೇಕು ಎಂಬುದಷ್ಟೇ.

ನಮ್ಮ ಸಾಧನೆಗಳಷ್ಟೇ ಜಗತ್ತಿಗೆ ಗೊತ್ತಾಗಬೇಕು. ನಮ್ಮೊಳಗಿರುವ ನ್ಯೂನ್ಯತೆಗಳಲ್ಲ ಎಂಬುದು ಇಂಥ ವಾದದ ನಿಲವು. ಇದಕ್ಕೆ ರಾಷ್ಟ್ರಪ್ರೇಮ, ರಾಷ್ಟ್ರೀಯತೆಯ ಮುಖವಾಡ.

ನಾನು ದಿ ವೈಟ್ ಟೈಗರ್ ಓದಿದ್ದೇನೆ. ಸ್ಲಮ್ ಡಾಗ್ ನೋಡಿದ್ದೇನೆ. ಎರಡರಲ್ಲೂ ಸುಳ್ಳಿಲ್ಲ. ಎರಡೂ ವಾಸ್ತವವನ್ನು ವೈಭವೀಕರಿಸೋಲ್ಲ.

ಈ ಎರಡು ಭಿನ್ನ ಮಾಧ್ಯಮದ ಕಲಾಕೃತಿಗಳಲ್ಲಿ ಕಾಣಿಸುವ ನಾಯಕರು ಮತ್ತು ಅವರ ಕಥೆ ನಿರ್ಲಕಷಿತ ಸಮುದಾಯದ ಪ್ರತಿನಿಧಿಯಾಗಿ ನಮ್ಮನ್ನು ಎದುರಾಗುತ್ತವೆ. ಮತ್ತು ಅವರಲ್ಲೂ ಇರುವ ಮಹಾತ್ವಾಕಾಂಕ್ಷೆ, ಅದನ್ನು ಸಾಧಿಸಿಯೇ ತೀರುವ ಛಲವನ್ನು ನಮ್ಮ ಅರಿವಿಗೆ ಮುಟ್ಟಿಸುತ್ತವೆ.

ವೈಟ್ ಟೈಗರ್ನಲ್ಲಿ ರಿಕ್ಷಾವಾಲನ ಮಗನೊಬ್ಬ ಸಮಾಜದ ಭಾಗವಾಗಿ ತನ್ನ ಸಂಪರ್ಕಕ್ಕೆ ಬಂದ ಜನರನ್ನು ನೋಡಿ, ಅವರ ಮಾತು, ಕೆಲಸಗಳನ್ನೇ ಅನುಸರಿಸುತ್ತಾ, ಕಲಿಯುತ್ತಾ ಬೆಳೆಯುತ್ತಾನೆ. ದೊಡ್ಡದೊಂದು ಕಾರ್ಪೋರೇಟ್ ಕಂಪನಿ ಕಟ್ಟುತ್ತಾನೆ. ಈ ಸುದೀರ್ಘ ಹಾದಿಯಲ್ಲಿ ತಾನು ಕಂಡ ರಾಜಕಾರಣಿಗಳು, ತನ್ನನ್ನು ಸಾಕಿದ ಮಾಲಿಕರು, ಡ್ರೈವರ್ಗಳು.. ಹೀಗೆ ಎಲ್ಲ ವರ್ಗಗಳ ವ್ಯಕ್ತಿಗಳನ್ನು, ಭಾರತವನ್ನು, ಬಡತನವನ್ನು ವಿವರಿಸುತ್ತಾನೆ. ಇಂಥದ್ದೊಂದು ಪಾತ್ರವನ್ನು ವಸ್ತುನಿಷ್ಠವಾಗಿ ನಮ್ಮ ಮುಂದಿಡುತ್ತಾರೆ ಕಾದಂಬರಿಕಾರ ಅರವಿಂದ. ನಾಯಕ ಪ್ರತಿಯೊಂದು ಕೆಲಸದ ಹಿಂದೆ ಒಂದು ವರ್ಗದ ಒತ್ತಡ ಮತ್ತು ಶೋಷಣೆ ಎಲ್ಲವನ್ನೂ ಸೂಕ್ಷ್ಮವಾಗಿ ಹೇಳುತ್ತಾರೆ.

ಮುಂಬೈನ ಧಾರಾವಿಯಂಥ ಸ್ಲಮ್ಗಳಿಗೆ ಹೋದರೆ ನಿಕೃಷ್ಟ ಜೀವನದಿಂದ ಮೇಲೆ ಬಂದ ಹತ್ತಾರು ಮಂದಿ ಅನುಭವ ಹಂಚಿಕೊಳ್ಳುತ್ತಾರೆ.

ಇನ್ನು ಸ್ಲಮ್ ಡಾಗ್ ಮಿಲೇನಿಯೇರ್. ಇಲ್ಲೂ ಅಷ್ಟೇ. ಇಂದಿಗೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೊಳಗೇರಿಗಳ ಬಗ್ಗೆ ಅಲ್ಲಿ ವಾಸಿಸುವವರ ಬಗ್ಗೆ, ಅವರ ಆಸೆ, ಆಕಾಂಕ್ಷೆಗಳ ಬಗ್ಗೆ ಹೇಳುತ್ತದೆ. ಅದನ್ನೇ ಬಿಂಬಿಸುತ್ತದೆ. ವಿದೇಶಿ ನಿರ್ದೇಶಕನೊಬ್ಬ ಚಿತ್ರಿಸಿದ್ದು ಸೋಕಾಲ್ಡ್ ದೇಶಪ್ರೇಮಿಗಳಿಗೆ ಮತ್ತಷ್ಟು ಕೋಪ ತರಿಸಿದ್ದು ಟೀಕೆಗಳು ಹೆಚ್ಚಾಗಲು ಕಾರಣ. ಇರಲಿ.

ವೈಟ್ ಟೈಗರ್ ಮತ್ತು ಸ್ಲಮ್ ಡಾಗ್ ಮೂಕವಾಗಿ ಪ್ರತಿಪಾದಿಸುವ ಒಂದು ದೊಡ್ಡ ಸಂಗತಿ ಎಂದರೆ; ಅಲ್ಪ ಅಕ್ಷರ ಜ್ಞಾನ, ಅಪಾರ ಲೋಕಜ್ಞಾನ. ವೈಟ್ ಟೈಗರ್ನ ನಾಯಕ ಬಲ್ರಾಮ್ ಆಗಲೀ, ಸ್ಲಮ್ಡಾಗ್ ಜಮಾಲ್ ಮಲಿಕ್ ಇಬ್ಬರೂ ಅಷ್ಟೇ. ಶಾಲೆಗೆ ಹೋಗಲಾಗದೇ ದಾರಿಯಲ್ಲಿ, ಕೆಲಸ ಮಾಡುವಲ್ಲಿ ಸಿಕ್ಕ, ಕಂಡ ಜನರಿಂದ ಕಲಿತು ಬೆಳೆಯುತ್ತಾರೆ.

ವೈಟ್ ಟೈಗರ್ನ ಕಾದಂಬರಿಕಾರ ಮತ್ತು ಸ್ಲಮ್ ಡಾಗ್ ಚಿತ್ರದ ನಿರ್ದೇಶಕರ ಇಬ್ಬರೂ ಸುಳ್ಳು ಹೇಳಿದ್ದಾರೆಂದು ಪುಸ್ತಕ ಓದಿದ, ಸಿನಿಮಾ ನೋಡಿದ ಯಾರಿಗೂ ಅನ್ನಿಸುವುದಿಲ್ಲ.

ಯಾಕೆಂದರೆ ಅವರು ಬಡತವನ್ನು ರಮ್ಯವಾಗಿಸುವುದಿಲ್ಲ. ಭಾರತೀಯರು ಆರ್ಥಿಕವಾಗಿ ಬಡವರಿರಬಹುದು. ಆದರೆ ಭಾವನೆಗಳಲ್ಲಿ ಶ್ರೀಮಂತರು ಎಂದು ಆತ್ಮವಂಚನೆಯ, ಬಡತನವನ್ನು ರಮ್ಯವಾಗಿಸುವ ಮಾತುಗಳನ್ನು ಹೇಳುವುದಿಲ್ಲ.
ಸುಳ್ಳಲ್ಲ…!

ಸ್ಲಮ್ಡಾಗ್ ನೆಪದಲ್ಲಿ ದೇಶ ಪ್ರೇಮ, ರಾಷ್ಟ್ರೀಯತೆಯ ಮಾತನಾಡುತ್ತಿರುವವರದ್ದು ಒಂದೇ ವಾದ. ಭಾರತವನ್ನು ಬಡ ಹಾಗೂ ಸ್ಲಮ್ಗಳಿಂದ ಕೂಡಿದ ರಾಷ್ಟ್ರವೆಂದು ಬಿಂಬಿಸಲಾಗುತ್ತಿದೆ.

ಹಾಗಾದರೆ ಭಾರತದಲ್ಲಿ ಸ್ಲಮ್ಗಳೇ ಇಲ್ಲವೆ? ಯೋಜನಾ ಆಯೋಗದ ಇತ್ತೀಚಿನ ಅಂಕಿ ಅಂಶಗಳು ಹೇಳುತ್ತವೆ, ಭಾರತದ ೧.೨ ಶತಕೋಟಿ ಜನಸಂಖ್ಯೆಯ ಪೈಕಿ ೬೮ ಕೋಟಿ ಮಂದಿ ಸ್ಲಮ್ಗಳಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಅರ್ಧಕ್ಕೂ ಹೆಚ್ಚು ಜನರಿಗೆ ದಿನದ ಆಹಾರ ಒದಗಿಸಿಕೊಳ್ಳುವುದೂ ಕಷ್ಟ.

ಏಷ್ಯಾದ ಅತಿ ದೊಡ್ಡ ಕೊಳಗೇರಿ ಮುಂಬೈನ ಧಾರಾವಿಯಲ್ಲಿ ವಾಸಿಸುವವರ ಸಂಖ್ಯೆ 6 ಲಕ್ಷ. ದೇಶದ ರಾಜಧಾನಿ ದೆಹಲಿಯಲ್ಲಿ ಸುಮಾರು ಸ್ಲಮ್ಗಳಿವೆ. ಇಲ್ಲಿ ಸುಮಾರು ೪೦ ಲಕ್ಷ ಮಂದಿ ವಾಸಿಸುತ್ತಿದ್ದಾರೆ.

ಇಂಥ ಹುಣ್ಣನ್ನು ಅಂಗೈಯಲ್ಲೇ ಇಟ್ಟುಕೊಂಡು, ಇದು ಯಾರಿಗೂ ಗೊತ್ತಾಗಬಾರದು ಎನ್ನುತ್ತಿದ್ದಾರೆ ಮಹಾನ್ ದೇಶಪ್ರೇಮಿಗಳು.

ಇದರಿಂದ ಸಾಧಿಸುವುದಾದರೂ ಏನು? ಕೊಳಗೇರಿಗಳಿಲ್ಲ ಎಂದು ಹೇಳಿ ದೇಶವನ್ನು ಪ್ರಕಾಶಿಸುವ ಮೂರ್ಖತನದಿಂದ ಭಾರತದ ಅಭಿವೃದ್ಧಿ ರಾಷ್ಟ್ರವೋ, ವಿಶ್ವದ ಶಕ್ತಿಕೇಂದ್ರವೋ ಆಗಿ ಬಿಡುತ್ತದೋ?

ಆರ್ಥಿಕವಾಗಿ ಜರ್ಝರಿತವಾಗಿರುವ ಅಮೆರಿಕ, ಲಾಭದ ಆಸೆ ತೋರಿಸಿ ಮುಳುಗುತ್ತಿರುವ ಸತ್ಯಂ ಮಾಡಿದ್ದು ಇಂಥದ್ದೇ ಕೆಲಸ. ಈಗ ಅವುಗಳಿಗೆ ಒದಗಿದಿ ಸ್ಥಿತಿ ನಮ್ಮ ಮುಂದೆ ಕಣ್ಣ ಮುಂದೆ..

ರ್ ಯಾ ಗ್ ಟು ರಿಚಸ್…

ಸ್ಲಮ್ ಡಾಗ್ನಲ್ಲೇ ಆಗಲಿ, ವೈಟ್ ಟೈಗರ್ನಲ್ಲೇ ಆಗಲಿ ನಮಗೆ ಕಾಣುವುದು ಬೇರೆ…

ತಮ್ಮೆಲ್ಲಾ ಮಿತಿಗಳ ನಡುವೆ ಏನನ್ನಾದರೂ ಸಾಧಿಸಲು ಪ್ರಯತ್ನ ಮಾಡುವವರಿದ್ದಾರೆ ಎನ್ನುವುದು. ರಿಕ್ಷಾವಾಲಾನ ಮಗ, ಅಲ್ಪ- ಅಕ್ಷರ- ಜ್ಞಾನಿ, ಬೆಂಗಳೂರಿನಲ್ಲಿ ಒಂದು ಕಾರ್ಪೋರೇಟ್ ಕಂಪನಿ ಕಟ್ಟಿ, ಚೀನಾದ ಪ್ರಧಾನಿಗೆ ಪತ್ರ ಬರೆಯುವಷ್ಟು ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಕೊಳಗೇರಿಯ ಹುಡುಗ ಲಕ್ಷಾಂತರ ಪ್ರೇಕ್ಷಕರ ಮುಂದೆ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಕೋಟಿ ಒಡೆಯನಾಗುವುದಕ್ಕೆ ಸಾಧ್ಯವಾಗುತ್ತದೆ.

ಹೀಗೆ ರ್ಯಾಗ್ ಟು ರಿಚಸ್ ತತ್ವವನ್ನು ಇವು ಪ್ರತಿಪಾದಿಸುತ್ತವೆ. ಇದನ್ನು ಅಮೆರಿಕನ್ನರು ಅಮೆರಿಕನ್ ಡ್ರೀಮ್, ಹೋರೇಷಿಯೋ ಆಲ್ಗರ್ ಮಿಥ್ ಎನ್ನುತ್ತಾರೆ.

ಏನೂ ಇಲ್ಲದ, ಏನೂ ಅಲ್ಲದ ಸ್ಥಿತಿಯಿದ ಮಹತ್ವದ ಸಾಧನೆ ಮಾಡುವುದು ಈ ಅಮೆರಿಕದ ಕಾದಂಬರಿಕಾರ ಹೊರೇಷಿಯಾ ಆಲ್ಗರ್ನ ತತ್ವ. ಈತನ ಕಾದಂಬರಿಗಳ ಪ್ರತಿ ನಾಯಕನೂ ಹೀಗೆ ಚಿಂದಿಯಿಂದ ಚಿನ್ನದ ಉಪ್ಪರಿಗೆ ಏರಿದವನೇ. ಹಾಗಾದರೆ ಹೊರೇಷಿಯೋ ಅಮೆರಿಕದ ದ್ರೋಹಿಯೇ? ಅಲ್ಲ ಅಮೆರಿಕದ ಆತ್ಮಸ್ಥೈರ್ಯ ಹೆಚ್ಚಿಸಿದ, ಆತ್ಮವಿಶ್ವಾಸದ ತುಂಬಿದ ಬರಹಗಾರನೆಂದು ಇವತ್ತಿಗೂ ಅಮೆರಿಕ ಸ್ಮರಿಸುತ್ತದೆ.

ಪ್ರಶ್ನಾರ್ಹ ರಾಷ್ಟ್ರೀಯತೆ…

ರಾಷ್ಟ್ರಪ್ರೇಮ, ರಾಷ್ಟ್ರೀಯತೆ ಕೂಡ ಇವತ್ತಿನ ಮಾರುಕಟ್ಟೆ ಸರಕು. ನೀವು ಎಸ್ಸೆಮ್ಮೆಸ್ ಮೂಲಕ ನಿಮ್ಮ ರಾಷ್ಟ್ರಪ್ರೇಮ ಸಾಬೀತು ಮಾಡಬಹುದು. ನಿಮ್ಮ ಎಸ್ಸೆಮ್ಮೆಸ್ ಸ್ವೀಕರಿಸುವವರು ಹಣ ಎಣಿಸಿಕೊಳ್ಳುತ್ತಾರೆ. ನಿಮ್ಮ ರಾಷ್ಟ್ರಪ್ರೇಮವನ್ನು ಯಾರನ್ನಾದರೂ ಕೊಂದು ಸಾಬೀತು ಮಾಡಬಹುದು. ನಿಮಗೆ ಪ್ರೇರೇಪಿಸಿದವರು ತಮ್ಮ ಬಲ ಪ್ರದರ್ಶಿಸಿ ರಾಜಕೀಯವಾಗಿ ಮೇಲೇರಬಹುದು. ಕಲ್ಪಿತ ಭಾವನೆಯೊಂದು ಏನೆಲ್ಲಾ ಮಾಡುತ್ತದೆ ನೋಡಿ.

ಇದು ರಾಷ್ಟ್ರಪ್ರೇಮ, ಅಥವಾ ರಾಷ್ಟ್ರೀಯತೆಯಾ? ನನಗಿನ್ನು ಅಸ್ಟಷ್ಟ.

ಬೆನೆಡಿಕ್ಟ್ ಆಂಡರ್ಸನ್ ಎನ್ನುವ ಚಿಂತಕ ರಾಷ್ಟ್ರೀಯತೆ ಕುರಿತು ಹೇಳುತ್ತಾರೆ: ” ಈ ಕಲ್ಪನೆಯ ಭಾವನಾತ್ಮಕತೆ ಎಷ್ಟು ಉದಾತ್ತವೆಂದರೆ ಅದೇ ಸಮುದಾಯದ ಒಳಗೇ ಇರುವ ಪರಸ್ಪರರ ನಡುವೆ ಇರಬಹುದಾದ ಅಸಮಾನತೆಗಳು, ಶೋಷಣೆಗಳು ಪರಿಗಣನೆಗೆ ಬಾರದ ಬಾರದೆ ರಾಷ್ಟ್ರೀಯತೆ ಎಂಬುದು ಗಾಢವಾಗಿ, ಢಾಳವಾಗಿ ಸಮಾನಂತರ ಸಂಗಾತಿತನವೆಂಬಂತೆ ಗ್ರಹಿಸಲ್ಪಡುತ್ತದೆ”.

ಕೊಳಗೇರಿಯವನ ಸಾಧನೆಗಿಂತ, ಕೊಳಗೇರಿ ಇದೆ ಎಂಬುದೇ ಅವಮಾನ ಉಂಟು ಮಾಡುತ್ತದೆ ಎಂಬುದು ಎಂಥ ರಾಷ್ಟ್ರೀಯತೆ, ದೇಶಪ್ರೇಮ?

Written by saangatya

January 28, 2009 at 11:43 am

ಸ್ಲಂಡಾಗ್ ಬಗ್ಗೆಯೇ ಶ್ರೀಯವರ ನೋಟ

with 3 comments

ಶ್ರೀದೇವಿ  ಡಿ.ಎನ್. ತಮ್ಮ ಬ್ಲಾಗ್ ನೂರುಕನಸಿನಲ್ಲಿ ಸ್ಲಂಡಾಗ್ ಬಗ್ಗೆ ಬರೆದಿದ್ದಾರೆ. ಅದನ್ನು ಇಲ್ಲಿ ಬಳಸುತ್ತಿರುವುದು ಚರ್ಚೆಯ ಬೆಳೆಸುವ ಉದ್ದೇಶದಿಂದಲೇ.
*
ಹೆಸರು ಕೇಳಿದಾಗ ಮೊದಲಿಗೆ ಅನಿಸಿದ್ದು… ಸ್ಲಂನಲ್ಲಿದ್ದ ಮಾತ್ರಕ್ಕೆ ಅಷ್ಟು derogatory ಆಗಿ ಸ್ಲಂಡಾಗ್ ಅಂತ ಯಾಕೆ ಕರೆಯಬೇಕು- ಅಂತ. ಇರಲಿ. ಎಲ್ಲರೂ ಚಿತ್ರ ಚೆನ್ನಾಗಿದೆ ಅಂತಿದಾರಲ್ಲ, ನೋಡಿಯೇ ಬಿಡುವ ಅಂದುಕೊಂಡೆ.ಈಗೆಲ್ಲ ಚಿತ್ರ ಬಿಡುಗಡೆಯಾಗುವವರೆಗೆ ಕಾಯಬೇಕೆಂದೇನಿಲ್ಲವಲ್ಲ, ಇನ್ನೂ ಥಿಯೇಟರಿಗೆ ಬರುವ ಮೊದಲೇ ಚಿತ್ರದ ಒಳ್ಳೆ ಗುಣಮಟ್ಟದ ಸಿಡಿ ಸಿಕ್ಕಿತು, ನೋಡಿಯೇ ಬಿಟ್ಟೆ.
*
ನೋಡುವಾಗ ತನ್ಮಯಳಾಗಿ ಹೋದೆ. ಚಂದಚಂದದ ಶಾಟ್-ಗಳು… ಸ್ಲಂ ಚಿಣ್ಣರ ಮುಗಿಲು ಮುಟ್ಟುವ ಸಂಭ್ರಮಕ್ಕೂ, ಹೃದಯ ತಟ್ಟುವ ನೋವುಗಳಿಗೂ ಜತೆಯಾಗುವ, ಖುಷಿಕೊಡುವ ಸಂಗೀತ… ಬದುಕನ್ನೇ ಶಾಲೆಯಾಗಿಸಿದ ಚಿಣ್ಣರ ಜೀವನಪ್ರೀತಿ…. ಭಾರತದಲ್ಲಿ ಯಾವುದೂ ಅಸಾಧ್ಯವಲ್ಲ ಅಂತ ತೋರಿಸುವ ಕಥೆ… ಎಲ್ಲಾ ಚೆನ್ನಾಗಿತ್ತು. ಆದರೆ ಕೊನೆಗೆ ಬರುವ ದೊಡ್ಡ ಹುಡುಗಿಯ ಪಾತ್ರ ಮಾತ್ರ ಅದ್ಯಾಕೋ irritable ಆಗಿತ್ತು. ಅದೊಂದು ಬಿಟ್ರೆ, ನನ್ನ ಮಟ್ಟಿಗೆ ಚಿತ್ರ ಚೆನ್ನಾಗಿತ್ತು. ಪ್ರಶ್ನೆಗಳಿಗೆ ತಪ್ಪು ತಪ್ಪು ಉತ್ತರಗಳನ್ನ ಕೊಟ್ಟಿದ್ರಂತೆ, ಎಡಿಟಿಂಗ್-ನಲ್ಲಿ ಕೆಲವು ತಪ್ಪುಗಳಿತ್ತು.. ಆದರೆ ಇವೇನೂ ಬೇಗನೆ ಗೊತ್ತಾಗುವಂಥ ದೇನಲ್ಲವಾದ್ದರಿಂದ ಪರವಾಗಿಲ್ಲ. ಪುಟ್ಟ ಮಕ್ಕಳ ಪಾತ್ರ ಮಾಡಿದ ಹುಡುಗರು ತುಂಬಾ ಇಷ್ಟವಾದರು.
ಒಂದೇ ಬಿಂದುವಿನಿಂದ ಹೊರಡುವ ಇಬ್ಬರು ಚಿಣ್ಣರು… ಬದುಕಿಗಾಗಿ ಆಯ್ದುಕೊಳ್ಳುವ ವಿಭಿನ್ನ ದಾರಿಗಳು… ಭಾರತದಲ್ಲಿ ಕೆಟ್ಟ ರೀತಿಯಲ್ಲಾದರೂ ಬದುಕಬಹುದು, ಒಳ್ಳೆಯ ರೀತಿಯಲ್ಲಿಯೂ ಬದುಕಲು ಸಾಧ್ಯ ಎಂಬುದರ ಸಂಕೇತವೇನೋ, ಅನಿಸಿತು. ಬೀದಿ ದೀಪದಡಿ ಕೂತು ಓದಿ ಮೇಲೆ ಬಂದ ಮಹನೀಯರು… ಚಿಕ್ಕ ವ್ಯಾಪಾರದಿಂದ ಶುರು ಮಾಡಿ ಕರೋಡ್-ಪತಿಗಳಾದವರು… ದೊಡ್ಡ ದೊಡ್ಡ ಗ್ಯಾಂಗ್-ಸ್ಟರ್-ಗಳು… ಹೆಚ್ಚು ಓದದಿದ್ದರೂ ಬದುಕನ್ನೇ ಪಾಠಶಾಲೆಯಾಗಿಸಿಕೊಂಡವರು… ಹೀಗೆ ಎಲ್ಲರನ್ನೂ ನೆನಪಿಸಿತು ಚಲನಚಿತ್ರ. ಪುಟ್ಟ ಹುಡುಗರ ಜೀವನಪ್ರೀತಿ ನಮ್ಮೆಲ್ಲರೊಳಗೆ ಅಡಗಿರುವ ಆಶಯಕ್ಕೆ ರೆಕ್ಕೆ ಮೂಡಿಸುವಂತಿತ್ತು… ಅನಿಲ್ ಕಪೂರ್ ಪಾತ್ರ ನಮ್ಮೆಲ್ಲರೊಳಗಿನ ಸಿನಿಕತನದ ಪ್ರತಿಬಿಂಬದಂತಿತ್ತು…  ಲಗಾನ್ ಚಿತ್ರ ನೋಡುವವರೆಲ್ಲ ಅಮೀರ್ ಖಾನ್ ಟೀಮು ವಿನ್ ಆಗಲೆಂದು ಆಶಿಸುತ್ತಾರಲ್ಲ, ಹಾಗೆಯೇ ಜಮಾಲ್ ಗೆದ್ದರೆ ಸಾಕು ಅಂತ ಕಾಯಿಸಿತು. ಒಟ್ಟಿನಲ್ಲಿ ಚಿತ್ರ ಖುಷಿ ತಂದಿತು.
ಒಂದು ಸಿನಿಮಾ ಮನಸ್ಸಿನಲ್ಲುಳಿದರೆ, ಪದೇಪದೇ ನಮ್ಮ ಆಂತರ್ಯವನ್ನು ಕೆಣಕಿದರೆ ಆ ಸಿನಿಮಾ ಯಶಸ್ವಿಯಾದಂತೆ ಅಂತ ಬಲ್ಲವರು ಹೇಳುತ್ತಾರೆ. ಸ್ಲಂ ಡಾಗ್ ಮಿಲಿಯನೇರ್ ಈ ನಿಟ್ಟಿನಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ, ಆದರೆ ಭಾರತದ ಒಳಗಿದ್ದುಕೊಂಡು ನೋಡುವ ನನ್ನ ಮಟ್ಟಿಗೆ, ಕಥೆ ಅಷ್ಟೇನೂ ಕಾಡಲಿಲ್ಲ. ಬದುಕಬೇಕೆನ್ನುವ ಛಾತಿಯಿರುವ ಎಲ್ಲರಿಗೂ ಬದುಕಲು ಬಿಡುವ ಮುಂಬೈ ಚಿತ್ರದ ನಿಜವಾದ ಹೀರೋ.
*
ಈಗ ಚಿತ್ರ ಐದು ಗೋಲ್ಡನ್ ಗ್ಲೋಬ್ ಬಹುಮಾನಗಳಿಗೆ ಪಾತ್ರವಾಗಿದೆ… ಇದು ವೈಟ್ ಟೈಗರ್-ಗೆ ಬುಕರ್ ಸಿಕ್ಕಿದ ನಂತರ ಭಾರತದ ಬಡವರ ಕಥೆಗೆ ಸಿಕ್ಕಿದ ಮತ್ತೊಂದು ಬಹುಮಾನ. ಹೌದೂ… ಪಾಶ್ಚಾತ್ಯರಿಗೆ ಬಡ ಅಥವಾ ಮಧ್ಯಮ ವರ್ಗದ ಭಾರತವೇ ಯಾಕಿಷ್ಟ? ಸುಮ್ಮನೆ ಯೋಚಿಸುವಾಗ, ಇದೇ ರೀತಿಯ ಭಾರತೀಯರ ಕಥೆಗಳಿರುವ, ಪಾಶ್ಚಿಮಾತ್ಯರ ಪ್ರೊಡಕ್ಷನ್ ಅಥವಾ ನಿರ್ದೇಶನವಿರುವ ಹತ್ತುಹಲವು ಚಿತ್ರಗಳು ಕಣ್ಮುಂದೆ ತೆರೆದುಕೊಳ್ಳುತ್ತವೆ. ಎಲ್ಲಾ ಚಿತ್ರಗಳಲ್ಲೂ ಹೆಚ್ಚುಕಡಿಮೆ, ತಮ್ಮ ಸಾಂಪ್ರದಾಯಿಕ ಕೋಟೆಗಳನ್ನು ದಾಟಿ ಗ್ಲೋಬಲ್ ಆಗುವತ್ತ ಸಾಗುವ ಭಾರತೀಯರ ಕಥೆಗಳೇ ಇರುತ್ತವೆ. ಒಂದು ರೀತಿಯಲ್ಲಿ universal ಎನಿಸುವಂತಹ value system ಕಡೆಗೆ ಹೆಜ್ಜೆ ಹಾಕುವ ಭಾರತೀಯರ ಕಥೆಗಳು. ಹೆಚ್ಚುಕಡಿಮೆ ಎಲ್ಲವೂ ಬಡ ಅಥವಾ ಮಧ್ಯಮ ವರ್ಗದ ಬದುಕಲ್ಲಿ ಹುಟ್ಟಿದ ಕಥೆಗಳು.
ಮಿಸ್ಟ್ರೆಸ್ ಆಫ್ ಸ್ಪೈಸಸ್… ಐಶ್ವರ್ಯಾ ಅಭಿನಯದ ಚಿತ್ರ.  ಕೇರಳದ ಮೂಲೆಯಲ್ಲಿ ಮಾಯಾಶಕ್ತಿಯಿರುವ ಅಜ್ಜಿಯ ಜತೆ ಬೆಳೆದ ಹುಡುಗಿ, ಪಾಶ್ಚಾತ್ಯ ದೇಶದಲ್ಲಿ ಬದುಕಬೇಕಾಗುತ್ತದೆ. ಅಲ್ಲಿ ಆಕೆ ಮಾರುವ ಸ್ಪೈಸ್ ಅಥವಾ ಸಂಭಾರ ಪದಾರ್ಥಗಳಿಗೆ ಔಷಧೀಯ ಗುಣ. ಈ ದೈವೀ ಶಕ್ತಿಯನ್ನು ಆಕೆಗೆ ನೀಡಿದ ಅಜ್ಜಿ, ಜನ್ಮಪೂರ್ತಿ ಆಕೆಗೆ ಯಾರಿಗೂ ಮನಸೋಲದಂತೆ, ಮತ್ತು ಮದುವೆಯಾಗದಂತೆ ಶರತ್ತು ವಿಧಿಸಿರುತ್ತಾಳೆ. ಒಂದು ವೇಳೆ ಹಾಗೇನಾದರೂ ಆದರೆ, ಆಕೆಯ ಕೈಗುಣ ಕೆಟ್ಟು ಸಂಭಾರ ಪದಾರ್ಥಗಳ ಔಷಧೀಯ ಗುಣ ಹೊರಟುಹೋಗುತ್ತದೆ. ಹೀಗೆ ಬದುಕುವ ಅನಿವಾರ್ಯತೆಯ ನಡುವೆ, ಹೃದಯದ ಎಳೆತಸೆಳೆತಗಳಿಗೆ ಸೋತು, ಕೊನೆಗೆ ಮನಗೆದ್ದವನನ್ನೂ ತನ್ನವನಾಗಿಸಿಕೊಳ್ಳುವ ಜತೆಗೆ ಸಂಭಾರ ಪದಾರ್ಥಗಳನ್ನೂ ತನ್ನ ಪಾಲಿಗೆ ಒಲಿಸಿಕೊಳ್ಳುವ ಕಥೆ. ಭಾರತೀಯರ ಪ್ರಕಾರ ಅಡಿಗೆ ಮನೆ ಎಂತಹ ಔಷಧಾಲಯ ಎಂಬುದನ್ನು ತೋರಿಸುವ ಜತೆಗೆ, ಒಂದೊಂದು ಸಂಭಾರ ಪದಾರ್ಥದ ಗುಣವನ್ನೂ ವಿವರಿಸುತ್ತದೆ… ಜತೆಗೆ ಚಿತ್ರವಿಡೀ ಕಾಡುವ ವರ್ಣವೈವಿಧ್ಯ… ತಾಕಲಾಟಗಳು… ಕೆಂಪು ಬಣ್ಣವೆಂದರೇನು ಅಂತ ಈ ಚಿತ್ರ ನೋಡಿ ತಿಳಿದುಕೊಳ್ಳಬೇಕು ಅಂತ ಸಾವಿರ ಸಾರಿ ಅಂದುಕೊಂಡಿದ್ದೇನೆ ನಾನು.
ವರ್ಣವೈವಿಧ್ಯ ಎಂದ ಕೂಡಲೇ ನನಗನಿಸುತ್ತಿದೆ… ಭಾರತೀಯ ಕಥೆ ಹೊಂದಿದ ಚಿತ್ರಗಳ ಬಂಡವಾಳವೇ ಇದು. ಬದುಕಿನ ಬಣ್ಣಗಳು… ಕಣ್ಣಿಗೆ ಕಾಣಿಸುವ ಬಣ್ಣಗಳು… ಮನಸನ್ನು ಕಾಡುವ ಬಣ್ಣಗಳು… ಒಟ್ಟಿನಲ್ಲಿ ಬಣ್ಣಗಳೆಂದರೆ ನಮಗೆಲ್ಲ ಬಲು ಪ್ರೀತಿ… ಅದು ಚಿತ್ರಗಳಲ್ಲೂ ಕಾಣಿಸುತ್ತದೆ. ಸ್ಲಂಡಾಗ್ ಮಿಲಿಯನೇರ್ ಕೂಡ ಇದಕ್ಕೆ ಹೊರತಲ್ಲ.
*
ಶ್ರೀಮಂತಿಕೆ ಕೆಲವರ ಕೈಲಿ ಸಿಕ್ಕಿ ನರಳುತ್ತಿರುವ ನಮ್ಮ ದೇಶದಲ್ಲಿ ಬಡವರು ಹಾಗೂ ಮಧ್ಯಮವರ್ಗದ ಜನರೇ ಹೆಚ್ಚು. ಬದುಕಿನ ವಿಧವಿಧದ ಛಾಯೆಗಳನ್ನು ತೆರೆದಿಡುವ ವರ್ಣವೈವಿಧ್ಯ ಕೂಡ ಬಡವರಲ್ಲಿ ಮತ್ತು ಮಧ್ಯಮವರ್ಗದಲ್ಲೇ ಜಾಸ್ತಿ. ಬದುಕುವ ರೀತಿಗಳು, ಚಟುವಟಿಕೆಗಳು, ಉಡುಗೆತೊಡುಗೆಗಳು – ಎಲ್ಲವೂ ಇಲ್ಲಿ visually rich. ಮತ್ತು ಈ ಬದುಕಿನಲ್ಲಿ ಹೊಟ್ಟೆಪಾಡಿಗೆ, ದಿನಕಳೆಯಲು ಬೇಕಾದ ಚಟುವಟಿಕೆಗೆ ಹೆಚ್ಚು ಪ್ರಾಮುಖ್ಯ. ಸೂಕ್ಷ್ಮತೆಗೆ, ಸಂವೇದನೆಗಳಿಗೆ ನಂತರದ ಸ್ಥಾನ. ಈ ದೊಡ್ಡ ದೇಶದ ಒಂದು ಮೂಲೆಯಲ್ಲಿರುವ ಬಡವರಿಗಿಂತ ಇನ್ನೊಂದು ಮೂಲೆಯಲ್ಲಿ ಬದುಕುವ ಬಡವರಿಗೆ ಅಜಗಜಾಂತರವಿರುತ್ತದೆ. ಒಂದು ಬಿಲಿಯನ್ ಜನಸಂಖ್ಯೆಯಿರುವ, 26ಕ್ಕೂ ಹೆಚ್ಚು ಮುಖ್ಯ ಭಾಷೆಗಳ ಮತ್ತು ಅವುಗಳೊಳಗೆ ಉಪಭಾಷೆಗಳ ವೈವಿಧ್ಯ ವಿರುವ, ಮರಳುಗಾಡಿನಿಂದ ಹಿಡಿದು ಹಸಿರು ಕಾಡಿನ ತನಕ ಎಲ್ಲಾ ರೀತಿಯ ಭೂವೈವಿಧ್ಯವಿರುವ, ಸಾವಿರಾರು ಜಾತಿಗಳಿರುವ, ಅವುಗಳೊಳಗೆ ಸಾವಿರಾರು ಪರಂಪರೆ-ಆಚರಣೆಗಳಿರುವ ನಮ್ಮ ದೇಶದಲ್ಲಿ ಬಡವರ ಬದುಕು ಸಾವಿರ ರೀತಿಗಳಲ್ಲಿ ತೆರೆದುಕೊಳ್ಳುತ್ತದೆ. ಹಾಗಾಗಿ, ಸಹಜವಾಗಿಯೇ ಕಥೆ ಬರೆಯುವವರಿಗೂ ಚಿತ್ರ ನಿರ್ದೇಶಕರಿಗೂ ಬಡಭಾರತದಲ್ಲಿ ಹೆಚ್ಚಿನ ವಿಷಯಗಳು, ವಿಚಾರಗಳು ಸಿಗುತ್ತವೆ.
ಆದರೆ ಶ್ರೀಮಂತರಾಗತೊಡಗಿದಂತೆ ಭಾಷೆ-ಉಡುಗೆ-ತೊಡುಗೆ-ಆಚರಣೆ ಎಲ್ಲವೂ ಯೂನಿವರ್ಸಲ್ ಆಗುತ್ತವೆ. ಬದುಕು ಕಾರ್ಪೋರೆಟೈಸ್ ಆಗಿ ಹೋಗುತ್ತದೆ, ಎಲ್ಲವೂ ಬ್ರಾಂಡೆಡ್ ಆಗುತ್ತದೆ, ಬದುಕಿನ ರೀತಿನೀತಿಗಳೆಲ್ಲವೂ ನಮಗೆ ಬೇಕಾಗಿಯೋ ಬೇಡದೆಯೋ ಪ್ರಿಡಿಫೈನ್ಡ್, ಮತ್ತು ಇಂಟರ್-ನ್ಯಾಶನಲ್ ಆಗಿಹೋಗುತ್ತವೆ. ಒಬ್ಬ ಶ್ರೀಮಂತನಿಗೂ ಮತ್ತೊಬ್ಬ ಶ್ರೀಮಂತನಿಗೂ ಬದುಕಿನ ರೀತಿಗಳಲ್ಲಾಗಲೀ, ನೀತಿಗಳಲ್ಲಾಗಲೀ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಉಡುಗೆ-ತೊಡುಗೆಗಳಲ್ಲಿ, ನೋವು-ನಲಿವುಗಳಲ್ಲಿ ಹೆಚ್ಚು ಭಿನ್ನತೆಯಿರುವುದಿಲ್ಲ. ಕಾಸ್ಮಾಪಾಲಿಟನ್ ಸಂಸ್ಕೃತಿಗೆ ಕಾಲಿಡುವ ಕಾರಣ, ಒಬ್ಬನಿಗೆ ಇನ್ನೊಬ್ಬನನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಕಷ್ಟವಾಗುವುದಿಲ್ಲ. ಈ ಜಗತ್ತಿನ ಸುತ್ತ ಕಥೆ ಹೆಣೆಯಹೊರಟಾಗ ನಾವು ಈವರೆಗೆ ನೋಡಿನೋಡಿ ಬೇಜಾರಾದ ಚಿತ್ರಗಳ ಹಾಗಿನವೇ ಮತ್ತೆ ಹುಟ್ಟಿಕೊಳ್ಳುತ್ತವೆ.
ಬರಿಯ thrill, action, epics, romance, emotionsಗಳಲ್ಲೇ ಕಾಲಕಳೆಯುವ ಪಾಶ್ಚಾತ್ಯ ಜಗತ್ತಿಗೆ ಈ ದೃಶ್ಯವೈವಿಧ್ಯಗಳು, ಇಲ್ಲಿನ ಬದುಕಿನ ಭಿನ್ನತೆಗಳು, ಹೋರಾಟಗಳು ಇಷ್ಟವಾಗುವುದರಲ್ಲಿ ಆಶ್ಚರ್ಯವಿಲ್ಲ. ಶುಭಂ ಹೇಳುವ ಮುಂಚೆ ಹೀರೋ-ಹೀರೋಯಿನ್ನು ಒಂದಾಗುವ ಅದೇ ಹಳೇ ಲವ್ವು, ಅದೇ ಕಥೆಗಳು, ಅದೇ ಜಡ್ಡುಗಟ್ಟಿದ ಮರಸುತ್ತೋ ಸಾಂಗುಗಳು, ಅದೇ ಅದೇ ಲೊಕೇಶನ್ನು, ಅದೇ ಆರ್ಟಿಸ್ಟು, ಅದೇ ಕ್ಯಾಮರಾ ವರ್ಕು, ಅದೇ ಎಡಿಟಿಂಗು ನೋಡಿನೋಡಿ ಬರಗೆಟ್ಟು ಬೇಜಾರಾಗಿದ್ದ ನಮಗೆಲ್ಲ, ಮುಂಗಾರುಮಳೆ ಹೊಸತನದ ಜಡಿಮಳೆ ಸುರಿಸಿತಲ್ಲ, ಅವಾಗ ನಾವೆಲ್ಲ ಅದನ್ನು ಮತ್ತೆ ಮತ್ತೆ ನೋಡಿ, ಸಿಕ್ಕವರಿಗೆಲ್ಲಾ ರೆಕಮೆಂಡ್ ಮಾಡಿ ಸೂಪರ್ ಹಿಟ್ ಮಾಡಿದ್ದೆವಲ್ಲ… ಪಾಶ್ಚಾತ್ಯ ಜಡ್ಜುಗಳಿಗೆ ಭಾರತೀಯ ಚಿತ್ರಗಳು ಇಷ್ಟವಾಗುವುದು ಇಷ್ಟೇ ಸಹಜವೇನೋ… ಅದಲ್ಲದೇ ಭಾರತದ ಬಡತನವನ್ನೇ ನೋಡಲು ಬಯಸುವ ಸೈಕಿಕ್-ಗಳು ಅವರಾಗಿರಲಿ ಕ್ಕಿಲ್ಲ. ಇದು ನನಗನಿಸಿದ್ದು.
*
ನಂತರ ಯೋಚಿಸುವಾಗ, ಒಂದು ಸರ್ಕಾರ್-ಗೆ, ಒಂದು ತಾರೇ ಝಮೀಂ ಪರ್-ಗೆ, ಒಂದು ರಂಗ್ ದೇ ಬಸಂತೀಗೆ, ಒಂದು 1947-ಅರ್ಥ್-ಗೆ ಅಥವಾ ಒಂದ್ ಲಗಾನ್-ಗೆ ಸಿಗದ ಅವಾರ್ಡುಗಳು ಸ್ಲಂ ಡಾಗ್ ಚಿತ್ರಕ್ಕೆ ಹೇಗೆ ಬಂದವಪ್ಪಾ ಅಂತ ಯೋಚನೆ ಸಹಜವಾಗಿಯೇ ಆಯಿತು. ಖಂಡಿತವಾಗಿಯೂ ಭಾರತೀಯರೇ ನಿರ್ದೇಶಿಸಿದ ಹಲವಾರು ಚಿತ್ರಗಳು ಇದಕ್ಕಿಂತ ಎಷ್ಟೋ ಚೆನ್ನಾಗಿದ್ದವು. ಇನ್ನೂ ಹೆಚ್ಚು ಖುಷಿ ಕೊಟ್ಟಿದ್ದವು. ಹೆಚ್ಚು ಸಿಂಬಾಲಿಕ್ – ಹೆಚ್ಚು ಅರ್ಥಪೂರ್ಣವಾಗಿದ್ದವು. ಹೆಚ್ಚು ಯೋಚನೆಗೆ ಹಚ್ಚಿದ್ದವು. ಭಾರತೀಯ ವರ್ಣವೈವಿಧ್ಯದ ಜತೆಗೆ ಜಾಗತಿಕವೆನ್ನಬಹುದಾದ ಗುಣಮಟ್ಟವನ್ನೂ ಹೊಂದಿದ್ದವು. ರೆಹಮಾನ್ ಇದಕ್ಕಿಂತ ಉತ್ತಮ ಸಂಗೀತ ಕೊಟ್ಟ ಚಿತ್ರಗಳು ಇನ್ನೂ ಬೇಕಾದಷ್ಟಿವೆ. ಬಹುಶ: ಅಂತರ್ರಾಷ್ಟ್ರೀಯ ಪ್ರಶಸ್ತಿಗಳ ಮಾನದಂಡವೇನು ಅಂತ ಅರ್ಥವಾಗಬೇಕಾದರೆ  ಭಾರತದ ಹೊರಗಿದ್ದು ಚಿತ್ರ ನೋಡಬೇಕೇನೋ ಅಂತ ನನಗನಿಸಿದ್ದು ಮಾತ್ರ ಸುಳ್ಳಲ್ಲ.